ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತನ್ನು ರದ್ದುಪಡಿಸಲು ಲೋಕಸಭೆಯ ವಿಶೇಷಾಧಿಕಾರ ಸಮಿತಿ ಸರ್ವಾನುಮತದಿಂದ ನಿರ್ಣಯವನ್ನು ತೆಗೆದುಕೊಂಡಿದೆ.
ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಕಾಂಗ್ರೆಸ್ ನಾಯಕ ಅಧೀರ್ ರಾಜನ್ ಚೌಧರಿ ಅವರ ಅಮಾನತು ರದ್ದುಗೊಳಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬುಧವಾರ ಕಾಂಗ್ರೆಸ್ ಸಂಸದ ಚೌಧರಿ ಅವರು ಸಮಿತಿಯ ಮುಂದೆ ಹಾಜರಾದ ನಂತರ ಸಮಿತಿಯು ಅಮಾನತು ಆದೇಶ ಹಿಂಪಡೆಯಲು ಶಿಫಾರಸು ಮಾಡುವ ನಿರ್ಣಯವನ್ನು ಅಂಗೀಕರಿಸಿದೆ. ಈ ಕುರಿತ ನಿರ್ಣಯವನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ಸಮಿತಿ ಶೀಘ್ರವೇ ಸ್ಪೀಕರ್ಗೆ ಕಳುಹಿಸಿಕೊಡಲಿದೆ.
ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ವಿಶೇಷಾಧಿಕಾರ ಸಮಿತಿ ಎದುರು ಚೌಧರಿ ಹೇಳಿ ವಿಷಾದ ವ್ಯಕ್ತಪಡಿಸಿದ ಹಿನ್ನೆಲೆ ಅಮಾನತು ನಿರ್ಧಾರ ವಾಪಾಸ್ಸು ಪಡೆಯುವ ನಿರ್ಧಾರ ಸಮಿತಿ ಕೈಗೊಂಡಿದೆ.
ಮಣಿಪುರ ಹಿಂಸಾಚಾರದ ಕುರಿತ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಚೌಧರಿಗೆ ಆಗಸ್ಟ್ 11 ರಂದು ಅಶಿಸ್ತಿನ ವರ್ತನೆಗಾಗಿ ಅಮಾನತುಗೊಳಿಸಲಾಯಿತು. ಅವಿಶ್ವಾಸ ನಿರ್ಣಯದ ವೇಳೆ ಪ್ರಧಾನಿಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅವಿಶ್ವಾಸ ನಿರ್ಣಯ ಮೋದಿಯನ್ನು ಸಂಸತ್ತಿಗೆ ಎಳೆದು ತಂದಿದ್ದು, ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು ಹೇಳಿದ್ದರು. ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಾರಿಯಾದ ಬಿಲಿಯನೇರ್ ನೀರವ್ ಮೋದಿಗೆ ಹೋಲಿಕೆ ಮಾಡಿದ್ದರು.
ಸಂಸತ್ತಿನ ಅಧಿವೇಶನದ ವೇಳೆ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತು ನಿರ್ಣಯವನ್ನು ಮಂಡಿಸಿದ್ದರು. ಬಳಿಕ ವಿಶೇಷಾಧಿಕಾರ ಸಮಿತಿಯ ತೀರ್ಮಾನದವರೆಗೆ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು.
ಇದನ್ನು ಓದಿ: ಮಹಾರಾಷ್ಟ್ರ: ಸಚಿವಾಲಯದ ಕಟ್ಟಡದಿಂದ ಜಿಗಿದ ಪ್ರತಿಭಟನಾ ನಿರತ ರೈತರು