ಶುಕ್ರವಾರ ದೆಹಲಿಯ ಸಿಂಘು ಗಡಿಯ ಒಂದು ಭಾಗದಲ್ಲಿ ರೈತರ ಮೇಲೆ ದಾಳಿ ನಡೆಸಿದವರ ಬಗ್ಗೆ ಅಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ನಡೆಸಿದ್ದು, ದಾಂಧಲೆ ನೇತೃತ್ವ ವಹಿಸಿದ ಇಬ್ಬರು ಪಕ್ಕಾ ಬಿಜೆಪಿ ಕಾರ್ಯಕರ್ತರು ಎಂದು ಸಾಬೀತಾಗಿದೆ. ಅದರಲ್ಲಿ ಒಬ್ಬಾತನಂತೂ ಅಮಿತ್ ಶಾ ಜೊತೆ ಪಕ್ಷದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವ ಫೋಟೋಗಳು ವೈರಲಾಗಿದೆ.
ಸಿಂಘು ಗಡಿಯ ಪ್ರತಿಭಟನಾಕಾರರ ಮೇಲೆ ದಾಳಿ ಕುರಿತ ವರದಿಗಳಲ್ಲಿ ಬಹುತೇಕ ಮಾಧ್ಯಮಗಳು , ಸ್ಥಳೀಯರು ಎಂದೋ, ’ಸ್ಥಳೀಯರು ಎಂದು ಕರೆದುಕೊಂಡವರು’ ಎಂದೋ ಹೇಳಿವೆ. ಆದರೆ, ಅಲ್ಟ್ನ್ಯೂಸ್ ಹಲವಾರು ವಿಡಿಯೋ, ಫೇಸ್ಬುಕ್ ಪ್ರೊಫೈಲ್, ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿಯಗಿರುವ ಫೋಟೋ ಇತ್ಯಾದಿ ಆಧಾರದಲ್ಲಿ, “ದಾಳಿಯ ನೇತೃತ್ವ ವಹಿಸಿದ್ದು ಇಬ್ಬರು ಪ್ರಮುಖ ಬಿಜೆಪಿ ಕಾರ್ಯಕರ್ತರು” ಎಂದು ಸಾಬೀತು ಮಾಡಿದೆ.
ಆಜ್ತಕ್ ವರದಿಯಲ್ಲಿ, ಸ್ಥಳೀಯರು ಎಂದು ಕರೆದುಕೊಂಡ ಗುಂಪಿನ ಸದಸ್ಯರು, “ಈ ಮೊದಲು ರೈತ ಪ್ರತಿಭಟನೆಗೆ ಬೆಂಬಲ ನೀಡಿದ್ದೆವು, ಜನವರಿ 26 ರ ಘಟನೆ ನಂತರ ನಾವು ಪ್ರತಿಭಟನೆ ವಿರೋಧಿಸುತ್ತಿದ್ದೇವೆ” ಎಂದಿದ್ದರು. ಆಜ್ತಕ್ ಪ್ರಸಾರ ಮಾಡಿದ ವಿಡಿಯೋದಲ್ಲಿ, ನೀಲಿ-ಬಿಳಿ-ಹಸಿರು ಪಟ್ಟಿಗಳ ಶರ್ಟ್ ತೊಟ್ಟು ತ್ರಿವರ್ಣ ಧ್ವಜ ಹಿಡಿದು, ಪೊಲೀಸರ ಎದುರು ಕಾಣಿಸುವ ವ್ಯಕ್ತಿ ಅಬನ್ ದಾಬಸ್ ಎಂದು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಗುರುತಿಸಿದ್ದಾರೆ.
ಅಬನ್ ದಾಬಸ್ ಯಾರು?
“ವಾಯುವ್ಯ ದೆಹಲಿಯ ಸಾಮಾಜಿಕ ಕಾರ್ಯಕರ್ತ” ಎಂದು ಈತ ತನ್ನ ಫೇಸ್ಬುಕ್ ಪೇಜ್ನಲ್ಲಿ ಹೇಳಿಕೊಂಡಿದ್ದಾನೆ. ’ಅಬನ್ ಕುಮಾರ್ ಸೊಷಿಯಲ್ ವರ್ಕರ್’ ಎಂಬುದು ಈತನ ಫೇಸ್ಬುಕ್ ಪೇಜ್. ದಾಬಸ್ ಎಂಬುದು ಜಾಟ್ ಸಮುದಾಯದ ವಂಶಾವಳಿಯ ಹೆಸರು.
ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!
ಬರ್ವಾಲಾ ಗ್ರಾಮದ 31 ನೆ ವಾರ್ಡ್ ಪೂರ್ತ್ ಕುರ್ದ್ನಲ್ಲಿ ಮನೆಮನೆಗೆ ತೆರಳಿ ಸ್ಯಾನಿಟೈಜೇಶನ್ ಮಾಡುವ ಕಾರ್ಯಕ್ರಮದ ಫೋಟೊವನ್ನು ಕಳೆದ ವರ್ಷ ತನ್ನ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದ. ಅಮನ್ ಸ್ಥಳೀಯ (ಬರ್ವಾಲಾ) ಬಿಜೆಪಿ ನಾಯಕಿ ಮತ್ತು ವಾರ್ಡ್ 31 ರ ಕೌನ್ಸಿಲರ್ ಅಂಜು ಕುಮಾರ್ ಅಲಿಯಾಸ್ ಅಂಜು ದೇವಿಯ ಪತಿ.
ವಾಯುವ್ಯ ದೆಹಲಿಯ ಬಿಜೆಪಿಯ ಅಧಿಕೃತ ಕಾರ್ಯಕ್ರಮಗಳಲ್ಲೂ ಈತ ಕಾಣಿಸಿಕೊಂಡಿದ್ದಾನೆ. ಮೊದಲಿಗೆ ಅಮನ್, ಅಂಜು ಸ್ಥಳೀಯ ಆಪ್ ನಾಯಕರಾಗಿದ್ದು, 2017 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಅಮನ್ ಗೃಹ ಸಚಿವ ಅಮಿತ್ ಶಾ ಜೊತೆಗಿರುವ ಪಕ್ಷದ ಅಧಿಕೃತ ಕಾರ್ಯಕ್ರಮದ ಫೋಟೊ ಅಪ್ಲೋಡ್ ಮಾಡಿದ್ದಾನೆ.
ಅಮನ್ ಪತ್ನಿ ಅಂಜು ಕುಮಾರ್ ಪೂರ್ತ್ ಖುರ್ದ್ ನಿವಾಸಿ. ಪೂರ್ತ್ ಖುರ್ದ್ ಸಿಂಘು ಗಡಿಯಿಂದ 15 ಕಿಮೀ ದೂರದಲ್ಲಿದೆ. ಸ್ಥಳೀಯರು ಎಂದು ಹೇಳಿಕೊಂಡ ದಾಂಧಲೆಕೋರರು, ಪ್ರತಿಭಟನೆಯಿಂದ ವಾಹನ ದಟ್ಟಣೆ ಹೆಚ್ಚಾಗಿ ತಾವು ಅಂಗಡಿ-ಮುಗ್ಗಟ್ಟು ತೆಗೆಯಲಾಗುತ್ತಿಲ್ಲ ಎಂದಿದ್ದರು. ಆದರೆ 15 ಕಿಮೀ ದೂರದ ಒಂದು ಗ್ರಾಮವನ್ನು ನೆರೆಹೊರೆಯ ಪ್ರದೇಶ ಎನ್ನಲಾಗುವುದಿಲ್ಲ ಎಂಬುವುದು ಸಾಮಾನ್ಯ ಜ್ಞಾನವಾಗಿದೆ!
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಪಾಕಿಸ್ತಾನದ ಪತ್ರಕರ್ತರೊಬ್ಬರು ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆಯೇ?
ಇನ್ನೊಬ್ಬ ಪ್ರಮುಖ ಬಿಜೆಪಿ ಕಾರ್ಯಕರ್ತ
ಕಿಶನ್ ದಾಬಸ್ ಎನ್ನುವಾತ ತನ್ನ ಫೇಸ್ಬುಕ್ ಪೇಜ್ನಲ್ಲಿ ಸಿಂಘು ಗಡಿಯಲ್ಲಿನ ಹಿಂಸಾಚಾರದ ಫೋಟೊವನ್ನು ಅಪ್ಲೋಡ್ ಮಾಡಿದ್ದ. ಒಂದೆರಡು ಗಂಟೆಗಳಲ್ಲಿ ಆತ ಪೋಸ್ಟ್ ಅನ್ನು ಡಿಲಿಟ್ ಮಾಡುವ ಮುನ್ನ ಅಲ್ಟ್ನ್ಯೂಸ್ ಅದರ ಸ್ಕ್ರೀನ್ಶಾಟ್ ಪಡೆದುಕೊಂಡಿತ್ತು. ಅದರಲ್ಲಿ ಬಿಜೆಪಿ ನಾಯಕರಾದ ಸಂದೀಪ್ ಶೆರಾವತ್ ಮತ್ತು ರವೀಂದರ್ಕುಮಾರ್ ಅವರನ್ನು ಟ್ಯಾಗ್ ಮಾಡಲಾಗಿತ್ತು. ಇವರಿಬ್ಬರೂ ಕಿಶನ್ಗೆ ತುಂಬ ಪರಿಚಯ ಎಂದೆನಿಸುತ್ತದೆ.
ಕಿಶನ್ ಅಪ್ಲೋಡ್ ಮಾಡಿರುವ ದಾಂಧಲೆಯ ವಿಡೀಯೋಗಳಲ್ಲಿ ಒಂದರಲ್ಲಿ ಅಮನ್ ಮತ್ತು ಕಿಶನ್ ಇಬ್ಬರೂ ಜೊತೆಗಿದ್ದರೆ, ಪಕ್ಕದಲ್ಲೆ ದೊಡ್ಡ ಸಂಖ್ಯೆಯಲ್ಲಿ ಪೊಲೀಸರಿದ್ದಾರೆ. ಇನ್ನೊಂದರಲ್ಲಿ, ಪೊಲೀಸ್ ಎದುರು ನಿಂತಿರುವ ದಾಂಧಲೆಕೋರರ ಗುಂಪಿನಲ್ಲಿ ಅಮನ್ ಮುಂದಿನ ಸಾಲಿನಲ್ಲಿದ್ದಾನೆ. ಆಜ್ತಕ್ ವಿಡಿಯೋದಲ್ಲೂ ಇದನ್ನು ನೊಡಬಹುದು. ಈ ವಿಡಿಯೋದಲ್ಲೂ ಇಬ್ಬರೂ ಜೊತೆಯಲ್ಲಿ ಇರುವುದನ್ನು ನೋಡಬಹುದು. ಕಳೆದ ವರ್ಷ ಕಿಶನ್ ಮಾಡಿದ ಪೋಸ್ಟ್ನಲ್ಲಿ ವಾರ್ಡ್ 31 ರ ಕೌನ್ಸಿಲರ್ (ಇನ್ನೊಬ್ಬ ದಾಂಧಲೆಕೋರ ಅಮನ್ ಪತ್ನಿ) ಜೊತೆ ಕಿಶನ್ ಇದ್ದಾನೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಹಿಂದಿ ಹೇರಿಕೆ ವಿರೋಧಿ ಚಿತ್ರಗಳನ್ನು ರೈತರ ಅರಾಜಕತೆ ಎಂದು ಪೋಸ್ಟ್ ಮಾಡಿದ ಬಿಜೆಪಿಗರು!
ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ಫೋಟೊವೊಂದರಲ್ಲಿ ಅಮನ್ ಮತ್ತು ಕಿಶನ್ ಬಿಜೆಪಿ ದೆಹಲಿ ಘಟಕದ ಬ್ಯಾನರ್ನಡಿ ಆಪ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವುದನ್ನು ನೊಡಬಹುದಾಗಿದೆ.
ಮಾಧ್ಯಮಗಳು ಹೇಳುತ್ತಿರುವಂತೆ ಸಿಂಘು ಗಡಿಯಲ್ಲಿ ದಾಂಧಲೆ ಆಗಿದೆಯೆ?
ಸಿಂಘು ಗಡಿಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ರೈತರನ್ನು ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿದ್ದಾರೆ ಎಂಬುದು ಅರ್ಧ ಸತ್ಯ. ಮೊದಲಿಗೆ ಅವರು ಸ್ಥಳೀಯರಲ್ಲ ಬದಲಿಗೆ ಬಿಜೆಪಿ ಆರ್ಎಸ್ಎಸ್ ಕಾರ್ಯಕರ್ತರು ಎಂದು ಆಲ್ಟ್ನ್ಯೂಸ್ ನಡೆಸಿರುವ ಫ್ಯಾಕ್ಟ್ಚೆಕ್ ಮೇಲಿನ ವರದಿಯ ಮೂಲಕ ತಿಳಿಯಬಹುದು. ಎರಡನೇದಾಗಿ ಅವರು ಸಿಂಘು ಗಡಿಯ ಒಂದು ಮೂಲೆಯಲ್ಲಿ ಚಿಕ್ಕ ಪ್ರತಿಭಟನೆಯ ಪ್ರಹಸನವಷ್ಟೇ ನಡೆಸಿದ್ದಾರೆ. ANI ಸೇರಿದಂತೆ ಮುಖ್ಯವಾಹಿನಿ ಮಾಧ್ಯಮಗಳು ಅದನ್ನೆ ದೊಡ್ಡದು ಮಾಡಿ ತೋರಿಸಿ ಇಡೀ ಸಿಂಘು ಗಡಿಗೆ ಸ್ಥಳೀಯರು ನುಗ್ಗಿಬಂದಿದ್ದಾರೆ ಎಂದು ಸುಳ್ಳು ವರದಿ ಮಾಡಿವೆ.
ವಾಸ್ತವವೆಂದರೆ ಸಿಂಘು ಗಡಿಯಲ್ಲಿ ಎರಡು ಪ್ರತಿಭಟನೆಗಳು ನಡೆಯುತ್ತಿವೆ. ಹರಿಯಾಣಕ್ಕೆ ಹೊಂದಿಕೊಂಡಂತೆ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ನಡೆಯುತ್ತಿರುವುದು ಒಂದು ಬೃಹತ್ ಪ್ರತಿಭಟನೆಯಾದರೆ, ಅಲ್ಲಿಂದ 200 ಮೀಟರ್ ದೂರದಲ್ಲಿ ಅಂದರೆ ದೆಹಲಿ ವ್ಯಾಪ್ತಿಗೆ ಬರುವ ಸ್ಥಳದಲ್ಲಿ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ನೇತೃತ್ವದಲ್ಲಿ ಸಣ್ಣ ಪ್ರತಿಭಟನೆ ನಡೆಯುತ್ತಿದೆ. (ದೀಪ್ ಸಿಧು ಇದೇ ಸಂಘಟನೆಗೆ ಸೇರಿದ್ದು, ಮುಖ್ಯವಾಗಿ ಗಣರಾಜ್ಯೋತ್ಸವದ ದಿನ ನಿಯೋಜಿತ ಮಾರ್ಗ ಉಲ್ಲಂಘಿಸಿ, ಕೆಂಪು ಕೋಟೆಗೆ ನುಗ್ಗಿ ಧಾರ್ಮಿಕ ಧ್ವಜ ಹಾರಿಸಿದ್ದು ಇವರೆ ಎನ್ನಲಾಗಿದೆ)
ಈ ಭಾಗ ದೆಹಲಿ ಪೊಲೀಸರ ವ್ಯಾಪ್ತಿಗೆ ಬರುವುದರಿಂದ, ಜನವರಿ 27 ರಂದು ಸ್ಥಳೀಯರ ಹೆಸರಿನ ಗುಂಪು ಇಲ್ಲಿ ಪ್ರತಿಭಟನೆ ನಡೆಸಿದೆ. ಇದು ಇನ್ನೊಂದು ಹರಿಯಾಣದ ಬದಿಯಲ್ಲಿರುವ ರೈತ ಗುಂಪಿಗೆ ಗೊತ್ತಾಗಿಯೇ ಇಲ್ಲ. ಆದರೆ ಮಾಧ್ಯಮಗಳು ಇಡೀ ಸಿಂಘು ಗಡಿಯಲ್ಲಿ ಪ್ರತಿಭಟನೆ ಎಂದು ತಪ್ಪು ವರದಿ ಮಾಡಿವೆ. ಏಕೆಂದರೆ ಅಲ್ಲಿ 60 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದು ಯಾವು ಗುಂಪು ಸಹ ಅಲ್ಲಿಗೆ ನುಗ್ಗಿ ಪ್ರತಿಭಟನೆ ನಡೆಸುವ ಧೈರ್ಯ ತೋರುವುದಿಲ್ಲ.
ಇದನ್ನೂ ಓದಿ: ಬಿಹಾರ ಚುನಾವಣೆ: CPI(ML) ಅಭ್ಯರ್ಥಿಯನ್ನು ಬಾಂಬ್ ದಾಳಿ ಆರೋಪಿಯೆಂದು ಸುಳ್ಳು ಹರಡಿದ ಬಿಜೆಪಿ!
ನಿಮ್ಮ ಈ ಪ್ರಾಮಾಣಿಕತೆಯ ವಾರ್ತೆಗಾಗಿ ನಾನು ಕಾಯುತ್ತಿರುತ್ತೇನೆ ಏಕೆಂದರೆ ಇವತ್ತಿನ ಮಾಧ್ಯಮ ಟಿ. ವಿ ಅವರು ಕೇವಲ ಒಂದು ಪಕ್ಷದ ಪರವಾಗಿ ಕೆಲಸ ಮಾಡುವುದು ತುಂಬಾ ನೋವಿನ ಪ್ರಸಂಗ. ಕೇವಲ ಟಿ. ಆರ್. ಪಿ ಗಾಗಿ ಕೆಲಸ ಮಾಡುವ ಚಾನೆಲ್ ಗಳು ನಮಗೆ ಬೇಕಿಲ್ಲ ನಮಗೆ ನಿಮ್ಮ ಸತ್ಯ ಸತ್ಯತೆ ಇರುವ ಮಾಹಿತಿಗಾಗಿ ನಾವು ದಿನ ನಿತ್ಯ ಕಾಯುತ್ತಿರುತ್ತೇವೆ. ಧನ್ಯವಾದಗಳು ಗೌರಿ. ಲಂಕೇಶ್. ??