ಇತ್ತಿಚೆಗೆ ದೇಶದಲ್ಲಿ ಲವ್ ಜಿಹಾದ್ ಎಂಬ ಪದ ಪದೇ ಪದೇ ಪ್ರಸ್ತಾಪವಾಗುತ್ತಲೇ ಇದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ತರುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಹೇಳಿಕೆಗಳನ್ನು ಅಲ್ಲಿನ ಮುಖ್ಯಮಂತ್ರಿಗಳೇ ನೀಡಿದ್ದಾರೆ. ಸುದ್ದಿ ಚಾನೆಲ್ಗಳಲ್ಲಿ ಇದು ಹಾಟ್ ಟಾಪಿಕ್ ಆಗಿದೆ.
ಸುದ್ದಿ ಮಾಧ್ಯಮಗಳು ತಮ್ಮ ಸುದ್ದಿ, ಚರ್ಚೆಗಳಲ್ಲಿ ಲವ್ ಜಿಹಾದ್ ಅನ್ನು ಪ್ರಮುಖ ವಿಷಯವಾಗಿಸಿವೆ. ಆದರೆ ಅವರು ಪ್ರಸ್ತಾಪಿಸುತ್ತಿರುವ, ವ್ಯಾಖ್ಯಾನಿಸುತ್ತಿರುವ ವಿವರಗಳಿಗೆ ಇದಕ್ಕೆ ಅಡೆ ತಡೆಗಳೇ ಇಲ್ಲವಾಗಿವೆ. ಇಂತಹ ಚರ್ಚೆಗಳು ದೇಶದ ಸಾರ್ವಭೌಮತೆಗೆ ದಕ್ಕೆ ತರುವಂತಹ, ಕೋಮು ಸಂಘರ್ಷಕ್ಕೆ ಕಾರಣವಾಗುವ ಅಂಶಗಳನ್ನು ಒಳಗೊಂಡಿವೆ ಎಂದು ಸಾಮಾಜಿಕ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿ ಚಾನೆಲ್ಗಳಲ್ಲಿ ಲವ್ ಜಿಹಾದ್ ಸುತ್ತಲಿನ ಚರ್ಚೆಗಳು, ಇದರಲ್ಲಿ ಭಾಗವಹಿಸುವವರು ಸಮಾಜವನ್ನು ಹಾಳುಗೆಡವುವಂತಹ ಸುಳ್ಳು ಮತ್ತು ಅರ್ಧ-ಸತ್ಯಗಳನ್ನು ಮಾತನಾಡುತ್ತಿದ್ದಾರೆ. ಹಾಗಾಗಿ ಈ ವಿಷಯದ ಕುರಿತ ಮಾಧ್ಯಮ ಚರ್ಚೆಗಳಿಗೆ ನಿರ್ಬಂಧ ವಿಧಿಸಿ ಎಂದು ಸಾಮಾಜಿಕ ಹೋರಾಟಗಾರ ತೆಹ್ಸೀನ್ ಪೂನವಾಲ್ಲಾ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್(NBA) ಅಧ್ಯಕ್ಷ ರಾಜತ್ ಶರ್ಮ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ’ಲವ್ ಜಿಹಾದ್’ ಎಂಬುದು ದೇಶ ಒಡೆಯಲು ಬಿಜೆಪಿ ಸೃಷ್ಟಿಸಿದ ಪದ: ಅಶೋಕ್ ಗೆಹ್ಲೋಟ್
I have written to @RajatSharmaLive ji
President of News Brodcasters Association or NBA to take up the coverage of #lovejihaad, (a fake propaganda), specially the debates around it, in which participants are speaking lies & half-truths only to vitiate the environment. pic.twitter.com/5IvWPtElPg— Tehseen Poonawalla Official (@tehseenp) November 21, 2020
ಬಿಜೆಪಿಯ ಹಲವಾರು ಮುಖಂಡರ ಕುಟುಂಬ ಸದಸ್ಯರು ಅಂತರ್ಧರ್ಮೀಯ ಮದುವೆಯಾಗಿದ್ದಾರೆ. ಅವೆಲ್ಲರೂ ಲವ್ ಜಿಹಾದ್ ಅಡಿಯಲ್ಲಿ ಬರುತ್ತವೆಯೇ? ಎಂದು ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಪ್ರಶ್ನಿಸಿದ್ದಾರೆ.
Family members of several BJP leaders have also performed inter-religion marriages. I ask BJP leaders if these marriages come under the definition of 'love jihad'?: Chattisgarh CM Bhupesh Baghel pic.twitter.com/EywnzHmZR7
— ANI (@ANI) November 21, 2020
ಹಿಂದೂ ಯುವತಿಯರನ್ನು ಪ್ರೀತಿ ಹೆಸರಲ್ಲಿ ಇನ್ನೊಂದು ಧರ್ಮಕ್ಕೆ ಮತಾಂತರಿಸಲಾಗುತ್ತಿದೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಬಿಜೆಪಿ ಆಳ್ವಿಕೆಯ ಹಲವಾರು ರಾಜ್ಯಗಳಲ್ಲಿ “ಲವ್ ಜಿಹಾದ್” ವಿರುದ್ಧ ಕಠಿಣ ಕಾನೂನು ಶೀಘ್ರದಲ್ಲೇ ತರಲಾಗುವುದು ಎಂದು ಘೋಷಣೆ ಮಾಡಿವೆ.
ಇದನ್ನು ಗಮನದಲ್ಲಿಟ್ಟುಕೊಂಡೆ ಸುದ್ದಿ ಮಾಧ್ಯಮಗಳು ತಮ್ಮ ಚಾನೆಲ್ಗಳಲ್ಲಿ ಗಂಟೆಗಟ್ಟಲೆ ಪ್ಯಾನೆಲ್ ಡಿಸ್ಕಷನ್ ಹೆಸರಲ್ಲಿ ಹಲವು ಜನರನ್ನು ಕರೆಸಿ ಚರ್ಚೆ ನಡೆಸುತ್ತಿವೆ. ಆದರೆ ಚರ್ಚೆಯಲ್ಲಿ ಭಾಗವಹಿಸುವವರ ಮಾತುಗಳು, ಅವರು ಪ್ರಸ್ತುತ ಪಡಿಸುವ ಲವ್ ಜಿಹಾದ್ ಅಂಶಗಳು ನಿಜಕ್ಕೂ ಗಾಬರಿ ಮೂಡಿಸುವಂತಿದ್ದು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವಂತಿವೆ ಎನ್ನಲಾಗಿದೆ.
ಇದನ್ನೂ ಓದಿ: ಲವ್ ಜಿಹಾದ್ಗೆ ಕಠಿಣ ಶಿಕ್ಷೆ ಎಂದ ಮಧ್ಯಪ್ರದೇಶ: ರಾಜ್ಯ ಬಿಜೆಪಿ V/S ಕೇಂದ್ರ ಬಿಜೆಪಿ- ದ್ವಂದ್ವ!
ನಿನ್ನೆ ಕೂಡ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಲವ್ ಜಿಹಾದ್ ಎಂಬುದು ಬಿಜೆಪಿ ರಾಷ್ಟ್ರವನ್ನು ವಿಭಜಿಸಲು ಮತ್ತು ಕೋಮು ಸೌಹಾರ್ದತೆಗೆ ಭಂಗ ತರಲು ಸೃಷ್ಟಿಸಿದ ಪದ. ಮದುವೆ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಅದಕ್ಕೆ ಕಾನೂನು ತರುವುದು ಅಸಂವಿಧಾನಿಕ ಎಂದು ಟೀಕಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಈ ಸಂಬಂಧ ಸ್ಪಷ್ಟನೆ ನೀಡಿ, ಇದುವರೆಗೂ ಯಾವುದೇ ಲವ್ ಜಿಹಾದ್ ನಡೆದಿಲ್ಲ ಎಂದು ಹೇಳಿದ್ದು, ಕಾನೂನಿನಡಿಯಲ್ಲಿ ಈ ಪದವನ್ನು ವ್ಯಾಖ್ಯಾನಿಸಿಲ್ಲ ಎಂದು ಹೇಳಿದೆ.
ಆದರೆ ತನ್ನದೆ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ಎಂಬ ಅಂಶವನ್ನಿಟ್ಟುಕೊಂಡು ಕಾನೂನು ಜಾರಿ ಮಾಡಲು ಹೊರಟಿರುವುದನ್ನು ಕೇಂದ್ರ ಸರ್ಕಾರ ಪ್ರಶ್ನಿಸಿಲ್ಲ. ಯಾವುದೇ ಆದೇಶಗಳನ್ನು ಈ ಬಗ್ಗೆ ಹೊರಡಿಸಿಲ್ಲ. ಇದು ಭಾರತೀಯ ಜನತಾ ಪಾರ್ಟಿ ತನ್ನ ಸಂಸದೀಯ ಹೇಳಿಕೆ ಮತ್ತು ಹೊರ ಜಗತ್ತಿನಲ್ಲಿ ದ್ವಿನೀತಿಯನ್ನು ಅನುಸರಿಸುತ್ತಿದೇಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಸದ್ಯ ಲವ್ ಜಿಹಾದ್ ಪದ ಬಳಕೆ ಬಗ್ಗೆ ಹಲವು ಹೊರಾಟಗಾರರು, ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರೀತಿಯಲ್ಲಿ ಜಿಹಾದ್ ಬರುವುದಿಲ್ಲ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಪ್ರತಿ ದಿನ ಹೆಚ್ಚಾಗುತ್ತಿರುವ ಮಾಧ್ಯಮಗಳ ಕೆಟ್ಟ ಚರ್ಚೆಗಳನ್ನು ನಿಲ್ಲಿಸದಿದ್ದರೇ, ಅವುಗಳ ಮೇಲೆ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ ನಿರ್ಬಂಧ ವಿಧಿಸದಿದ್ದರೇ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ.
ಇದನ್ನೂ ಓದಿ: ಲವ್ ಜಿಹಾದ್ ಪದ ಬಳಕೆ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ರಾಜೀನಾಮೆಗೆ ಒತ್ತಾಯ