ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುತೂಹಲ ಘಟ್ಟ ತಲುಪಿದೆ. ಎನ್ಸಿಪಿ ನಾಯಕ ಶರದ್ ಪವಾರ್ ಅವರು ಕಾಂಗ್ರೆಸ್ ನ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಇತ್ತ ಶಿವಸೇನೆ ಎನ್ ಸಿ ಪಿ ಜತೆ ಮೈತ್ರಿ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವ ಕಾತುರದಲ್ಲಿದೆ. ಇನ್ನೇನು ಸಂಜೆ ಐದು ಗಂಟೆಗೆ ಕಾಂಗ್ರೆಸ್ ತನ್ನ ನಿಲುವು ತಿಳಿಸಲಿದ್ದು, ಬಹುತೇಕ ಶಿವಸೇನೆ, ಎನ್ ಸಿ ಪಿ ಮೈತ್ರಿ ಕೊನೆಯ ಘಟ್ಟದಲ್ಲಿದೆ.
ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲಿರುವ ಶಿವಸೇನೆ, ಕಾಂಗ್ರೆಸ್ ನ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದೆ. ಮಧ್ಯಾಹ್ನ 2: 30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಬೇಕಿದ್ದ ಶಿವಸೇನೆ ಸಂಜೆ 5 ಗಂಟೆಗೆ ಭೇಟಿ ಸಮಯವನ್ನು ನಿಗದಿಪಡಿಸಿದೆ. ಶಿವಸೇನೆಗೆ ಎನ್ ಸಿ ಪಿ ಬೆಂಬಲ ನೀಡುವುದು ಖಚಿತವಾಗಿದೆ. ಎನ್ ಸಿ ಪಿ ಈಗ ಕಾಂಗ್ರೆಸ್ ನಿರ್ಧಾರಕ್ಕಾಗಿ ಕಾಯುತ್ತಿದೆ.
ಇನ್ನು ಕಾಂಗ್ರೆಸ್ ನ 40 ಶಾಸಕರು ಶಿವಸೇನೆಗೆ ಬೆಂಬಲ ವ್ಯಕ್ತಪಡಿಸಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಇಂದು ಸಂಜೆ 4 ಗಂಟೆಗೆ ಮತ್ತೊಂದು ಸುತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ನಿರ್ಧಾರ ಪ್ರಕಟವಾಗಲಿದೆ. ಮೈತ್ರಿ ಮೂಲಕ ಸರ್ಕಾರ ರಚಿಸಲಿರುವ ಶಿವಸೇನೆ ಸಿಎಂ ಸ್ಥಾನ ಅಲಂಕರಿಸಲಿದೆ. ಉಪಮುಖ್ಯಮಂತ್ರಿ ಸ್ಥಾನ ಎನ್ ಸಿ ಪಿ ಹಾಗೂ ಕಾಂಗ್ರೆಸ್ ಗೆ ಸಿಗುವ ಸಾಧ್ಯತೆಯಿದೆ. ಇನ್ನು ಶಿವಸೇನೆಯಿಂದ ಸಿಎಂ ಆಗಿ ಉದ್ಧವ್ ಠಾಕ್ರೆ ಆಗಲಿರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಮಾಹಿತಿ ನೀಡಿವೆ.