ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2ಕ್ಕೆ ಮಧ್ಯಪ್ರದೇಶ ವಿಶ್ವಾಸಮತ ಯಾಚನೆ ನಡೆಯಲಿದೆ ಎಂದು ಕಮಲ್ನಾಥ್ ಸರ್ಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ನಡುವೆ ರಾಜೀನಾಮೆ ಸಲ್ಲಿಸಿದ್ದ ಒಟ್ಟು 22 ಜನರಲ್ಲಿ 6 ಸಚಿವರ ರಾಜೀನಾಮೆಯನ್ನು ಮಾತ್ರ ಸ್ಪೀಕರ್ ಈ ಹಿಂದೆ ಅಂಗೀಕರಿಸಿದ್ದರು. ಇಂದು ಉಳಿದ 16 ಶಾಸಕರ ರಾಜೀನಾಮೆಯನ್ನು ಸಹ ಸ್ಪೀಕರ್ ಅಂಗೀಕರಿಸಿರುವುದರಿಂದ ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ 206ಕ್ಕೆ ಕುಸಿದಿದೆ. ಇಬ್ಬರು ಸದಸ್ಯರ ಮರಣದಿಂದಾಗಿ ಎರಡು ಸ್ಥಾನಗಳು ಖಾಲಿ ಇವೆ. ಬಹುಮತಕ್ಕೆ 104 ಸದಸ್ಯರ ಅಗತ್ಯವಿದ್ದು ಕಾಂಗ್ರೆಸ್ ಸದ್ಯಕ್ಕೆ 92 ಸದಸ್ಯರನ್ನು ಒಳಗೊಂಡಿದ್ದು 07 ಇತರ ಪಕ್ಷಗಳ ಮತ್ತು ಸ್ವತಂತ್ರ ಶಾಸಕರ ಬೆಂಬಲ ಪಡೆದಿದ್ದು ಅದರ ಒಟ್ಟು ಬಲ 99 ಇದೆ. ಸರಳ ಬಹುಮತಕ್ಕೆ 04 ಸದಸ್ಯರ ಕೊರತೆಯುಂಟಾಗಿದ್ದು, ಬಿಜೆಪಿ 107 ಸದಸ್ಯರನ್ನು ಹೊಂದುವ ಮೂಲಕ ಸರಳ ಬಹುಮತಕ್ಕಿಂತ ಮುಂದಿದೆ.
ಮಧ್ಯಪ್ರದೇಶದ ಕಮಲ್ ನಾಥ್ ಸರ್ಕಾರ ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕು ಎಂದು ನಿನ್ನೆ ಸುಪ್ರೀಂ ಕೋರ್ಟ್ ಹೇಳಿತ್ತು. ಅಷ್ಟೆ ಅಲ್ಲದೆ ಬಹುಮತ ಸಾಬಿತು ಪಡಿಸುವುದನ್ನು ವಿಡಿಯೋ ಮಾಡಿ, ಅದನ್ನು ನೇರ ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ತೀರ್ಪಿನ ನಂತರ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಸತ್ಯಮೇವ ಜಯತೆ” – ಅಂದರೆ “ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಬಹುಮತ ಸಾಬೀತುಪಡಿಸುತ್ತದೆ ಮತ್ತು ರಾಜ್ಯದಲ್ಲಿ ತನ್ನ ಸರ್ಕಾರವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಪಿಎಲ್ ಪುನಿಯಾ ಪ್ರತಿಪಾದಿಸಿದ್ದಾರೆ. ಪಕ್ಷದ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಎನ್ಡಿಟಿವಿಗೆ “ಯಾರ ಬಳಿ ಸಂಖ್ಯೆ ಇರುತ್ತದೋ ಅವರು ಗೆಲ್ಲುತ್ತಾರೆ” ಎಂದು ಹೇಳಿದ್ದಾರೆ.