ಮುಂಬೈನ ನಿರ್ಗಮಿತ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಗೃಹ ಸಚಿವರು “ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದಾರೆ” ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯ ಬಳಿ ಪತ್ತೆಯಾದ ಸ್ಫೋಟಕ ಕಾರಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧದ ತನಿಖೆಯಲ್ಲಿ, ಅಸಮರ್ಪಕ ತನಿಖೆ ಎಂದು ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳಕ್ಕೆ ವರ್ಗಾಯಿಸಲಾಗಿದೆ.
“ಮುಂಬೈ ಪೊಲೀಸರ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಮಹಾರಾಷ್ಟ್ರದ ಗೌರವಾನ್ವಿತ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ತಮ್ಮ ಅಧಿಕೃತ ನಿವಾಸ ದಯಾನೇಶ್ವರಕ್ಕೆ ಕರೆದಿದ್ದರು. ಗೃಹ ಸಚಿವರು ಹಣ ಸಂಗ್ರಹಿಸಲು ಪದೇ ಪದೇ ಸೂಚನೆ ನೀಡುತ್ತಿದ್ದರು” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಅಂಬಾನಿಗಾಗಿ NIA ತನಿಖೆ – ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ
“ಮಾನ್ಯ ಗೃಹ ಸಚಿವರು ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿಗಳನ್ನು ಸಂಗ್ರಹಿಸುವ ಗುರಿ ನೀಡಿದ್ದರು. ಗುರಿ ಸಾಧಿಸಲು, ಮಾನ್ಯ ಗೃಹ ಸಚಿವರು ವಾಜೆ ಅವರಿಗೆ ಸುಮಾರು 1,750 ಬಾರ್, ರೆಸ್ಟೋರೆಂಟ್ ಮತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಳ್ಳಲು ಹೇಳಿದ್ದರು. ಮುಂಬೈನಲ್ಲಿ ಮತ್ತು ಪ್ರತಿಯೊಂದರಿಂದ ತಲಾ 2-3 ಲಕ್ಷವನ್ನು ಸಂಗ್ರಹಿಸಿದರೆ, ಮಾಸಿಕ-40-50 ಕೋಟಿ ಸಂಗ್ರಹವನ್ನು ಸಾಧಿಸಬಹುದಾಗಿದೆ. ಉಳಿದ ಸಂಗ್ರಹವನ್ನು ಇತರರಿಂದ ಮಾಡಬಹುದೆಂದು ಮಾನ್ಯ ಗೃಹ ಸಚಿವರು ಸೂಚಿಸಿದ್ದರು” ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ.
“ವಾಜೆ ಅದೇ ದಿನ ನನ್ನ ಕಚೇರಿಗೆ ಬಂದು ಎಲ್ಲವನ್ನು ನನಗೆ ತಿಳಿಸಿದರು. ಈ ಚರ್ಚೆಯಿಂದ ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಯೋಚಿಸುತ್ತಿದ್ದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪವನ್ನು ಸುಲ್ಳೂ ಎಂದಿರುವ ಗೃಹ ಸಚಿವ ಅನಿಲ್ ದೇಶ್ಮುಖ್, ಮಾನನಷ್ಟ ಮೊಕ್ಕದಮೆ ಹೂಡುವುದಾಗಿ ತಿಳಿಸಿದ್ದಾರೆ.
परमबिर सिंग यांनी स्वतःला वाचवण्यासाठी तसेच पुढच्या कायदेशीर कारवाई पासून स्वतःचा बचाव करण्यासाठी हा खोटा आरोप केला आहे.
— ANIL DESHMUKH (@AnilDeshmukhNCP) March 20, 2021
“ಪರಮ್ ಬೀರ್ ಸಿಂಗ್, ತನ್ನನ್ನು ಉಳಿಸಿಕೊಳ್ಳಲು ಈ ಸುಳ್ಳು ಆರೋಪವನ್ನು ಮಾಡಿದ್ದಾರೆ. ಮುಂದಿನ ಕಾನೂನು ಕ್ರಮಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಇಂತಹ ಮಾತುಗಳನ್ನು ಆಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ: ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಎನ್ಐಎ ವಶಕ್ಕೆ