Homeಮುಖಪುಟಜಗದೀಶ್ ಶೆಟ್ಟರ್ ಸಹಿತ ಹಲವು ಹಾಲಿ ಶಾಸಕರಿಗಿಲ್ಲ ಬಿಜೆಪಿ ಟಿಕೆಟ್: ಹಲವರ ಕ್ಷೇತ್ರ ಬದಲಾವಣೆ

ಜಗದೀಶ್ ಶೆಟ್ಟರ್ ಸಹಿತ ಹಲವು ಹಾಲಿ ಶಾಸಕರಿಗಿಲ್ಲ ಬಿಜೆಪಿ ಟಿಕೆಟ್: ಹಲವರ ಕ್ಷೇತ್ರ ಬದಲಾವಣೆ

- Advertisement -
- Advertisement -

ಕರ್ನಾಟಕದ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದ್ದರೂ ಆಡಳಿತರೂಢ ಬಿಜೆಪಿ ಪಕ್ಷವು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಹಿಂದೇಟು ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ, ಶಿವಮೊಗ್ಗ ನಗರ ಶಾಸಕ ಕೆ.ಎಸ್ ಈಶ್ವರಪ್ಪನರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹಿ ಕನಿಷ್ಟ ಇಪ್ಪತ್ತು ಹಾಲಿ ಶಾಸಕರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳು ಪ್ರಕಟವಾಗುತ್ತಿವೆ. ಇನ್ನು ಯಡಿಯೂರಪ್ಪನವರನ್ನು ಬಿಟ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿರುವುದಕ್ಕೆ ಬೇಸರಗೊಂಡು ಅವರು ದೆಹಲಿಯಿಂದ ವಾಪಸ್ಸಾಗಿದ್ದಾರೆ.

ಯಾರಿಗಿಲ್ಲ ಟಿಕೆಟ್?

ಜಗದೀಶ್ ಶೆಟ್ಟರ್: ಮಾಜಿ ಮುಖ್ಯಮಂತ್ರಿ, ಹಾಲಿ ಸಚಿವ ಜಗದೀಶ್ ಶೆಟ್ಟರ್‌ರವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್‌ನಿಂದ ಬೆಳಿಗ್ಗೆ ಫೋನ್ ಕರೆ ಬಂದಿತ್ತು. ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ. ನಾನು ಮೂವತ್ತು ವರ್ಷ ಕಟ್ಟಿದ ಪಕ್ಷದವರು ನನಗೆ ಹೀಗೆ ಹೇಳುವುದು ಸರಿಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ನೂರಾರು ಜನರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದೇನೆ. ಆರು ಸಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇವೆ. ಯಾವುದೇ ಕಪ್ಪು ಚುಕ್ಕೆ ಹೊಂದಿಲ್ಲ. ಪಕ್ಷನಿಷ್ಟನಾಗಿದ್ದೇನೆ. ಹಾಗಿದ್ದರೂ ಟಿಕೆಟ್ ನಿರಾಕರಿಸುತ್ತಿರುವುದಕ್ಕೆ ಎಂದು ಪ್ರಶ್ನಿಸಿದ್ದೇನೆ ಎಂದಿದ್ದಾರೆ.

ಈ ಕುರಿತು ಈಗಾಗಲೇ ಬಿ.ಎಸ್ ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇನೆ. ಪಕ್ಷದ ವರಿಷ್ಠರ ನಡೆ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಈಶ್ವರಪ್ಪನವರ ಪುತ್ರನಿಗಿಲ್ಲ ಟಿಕೆಟ್: ಇನ್ನು ನಿವೃತ್ತಿ ಘೋಷಿಸಿರುವ ಕೆ.ಎಸ್ ಈಶ್ವರಪ್ಪನವರ ಪುತ್ರ ಕೆ.ಇ.ಕಾಂತೇಶ್‌ರವರಿಗೂ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸುಳಿವು ನೀಡಿದೆ. ಆಯನೂರು ಮಂಜುನಾಥ್ ಶಿವಮೊಗ್ಗ ನಗರದಿಂದಲೇ ಟಿಕೆಟ್ ಕೇಳುತ್ತಿದ್ದು, ಒಂದು ವೇಳೆ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸೇರುವ ಆಲೋಚನೆಯಲ್ಲಿದ್ದಾರೆ. ಹಾಗಾಗಿ ಈಶ್ವರಪ್ಪನ ಪುತ್ರನಿಗೆ ಟಿಕೆಟ್ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ.

ಸಂಸದ ಬಸವರಾಜು ಮಗನಿಗೂ ಟಿಕೆಟ್ ಡೌಟ್: ತುಮಕೂರು ಸಂಸದ ಜಿ.ಎಸ್ ಬಸವರಾಜುರವರ ಪುತ್ರ ಜ್ಯೋತಿಗಣೇಶ್‌ರವರಿಗೂ ಟಿಕೆಟ್ ಸಿಗುವುದು ಅನುಮಾನವಾಗಿದೆ. ಇವರಿಬ್ಬರೂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರು. ತುಮಕೂರು ನಗರ ಟಿಕೆಟ್ ಗಾಗಿ ಮತ್ತೊಬ್ಬ ಆರ್‌ಎಸ್‌ಎಸ್‌ ಕಟ್ಟಾಳು ಮಾಜಿ ಶಾಸಕ ಸೊಗಡು ಶಿವಣ್ಣ ತೀವ್ರ ಪೈಪೋಟಿ ನಡೆಸುತ್ತಿದ್ದು, ಬಹುಶಃ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.

ಹಲವರ ಕ್ಷೇತ್ರ ಬದಲಾವಣೆ

ಸಚಿವ ಆರ್ ಅಶೋಕ್, ಶಾಸಕ ರವಿ ಸುಬ್ರಮಣ್ಯ, ಮಾಜಿ ಶಾಸಕ ನಂದೀಶ್ ರೆಡ್ಡಿ ಹಲವರ ಕ್ಷೇತ್ರ ಬದಲಾವಣೆ ಮಾಡಲಾಗುತ್ತದೆ ಎಂಬ ಮಾಹಿತಿಗಳು ಸಹ ಹರಿದಾಡುತ್ತಿವೆ. ಪದ್ಮನಾಭನಗರ ಮತ್ತು ಬಸವನಗುಡಿಯಲ್ಲಿ ಬಿಜೆಪಿಯಲ್ಲಿ ಯಾರೂ ನಿಂತರೂ ಗೆಲ್ಲುತ್ತಾರೆ. ಹಾಗಾಗಿ ಪೈಪೋಟಿ ಇರುವ ಬಿಟಿಎಂ ಲೇಔಟ್, ಬ್ಯಾಟರಾಯನಪುರದಂತಹ ಕ್ಷೇತ್ರಗಳಲ್ಲಿ ನಿಲ್ಲಬೇಕು ಎಂದು ತಾಕೀತು ಮಾಡಲಾಗಿದೆ ಎನ್ನಲಾಗಿದೆ.

ಇತ್ತೀಚಿನ ಚುನಾವಣೆಗಳಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿಯೂ ಬಿಜೆಪಿ ಇದೇ ತಂತ್ರವನ್ನು ಅನುಸರಿಸಿತ್ತು. ಹಲವು ಹಾಲಿ ಶಾಸಕರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡಿತ್ತು. ಗುಜರಾತ್‌ನಲ್ಲಿ ಅದು ಯಶಸ್ವಿಯಾದರೆ, ಹಿಮಾಚಲ ಪ್ರದೇಶದಲ್ಲಿ ಮುಳುವಾಗಿತ್ತು. ಕರ್ನಾಟಕದಲ್ಲಿ ಯಾವ ಫಲಿತಾಂಶ ಬರುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ;

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...