Homeಚಳವಳಿತೀವ್ರಗೊಂಡ 'ನಮ್ಮೂರಿಗೆ ಅಕೇಶಿಯಾ ಮರ ಬೇಡ' ಹೋರಾಟ: ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ

ತೀವ್ರಗೊಂಡ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ’ ಹೋರಾಟ: ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ

ಈ ಅರಣ್ಯ ಜಾಗ ಬೇನಾಮಿಯಾಗಿ ಪ್ರೇರಣಾ ಟ್ರಸ್ಟ್‌ಗೆ, ಬಿ.ವೈ ರಾಘವೇಂದ್ರರಿಗೆ ಅಥಬಾ ಬಿ.ವೈ ವಿಜಯೇಂದ್ರರಿಗೆ ಹೋಗುತ್ತಿದೆಯೋ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಕೆ.ಪಿ ಶ್ರೀಪಾಲ್ ಒತ್ತಾಯಿಸಿದರು.

- Advertisement -
- Advertisement -

‘ಪರಿಸರ ಮತ್ತು ಜೀವವೈವಿಧ್ಯತೆಗೆ ಕುತ್ತು ತರುವ ಅಕೇಶಿಯಾ ನಮಗೆ ಬೇಡವೇ ಬೇಡ, ಅನಧಿಕೃತವಾಗಿ ಎಂಪಿಎಂಗೆ ಗುತ್ತಿಗೆ ಮುಂದುವರೆಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ, ಮಲೆನಾಡು ನಮ್ಮದು’ ಎಂಬ ಘೋಷಣೆಗಳೊಂದಿಗೆ ಇಂದು ಶಿವಮೊಗ್ಗದಲ್ಲಿ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಶಿವಮೊಗ್ಗದ ಬೆಕ್ಕಿನಕಲ್ಮಠ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಪ್ರತಿಭಟನಾಕಾರರು, ಪರಿಸರ ಕಾರ್ಯಕರ್ತರು ಮಲೆನಾಡನ್ನು ಮಾರಲು ಬಿಡುವುದಿಲ್ಲ ಎಂಬ ಘೋಷಣೆಗಳೊಂದಿಗೆ ನಗರದ ಸಿಸಿಎಫ್‌ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ ಪ್ರತಿಭಟನಾಕಾರರು ಸಿಸಿಎಫ್‌ ಕಚೇರಿ ಆವರಣಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆದಾಗ ಇಬ್ಬರ ನಡುವೆ ಜಟಾಪಟಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಹೋರಾಟಗಾರರಾದ ಕೆ.ಪಿ ಶ್ರೀಪಾಲ್ ಮಾತನಾಡಿ “ಇದು ಇಡೀ ಮಲೆನಾಡಿನ ಉಳಿವಿನ ಹೋರಾಟವಾಗಿದೆ. ಏಕೆಂದರೆ ಇಡೀ ಮಲೆನಾಡನ್ನು ಹಾಳು ಮಾಡಿದ ಎಂಪಿಎಂ ಹೆಸರಿನ ಅಕೇಶಿಯಾ ನೆಡುತೋಪು ಕಳೆದ ಆಗಸ್ಟ್‌ಗೆ ಅದರ ಲೀಸ್ ಅವಧಿ ಮುಗಿಯುತ್ತದೆ ಎಂದು ನಂಬಿದ್ದೆವು. ಆದರೆ ಎಂಪಿಎಂ ಕಾರ್ಖಾನೆ ಮುಚ್ಚಿಹೋಗಿದ್ದರೂ ಸರ್ಕಾರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವ ಬದಲು, ಮತ್ತೆ ಲೀಸ್ ನವೀಕರಣದ ಮೂಲಕ ಆ ಭೂಮಿಯನ್ನು ಮುಚ್ಚಿಹೋಗಿರುವ ಕಂಪನಿಗೆ ಪರಭಾರೆ ಮಾಡಿದೆ. ಏಕೆಂದರೆ ಇದರ ಹಿಂದೆ ಸಿಎಂ ಯಡಿಯೂರಪ್ಪನವರ ಕುಟುಂಬದ ಹಿತಾಸಕ್ತಿಯಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆಯೇ ಇಲ್ಲದ ಮೇಲೆ ನವೀಕರಣ ಹೇಗೆ ಸಾಧ್ಯ? ಇದರ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ, ಯಾವ ಶಾಸಕರ ಗಮನಕ್ಕೂ ಬಂದಿಲ್ಲ. ಈ ಅರಣ್ಯ ಜಾಗ ಬೇನಾಮಿಯಾಗಿ ಪ್ರೇರಣಾ ಟ್ರಸ್ಟ್‌ಗೆ, ಬಿ.ವೈ ರಾಘವೇಂದ್ರರಿಗೆ ಅಥಬಾ ಬಿ.ವೈ ವಿಜಯೇಂದ್ರರಿಗೆ ಹೋಗುತ್ತಿದೆಯೋ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಚಿಂತಕರಾದ ಡಾ. ರಾಜೇಂದ್ರ ಚೆನ್ನಿಯವರು ಮಾತನಾಡಿ “ನಮಗೆ ಸೇರಬೇಕಾದ ಪರಿಸರ ಮತ್ತು ಕಾಡನ್ನು ನಮ್ಮ ಸರ್ಕಾರ ಮತ್ತು ರಾಜಕಾರಣಿಗಳು ಮಾರಲು ಹೊರಟಿದ್ದಾರೆ. ಅದನ್ನು ನಿಲ್ಲಿಸಬೇಕು. ಮತ್ತೆ 40 ವರ್ಷ ಈ ಅಕೇಶಿಯಾ ಮರಗಳು ಬೆಳೆದರೆ ಮರುಭೂಮಿಯನ್ನು ನೋಡಲು ನಾವು ರಾಜಸ್ಥಾನಕ್ಕೆ ಹೋಗಬೇಕಿಲ್ಲ, ಬದಲಿಗೆ ಶಿವಮೊಗ್ಗಕ್ಕೆ ಬಂದರೆ ಸಾಕು ಎನಿಸುವ ಪರಿಸ್ಥಿತಿ ಬರುತ್ತದೆ. ಈ ಸರ್ಕಾರಕ್ಕೆ ಕಿವಿ, ಕಣ್ಣು, ಮೂಗು ಏನು ಇಲ್ಲವೇ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಸಿಎಂರವರ ಆದೇಶವನ್ನಷ್ಟೇ ನಾವು ಪಾಲಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಇದು ನಮ್ಮ ಪ್ರತಿಯೊಬ್ಬರ ಮನೆಯ ಪ್ರಶ್ನೆಯಾಗಿದೆ. ಇದು ನಿಧಾನಕ್ಕೆ ನಮಗೆ ವಿಷವುಣಿಸುತ್ತಿದೆ. ಹಾಗಾಗಿ ಏನೇ ಬೆಲೆ ತೆತ್ತಾದರೂ ಸರಿಯೇ ನಾವು ಮಲೆನಾಡನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ ಗಂಗಾಧರ್‌ರವರು ಮಾತನಾಡಿ ‘ಜನರು ಬಿಜೆಪಿ ಓಟು ಹಾಕುತ್ತಿದ್ದಾರೆ ಎಂದರೆ ದೇಶವನ್ನು ಮಾರಿಕೊಳ್ಳಿ ಎಂದು ಪರ್ಮಿಶನ್ ಕೊಟ್ಟಂತೆಯೇ? ನಾವು ಅರಣ್ಯವನ್ನು ಪ್ರೀತಿಸುತ್ತೇವೆ. ಈ ಅರಣ್ಯವನ್ನು ಮತ್ತೆ ಅರಣ್ಯ ಇಲಾಖೆಗೆ ಕೊಡಿ ಎಂದು ಒತ್ತಾಯಿಸುತ್ತಿದ್ದೇವೆಯೇ ಹೊರತು ನಮಗೆ ಕೊಡಿ ಎಂತಲ್ಲ’ ಎಂದರು.

ಈ ಹಿಂದೆಯಿಂದಲೂ ಅಕೇಶಿಯಾ ಅಪಾಯಕಾರಿ ಎಂದು ನಾವು ಹೇಳಿದ್ದೆವು. ಆದರೆ ಅದನ್ನು ಸರ್ಕಾರಗಳು ಪರಿಗಣಿಸಲಿಲ್ಲ. ಈಗ ಅದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡು ಅರಣ್ಯವನ್ನು ರಕ್ಷಿಸಬೇಕು. ಅದಕ್ಕಾಗಿ ಈ ಚಳವಳಿಯನ್ನು ತೀವ್ರಗೊಳಿಸುತ್ತೇವೆ. ದಕ್ಷಿಣ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಈ ಚಳವಳಿ ಹಬ್ಬಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಸಾಗರ ರಾಘವೇಂದ್ರ, ಶಶಿ ಸಂಪಳ್ಳಿ, ಕಲ್ಕುಳಿ ವಿಠಲ್ ಹೆಗಡೆ, ಪಿ. ಕುಮಾರಸ್ವಾಮಿ ಮುಂತಾದವರು ಮಾತನಾಡಿದರು.


ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...