ನಿನ್ನೆ ರಾತ್ರಿ ಗುಜರಾತ್ನ ಅಹಮದಾಬಾದ್ನಲ್ಲಿ ಇಬ್ಬರು ದಲಿತ ಯುವಕರ ಮೇಲೆ ನಾಲ್ಕೈದು ಜನರು ಮಾರಣಾಂತಿಕವಾಗಿ ಸಾಮೂಹಿಕ ಹಲ್ಲೆ ನಡೆಸಿರುವ ಘಟನೆ ಜರುಗಿದ್ದು ತೀವ್ರ ಖಂಡನೆ ವ್ಯಕ್ತವಾಗಿದೆ.
ಯುವಕನೊಬ್ಬನ ಬಟ್ಟೆ ಬಿಚ್ಚಿ ಹೊಡೆಯುತ್ತಿದ್ದು, ಅದನ್ನು ತಡೆಯಲು ಬಂದ ಮತ್ತೊಬ್ಬ ಯುವಕನಿಗೂ ಸಹ ಕಾಲಿನಿಂದ ಒದ್ದು ದರ್ಪ ಮೆರೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್ ಮೇವಾನಿ ನಿಂದನೀಯ ಮಾತುಗಳು ಮತ್ತು ಹಿಂಸೆ ಎಂಬ ಟೈಟಲ್ ನೀಡಿ
“ನಿನ್ನೆ ರಾತ್ರಿ ಅಹಮದಾಬಾದ್ನಲ್ಲಿ ಇಬ್ಬರು ದಲಿತ ಯುವಕರನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪಿಗಳನ್ನು 24 ಗಂಟೆಗಳಲ್ಲಿ ಪೊಲೀಸರು ಬಂಧಿಸದಿದ್ದರೆ ನಾನು ಗುಜರಾತ್ ಬಂದ್ಗೆ ಕರೆ ನೀಡುತ್ತೇನೆ. ದಲಿತರು ಹೇಡಿಗಳು ಎಂದು ಭಾವಿಸಬೇಡಿ: ನಾವು ಸಂವಿಧಾನವನ್ನು ನಂಬುತ್ತೇವೆ!” ಎಂದಿದ್ದಾರೆ.
TW: Abusive words and violence
I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76Se
— Jignesh Mevani (@jigneshmevani80) November 4, 2019
ನಾನು ಈ ಘಟನೆಯ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಲುಪಿಸಿದ್ದೇನೆ. ದಲಿತರ ವಿರುದ್ಧದ ಈ ದಾದಗಿರಿ ಸಹಿಸುವುದಿಲ್ಲ. ಇಂದೇ ಅವರನ್ನು ಬಂಧಿಸಿ, ಇಲ್ಲದಿದ್ದರೆ ನಾವು ಬೀದಿಗಳಲ್ಲಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ.
ಇನ್ನು ಉತ್ತರ ಪ್ರದೇಶದ ಖ್ಯಾತ ವೈದ್ಯರಾದ ಡಾ.ಕಫೀಲ್ ಖಾನ್ “ಈ ಘೋರ ಅಪರಾಧದ ವಿರುದ್ಧ ನಿಜವಾಗಿಯೂ ಪ್ರತಿಭಟಿಸಬೇಕಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆಯೇ ಸಹ ಗುಜರಾತ್ನ ಊನಾ ಎಂಬ ಊರಿನಲ್ಲಿ ಮೂರು ಜನ ದಲಿತ ಯುವಕರನ್ನು ಅರೆಬೆತ್ತಲೆಗೊಳಿಸಿ ಸಾಮೂಹಿಕ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ಜಿಗ್ನೇಶ್ ಮೇವಾನಿ ’ಊನಾ ಚಲೋ’ ನಡೆಸಿದ್ದರು. ಇದು ಗುಜರಾತ್ನಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
“ನಿಮ್ಮ ಸತ್ತ ದನ ನೀವೆ ಇಟ್ಟುಕೊಳ್ಳಿ, ನಮ್ಮ ಭೂಮಿ ನಮಗೆ ಕೊಡಿ” ಎಂದು ಜಿಗ್ನೇಶ್ ಮೇವಾನಿಯವರ ನೀಡಿದ ಕರೆಗೆ ದೇಶದ ದಲಿತ ಸಮುದಾಯ ಅಭೂತಪೂರ್ವವಾಗಿ ಸ್ಪಂದಿಸಿತ್ತು. ಅಲ್ಲಿಂದ ಮುಂದೆ ಜಿಗ್ನೇಶ್ ಮೇವಾನಿಯವರು ಯುವ ದಲಿತ ಹೋರಾಟಗಾರನಾಗಿ ಪ್ರವರ್ಧಮಾನಕ್ಕೆ ಬಂದಿದ್ದಲ್ಲದೇ ನಂತರ ಶಾಸಕರಾಗಿದ್ದು ಇತಿಹಾಸ.
ಈಗ ಮತ್ತೆ ನಡೆದಿರುವ ದಲಿತರ ಮೇಲಿನ ದೌರ್ಜನ್ಯದ ಪ್ರಕರಣ ಎಲ್ಲಿಗೆ ಹೋಗಿ ತಲುಪಲಿದೆ ಕಾದು ನೋಡಬೇಕಿದೆ.
ಈ ಹಲ್ಲೆ ಖಂಡನಾರ್ಹ. ಇದನ್ನು ನಡೆಸಿರುವ ಪಾತಕಿಗಳನ್ನು ಈ ಕೂಡಲೇ ಬಂಧಿಸಬೇಕು.