ದಲಿತ, ಎಡ ಮೈತ್ರಿಯು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಗಳ ಚುನಾವಣೆಯಲ್ಲಿ ಜಯಗಳಿಸಿದ್ದು ಎಲ್ಲಾ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆಡಳಿತದಿಂದ ತೊಂದರೆಗೀಡಾದ ಒಂದು ವರ್ಷದ ನಂತರ ಮತ್ತೆ ಎಡ ಮತ್ತು ದಲಿತ ಒಕ್ಕೂಟಕ್ಕೆ ಜಯ ಸಿಕ್ಕಿದೆ.
ಗುರುವಾರ ಬಿಗಿ ಭದ್ರತೆಯ ಮಧ್ಯೆ ಚುನಾವಣೆ ನಡೆದಿದ್ದು, ಶುಕ್ರವಾರ ಮಧ್ಯಾಹ್ನ ಗಚಿಬೌಲಿಯ ವಿಶ್ವವಿದ್ಯಾಲಯದ ಆವರಣದಲ್ಲಿರುವ ಅಂಬೇಡ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯಿತು. ಅಂತಿಮ ಫಲಿತಾಂಶಗಳನ್ನು ಸಂಜೆ ಘೋಷಿಸಲಾಯಿತು.
ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ದಲಿತ ವಿದ್ಯಾರ್ಥಿ ಸಂಘ (ಡಿಎಸ್ಯು), ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಮತ್ತು ಬುಡಕಟ್ಟು ವಿದ್ಯಾರ್ಥಿಗಳ ವೇದಿಕೆ (ಟಿಎಸ್ಎಫ್) ಮೈತ್ರಿಯ ಎಡಪಂಥೀಯ, ದಲಿತ ಮತ್ತು ಆದಿವಾಸಿ ಸಂಘಟನೆಗಳೊಂದಿಗೆ ಸಂಯೋಜಿತ ವಿದ್ಯಾರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಗಳನ್ನು ಗೆದ್ದುಕೊಂಡಿದ್ದಾರೆ.
ಕಳೆದ ವರ್ಷ, ಎಸ್ಎಫ್ಐ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (ಯುಡಿಎ) ರಚಿಸಿ ಆದಿವಾಸಿ, ದಲಿತ, ಬಹುಜನ, ಮುಸ್ಲಿಂ ಮತ್ತು ಬುಡಕಟ್ಟು ಸಂಸ್ಥೆಗಳಿಂದ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿತು. ತ್ರಿಕೋನ ಸ್ಪರ್ಧೆ ಏರ್ಪಟ್ಟು ಕೊನೆಗೆ ಎಬಿವಿಪಿ ಚುನಾವಣೆಯಲ್ಲಿ ಜಯಗಳಿಸಿತ್ತು. ಆ ಮೂಲಕ ಹಿಂದಿನ ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿ ಸಂಘದಲ್ಲಿ ಅಧಿಕಾರಕ್ಕೆ ಬಂದಿತ್ತು.
ಆದರೆ ಈ ಬಾರಿ ಎಸ್ಎಫ್ಐ ಮತ್ತೆ ದಲಿತ, ಎಡ ಮತ್ತು ಆದಿವಾಸಿ ಗುಂಪುಗಳ ಮೈತ್ರಿಕೂಟಕ್ಕೆ ಮರಳಿತ್ತು. ಹಾಗಾಗಿ ಆರಾಮದಾಯಕ ಬಹುಮತದೊಂದಿಗೆ ಚುನಾವಣೆಯಲ್ಲಿ ಜಯಗಳಿಸಿತು. ಎಬಿವಿಪಿಯು ಸಹ ಇತರೆ ಹಿಂದುಳಿದ ವರ್ಗಗಳ ಒಕ್ಕೂಟ (ಒಬಿಸಿಎಫ್) ಮತ್ತು ಹೊಸದಾಗಿ ರೂಪುಗೊಂಡ ಸೆವಲಾಲ್ ವಿದ್ಯಾರ್ಥಿ ದಳ ಎಂಬ ಎರಡು ವಿದ್ಯಾರ್ಥಿ ಗುಂಪುಗಳೊಂದಿಗೆ ಕೈಜೋಡಿಸಿತು. ಆದರೂ ಎರಡನೇ ಸ್ಥಾನಕ್ಕೆ ನೂಕಲ್ಪಟ್ಟಿದೆ.
ಎಸ್ಎಫ್ಐಯ ಅಭಿಷೇಕ್ ನಂದನ್ ಅಧ್ಯಕ್ಷ ಹುದ್ದೆಯನ್ನು ಗೆದ್ದರೆ, ಡಿಎಸ್ಯುನಿಂದ ಎಂ.ಶ್ರೀ ಚರಣ್ ಉಪಾಧ್ಯಕ್ಷರಾಗಿಯೂ, ಎಎಸ್ಎಯಿಂದ ಗೋಪಿ ಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿಯೂ ಮತ್ತು ಟಿಎಸ್ಎಫ್ನ ರಾಥೋದ್ ಪ್ರದೀಪ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಎಸ್ಎಫ್ಐನ ಸೊಹೆಲ್ ಅಹ್ಮದ್ ಕ್ರೀಡಾ ಕಾರ್ಯದರ್ಶಿ ಹುದ್ದೆಯನ್ನು ಮತ್ತು ಎಎಸ್ಎಯ ಪ್ರಿಯಾಂಕಾ ಬದ್ರಾಸೆಟ್ಟಿ ಸಾಂಸ್ಕೃತಿಕ ಕಾರ್ಯದರ್ಶಿ ಹುದ್ದೆಯನ್ನು ಜಯಸಿದ್ದಾರೆ.
“ಈ ವಿಜಯವು ರೋಹಿತ್ ವೇಮುಲಾ ಅವರಿಗೆ ನ್ಯಾಯಕ್ಕಾಗಿ ಹೋರಾಡುವ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಳಸಮುದಾಯದವರನ್ನು ಹೊರದೂಡುವ ಬಿಜೆಪಿ ನೇತೃತ್ವದ ಕೇಂದ್ರದ ನೀತಿಗಳ ವಿರುದ್ಧದ ಹೋರಾಟಗಳ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಧೈರ್ಯ ತುಂಬುತ್ತದೆ” ಎಂದು ಎಎಸ್ಎ ಅಧ್ಯಕ್ಷ ಎಂ ಇನಿಯವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿವಿಯ ವಿದ್ಯಾರ್ಥಿ ಸಂಘದ ಚುನಾವಣೆಯು ಸಹ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಚುನಾವಣೆಯ ಹಾದಿಯಲ್ಲಿ ಮಹತ್ವವನ್ನು ಪಡೆದುಕೊಂಡಿತ್ತು. ಇದು ಎಡ ಮತ್ತು ಬಲಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಕಠಿಣ ಯುದ್ಧಕ್ಕೆ ಸಾಕ್ಷಿಯಾಯಿತು.
ಕ್ಯಾಂಪಸ್ನಲ್ಲಿ ಜಾತಿ ಆಧಾರಿತ ತಾರತಮ್ಯದ ಆರೋಪದ ಮೇಲೆ 2016 ರ ಜನವರಿ 17 ರಂದು ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ನಂತರ ಹೈದರಾಬಾದ್ ವಿಶ್ವವಿದ್ಯಾಲಯವು ಕಳೆದ ಮೂರು ವರ್ಷಗಳಿಂದ ಕ್ಯಾಂಪಸ್ನಲ್ಲಿ ಚಳವಳಿಗಳು ಗರಿಗೆದರಿದ್ದು ಜಾತಿ ತಾರತಮ್ಯದ ವಿರುದ್ಧ ಆಕ್ರೋಶವೆದ್ದಿದೆ.
ಎ.ಬಿ.ವಿ.ಪಿ. ಸೋತಿರುವುದು ಒಳ್ಳೆಯ ಬೆಳವಣಿಗೆ.
DSU means Democratic Students Union
As far as we know, DSU in JNU is democratic students union. Same in HCU is Dalit students union.