ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಈ ಸಂಘರ್ಷದ ಸಮಯದಲ್ಲಿ ಪೂರ್ವ ಉಕ್ರೇನ್ನಲ್ಲಿ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರೆಲ್ಲರೂ, ತಮ್ಮನ್ನು ಸುರಕ್ಷಿತ ನೆರೆಯ ದೇಶಗಳಾದ ರೊಮೇನಿಯಾ ಮತ್ತು ಹಂಗೇರಿಯಂತಹ ಇತರ ದೇಶಗಳಿಗೆ ಸ್ಥಳಾಂತರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರಲ್ಲಿ ಹೆಚ್ಚಿನವರು ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ, ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ, ಇವಾನೊ-ಫ್ರಾನ್ ಕಿವ್ಸ್ಕ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ ಮುಂತಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ತರಬೇತಿ ಪಡೆಯುತ್ತಿದ್ದಾರೆ.
ಉಕ್ರೇನ್ ದೇಶವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿದೆ. ಅಲ್ಲಿನ ಆರು ವರ್ಷಗಳ ವೈದ್ಯಕೀಯ ಕೋರ್ಸ್ಗಳು ಪಾಕೆಟ್ (ಶಿಕ್ಷಣ ವೆಚ್ಚ) ಸ್ನೇಹಿಯಾಗಿರುವುದರಿಂದ ಭಾರತದ ವಿದ್ಯಾರ್ಥಿಗಳು ವಿಶೇಷವಾಗಿ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೆ ತೆರಳುತ್ತಾರೆ.
ಕರ್ನಾಟಕ ಮೂಲದ ಹಲವಾರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ. ಅವರಲ್ಲಿ ಉಡುಪಿ ಮೂಲದ ಗ್ಲೆನ್ವಿಲ್ ಫೆರ್ನಾಂಡಿಸ್ ಕೂಡ ಒಬ್ಬರು. ಅವರು ಉಕ್ರೇನ್ನ ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ, ಉಕ್ರೇನ್ನಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಉಡುಪಿಯಲ್ಲಿರುವ ಅವರ ತಂದೆ ಮೆಲ್ವಿನ್ ಫೆರ್ನಾಂಡಿಸ್ ಅವರು ಭಯಭೀತರಾಗಿದ್ದಾರೆ.
“ಕರ್ನಾಟಕ ಸರ್ಕಾರವು ದೀರ್ಘಾವಧಿಯಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಸುಧಾರಿಸಬೇಕು. ಕರ್ನಾಟಕದಲ್ಲಿ ಶ್ರೀಮಂತರು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿದೆ. ಆದರೆ, ಮಧ್ಯಮ ವರ್ಗದ ಕುಟುಂಬಗಳು ಇಲ್ಲಿನ ಭಾರೀ ವೆಚ್ಚವನ್ನು ಭರಿಸಲಾಗದೇ, ತಮ್ಮ ಮಕ್ಕಳನ್ನು ಕಡಿಮೆ ವೆಚ್ಚವಿರುವ ವಿದೇಶಿ ವಿವಿಗಳಿಗೆ ಕಳುಹಿಸಿ ಶಿಕ್ಷಣ ಕೊಡಿಸುವಂತಾಗಿದೆ. ಇದೇ ಕಾರಣದಿಂದಾಗಿ, ನಾವು ನಮ್ಮ ಮಗನನ್ನು ಉಕ್ರೇನ್ಗೆ ಕಳಿಸಬೇಕಾಯಿತು” ಎಂದು ಮೆಲ್ಟಿನ್ ಫೆರ್ನಾಂಡಿಸ್ ಹೇಳಿದ್ದಾರೆ.
“ಕರ್ನಾಟಕದಲ್ಲಿ ನೀಟ್ ಮೂಲಕ ಸೀಟು ಸಿಗದಿದ್ದರೆ ವೈದ್ಯಕೀಯ ಶಿಕ್ಷಣದ ವೆಚ್ಚ ಐದೂವರೆ ವರ್ಷಗಳ ಕೋರ್ಸ್ಗೆ 60 ಲಕ್ಷ ರೂ. ಆಗುತ್ತದೆ. ಆದರೆ ಉಕ್ರೇನ್ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಆರು ವರ್ಷಗಳ ವೈದ್ಯಕೀಯ ಕೋರ್ಸ್ಗೆ 35 ಲಕ್ಷದಿಂದ 40 ಲಕ್ಷ ರೂ. ಖರ್ಚಾಗುತ್ತದೆ. ನಾನು ದುಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಮಗನಿಗೆ ಉಕ್ರೇನ್ ಉತ್ತಮ ಆಯ್ಕೆಯಾಗುತ್ತದೆ ಎಂದು ನಾನು ನಿರ್ಧರಿಸಿ, ಅಲ್ಲಿಗೆ ಕಳುಹಿಸಿದೆ” ಎಂದು ಅವರು ಹೇಳುತ್ತಾರೆ.
ವಿದೇಶಗಳಲ್ಲಿ ಸಾಕಷ್ಟು ಸುತ್ತಾಡಿರುವ ಉಡುಪಿಯ ಶಿಕ್ಷಣ ತಜ್ಞ ವಿಜಯ್ ಪಿ.ರಾವ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ್ದು, “ಭಾರತದ ಶಿಕ್ಷಣ ವ್ಯವಸ್ಥೆಯು ಸಾಕಷ್ಟು ಅಸ್ತವ್ಯಸ್ತವಾಗಿದೆ. ಭಾರತದಲ್ಲಿ ಸಮಂಜಸವಾದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಸಿಗದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು USSR ಮತ್ತು ಸುತ್ತಲಿನ ದೇಶಗಳಿಗೆ ಹೋಗುವುದು ಸ್ವಲ್ಪ ಬೇಸರವನ್ನುಂಟು ಮಾಡುತ್ತದೆ. ಭಾರತದಂತಹ ಬೃಹತ್ ದೇಶವು ವೈದ್ಯಕೀಯ ಶಿಕ್ಷಣವನ್ನು ಸಮಂಜಸವಾದ ವೆಚ್ಚದಲ್ಲಿ ಒದಗಿಸಲು ಸಾಧ್ಯವಾಗದೇ ಇರುವುದು ಆಶ್ಚರ್ಯಕರವಾಗಿದೆ” ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ದಾಳಿಗೊಳಗಾಗುತ್ತಿರುವ ಪ್ರದೇಶದಲ್ಲಿರುವ ಜನರನ್ನು ಮಿಲಿಟರಿ ಬಂಕರ್ಗಳಿಗೆ ಸ್ಥಳಾಂತರಿಸಿ, ರಕ್ಷಿಸಲಾಗುತ್ತಿದೆ. ಇದುವರೆಗೆ ನೂರಾರು ಜನರು ಸಾವನ್ನಪ್ಪಿದ್ದಾರೆ. ಯುದ್ಧ ಪೀಡಿತ ದೇಶದಲ್ಲಿರುವ ಭಾರತೀಯರು, ಮತ್ತೆ ತವರಿಗೆ ಮರಳಲು ಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.
The first batch of Indian students have left Chernivtsi for the Ukraine-Romania border
MEA Camp Offices are now operational in Lviv and Chernivtsi towns in western Ukraine. Additional Russian speaking officials are being sent to these Camp Offices. pic.twitter.com/OvRlqA8Q4t
— ANI (@ANI) February 25, 2022
ಇದನ್ನೂ ಓದಿರಿ: ಉಕ್ರೇನ್ ರಾಜಧಾನಿ ಮೇಲೆ ರಷ್ಯಾ ದಾಳಿ: ಬೃಹತ್ ಕಟ್ಟಡಕ್ಕೆ ಅಪ್ಪಳಿಸಿದ ಕ್ಷಿಪಣಿ- ಮೇಯರ್