Homeಮುಖಪುಟಮಣಿಪುರ: ಹಿಂದಿ ಹೇರಿಕೆ ಖಂಡಿಸಿ ಶಾರನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್‌ ವಕ್ತಾರನ ಮೇಲೆ ದೇಶದ್ರೋಹ ಪ್ರಕರಣ ದಾಖಲು

ಮಣಿಪುರ: ಹಿಂದಿ ಹೇರಿಕೆ ಖಂಡಿಸಿ ಶಾರನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್‌ ವಕ್ತಾರನ ಮೇಲೆ ದೇಶದ್ರೋಹ ಪ್ರಕರಣ ದಾಖಲು

- Advertisement -
- Advertisement -

ನವದೆಹಲಿ: ಭಿನ್ನಾಭಿಪ್ರಾಯ ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಣಿಪುರದ ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯ ಕಾಂಗ್ರೆಸ್ ವಕ್ತಾರೊಬ್ಬರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದೆ. ಹಿಂದಿಯನ್ನು ಪ್ರಚಾರ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಲಹೆ ನೀಡಿರುವುದನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹದ ಕೇಸ್ ಹಾಕಲಾಗಿದೆ.

ಬಿಜೆಪಿ ಯುವ ಮೊರ್ಚಾದ ರಾಜ್ಯಾಧ್ಯಕ್ಷ ಎಂ. ಭರೀಶ್ ಶರ್ಮಾ ಅವರು ಏಪ್ರಿಲ್ 11ರಂದು ನೀಡಿದ ದೂರಿನ ಆಧಾರದ ಮೇಲೆ ಮಣಿಪುರ ಪೊಲೀಸರು ಇಂಫಾಲ್ ಮೂಲದ ವಕೀಲ, ಕಾಂಗ್ರೆಸ್‌ ವಕ್ತಾರ ಸನೌಜಮ್ ಶ್ಯಾಮಚರಣ್ ಸಿಂಗ್ (ಸನೂ) ಅವರನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ದೂರಿನ ಮೇರೆಗೆ ಇಂಫಾಲ್ ಪೊಲೀಸರ ತಂಡವು ಏಪ್ರಿಲ್ 12ರಂದು ಬೆಳಗಿನ ಜಾವ 1 ಗಂಟೆಗೆ ಸನೌರನ್ನು ಬಂಧಿಸಲಾಯಿತು. ಮಂಗಳವಾರ ಸಂಜೆ ಸನೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A (ದೇಶದ್ರೋಹ), 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಸನೂ ವಿರುದ್ಧ ಆರೋಪ ಹೊರಿಸಲಾಗಿದೆ.

ಏಪ್ರಿಲ್ 9ರಂದು ಇಂಪ್ಯಾಕ್ಟ್ ಟಿವಿಯಲ್ಲಿ ಸನೂ ಅವರು ಭಾಗವಹಿಸಿ, ‘ಹಿಂದಿ: ಏಕೀಕರಣ ಅಥವಾ ಹೇರಿಕೆ’ ವಿಷಯದ ಚರ್ಚೆಯಲ್ಲಿ ಮಾತನಾಡಿದ್ದರು.

ಇಂಫಾಲ್‌ನಿಂದ ‘ದಿ ವೈರ್‌’ನೊಂದಿಗೆ ಮಾತನಾಡಿರುವ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಕೋಶದ ಉಪಾಧ್ಯಕ್ಷರೂ ಆದ ವಕೀಲ ರವಿ ಖಾನ್, “ಸನೂ ಅವರನ್ನು ಏಪ್ರಿಲ್ 12ರಂದು ರಾತ್ರಿ 8:30 ರ ಸುಮಾರಿಗೆ ಇಂಫಾಲ್ ವೆಸ್ಟ್‌ನ ಡ್ಯೂಟಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಒಂದೂವರೆ ಗಂಟೆಗಳ ಕಾಲ ಪೊಲೀಸ್ ಅಥವಾ ನ್ಯಾಯಾಂಗ ಬಂಧನದ ಪರ, ವಿರುದ್ಧದ ವಾದಗಳನ್ನು ಆಲಿಸಿದ ನಂತರ, ಮ್ಯಾಜಿಸ್ಟ್ರೇಟ್ ರಾತ್ರಿ 10 ಗಂಟೆಗೆ ಜಾಮೀನು ನೀಡಿದರು” ಎಂದು ತಿಳಿಸಿದ್ದಾರೆ.

ಪ್ರಕರಣವು ಮುಂದುವರಿಯಲಿದ್ದು, ಮುಂದಿನ ಏಪ್ರಿಲ್ 27ರಂದು ಕೆಳ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸನೂಗೆ ತಿಳಿಸಲಾಗಿದೆ.

ಸ್ಥಳೀಯ ಬಿಜೆಪಿ ಯುವ ಮುಖಂಡ ನೀಡಿದ ದೂರಿನಲ್ಲಿ, “ಚರ್ಚೆಯ ಸಮಯದಲ್ಲಿ ಸನೂ ಅವರು ಭಾರತದ ಮುಖ್ಯ ಭೂಭಾಗವನ್ನು ನಿಂದಿಸಿದ್ದಾರೆ. ಮಾತ್ರವಲ್ಲದೆ ಅಮಿತ್‌ ಶಾ ವಿರುದ್ಧ ಅಸಭ್ಯ, ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ” ಎಂದು ದೂರಿದ್ದಾರೆ.

“ಆರೋಪಿಯು ಉದ್ದೇಶಪೂರ್ವಕವಾಗಿ ದುರುದ್ದೇಶಪೂರಿತವಾಗಿ ಅವಮಾನಿಸಿದ್ದಾರೆ. ಭಾರತದ ಹಿಂದೂಗಳನ್ನು ಪ್ರಾಣಿ ಎಂದು ಕರೆದಿದ್ದಾರೆ. ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಇದರಿಂದಾಗಿ ಇಡೀ ಭಾರತದ ಜನಾಂಗೀಯ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ” ಎಂದು ಆರೋಪಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷೆ ಎ.ಶಾರದಾ ದೇವಿ ಶರ್ಮಾ ದೇಶದ್ರೋಹ ಪ್ರಕರಣವನ್ನು ಸಮರ್ಥಿಸಿದ್ದಾರೆ. ದೇಶಾದ್ಯಂತ ಜನರು ಹಿಂದಿಯನ್ನು ಅಳವಡಿಸಿಕೊಳ್ಳುವಂತೆ ಅಮಿತ್‌ ಶಾ ಹೇಳಿರುವ ವಿಚಾರವನ್ನು ಬದಿಗೊತ್ತಿರುವ ಶಾರದಾ ಶರ್ಮಾ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದರ ನಡುವೆ ಈಶಾನ್ಯ ರಾಜ್ಯದಾದ್ಯಂತ ಹಲವಾರು ನಾಗರಿಕ ಸಮಾಜ, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಹಿಂದಿ ಹೇರಿಕೆಯ ವಿರುದ್ಧ ಬೀದಿಗಿಳಿದಿವೆ.

ದೇಶದ್ರೋಹ ದುರ್ಬಳಕೆಯೇ?

ದೇಶಾದ್ಯಂತ ಪೊಲೀಸರು ದೇಶದ್ರೋಹದ ಆರೋಪಗಳನ್ನು ತ್ವರಿತವಾಗಿ ಬಳಸುತ್ತಿದ್ದಾರೆ. ಈ ಸೆಕ್ಷನ್ ಅನ್ನು ವಿನಾಕಾರಣ ಬಳಸುತ್ತಿರುವುದು ಚರ್ಚೆಯ ವಿಷಯವಾಗಿದೆ.

ಕೇದಾರ್ ನಾಥ್ ಸಿಂಗ್ ವರ್ಸಸ್‌‌ ಬಿಹಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೀಗೆ ಹೇಳಿದೆ: “ಹೇಳಿಕೆಗಳು, ಎಷ್ಟೇ ಪ್ರಬಲವಾದ ಪದಗಳಿದ್ದರೂ, ಹಿಂಸಾಚಾರವನ್ನು ಪ್ರಚೋದಿಸುವ ಪ್ರವೃತ್ತಿಯನ್ನು ಹೊಂದಿಲ್ಲದಿದ್ದರೆ, ಅವುಗಳನ್ನು ದೇಶದ್ರೋಹವೆಂದು ಪರಿಗಣಿಸಲಾಗುವುದಿಲ್ಲ”.

ಮೇ 2021 ರಲ್ಲಿ, ಸರ್ವೋಚ್ಚ ನ್ಯಾಯಾಲಯವು “ದೇಶದ್ರೋಹದ ಮಿತಿಗಳನ್ನು ವ್ಯಾಖ್ಯಾನಿಸಲು ಸಮಯ ಬಂದಿದೆ” ಎಂದಿತ್ತು.


ಇದನ್ನೂ ಓದಿರಿ: 40% ಕಮಿಷನ್‌ ನಿಜ; 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷರ ಗಂಭೀರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...