ಮದ್ಯ ಸೇವಿಸಿದ ಇಬ್ಬರು ವ್ಯಕ್ತಿಗಳು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 65 ವರ್ಷದ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲೈಂಗಿಕ ದೌರ್ಜನ್ಯದ ಬಳಿಕ ಮಹಿಳೆಯನ್ನು ಒಂದು ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಗುಲತಾ ಪಟಾಲೆ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“35 ಮತ್ತು 40 ವರ್ಷ ವಯಸ್ಸಿನ ಆರೋಪಿಗಳ ಮೇಲೆ ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತೆ ಪರಸ್ಪರ ಪರಿಚಯವಿದ್ದರು” ಎಂದು ಪಟಾಳೆ ಮಾಹಿತಿ ನೀಡಿದ್ದಾರೆ.
ನ್ಯಾಯಾಲಯವು ಇಬ್ಬರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ಹೇಳಿದ್ದಾರೆ.
ಬೇರೊಂದು ಧರ್ಮದ ಮಹಿಳೆಯನ್ನು ಪ್ರೀತಿಸಿದ ದಲಿತ ಯುವಕನಿಗೆ ಅವಮಾನ
ಬಿಹಾರದಲ್ಲಿ 22 ವರ್ಷದ ದಲಿತ ಯುವಕನೊಬ್ಬ ಬೇರೊಂದು ಧರ್ಮದ ಮಹಿಳೆಯನ್ನು ಪ್ರೀತಿಸಿದ ಕಾರಣಕ್ಕೆ ಆ ಮಹಿಳೆಯ ಸಮುದಾಯದ ಜನರು ಯುವಕನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.
“ಸಮಸ್ತಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಗೆ ಬಲವಂತವಾಗಿ ನೆಲವನ್ನು ನೆಕ್ಕಿಸಲಾಗಿದೆ. ಕೃತ್ಯದ ವಿಡಿಯೋವನ್ನು ದುಷ್ಕರ್ಮಿಗಳು ಅಪ್ಲೋಡ್ ಮಾಡಿದ್ದಾರೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಹೃದಯ್ ಕಾಂತ್ ಹೇಳಿದ್ದಾರೆ.
“ಕೆಲವು ದಿನಗಳ ಹಿಂದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಾಗ ವಿಷಯ ನಮ್ಮ ಗಮನಕ್ಕೆ ಬಂದಿತ್ತು. ತನಿಖೆಯ ನಂತರ ಬಿಭೂತಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಕ್ ಹಬೀಬ್ ಗ್ರಾಮದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಾಮದ ಚೌಕಿದಾರ್ ಹೇಳಿಕೆಯ ಮೇಲೆ ಬುಧವಾರ ರಾತ್ರಿ ಎಫ್ಐಆರ್ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಕಲೇಶಪುರ: ದಲಿತರ ಮೇಲೆ ಹಲ್ಲೆ; BJP ಸಹ ಸಂಘಟನೆ ಬಜರಂದಳದ ದುಷ್ಕರ್ಮಿಗಳ ವಿರುದ್ಧ FIR
“ಅಕ್ಟೋಬರ್ 21 ರಂದು ಉಜಿಯಾರ್ಪುರ ಮೂಲದ ವ್ಯಕ್ತಿ ಚಕ್ ಹಬೀಬ್ಗೆ ಬಂದಾಗ ಈ ಘಟನೆ ನಡೆದಿದೆ. ಗ್ರಾಮಸ್ಥರು ಮಹಿಳೆಯೊಂದಿಗೆ ಯುವಕನನ್ನು ಹಿಡಿದು ದುಷ್ಕೃತ್ಯ ನಡೆಸಿದ್ದಾರೆ” ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
“ಘಟನೆಯ ನಂತರ ಆಘಾತಕ್ಕೊಳಗಾದ ವ್ಯಕ್ತಿ ಮನೆಗೆ ಹಿಂತಿರುಗಲಿಲ್ಲ ಮತ್ತು ಕುಟುಂಬ ಸದಸ್ಯರು ಸಹ ಕಾಣೆಯಾದ ವರದಿಯನ್ನು ಸಲ್ಲಿಸಿದ್ದಾರೆ” ಎಂದು ಕಾಂತ್ ಹೇಳಿದ್ದಾರೆ.
ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಆದರೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಹೇಳಿಕೆ ನೀಡಿದ್ದು, “ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಮುಂದೆ ಪಕ್ಷವು ಈ ವಿಷಯವನ್ನು ಚರ್ಚಿಸಲಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು” ಎಂದಿದ್ದಾರೆ.