Homeಚಳವಳಿಪ್ರತ್ಯೇಕವಾಗುಳಿವುದ ನಿಲ್ಲಿಸಿ ಜೊತೆಗೂಡಿದರೆ, ನಾವೇ ಈ ದೇಶದ ಬಲಶಾಲಿ ಬಹುಸಂಖ್ಯಾತರು

ಪ್ರತ್ಯೇಕವಾಗುಳಿವುದ ನಿಲ್ಲಿಸಿ ಜೊತೆಗೂಡಿದರೆ, ನಾವೇ ಈ ದೇಶದ ಬಲಶಾಲಿ ಬಹುಸಂಖ್ಯಾತರು

- Advertisement -
- Advertisement -

ತೆಲಂಗಾಣದ ಸುಜಾತಾ ಸೂರೆಪಲ್ಲಿ ಸುಸ್ತೇ ಆಗದ ದಿಟ್ಟ ಹೋರಾಟಗಾರ್ತಿ ಎಂದು ಹೆಸರು ಪಡೆದವರು. ಬಿಎಸ್‍ಪಿ ಪಕ್ಷದಿಂದ ಒಮ್ಮೆ ಚುನಾವಣೆಗೂ ಸ್ಪರ್ಧಿಸಿದ್ದ ಆಕೆ, ಜಾತಿ ದೌರ್ಜನ್ಯ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಡುತ್ತಿರುವವರು. ಬರಹಗಾರ್ತಿ ಮತ್ತು ಪರಿಸರ ಸಂಬಂಧಿ ಆಂದೋಲನಗಳಲ್ಲೂ ಅವರು ಸಕ್ರಿಯರು. ಶಾತವಾಹನ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರವನ್ನು ಬೋಧಿಸುವ ಸುಜಾತಾ ಅವರು ತಮ್ಮ ನಿಲುವುಗಳಿಗಾಗಿ ಬಲಪಂಥೀಯರಿಂದ ಟ್ರೋಲ್‍ಗೂ ಒಳಗಾಗಿದ್ದರು ಈ ಲೇಖನವನ್ನು ಕನ್ನಡಕ್ಕೆ ಮಲ್ಲಿಗೆ ಸಿರಿಮನೆಯವರು ಅನುವಾದಿಸಿದ್ದಾರೆ.

ಆಗಸ್ಟ್ 15ರಂದು ಮೋದಿ `ಒಂದು ರಾಷ್ಟ್ರ, ಒಂದು ಗ್ರಿಡ್’ (ಬಹುಶಃ ಒಂದು ಧರ್ಮ ಎಂಬುದು ನೇರವಾಗಿ ಉಚ್ಚರಿಸದಿರುವ ಪದ ಇರಬಹುದು) ಎಂದು ಹೇಳಿದರು. ಇದು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಮತ್ತು ನಮ್ಮೆಲ್ಲರಿಗೆ ಒಂದು ಎಚ್ಚರಿಕೆಯೆಂದು ಭಾವಿಸಬೇಕಾದದ್ದು.

ಭಾರತ ಈಗ ಕಷ್ಟಕಾಲದ ಮೂಲಕ ಹಾದುಹೋಗುತ್ತಿದೆ. ಭಾರತದ ಸನ್ನಿವೇಶವನ್ನು ಮೋದಿಗು ಮೊದಲು ಮತ್ತು ಮೋದಿಯ ನಂತರ ಎಂದು ನಾವು ವಿಭಾಗಿಸಿಕೊಂಡು ಅರ್ಥಮಾಡಿಕೊಳ್ಳಬೇಕು. ಈ ಅವಧಿಯಲ್ಲಿ ನಾವು ಗೌರಿ ಲಂಕೇಶ್ ಮತ್ತು ಅವರಂತಹ ಅನೇಕ ಅನೇಕ ದಿಟ್ಟ ಹೋರಾಟಗಾರರನ್ನು ಕಳೆದುಕೊಂಡೆವು. ಗೌರಿ ಧರ್ಮದ ದಬ್ಬಾಳಿಕೆಯನ್ನು ಪ್ರಶ್ನಿಸಿದರು; ಇಂದಿನ ಕಾಲದಲ್ಲಿ ಸಹಿಸಲಸಾಧ್ಯವೆನ್ನಿಸಿಕೊಳ್ಳುವಂತಹ ಹಲವು ವಿಷಯಗಳ ಬಗ್ಗೆ ದಿಟ್ಟವಾಗಿ ಬರೆದರು ಮಾತ್ರವಲ್ಲ, ಒಂಟಿಗೈಯ್ಯಲ್ಲಿ ಅನೇಕ ಮೂಲಭೂತ ವಿಚಾರಗಳಿಗಾಗಿ ಹೋರಾಟ ನಡೆಸಿದರು.

ಇಂದು ರಾಜಕೀಯ ಅಧಿಕಾರ ಪಡೆದ ನಂತರ ಹಿಂದುತ್ವವು ಸಮಾಜದ ಎಲ್ಲ ಸ್ತರಗಳ ಜನರಲ್ಲೂ ಬೇರೂರಿಬಿಟ್ಟಿದೆ. ಅದಕ್ಕಿಂತ ಭಿನ್ನವಾಗಿ ಆಲೋಚಿಸುವವರನ್ನು ಒಂದೋ ಒಳಗೆ ಹಾಕಿಕೊಳ್ಳಲು ನೋಡುತ್ತಿದ್ದಾರೆ ಅಥವಾ ಕೊಲ್ಲುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ದುಸ್ಥಿತಿ ತಲುಪಿರುವ ಜನರು ಸ್ಥಳೀಯ ಸಂಘಟನೆಗಳ ನೆರವು ಪಡೆಯಲು ನೋಡುತ್ತಿದ್ದಾರೆ. ಆದರೆ ಬಹುಪಾಲು ಸಂಘಟನೆಗಳು ಕೇಸರಿ ವಿಷ ತುಂಬಿಕೊಂಡಿವೆ. ನೋಟು ರದ್ಧತಿ ಮತ್ತು ಜಿಎಸ್‍ಟಿಯು ಭಾರೀ ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಾ ಕೆಳ ಮತ್ತು ಮಧ್ಯಮ ವರ್ಗವನ್ನು ಹೆಚ್ಚೂಕಡಿಮೆ ಕೊಂದೇ ಬಿಟ್ಟಿದೆ. ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್‍ಗಳು ರಾಜಕೀಯ ಅಧಿಕಾರ ಪಡೆಯಲು ದಾರಿ ಮಾಡಿಕೊಟ್ಟವು. ಇದರಿಂದಾಗಿ ಕಾಶ್ಮೀರದ ಪ್ರಜಾತಂತ್ರದ ಮೇಲೆ ದಾಳಿ ಮಾಡಲು, 370ನೇ ವಿಧಿಯನ್ನು ಕಿತ್ತು ಹಾಕಲು ಸಾಧ್ಯವಾಯಿತು. ಇಷ್ಟೆಲ್ಲ ನಡೆದರೂ ಬಹುಸಂಖ್ಯಾತರ ಮೌನವು ಆತಂಕ ಹುಟ್ಟಿಸುವಂತಿದೆ. ಭಾರತದ ನಿಜವಾದ ಗುಣ ಇದಾಗಿರಲಿಲ್ಲ!

ನಮಗೆ ಭಾರತದ ಬಗ್ಗೆ ಹೆಮ್ಮೆ ಇತ್ತು; ಅದರ `ವಿವಿಧತೆಯಲ್ಲಿ ಏಕತೆ’ಯ ಕಾರಣಕ್ಕಲ್ಲ, ಬದಲಿಗೆ ಅದರ ನಿಜವಾದ ಬಹುತ್ವದ ಗುಣದ ಕಾರಣಕ್ಕೆ. ಈ ಬಹುತ್ವವೇ ನಮ್ಮ ಸಂವಿಧಾನಗಳಲ್ಲಿ ಅಡಕಗೊಂಡಿರುವುದು ಮತ್ತು ಅದಕ್ಕಾಗಿ ಭಾರತದ ಈ ಗುಣವನ್ನೇ ನಾವೆಲ್ಲ ಕಲಿತದ್ದು ಮತ್ತು ಬದುಕಿದ್ದು. ದಾರ್ಶನಿಕ ಮತ್ತು ಮಾನವ ಹಕ್ಕುಗಳ ದಂತಕಥೆ, ಡಾ.ಬಾಬಾ ಸಾಹೇಬರು ತಮ್ಮ ಬದುಕಿನುದ್ದಕ್ಕೂ ಹಲವು ಬಗೆಯ ಸಿದ್ಧಾಂತಗಳ ಜೊತೆ ಪ್ರಯೋಗಗಳನ್ನು ನಡೆಸಿದ್ದು ಈ ನಿಟ್ಟಿನಲ್ಲಿ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಜೊತೆ. ಭಾರತದ ಬಹುಸಂಖ್ಯಾತ ಜನರಿಗೆ, ತಮ್ಮನ್ನು ಹಿಂದುತ್ವದ ಸಾಂಸ್ಕೃತಿಕ ದಬ್ಬಾಳಿಕೆಯಿಂದ ರಕ್ಷಿಸುವ ಏಕೈಕ ಆಸರೆಯೆಂದರೆ ಬಾಬಾಸಾಹೇಬರ ಸಂವಿಧಾನ ಮಾತ್ರ.

ಜಾತಿಯ ದಬ್ಬಾಳಿಕೆಯ ಕುರಿತು ಮಾತನಾಡದಿದ್ದರೆ ಭಾರತದ ಚಿತ್ರಣ ಅಪೂರ್ಣವಾಗುತ್ತದೆ. ಈಗ ಜಾತಿ ಕ್ರೌರ್ಯವೆಂಬುದು ಕೇವಲ ಬಡ, ಶೋಷಿತ, ಹಳ್ಳಿಗಳ ದಲಿತರ ಮೇಲೆ ಮಾತ್ರ ನಡೆಯುತ್ತಿರುವಂಥದ್ದಾಗಿ ಉಳಿದಿಲ್ಲ. ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ರೋಹಿತ್ ವೇಮುಲನ ಕ್ರೂರವಾದ ಕೊಲೆಯನ್ನು (ನಾವು ಅದನ್ನು ಆತ್ಮಹತ್ಯೆಯೆಂದು ಕರೆಯುವುದಿಲ್ಲ), ಪೆರುಮಲ್ಲ ಪ್ರಣಯ್ ಎಂಬ ಯುವಕ ವೈಶ್ಯ ಸಮುದಾಯದ ಯುವತಿಯನ್ನು ಮದುವೆಯಾದದ್ದಕ್ಕಾಗಿ ಪ್ರಾಣ ತೆತ್ತದ್ದನ್ನು ನೋಡಿದರೆ, ಜಾತಿಯನ್ನು ಪ್ರಶ್ನಿಸುವ ವಿದ್ಯಾವಂತರನ್ನೂ, ರಾಜಕೀಯ ತಿಳಿವಳಿಕೆ ಉಳ್ಳವರನ್ನೂ ಬಿಡದೆ ಅದು ಬಲಿಪಡೆಯುತ್ತದೆಂದು ಒಪ್ಪಬೇಕಾಗುತ್ತದೆ. ಶೋಷಿತರ ಪರವಾಗಿ ದನಿಯೆತ್ತಿದ್ದಕ್ಕಾಗಿ ಇಂದು ದಲಿತರು ಬಲಿಯಾಗುತ್ತಿದ್ದಾರೆ. ದಲಿತ ಹೋರಾಟಗಾರ ಚಂದ್ರಶೇಖರ್ ಆಜಾದರ ಬಂಧನ ಮತ್ತು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಚಿಂತಕರು, ಬುದ್ಧಿಜೀವಿಗಳು, ವಕೀಲರು ಮತ್ತು ಹೋರಾಟಗಾರರ ಬಂಧನವಾಗುತ್ತಿರುವುದು ಸಮಾಜದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳು ಬಿಕ್ಕಟ್ಟಿನಲ್ಲಿರುವುದನ್ನು ತೋರುತ್ತದೆ. ದಲಿತ ಮತ್ತು ಮುಸ್ಲಿಂ ಸಮುದಾಯಗಳನ್ನು ಕೇವಲ ಗೋವಿನ ಹೆಸರಿನಲ್ಲಷ್ಟೇ ಅಲ್ಲ, ಶ್ರೀರಾಮನ ಜಯಘೋಷ ಮಾಡಲಿಲ್ಲವೆಂದೂ ಕೂಡಾ ದಾಳಿಗಳಿಗೆ ಗುರಿಮಾಡಲಾಗುತ್ತಿದೆ. ಜಾರ್ಖಂಡದ ಘಟನೆ, ಅನ್ಸಾರಿಯ ಸಾವನ್ನು ನಾವು ಇನ್ನೂ ಮರೆತಿಲ್ಲ.

ತೆಲಂಗಾಣದ ವಿಷಯಕ್ಕೆ ಬಂದರೆ, ಈ ನಾಡು ಸಾಂಸ್ಕೃತಿಕ ಮತ್ತು ಧಾರ್ಮಿಕ ಬಹುತ್ವದ ಪರಂಪರೆಯುಳ್ಳ ಪ್ರದೇಶ. ಹೋರಾಟಗಳ ತವರು, ಸ್ವಾಭಿಮಾನ ಚಳವಳಿಯ ನೆಲ, ಭೂಮಿ ಮತ್ತು ಬದುಕಿನ ಸಂಘರ್ಷದ ಸ್ಥಳವಾಗಿ ಪ್ರಸಿದ್ಧಿ ಪಡೆದಿತ್ತು. ಆದರೆ, ಸ್ವತಂತ್ರ ರಾಜ್ಯ ನಿರ್ಮಾಣದ ನಂತರ ಇಲ್ಲಿನ ಸಾಮಾನ್ಯ ಜನರ ಮೇಲಿನ ಶೋಷಣೆ ಹಲವು ಪಟ್ಟು ಹೆಚ್ಚಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬರೆದರೆಂಬ ಕಾರಣಕ್ಕೆ ಹೋರಾಟಗಾರರನ್ನು ಬಂಧಿಸಲಾಗಿದೆ, ವಿದ್ಯಾರ್ಥಿಗಳನ್ನು ಮೂರನೇ ದರ್ಜೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಇತ್ತೀಚಿನವರೆಗೆ ಅಸಾಧ್ಯವಾಗಿದ್ದ ಬಿಜೆಪಿಯ ಪ್ರವೇಶ ಆಳುತ್ತಿರುವ ಪಕ್ಷದ ಮೂಲಕವೇ ರಾಜಕೀಯ ವಾತಾವರಣದೊಳಗೆ ಸಾಧ್ಯವಾಗುತ್ತಿದೆ. ಹೆಸರುಗಳು ಬೇರೆಬೇರೆಯಾದರೂ ಎಲ್ಲ ಪಕ್ಷಗಳೂ ಜಾತಿ-ವರ್ಗ ದಮನವನ್ನು ನಡೆಸುವುದರಲ್ಲಿ ಒಂದೇ ಬಗೆಯ ನೀತಿಗಳನ್ನು ಅನುಸರಿಸುತ್ತಿವೆ. ಬಹುಜನರ ಹೆಸರಿಟ್ಟುಕೊಂಡ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಮುಂದೊಂದು ದಿನ ಈ ಎಲ್ಲ ಪಕ್ಷಗಳೂ ತಮ್ಮ ಸ್ವಾರ್ಥಸಾಧನೆಗಾಗಿ ಒಗ್ಗೂಡಿ ಕೆಲಸ ಮಾಡಿದರೆ ಆಶ್ಚರ್ಯವೇನೂ ಇಲ್ಲ!

ತೆಲಂಗಾಣ ರಾಜ್ಯವೂ ಈಗ ಪೂರ್ತಿ ಮೋದಿ ಸರ್ಕಾರದ ಮಾದರಿಯಲ್ಲೇ ಆಳ್ವಿಕೆ ನಡೆಸುತ್ತಿದೆ. ಬಹುಸಂಖ್ಯಾತರನ್ನು ಅವರ ಪಾಲಿನ ಸಂಪನ್ಮೂಲಗಳನ್ನು ಪಡೆಯಲು ಬಿಡದೆ ವಂಚಿಸಲಾಗುತ್ತಿದೆ; ಬಹುರಾಷ್ಟ್ರೀಯ ಕಂಪನಿಗಳನ್ನು ಮುಕ್ತವಾಗಿ ಆಹ್ವಾನಿಸಲಾಗುತ್ತಿದೆ, ಸಶಸ್ತ್ರ ಪಡೆಗಳನ್ನು ಬಲಗೊಳಿಸುತ್ತಿದೆ ಮತ್ತು ಭಿನ್ನದನಿಗಳನ್ನು ಅಡಗಿಸಲು ನೋಡುತ್ತಿದೆ. ಈಗ ಅವರ ಮುಖ್ಯ ಉದ್ದೇಶವೇ ಆದಾಯ ಸೃಷ್ಟಿಯ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗೀಕರಿಸುವುದು, ಯುರೇನಿಯಮ್ ಗಣಿಗಾರಿಕೆಯನ್ನು ಪ್ರೋತ್ಸಾಹಿಸುವುದು ಮೊದಲಾದವಾಗಿವೆ. ಒಂದು ಇಡೀ ಅವಧಿಯ ಆಳ್ವಿಕೆಯ ನಂತರವೂ ಟಿಆರ್‌ಎಸ್ ತನ್ನ ವಾಗ್ದಾನಗಳನ್ನು ಈಡೇರಿಸಲು ವಿಫಲವಾಗಿದೆ ಮಾತ್ರವಲ್ಲ, ಕುಟುಂಬ ಮತ್ತು ದಬ್ಬಾಳಿಕೆಯ ರಾಜಕಾರಣ ನಡೆಸುತ್ತಾ ರಾಜ್ಯವನ್ನು ಸಂಪೂರ್ಣ ಕಡುಬಡತನಕ್ಕೆ ದೂಡಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ನಿರ್ಲಕ್ಷಿಸಲ್ಪಟ್ಟಿವೆ. ಒಟ್ಟಿನಲ್ಲಿ, ಅಮಾಯಕರನ್ನು ಕೊಲ್ಲುವುದರಲ್ಲಿ, ಹೋರಾಟಗಾರರನ್ನು ಬಂಧಿಸುವುದರಲ್ಲಿ ಮತ್ತು ಹಿಂದುತ್ವವನ್ನು ಹರಡುವುದರಲ್ಲಿ ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳೆರಡೂ ಒಂದೇ ನೀತಿಯನ್ನು ಅನುಸರಿಸುತ್ತಿವೆ.

ಈಗ ನಮ್ಮ ಮುಂದಿರುವ ಒಂದೇ ಮಾರ್ಗವೆಂದರೆ, ನಮ್ಮ ಸಮಾನ ಶತ್ರುವನ್ನು ಗುರುತಿಸುವುದು ಮತ್ತು ಜಾತಿ ವಿರೋಧಿ, ವರ್ಗ ವಿರೋಧಿ ಮತ್ತು ಎಲ್ಲ ಬಗೆಯ ಪ್ರಜಾತಾಂತ್ರಿಕ ಶಕ್ತಿಗಳೂ ಜೊತೆಗೂಡುವುದು. ಇಂದು ದೇಶದ ಪ್ರತಿಯೊಂದು ಪ್ರಜಾತಾಂತ್ರಿಕ ಶಕ್ತಿ ಕೂಡಾ ದಾಳಿಯ ಭೀತಿಯಲ್ಲಿದೆ. ನಾವೆಲ್ಲರೂ ಸಣ್ಣಪುಟ್ಟ ಸೈದ್ಧಾಂತಿಕ ವಿಚಾರಗಳ ಸುತ್ತ ಪ್ರತ್ಯೇಕವಾಗುಳಿಯುವುದನ್ನು ನಿಲ್ಲಿಸಿ ಜೊತೆಗೂಡಿದರೆ, ನಾವೇ ಈ ದೇಶದ ಬಲಶಾಲಿ ಬಹುಸಂಖ್ಯೆಯಾಗುತ್ತೇವೆ; ನಾವೇ ಪ್ರತಿಪಕ್ಷದ ಪಾತ್ರ ವಹಿಸುತ್ತೇವೆ ಮತ್ತು ಬಹುಶಃ ವಿಶಾಲ ಜನಸಮೂಹವನ್ನು ಮುಂದಿನ ದಾಳಿಗಳಿಂದ ಪಾರುಮಾಡಬಹುದು. ಇದಕ್ಕಾಗಿ ನಾವು ಎಲ್ಲ ಬಗೆಯ ವಿಧಾನಗಳನ್ನೂ, ವೇದಿಕೆಗಳನ್ನೂ, ತಂತ್ರಗಳನ್ನೂ ಅನುಸರಿಸಬೇಕಾಗಬಹುದು. ಗೌರಿ ಲಂಕೇಶ್ ಬಹುಶಃ ಒಂಟಿದನಿಯಾದ ಕಾರಣಕ್ಕೆ ಆಕೆಯ ಹತ್ಯೆ ನಡೆದಿರಬಹುದು, ಆದರೆ ನಾವೆಲ್ಲರೂ ಯಾವಾಗ ಜೊತೆಗೂಡಿ ಒಟ್ಟಾಗಿ ಎದ್ದುನಿಲ್ಲುತ್ತೇವೋ ಆಗ ಇಂತಹ ಯಾವ ಬಲಿಗಳೂ ಸಂಭವಿಸಲು ಸಾಧ್ಯವಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ..’; ಇವಿಎಂ-ವಿವಿಪ್ಯಾಟ್ ಪರಿಶೀಲನೆ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
'ಇವಿಎಂ-ವಿವಿಪ್ಯಾಟ್ ಪರಿಶೀಲನಾ ಅರ್ಜಿ' ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದ್ದು, 'ಮತ್ತೊಂದು ಸಾಂವಿಧಾನಿಕ ಪ್ರಾಧಿಕಾರದಿಂದ ನಡೆಸಬೇಕಾದ ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯವು ಹೇಳಿತು. 2024ರ ಲೋಕಸಭಾ ಚುನಾವಣೆಯ ಎರಡನೇ ಹಂತವು...