ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವಾಗಿದೆಯೋ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳೂ ಅಷ್ಟೇ ಅವಶ್ಯವಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನಗರದಿಂದ ಅಯೋಧ್ಯೆಗೆ ಹೊರಟ ವಿಶೇಷ ರೈಲಿಗೆ ಭಾನುವಾರ ಹಸಿರು ನಿಶಾನೆ ತೋರಿ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಬಹುಸಂಖ್ಯಾತ ಹಿಂದೂಗಳಿಗೆ ಅತಿ ಅವಶ್ಯಕವಾಗಿವೆ. ಜೊತೆಗೆ ಅವರ ಜೀವನ ಪದ್ಧತಿಯೂ ಆಗಿವೆ. ಕಾಶಿ ಮತ್ತು ಮಥುರಾಗಳು ಈ ದೇಶದ ಅಸ್ಮಿತೆಯಾಗಿದ್ದು, ಇತರೆ ಧರ್ಮದವರು ಹಿಂದೂಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ದೇಶ 500ವರ್ಷಗಳ ದಾಸ್ಯದಿಂದ ಮುಕ್ತವಾಗಿದೆ. ಈ ಕಾರ್ಯವನ್ನು ಮಾಡಿದ ಕೇಂದ್ರ ಸರಕಾರಕ್ಕೆ ಅಭಿನಂದನೆ, ರಾಮನ ದರ್ಶನಕ್ಕೆ ರೈಲ್ವೇ ಇಲಾಖೆಯವರು ದೇಶದ ಮೂಲೆ-ಮೂಲೆಗಳಿಂದ ಅಯೋಧ್ಯೆಗೆ ತೆರಳಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಅವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಯಾ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವುದು ಎಲ್ಲ ಪಕ್ಷಗಳ ಅವಶ್ಯಕತೆಯಾಗಿದೆ. ಟಿಕೆಟ್ ನೀಡುವ ವಿಚಾರ ಪಕ್ಷದಲ್ಲಿ ಚರ್ಚೆ ಆಗುತ್ತಿದೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನೇ ಹೊರತು, ರಾಜಕಾರಣಿ ಅಲ್ಲ, ನನ್ನನ್ನು ಕೆಣಕಬೇಡಿ. ಪಕ್ಷದ ಬೆಳವಣಿಗೆಯಲ್ಲಿ ನಾನೂ ಒಬ್ಬ. ನಾನು ಎಲ್ಲಿಗೆ ಹೋಗುತ್ತೇನೆ, ಎಲ್ಲಿಗೆ ಬರುತ್ತೇನೆ ಎಂಬುದನ್ನೂ ಕೇಳಬೇಡಿ ಎಂದು ಹೇಳಿದ್ದಾರೆ.
ಇದನ್ನು ಓದಿ: ರೈತರ ‘ದಿಲ್ಲಿ ಚಲೋ’: 2 ಕ್ರೀಡಾಂಗಣಗಳನ್ನು ಜೈಲನ್ನಾಗಿ ಸಿದ್ಧಪಡಿಸಿದ ಬಿಜೆಪಿ ಸರಕಾರ!