Homeಮುಖಪುಟಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

- Advertisement -
- Advertisement -

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮತ್ತು ಕಳೆದ ಎಂಟು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಮಹಿಷ ದಸರ ಕುರಿತು ಮನುವಾದಿಗಳಿಗಿಂತ ಬಹುಜನರೇ ಹೆಚ್ಚು ಆತಂಕಕ್ಕೊಳಗಾಗಿರುವಂತೆ ಕಂಡುಬಂದಿದೆ. ನಮ್ಮ ಅನೇಕ ಹೋರಾಟಗಾರ ಸ್ನೇಹಿತರು ಮತ್ತು ಬುದ್ದಿಜೀವಿ ಬಳಗ ಇದೊಂದು ಪುರಾಣದ ಕತೆ, ನಮ್ಮ ಜನರನ್ನು ದಿಕ್ಕುತಪ್ಪಿಸಲು ಕೆಲವರು ಮಹಿಷನನ್ನು ಐತಿಹಾಸಿಕ ಪುರುಷ ಎಂದು ನಂಬಿಸುತ್ತಿದ್ದಾರೆ. ನಾವು ಬೌದ್ದರಾದರೆ ಸಾಕು. ಅದು ಬಿಟ್ಟು ಈ ಮಹಿಷನ ಕತೆ ಕಟ್ಟಿಕೊಂಡು ಏನಾಗಬೇಕಿದೆ? ಎಂದು ಜಾಲತಾಣದಲ್ಲಿ ವಾದಿಸುತ್ತಿದ್ದಾರೆ. ದಯಮಾಡಿ ಯಾರೂ ಗೊಂದಲಕ್ಕೊಳಗಾಗಬೇಡಿ. ಮಹಿಷಾಸುರ ಖಂಡಿತವಾಗಿ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ.

ಮಹಿಷನಾಡು, ಮಹಿಷೂರು ನಂತರ ಮೈಸೂರು ಆಗಿದೆ. ಮೈಸೂರಲ್ಲಿ ಮಹಿಷಾಸುರನ ಹಲವು ಪ್ರತಿಮೆಗಳಿವೆ. ಈಗಿನ ಚಾಮುಂಡಿ ಬೆಟ್ಟ ಹಿಂದೆ ಮಹಿಷಗಿರಿ ಎಂದು ಪ್ರಚಲಿತದಲ್ಲಿತ್ತು ಅದನ್ನು ಮಹಾಬಲ ಬೆಟ್ಟ ಎಂತಲೂ ಕರೆದಿದ್ದಾರೆ.

ಮಹಿಷ ಎಂದರೆ ಎಮ್ಮೆ. ಮೈಸೂರು ಪ್ರಾಂತ್ಯದಲ್ಲಿ ಎಲ್ಲಾ ತರದ ಕೃಷಿ ಚಟುವಟಿಕೆಗಳಿಗೂ ಎಮ್ಮೆಯನ್ನೇ ಬಳಸುತ್ತಿದ್ದರು… ಎಮ್ಮೆ ಈ ಜನರ ಹೆಮ್ಮೆ. ದನಗಳು ಆರ್ಯರ ಜಾನುವಾರುಗಳು.
ಆರ್ಯರು ಎಮ್ಮೆಗಳನ್ನು ಕೀಳು ಮಾಡಿ ತಮ್ಮ ದನಗಳನ್ನು ಶ್ರೇಷ್ಟಗೊಳಿಸಿದರು.

ಮಹಿಷ ಮಂಡಲ ಕೇರಳದ ವೈನಾಡು, ತಮಿಳುನಾಡಿನ ನೀಲಗಿರಿ ಪ್ರಾಂತ್ಯವನ್ನು ಒಳಗೊಂಡಿತ್ತು. ನೀಲಗಿರಿಯಲ್ಲಿ ಇಂದಿಗೂ ವಾಸವಾಗಿರುವ ತೋಡ ಎಂಬ ಗಿರಿಜನ ಮಹಿಷನ ವಂಶಸಂಸ್ಥರು ಎನ್ನಲಾಗಿದೆ. ಅವರು ಈಗಲೂ ಮಹಿಷನನ್ನು ಆರಾಧಿಸುತ್ತಾರೆ.
ನೀಲಗಿರಿ, ವೈನಾಡ್ ಜಿಲ್ಲೆಗಳಲ್ಲಿ ಇಂದಿಗೂ ಎಮ್ಮೆಗಳಿಂದಲೇ ಉಳುಮೆ ಮಾಡುತ್ತಾರೆ.

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

ಮಹಿಷ ಮಂಡಲವು ಮೈಸೂರು, ನೀಲಗಿರಿ, ವೈನಾಡು ಇಷ್ಟು ಭೂಪ್ರದೇಶವನ್ನು ಹೊಂದಿತ್ತು. ಇದನ್ನು “ಎರುಮೈನಾಡು” ಎಂದು ಕರೆದಿರುವುದು ಅನೇಕ ಇತಿಹಾಸದ ಸಂಶೋಧನೆಗಳಿಂದ ದೃಢಪಟ್ಟಿದೆ ಮತ್ತು ದಾಖಲಾಗಿದೆ. “ಎರುಮೈ” ಎಂದರೆ ಎಮ್ಮೆ ಎಂದರ್ಥ.

ಆದ್ದರಿಂದ ಮಹಿಷನ ಕುರಿತು ಯಾವುದೇ ಕೀಳರಿಮೆ, ಗೊಂದಲಗಳನ್ನು ನಮ್ಮ ಜನರು ಇಟ್ಟುಕೊಳ್ಳುವ ಅಗತ್ಯವಿಲ್ಲ. ಮಹಿಷ ನಿಶ್ಚಿತವಾಗಿ ದ್ರಾವಿಡ ದೊರೆ, ನಾಗವಂಶದ ರಾಜ ಮತ್ತು ಬೌದ್ದಾನುಯಾಯಿಯಾಗಿದ್ದ ಎಂಬುದಕ್ಕೆ ಅನೇಕ ದಾಖಲೆಗಳು ಲಭ್ಯವಿವೆ.

ಇತ್ತೀಚಗೆ ಗುಲ್ಬರ್ಗದ ಬಳಿ ನಡೆಸಿದ ಐತಿಹಾಸಿಕ ಉತ್ಖನನದಲ್ಲಿ ಮಹಿಷ ನಾಡಿನ ತೋಡರು ಬೌದ್ದವಿಹಾರಗಳಿಗೆ ಹಲವು ಕೊಡುಗೆಗಳನ್ನು ಕೊಟ್ಟಿರುವ ಬೌದ್ಧಶಾಸನಗಳು ದೊರೆತಿವೆ. ಈ ಕುರಿತು ಕಳೆದ ಭಾನುವಾರದ (೩.೧೦.೨೧) ಪ್ರಜಾವಾಣಿಯ ವಾರದ ಪುರವಣಿಯಲ್ಲಿ ಇತಿಹಾಸ ಸಂಶೋಧಕ ಷ.ಶಟರ್ ಅವರು ಬರೆದಿರುವ ಲೇಖನ ಹೆಚ್ಚು ಬೆಳಕು ಚಲ್ಲಿದೆ.

ಹಿಂದೆ ನಮ್ಮ ಸಮಾಜ ಪರಿವರ್ತನ ಪತ್ರಿಕೆಯಲ್ಲಿ ಸಹ ಈ ಕುರಿತು ಅನೇಕ ಲೇಖಕರು ಸರಣಿ ಬರಹಗಳನ್ನು ಬರೆದಿದ್ದಾರೆ. ಮೈಸೂರಿನ ನಮ್ಮ ಲೇಖಕ ಸ್ನೇಹಿತರಾದ ಸಿದ್ದಸ್ವಾಮಿಯವರು “ಮಹಿಷ ಮಂಡಲ” ಎಂಬ ತಮ್ಮ ಸಂಶೋಧಿತ ಕೃತಿಯಲ್ಲಿ ಐತಿಹಾಸಿಕ ವಿಚಾರಗಳೊಡನೆ ವರ್ತಮಾನದ ದಾಖಲೆಗಳನ್ನಿಟ್ಟು ಚರ್ಚಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿಯೇ ನಾವಿಂದು ಎಲ್ಲರೂ ಸೇರಿ ಮಹಿಷ ದಸರ ಆಚರಿಸಿಕೊಂಡು ಚಾರಿತ್ರಿಕ ಅನ್ಯಾಯವನ್ನು ಎತ್ತಿ ಹಿಡಿತುತ್ತಾ ನಮ್ಮ ಅಸ್ಮಿತೆಯನ್ನು ಉಳಿಸಲು ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದ್ದೇವೆ. ಇದರ ಸತ್ಯವು ಗೊತ್ತಿದ್ದೇ ಮನುವಾದಿಗಳು ಬೆಚ್ಚಿದ್ದಾರೆ. ಅವರು ಬೆಚ್ಚಿದ್ದಾರೆ ಎಂದರೆ ವಿಷಯವು ಸ್ಪಷ್ಟವಿದೆ ಎಂದರ್ಥ. ಅವರು ಅದನ್ನು ತಮ್ಮ ಅಧಿಕಾರ ಬಳಸಿ ತಡೆಯಲು ಯತ್ನಿಸುತ್ತಲೇ ಇದ್ದಾರೆ ಎಂದರೆ ಅದು ಸ್ಪಷ್ಟವಾಗಿ ನಮ್ಮ ಸ್ವಾಭೀಮಾನದ ಇತಿಹಾಸ ಎಂಬುದು ಖಚಿತವಾಗುತ್ತದೆ.

ಆದ್ದರಿಂದ ನಮ್ಮೊಳಗೆ ಅವರು ಗೊಂದಲ ಸೃಷ್ಟಿಸಲು ಆರಂಭಿಸಿದ್ದಾರೆ. ನಮ್ಮ ಜನರು ಗೊಂದಲಕ್ಕೊಳಗಾಗಬೇಡಿ. ಸತ್ಯವನ್ನು ಅರಿಯೋಣ. ಸತ್ಯವನ್ನು ಸಾರೋಣ. ಸತ್ಯವನ್ನು ಉಳಿಸೋಣ.

ಬಾಬಾಸಾಹೇಬರ ಬರಹಗಳಲ್ಲೂ ಅಸುರರು, ದಾಸರು, ದಸ್ಯುಗಳ ಕುರಿತ ದಾಖಲೆಗಳಿವೆ. ಮನುವಾದಿಗಳ ಕುತಂತ್ರಕ್ಕೆ ಬಲಿಯಾದ ನಮ್ಮ ವೀರರು ಮತ್ತು ಶೂರರು ಇತಿಹಾಸದಲ್ಲಿ ಅಸುರರೆಂದು, ರಾಕ್ಷಸರೆಂದು ಬಿಂಬಿಸಲ್ಪಟ್ಟಿದ್ದಾರೆ.

ಈ ರೀತಿ ಮಾಡುವ ಮೂಲಕ ನಮ್ಮಿಂದ ನಮ್ಮ ಪೂರ್ವಿಕರನ್ನು ದೂರಮಾಡುವ ಹುನ್ನಾರವೇ ಮನುವಾದಿಗಳದ್ದಾಗಿದೆ. ಆದ್ದರಿಂದಲೇ ನಮ್ಮ ಜನರು ನಮ್ಮ ಪೂರ್ವಿಕರ ಶೌರ್ಯದ ಇತಿಹಾಸ ಮರೆತು ಇದೇ ಮನುವಾದಿಗಳು ಸೃಷ್ಟಿಸಿರುವ ಕಾಲ್ಪನಿಕ ದೇವರುಗಳನ್ನು ನಂಬಿ ಆರಾಧಿಸುತ್ತಾ ಮನುವಾದಿಗಳಿಗೆ ಲಾಭ ಮಾಡುತ್ತಾ ತಮ್ಮ ನೈಜ ಸಂಸ್ಕೃತಿಯನ್ನು ಮರೆತು ಮನುವಾದಿಗಳ ಗುಲಾಮರಾಗಿದ್ದಾರೆ.

ಬಲಿ ಚಕ್ರವರ್ತಿ ಮತ್ತು ನರಕಾಸುರ ಎಂಬ ನಮ್ಮ ಪೂರ್ವಿಕರನ್ನು ಮನುವಾದಿಗಳು ಮೋಸದಿಂದ ಕೊಂದು ರಾಜ್ಯ ಕಬಳಿಸಿ ಅವರನ್ನು ದುಷ್ಟರೆಂದು ಚಿತ್ರಿಸಿ ಪಟಾಕಿ ಸಿಡಿಸಿ ನಮ್ಮಿಂದಲೇ ನಮ್ಮವರ ಸಾವನ್ನು ಸಂಭ್ರಮಿಸುವಂತೆ ಮಾಡಿದ್ದಾರೆ. ಹೀಗೆ ಇತಿಹಾಸದ ಉದ್ದಕ್ಕೂ ನಮ್ಮ ಪರಂಪರೆಯನ್ನು ನಾಶಗೊಳಿಸಿ ನಮ್ಮನ್ನು ದಿಕ್ಕುತಪ್ಪಿಸಿರುವ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನಾವು ಮಾನಸಿಕವಾಗಿ ಬಿಡುಗಡೆ ಹೊಂದಿದಾಗ ಮಾತ್ರವೇ ಕಳೆದುಕೊಂಡಿರು ಅಧಿಕಾರವನ್ನು ಮರಳಿ ಪಡೆಯಬೇಕಿದೆ. ಇದೇ ನಮ್ಮ ಪರಂಪರೆಯಾಗಿದೆ. ಒಂದು ಸಮುದಾಯವನ್ನು ನಾಶ ಪಡಿಸಬೇಕಿದ್ದರೆ ಅದರ ಪರಂಪರೆಯನ್ನು ನಾಶ ಪಡಿಸಬೇಕು ಎಂಬುದು ಮನುವಾದಿಗಳ ಕುತಂತ್ರವಾಗಿದೆ ಎಂದು ಬಾಬಾಸಾಹೇಬರು ಹೇಳುತ್ತಾರೆ. ನಮ್ಮ ಪರಂಪರೆಯನ್ನು ಹುಡುಕಿ ಮರಳಿ ಪಡೆದರೆ ಮಾತ್ರ ಮನುವಾದಿಗಳ ಪರಂಪರೆಯಿಂದ ಹೊರಬಂದರೆ ಮಾತ್ರ ನಮಗೆ ಅಧಿಕಾರವು ದಕ್ಕಲಿದೆ. ಅಧಿಕಾರದಿಂದ ಮಾತ್ರ ನಮ್ಮ ಹಕ್ಕುಗಳು ದೊರೆಯಲಿವೆ. ಇದೆಲ್ಲವೂ ಬೌದ್ದೀಯತೆಯೇ ಆಗಿದೆ ಎಂಬುದನ್ನು ನೆನಪಿಡಿ.

  • ಡಾ.ಕೃಷ್ಣಮೂರ್ತಿ ಚಮರಂ

(ಡಾ.ಕೃಷ್ಣಮೂರ್ತಿ ಚಮರಂರವರು ಸಾಮಾಜಿಕ ಕಾರ್ಯಕರ್ತರು ಮತ್ತು ಬರಹಗಾರರು. ಲೇಖನದಲ್ಲಿನ ಅಭಿಪ್ರಾಯಗಳು ವೈಯಕ್ತಿಕವಾದವು. ಈ ಕುರಿತು ಚರ್ಚೆಗೆ ಆಹ್ವಾನವಿದೆ. ಮಹಿಷಾಸುರ ಸಂಬಂಧಿತ ಲೇಖನಗಳನ್ನು [email protected] ಗೆ ಕಳಿಸಬಹುದು)


ಇದನ್ನೂ ಓದಿ: ಮಹಿಷ ದಸರಾ: ಅಂಬಾರಿಯಲ್ಲಿ ಗಾಂಧಿ, ಅಂಬೇಡ್ಕರ್, ನಾಲ್ವಡಿ ಫೋಟೊ ಇರಲಿ – ಮಹೇಶ್ ಚಂದ್ರ ಗುರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...