ಮಧ್ಯಪ್ರದೇಶದ ಪ್ರಸಿದ್ಧ ದೇವಸ್ಥಾನದ ಬಳಿಯ ಕಾಡಿನಲ್ಲಿ 11 ವರ್ಷದ ಬಾಲಕಿಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಶುಕ್ರವಾರ ಬೆಳಗ್ಗೆ ಕಂಡುಬಂದಿತ್ತು. ಶನಿವಾರ ಮೈಹಾರ್ ಪಟ್ಟಣದ ಸ್ಥಳೀಯ ಆಡಳಿತವು ಆರೋಪಿಗಳಿಬ್ಬರ ಮನೆಗಳನ್ನು ಧ್ವಂಸಗೊಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಆರೋಪಿಗಳಾದ ರವೀಂದ್ರ ಕುಮಾರ್ ಮತ್ತು ಅತುಲ್ ಭಡೋಲಿಯಾ ಗುರುವಾರ ಬಾಲಕಿಯನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಒಂದು ದಿನದ ನಂತರ ಅವರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಮೈಹಾರ್ ಮುನ್ಸಿಪಲ್ ಕೌನ್ಸಿಲ್ ಮುಖ್ಯ ಪುರಸಭೆ ಅಧಿಕಾರಿಯಿಂದ ಆರೋಪಿಗಳ ಕುಟುಂಬಗಳಿಗೆ ಜಮೀನು ಮತ್ತು ಮನೆಗಳ ದಾಖಲೆಗಳನ್ನು ಕೋರಿ ನೋಟಿಸ್ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಲೋಕೇಶ್ ದಾಬರ್ ಹೇಳಿದ್ದರು.
ಆರೋಪಿಗಳಿಬ್ಬರ ಮನೆಗಳು ಅಕ್ರಮವಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ದಬರ್ ಹೇಳಿದರು. ಭಡೋಲಿಯಾ ಅವರ ಮನೆಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಿದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದರೆ, ಕುಮಾರ್ ಅವರ ಮನೆಯನ್ನು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಕ್ರಮ ಕೈಗೊಳ್ಳುವಂತೆ ಆರೋಪಿಗಳ ಕುಟುಂಬಸ್ಥರು ಅಧಿಕಾರಿಗಳನ್ನು ವಿನಂತಿಸಿದರೂ ಅವರ ಮನೆಗಳನ್ನು ಕೆಡವಲಾಗಿದೆ ಎಂದು ಸ್ಥಳೀಯರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದ ದೇವಸ್ಥಾನದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಅಪರಾಧದ ಆರೋಪಿಗಳ ಆಸ್ತಿಯನ್ನು ನಾಶಮಾಡಲು ಯಾವುದೇ ಕಾನೂನು ಅವಕಾಶಗಳಿಲ್ಲದಿದ್ದರೂ, ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸುವ ಕ್ರಮವನ್ನು ಹೆಚ್ಚು ಮಾಡುತ್ತಿವೆ. ಈ ಹೆಚ್ಚಿನ ಪ್ರಕರಣಗಳು ಮುಸ್ಲಿಮರ ಒಡೆತನದ ಆಸ್ತಿಗಳನ್ನು ಗುರಿಯಾಗಿಸಿಕೊಂಡಿವೆ.
”ವೈದ್ಯರ ತಂಡವು ಸಂತ್ರಸ್ತೆಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್ ಅಥವಾ ದೆಹಲಿಗೆ ಸ್ಥಳಾಂತರಿಸಬಹುದು” ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಗುಪ್ತಾ ಹೇಳಿದರು.
ಏನಿದು ಘಟನೆ:
ಗುರುವಾರ ಸಂಜೆ ಬಾಲಕಿ ನಾಪತ್ತೆಯಾಗಿದ್ದು, ತಡರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಆಕೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ತನ್ನ ಮನೆಯಿಂದ ಒಂದು ಕಿಲೋಮೀಟರ್ ದೂರದ ಕಾಡಿನಲ್ಲಿ ಆಕೆ ಪತ್ತೆಯಾಗಿದ್ದಳು.
ಈ ಕಾಡು ಮೈಹಾರ್ ಪಟ್ಟಣದಲ್ಲಿರುವ ಶಾರದಾ ದೇವಿಯ ದೇವಸ್ಥಾನಕ್ಕೆ ಸಮೀಪದಲ್ಲಿದೆ, ಇಲ್ಲಿಗೆ ದೇಶದಾದ್ಯಂತ ಯಾತ್ರಾರ್ಥಿಗಳ ಬರುತ್ತಾರೆ.
”ಬಾಲಕಿ ಪತ್ತೆಯಾಗಿರುವ ಬಗ್ಗೆ ಇಂದು ಬೆಳಗ್ಗೆ ನಮಗೆ ಮಾಹಿತಿ ಲಭಿಸಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ನಮ್ಮ ತನಿಖೆಯಿಂದ ದೃಢಪಟ್ಟಿದೆ. ಇಬ್ಬರು ಶಂಕಿತರನ್ನು ಬಂಧಿಸಿ ಪೊಲೀಸರ ವಶದಲ್ಲಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಬಾಲಕಿಯನ್ನು ರೇವಾ ವೈದ್ಯಕೀಯ ಕಾಲೇಜಿಗೆ ಶಿಫಾರಸು ಮಾಡಲಾಗಿದೆ” ಎಂದು ಮೈಹಾರ್ ಉಪವಿಭಾಗದ ಪೊಲೀಸ್ ಅಧಿಕಾರಿ ಲೋಕೇಶ್ ದಬರ್ ಹೇಳಿದರು.