Homeಅಂಕಣಗಳುಪ್ರಣಾಳಿಕೆ ನೋಡಿ ಓಟು ಹಾಕಿದರೆ ಕಾಂಗ್ರೆಸ್ ಗೆಲ್ಲುತ್ತದೆ: ಯೋಗೇಂದ್ರ ಯಾದವ್

ಪ್ರಣಾಳಿಕೆ ನೋಡಿ ಓಟು ಹಾಕಿದರೆ ಕಾಂಗ್ರೆಸ್ ಗೆಲ್ಲುತ್ತದೆ: ಯೋಗೇಂದ್ರ ಯಾದವ್

- Advertisement -
- Advertisement -

| ಯೋಗೇಂದ್ರ ಯಾದವ್ |

| ಕನ್ನಡಕ್ಕೆ: ರಾಜಶೇಖರ್ ಅಕ್ಕಿ |

ಕಳೆದ ವಾರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದವು. ಒಂದು ವೇಳೆ ಪ್ರಣಾಳಿಕೆಯಿಂದಲೇ ಚುನಾವಣೆಗಳನ್ನು ಗೆಲ್ಲವಂತಾಗಿದ್ದಲ್ಲಿ ಕಾಂಗ್ರೆಸ್ ಈ ಚುನಾವಣೆ ಗೆಲ್ಲಬೇಕು. ಒಂದು ವೇಳೆ ಈ ದೇಶದ ಮತದಾರ ಪ್ರಣಾಳಿಕೆಗಳನ್ನು ಓದಿ ಅಂಕಗಳನ್ನು ಕೊಡುವಂತಿದ್ದರೆ ಖಂಡಿತವಾಗಿಯೂ ಬಿಜೆಪಿ ಈ ಪರೀಕ್ಷೆಯಲ್ಲಿ ಫೇಲಾಗಬೇಕು.

ಬಿಜೆಪಿಯ ಈ ‘ಸಂಕಲ್ಪ ಪತ್ರ’ ವನ್ನು ಓದಿದ ನಂತರ ಇದರಲ್ಲಿ ಏನು ಹೇಳಿದ್ದಾರೆ ಎನ್ನುವುದೇ ತಿಳಿಯುವುದಿಲ್ಲ. ಬಿಜೆಪಿಯು ‘ಜುಮ್ಲೆಬಾಝಿ’ಯ ಆಸರೆ ತೆಗೆದುಕೊಂಡಿರುವುದು ಸಮಸ್ಯೆಯಾಗಿಲ್ಲ. ವಾಸ್ತವದಲ್ಲಿ ಬಿಜೆಪಿಯ ಈ ಪ್ರಣಾಳಿಕೆಯ ಕಡತದಲ್ಲಿ ಅಸಂಭವ ಆಶ್ವಾಸನೆಗಳು ತುಂಬಾ ಕಡಿಮೆ ಇವೆ, ನಿಜ ಹೇಳಬೇಕೆಂದರೆ, ಸ್ಪಷ್ಟ ಭರವಸೆಗಳೇ ತುಂಬಾ ಕಡಿಮೆ. ಇದರಲ್ಲಿ ಕಳೆದ ಐದು ವರ್ಷಗಳ ಲೆಕ್ಕವೂ ಇಲ್ಲ ಹಾಗೂ ಮುಂದಿನ ಐದು ವರ್ಷಗಳಿಗಾಗಿ ಯಾವುದೇ ಹೊಸ ಘೋಷಣೆಯೂ ಇಲ್ಲ ಅಥವಾ ಯಾವುದೇ ದೊಡ್ಡ ಯೋಜನೆಗಳ ಪ್ರಸ್ತಾಪವೂ ಇಲ್ಲ. ಈ ಪ್ರಣಾಳಿಕೆ ಬರೆಯುವವರಿಗೆ ಸ್ಪಷ್ಟ ಸೂಚನೆ ನೀಡಿದಂತಿದೆ: ಐವತ್ತು ಪುಟಗಳನ್ನು ತುಂಬಿಸಿ, ಆದರೆ ಮುಂದೆ ಹೋಗಿ ಉತ್ತರ ಹೇಳಬೇಕಾಗುವಂಥದ್ದೇನನ್ನೂ ಬರೆಯಬೇಡಿ. ಹಾಗಾಗಿ ಪ್ರಾರಂಭದಿಂದ ಅಂತ್ಯದ ವರಗೆ ಸುತ್ತುತಿರುಗುವ ಮಾತುಗಳನ್ನೇ ಬರೆಯಲಾಗಿದೆ. ಅದರ ಮೇಲೆ, ರಾಮಮಂದಿರ ಮತ್ತು 370 ಸೆಕ್ಷನ್ ಬಗ್ಗೆಯೂ ಜಿಲೇಬಿ ಮಾಡುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಏನಾದರೂ ಸ್ಪಷ್ಟವಾಗಿ ಹೇಳಲೇಬೇಕಾದಲ್ಲಿ ಅದರೊಂದಿಗೆ ‘ಪ್ರಯತ್ನ ಮಾಡುವೆವು’ ಎನ್ನುವುದನ್ನು ಭರವಸೆಯಿಂದ ಹೊರಗೆ ನುಣುಚಿಕೊಳ್ಳುವ ದಾರಿ ತೆಗೆದರಿರಲಿ ಎಂದು ಸೇರಿಸಿಬಿಟ್ಟಿದ್ದಾರೆ.

ಆಕಡೆ ಕಾಂಗ್ರೆಸ್‍ನ ಪ್ರಣಾಳಿಕೆಯನ್ನು ಹಲವಾರು ತಿಂಗಳ ಕಾಲ ತಲೆಕೆಡಸಿಕೊಂಡು ಬರೆಯಲಾಗಿದೆ. ಯಾವ ವಿಷಯಗಳನ್ನು ಎತ್ತಬೇಕಾಗಿತ್ತೋ ಅವುಗಳನ್ನು ಎತ್ತಲಾಗಿದೆ: ಬಡತನ, ರೈತನ ಆದಾಯ, ಯುವಜನರು, ನಿರುದ್ಯೋಗ, ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆ. ಮಾಡಿದ ಭರವಸೆಗಳೆಲ್ಲವೂ ಕಾಂಕ್ರೀಟ್ ಆಗಿವೆ, ಹೆಚ್ಚಿನವುಗಳ ಬಗ್ಗೆ ಭವಿಷ್ಯದಲ್ಲಿ ಪರಶೀಲನೆ ಮಾಡಬಹುದಾಗಿದೆ. ಕೆಲವನ್ನು ಹೊರತುಪಡಿಸಿ ಉಳಿದ ಎಲ್ಲಾ ಭರವಸೆಗಳ ಬಗ್ಗೆ ಹೇಗೆ ಅನುಷ್ಠಾನಗೊಳಿಸಬೇಕು ಎನ್ನುವುದರ ಬಗ್ಗೆ ಗಮನ ಕೊಡಲಾಗಿದೆ. ನೀವು ಈ ಪ್ರಣಾಳಿಕೆಯ ಅಂಶಗಳೊಂದಿಗೆ ಸಹಮತ ಹೊಂದಬಹುದು ಅಥವಾ ಹೊಂದದೇ ಇರಬಹುದು ಆದರೆ ಇಷ್ಟಂತೂ ಸತ್ಯ ಈ ಪ್ರಣಾಳಿಕೆ ಒಂದು ಹೊಸ ದಿಕ್ಕನ್ನು ತೋರಿಸುತ್ತದೆ, ಒಂದು ಚರ್ಚೆಯನ್ನು ಹುಟ್ಟುಹಾಕಲು ಆಮಂತ್ರಿಸುತ್ತದೆ. ಸಮಸ್ಯೆ ಏನೆಂದರೆ, ಹಾಳೆಯ ಮೇಲೆ ಯೋಜನೆಗಳನ್ನು ಮಾಡುವುದರಿಂದ ಜನ ವಿಶ್ವಾಸ ಗಳಿಸಬಹುದೆಂದು ಕಾಂಗ್ರೆಸ್ ತಿಳಿದುಕೊಂಡಂತಿದೆ. ಕಾಂಗ್ರೆಸ್ ಬಳಿ ತನ್ನ ಘೋಷಣೆಗಳನ್ನು ಸಾಮಾನ್ಯ ವ್ಯಕ್ತಿಗಳಿಗೆ ಮುಟ್ಟಿಸಲು ಯಾವುದೇ ತಂತ್ರವೂ ಇಲ್ಲ, ಅಥವಾ ಈ ಘೋಷಣೆಗಳ ಬಗ್ಗೆ ತಾನು ಗಂಭೀರವಾಗಿದೆ ಮತ್ತು ಪ್ರಾಮಾಣಿಕವಾಗಿದೆ ಎಂದು ಭರವಸೆ ಮೂಡಿಸುವ ಯಾವುದೇ ಮಾರ್ಗವೂ ಇಲ್ಲ. ಬಿಜೆಪಿಯ ಸಂಕಲ್ಪ ಪತ್ರದಲ್ಲಿ ಯಾವುದೇ ಯೋಜನೆ ಅಥವಾ ಪ್ರಕಲ್ಪವಿಲ್ಲದ್ದು ಎದ್ದು ಕಂಡರೆ, ಕಾಂಗ್ರೆಸ್‍ನ ಪ್ರಣಾಳಿಕೆಯ ಹಿಂದೆ ಯಾವುದೇ ಉದ್ಘೋಷ ಕಾಣುತ್ತಿಲ್ಲ.

ಇಂದು ದೇಶದ ಎರಡು ಅತಿ ಮುಖ್ಯ ಸಮಸ್ಯೆಗಳಾಗಿರುವ ಕೃಷಿ ಮತ್ತು ನಿರುದ್ಯೋಗದ ಬಗ್ಗೆ ಈ ಎರಡೂ ಪ್ರಣಾಳಿಕೆಗಳನ್ನು ಪರಿಶೀಲಿಸಿದರೆ ಈ ಅಂತರ ಸ್ಪಷ್ಟವಾಗುತ್ತದೆ. ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಬಿಜೆಪಿಯ ಪ್ರಣಾಳಿಕೆ ಮೌನವಹಿಸಿದೆ. ದೇಶಾದ್ಯಂತ ನಡೆದ ರೈತರ ಆಂದೋಲನಗಳು ಪದೇಪದೇ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದವು; ಬೆಳೆಯ ಸಂಪೂರ್ಣ ಬೆಲೆ ಹಾಗೂ ಸಾಲ ಮುಕ್ತಿ. ಸಾಲದಲ್ಲಿ ಮುಳುಗಿರುವ ರೈತನ ಸಾಲಮುಕ್ತಿಯ ಪ್ರಶ್ನೆಯ ಬಗ್ಗೆ ಈ ಪ್ರಣಾಳಿಕೆಯಲ್ಲಿ ಒಂದು ಪದವೂ ಕಾಣಿಸಿಕೊಳ್ಳುವುದಿಲ್ಲ. ಈ ಪ್ರಶ್ನೆಯ ಬಗ್ಗೆ ತಾವೇನೂ ಮಾಡುವುದಿಲ್ಲ ಎಂದು ಬಿಜೆಪಿ ಸ್ಪಷ್ಟವಾಗಿ ಹೇಳುತ್ತಿದೆ ಹಾಗೂ ಮುಂದೆ ಏನಾದರೂ ಮಾಡುವ ಇರಾದೆಯನ್ನೂ ಹೊಂದಿಲ್ಲ ಎಂದೂ ಸ್ಪಷ್ಟವಾಗುತ್ತದೆ. ರೈತರಿಗೆ ತಮ್ಮ ಬೆಳೆಗಳ ಬೆಲೆಯ ಬಗ್ಗೆ ಪ್ರಣಾಳಿಕೆಯಲ್ಲಿ ಏನೂ ಇಲ್ಲ. ಎಮ್‍ಎಸ್‍ಪಿ, ಸ್ವಾಮಿನಾಥನ್ ಆಯೋಗ, ಸರಕಾರದ ಖರೀದಿ ಇವೆಲ್ಲವುಗಳ ಬಗ್ಗೆ ಒಂದು ಪದವೂ ಇಲ್ಲ. ರೈತರಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುವಂತೆ, ಅದಕ್ಕಾಗಿ ‘ಪ್ರಯತ್ನ ಮಾಡಲಾಗುವುದು’ ಎನ್ನುವ ಸೂಚನೆಯನ್ನು ಮಾತ್ರ ನೀಡಲಾಗಿದೆ. ಅಂದರೆ, ಈ ಪ್ರಶ್ನೆಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುವಂತಿದೆ.

ಈ ಎರಡೂ ವಿಷಯಗಳಲ್ಲಿ ಬಿಜೆಪಿ ವಹಿಸಿದ ಮೌನ ಗಮನಾರ್ಹವಾಗಿದೆ ಏಕೆಂದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಋಣಮುಕ್ತಿ ಹಾಗೂ ರೈತರಿಗೆ ಬೆಳೆಗಳಿಗೆ ಸರಿಯಾದ ಮೌಲ್ಯ ನೀಡುವುದಕ್ಕೆ ಒಂದು ಹೊಸ ವ್ಯವಸ್ಥೆಯ ಬಗ್ಗೆ ನಿರ್ದಿಷ್ಟ ಘೋಷಣೆಗಳನ್ನು ಮಾಡಿದೆ. ಕಾಂಗ್ರಸ್‍ನ ಪ್ರಣಾಳಿಕೆ ಹೇಳುವುದೇನೆಂದರೆ, ಹಲವು ರಾಜ್ಯಗಳಲ್ಲಿ ಮಾಡಿದ ಸಾಲಮನ್ನಾ ದಿಂದ ಒಂದು ಹೆಜ್ಜೆ ಮುಂದೆ ಹೋಗಿ ಈಗ ರೈತರ ಸಂಪೂರ್ಣ ಋಣಮುಕ್ತಿ ಮಾಡುವುದು. ಸಾಲಗಾರ ರೈತನ ವಿರುದ್ಧ ಚೆಕ್ ಬೌನ್ಸ್‍ನ ನೆಪ ಮಾಡಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವದನ್ನು ನಿಲ್ಲಿಸಲಾಗುವುದು. ರೈತನಿಗೆ ತನ್ನ ವೆಚ್ಚದ ಒಂದೂವರೆ ಪಟ್ಟು ಬೆಲೆ ನೀಡುವುದರ ಬಗ್ಗೆ ಹೇಳಿಲ್ಲವಾದರೂ ಆದರೆ ಕನಿಷ್ಠ ಕೃಷಿ ವೆಚ್ಚ ಹಾಗೂ ಮೌಲ್ಯ ಆಯೋಗದ ಬದಲಿಗೆ ಒಂದು ಹೊಸ ಆಯೋಗ ರಚಿಸುವುದಾಗಿ ಭರವಸೆ ನೀಡಿದೆ. ಇದರೊಂದಿಗೆ ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿ ಕಿಸಾನ್ ಬಜೆಟ್‍ನ ಪ್ರಸ್ತಾಪವೂ ಇದೆ. ಅದಕ್ಕಾಗಿಯೇ ಮೀಸಲಿರುವ ಬಜೆಟ್‍ನಿಂದ ರೈತನಿಗೆ ಏನಾದರೂ ಸಿಗುತ್ತೋ ಇಲ್ಲವೋ, ಅದರೆ ಸರಕಾರವು ರೈತರಿಗಾಗಿ ಏನೆಲ್ಲ ಮಾಡಿದೆ, ಮಾಡಿಲ್ಲ ಎನ್ನುವ ಲೆಕ್ಕವಂತೂ ಸಿಗುವುದು. ಕಾಂಗ್ರೆಸ್‍ನ ಈ ಘೋಷಣೆಗಳ ನಂತರ ಬಿಜೆಪಿಯು ಕನಿಷ್ಠ ಇಷ್ಟಾದರೂ ಆಥವಾ ಇದಕ್ಕಿಂತ ಹೆಚ್ಚಿನ ಘೋಷಣೆ ಮಾಡುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಎರಡೂ ವಿಷಯಗಳ ಬಗ್ಗೆ ಮೌನ ವಹಿಸಿ ಬಿಜೆಪಿಯು ತನ್ನ ಇಂಗಿತವನ್ನು ಸ್ಪಷ್ಟಪಡಿಸಿದೆ.

ನಿರುದ್ಯೋಗದ ಬಗ್ಗೆಯೂ ಹೆಚ್ಚುಕಡಿಮೆ ಹೀಗೆ ಆಗಿದೆ. ಸತ್ಯವೇನೆಂದರೆ, ನೋಟುರದ್ದತಿಯ ನಂತರ ನಿರುದ್ಯೋಗ ದರವು ಇಂದಿನ ತನಕದ ಎಲ್ಲಾ ದಾಖಲೆಗಳನ್ನು ಮುರಿದುಹಾಕಿದೆ. ಪ್ರತಿಪಕ್ಷವಾಗಿರುವ ಕಾಂಗ್ರೆಸ್‍ಗೆ ಈ ಸತ್ಯವನ್ನು ಹೇಳುವುದು ಸುಲಭ ಆದರೆ ಬಿಜೆಪಿಗೆ ಈ ವಾಸ್ತವವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಇದಕ್ಕಿಂತ ಮಹತ್ವಪೂರ್ಣ ವಿಷಯವೇನೆಂದರೆ, ಕಾಂಗ್ರೆಸ್‍ನ ಪ್ರಣಾಳಿಕೆಯು ಈ ವಿಷಯದ ಬಗ್ಗೆ ಕೆಲವು ನಿರ್ದಿಷ್ಟ ಸಲಹೆಗಳನ್ನು ನೀಡುತ್ತದೆ. ಎಲ್ಲಕ್ಕಿಂತ ಮೊದಲನೇಯದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಉದ್ಯೋಗಗಳಲ್ಲಿ ಖಾಲಿ ಉಳಿದಿರುವ 22 ಲಕ್ಷ ಹುದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದೆ. ಸರಾಕರಿ ಉದ್ಯೋಗಗಳಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅದಕ್ಕೆ ಇರುವ ಶುಲ್ಕವನ್ನು ತೆಗೆದುಹಾಕುವ ಮಾತು ಹೇಳುತ್ತದೆ. ಪ್ರತಿ ಹಳ್ಳಿ ಮತ್ತು ಮುನಿಸಿಪಾಲ್ಟಿಯಲ್ಲಿ ‘ಸೇವಾ ಮಿತ್ರ’ ಎನ್ನುವ ಪೋಸ್ಟ್ ಸೃಷ್ಟಿಸುವ ಹಾಗೂ ದೊಡ್ಡ ಹಳ್ಳಿಗಳಲ್ಲಿ ಇನ್ನೊಬ್ಬ ‘ಆಶಾ’ ಕಾರ್ಯಕರ್ತರನ್ನು ನೇಮಿಸುವ ಆಶ್ವಾಸನೆ ನೀಡಿದೆ. ಆದರೆ ಕಾಂಗ್ರೆಸ್ ಆಳ್ವಿಕೆಯಿರುವ ರಾಜ್ಯಗಳಲ್ಲಿ ಈ ಸಲಹೆಗಳನ್ನು ಅನುಷ್ಠಾನಗೊಳಿಸಿದ್ದರೆ ಒಳ್ಳೆಯದಾಗ್ತಿತ್ತು. ಇನ್ನು ಬಿಜೆಪಿಯ ಪ್ರಣಾಳಿಕೆಯಂತೂ ಖಾಲಿ ಬಿದ್ದಿರುವ ಹುದ್ದೆಗಳ ಬಗ್ಗೆ ಹಾಗೂ ಹೊಸ ಉದ್ಯೋಗಗಳ ಪ್ರಶ್ನೆಗಳ ಬಗ್ಗೆ ಸಂಪೂರ್ಣ ಮೌನ ವಹಿಸಿದೆ. ಅಂದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಹುದ್ದೆಗಳನ್ನು ತೆಗೆದುಹಾಕಲಾಗುವುದು ಎನ್ನುವುದು ಸ್ಪಷ್ಟ.

ಉದ್ಯೋಗದ ಪ್ರಶ್ನೆಯನ್ನು ಕೇವಲ ಸರಕಾರಿ ಉದ್ಯೋಗಗಳಿಂದ ಬಗೆಹರಿಸಲಾಗದು. ಕಾಂಗ್ರೆಸ್ ಪ್ರಣಾಳಿಕೆ ಉದ್ಯೋಗ ಸೃಷ್ಟಿಯ ಒಂದು ಯೋಜನೆ ನೀಡುತ್ತದೆ. ಒಂದು ಹೊಸ ಸಚಿವಾಲಯ ಸ್ಥಾಪಿಸುವುದು, ಅದರ ಮೂಲಕ ಖಾಸಗಿ ವಲಯದಲ್ಲಿ ಉದ್ಯೋಗಸೃಷ್ಟಿಗೆ ಪ್ರೋತ್ಸಾಹಿಸಲಾಗುವುದು. ಹೊಸ ವ್ಯಾಪಾರ ಪ್ರಾರಂಭಿಸಿದ ನಂತರ ಮೊದಲ ಮೂರು ವರ್ಷಗಳ ತನಕ ನಿಯಮ ಕಾನೂನುಗಳ ವಿನಾಯತಿ ನೀಡಲಾಗುವುದು. ಎಲ್ಲಾ ಉದ್ಯೋಗಗಳಿಗೂ ಅಪರೆಂಟಿಸ್ ನೀಡುವುದು ಕಡ್ಡಾಯ, ಅವರಿಗೆ ಸ್ಟೈಪೆಂಡ್ ಸಿಗುವುದು ಹಾಗೂ ಖಾಯಂ ಉದ್ಯೋಗಗಳಿಗೆ ಆದ್ಯತೆ ನೀಡಲಾಗುವುದು ಇತ್ಯಾದಿ. ಗ್ರಾಮೀಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಯೋಜನೆಯ ಅಭಾವದಿಂದ ಕಾಂಗ್ರೆಸ್‍ನ ಪ್ರಸ್ತಾಪ ಅಪೂರ್ಣವಾಗುತ್ತದೆ. ಆದರೆ ಬಿಜೆಪಿಯಂತೂ ನಿರುದ್ಯೋಗದ ಬಗ್ಗೆ ತನ್ನ ಪ್ರಣಾಳಿಕೆಯಲ್ಲಿ ನಿರುದ್ಯೋಗದ ಮಾತನ್ನೇ ಎತ್ತುವುದಿಲ್ಲ. ಪಕ್ಷದ 75 ಪ್ರಮುಖ ಸಂಕಲ್ಪಗಳಲ್ಲಿ ಒಂದೂ ದೇಶಾದ್ಯಂತ ಉದ್ಯೋಗ ಹೆಚ್ಚಿಸುವ ಬಗ್ಗೆ ಇಲ್ಲ.

ಪ್ರಣಾಳಿಕೆಯಲ್ಲಿ ಒಂದು ಕಡೆ ಸ್ಟಾರ್ಟ್ ಅಪ್‍ಗಳಿಗೆ ಅಗ್ಗದ ಸಾಲಗಳ ಹಾಗೂ 22 ರೀತಿಯ ಉದ್ಯೋಗಗಳಿಗೆ ಪ್ರೋತ್ಸಾಹನೆಯ ಮಾತುಗಳನ್ನಾಡಲಾಗಿದೆ ಮಾತ್ರ. ಯುವಜನರ ಭಾಗದಲ್ಲಿ ಎರಡು ಅಂಶಗಳು ಮಾತ್ರ ಉದ್ಯೋಗಕ್ಕೆ ಸಂಬಂಧಿಸಿದ ಅಂಶಗಳಿವೆ ಆದರೆ 6 ಅಂಶಗಳು ಆಟೋಟಗಳಗೆ ಸಂಬಂಧಪಟ್ಟವಾಗಿವೆ. ಸ್ಕಿಲ್ ಮಿಷನ್ ಮತ್ತು ಮುದ್ರಾ ಸಾಲಗಳ ಮಾತುಗಳನ್ನು ಪುನರಾವರ್ತಿಸಲಾಗಿದೆ. ಆದರೆ ನಿರುದ್ಯೋಗದ ಸಮಸ್ಯೆ ಇವುಗಳಿಂದ ಬಗೆಹರಿಯುವಂತಿದ್ದರೆ ಇಲ್ಲಿಯವರೆಗೆ ಯಾಕಾಗಿಲ್ಲ?ಒಟ್ಟಿನಲ್ಲಿ ಈ ಪ್ರಣಾಳಿಕೆಯ ಮುಖಾಂತರ ಬಿಜೆಪಿ ರೈತರಿಗೆ ಮತ್ತು ಯುವಜನರಿಗೆ ನೀಡುತ್ತಿರುವ ಸ್ಪಷ್ಟ ಸಂದೇಶವೇನೆಂದರೆ, “ಕಳೆದ ಐದು ವರ್ಷಗಳಲ್ಲಿ ನಿಮ್ಮೊಂದಿಗೆ ಏನು ಮಾಡಲಾಗಿತ್ತೋ, ಮುಂದಿನ ಐದು ವರ್ಷಗಳಲ್ಲೂ ಅದನ್ನೇ ಮಾಡಲಾಗುವುದು”. ಈ ಆಧಾರದಲ್ಲಂತೂ ಬಿಜೆಪಿಗೆ ಮತ ಸಿಗುವುದು ತುಂಬಾ ದೂರ. ಆದರೆ, ಸತ್ಯವೇನೆಂದರೆ, ಈ ಚುನಾವಣೆಯನ್ನು ಪ್ರಣಾಳಿಕೆಗಳ ಆಧಾರದ ಮೇಲೆ ಗೆಲ್ಲವುದಿಲ್ಲ, ಗೆಲ್ಲುವುದು ಪ್ರಚಾರ ಮತ್ತು ಪ್ರಸಾರದಿಂದ, ನೀತಿಗಳ ಮೇಲೆ ಸ್ಪರ್ಧೆಯಾಗದೇ ನಾಯಕರ ನಿಯತ್ತಿನ ಮೇಲೆ ಸ್ಪರ್ಧಿಸಲಾಗುತ್ತದೆ. ಇದೇ ಭಾರತದ ಇಂದಿನ ವಿಡಂಬನೆ. ಯಾರ ಬಳಿ ನೀತಿಗಳಿವೆಯೋ ಅವರ ನಾಯಕರ ಮತ್ತು ನಿಯತ್ತಿನ ಮೇಲೆ ದೇಶಕ್ಕೆ ಭರವಸೆಯಿಲ್ಲ. ಯಾರ ಬಳಿ ಪ್ರಚಾರ, ಪ್ರಸಾರ ಮತ್ತು ಪ್ರಭಾವವಿದೆಯೋ ಅವರ ಬಳಿ ದೇಶಕ್ಕಾಗಿ ಒಂದು ಸಕಾರಾತ್ಮಕ ವಿಕಲ್ಪ ಕಾಣುತ್ತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...