Homeನ್ಯಾಯ ಪಥಹತಾಶ ಹೇಳಿಕೆಗಳು ಸೂಚಿಸುತ್ತಿವೆಯೇ ಮೋದಿ ಅವನತಿ!?

ಹತಾಶ ಹೇಳಿಕೆಗಳು ಸೂಚಿಸುತ್ತಿವೆಯೇ ಮೋದಿ ಅವನತಿ!?

- Advertisement -
 | ಮುತ್ತುರಾಜು |
ಹೊರಗಡೆ ಜನರನ್ನು ಮಾತಾಡಿಸಿದರೆ, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರ ಅಬ್ಬರ ನೋಡಿದರೆ ಖಂಡಿತ ಮೋದಿ ಅಲೆ ಇನ್ನು ಇದೆ ಎಂದು ಅನ್ನಿಸುತ್ತಾದರೂ ಮೋದಿಯವರ ಇತ್ತೀಚಿಗಿನ ಹೇಳಿಕೆಗಳನ್ನು ಗಮನಿಸಿದರೆ ಅವರು ಬಸವಳಿದಂತೆ ಕಾಣುತ್ತಿದೆ. ಹೌದು ಮೋದಿ ನಿಜವಾಗಿಯೂ ಒತ್ತಡದಲ್ಲಿದ್ದಾರೆ. ತಾನು ಮತ್ತೊಮ್ಮೆ ಪ್ರಧಾನಿ ಪಟ್ಟ ಏರುವುದು ಉಳಿದವರಿಗಿರಿಲಿ ಸ್ವತಃ ಮೋದಿಗೆ ಡೌಟ್ ಅನ್ನಿಸಿಬಿಟ್ಟಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2009ರಲ್ಲಿ ಎರಡನೇ ಬಾರೀ ಪ್ರಧಾನಿಯಾದಾಗ ಕಾಂಗ್ರೆಸ್ ಪಕ್ಷವು 2004ರಲ್ಲಿ ಗೆದ್ದಿದ್ದಕ್ಕಿಂತ 60 ಹೆಚ್ಚುವರಿ ಸೀಟುಗಳನ್ನು ಗೆದ್ದಿತ್ತು. ಆದರೆ ಭಾರೀ ಜನಪ್ರಿಯತೆಯಲ್ಲಿ ಅಲೆಯಲ್ಲಿ ತೇಲಿಬಂದು ಪ್ರಧಾನಿಯಾದ ಮೋದಿ ಕೇವಲ 5 ವರ್ಷಗಳಲ್ಲಿ ಮತ್ತೆ ಪ್ರಧಾನಿಯಾಗುವುದು ಅನುಮಾನ ಎಂಬಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. 
ಮೋದಿ ಒಬ್ಬ ಅಗ್ರೆಸ್ಸಿವ್ ಮನುಷ್ಯ. ಅದಕ್ಕಾಗಿಯೇ ಅವರ ಅಭಿಮಾನಿಗಳು ಅವರನ್ನು ಹೊತ್ತು ಮೆರೆಸುತ್ತಾರೆ. ಒಂದುವೇಳೆ ಮೋದಿಯವರು ತಪ್ಪು ಮಾಡಿದರೂ ಸಹ ಅದು ನಮ್ಮ ಒಳ್ಳೆಯದಕ್ಕೆ ಎಂದು ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಾರೆ. ಈ ಅಭಿಮಾನದ ಹೊಳೆಯಲ್ಲಿ ಮಿಂದಿರುವ ಇಂತಹ ಮೋದಿಗೆ ಹೊಂದಾಣಿಕೆ ಎಂಬುದು ಕಷ್ಟ. ನೋಟು ಅಮಾನ್ಯೀಕರಣ, ಜಿ.ಎಸ್.ಟಿ ಜಾರಿ ಮುಂತಾದ ಸಂದರ್ಭಗಳಲ್ಲಿ ಉಳಿದ ಸಹದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇವರು ಕೈಗೊಂಡ ನಿರ್ಣಯಗಳ ಹಿನ್ನೆಲೆಯಲ್ಲಿ ಸರ್ವಾಧಿಕಾರಿ ಮನಸ್ಥಿತಿಯು ಇದೆ ಅನ್ನಬಹುದು. ಹಾಗಾಗಿ ಒಂದುವೇಳೆ ಬಿಜೆಪಿಗೆ ಸ್ಪಷ್ಟ ಬಹುಮತ ಬರದೇ ಹೋದಲ್ಲಿ ದುರ್ಬಲ ಎನ್‍ಡಿಎ ಸರ್ಕಾರ ರಚಿಸುವ ಸಂದರ್ಭ ಬಂದರೆ ಬಹಳಷ್ಟು ಜನ ಮೋದಿಯ ಈ ವ್ಯಕ್ತಿತ್ವವನ್ನು ಒಪ್ಪುವುದಿಲ್ಲ. ಹಾಗಾಗಿ ಆರ್‍ಎಸ್‍ಎಸ್ ಪ್ಲಾನ್ ಬಿ ಅಡಿಯಲ್ಲಿ ನಿತಿನ್ ಗಡ್ಕರಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡುತ್ತಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ.
ಇದೆಲ್ಲವೂ ಮೋದಿಯವರ ನಿದ್ದೆಗೆಡಿಸಿದೆ. ಹಾಗಾಗಿ ಮೋದಿಯವರು ತಮ್ಮ ಭಾಷಣ, ನಡೆ ನುಡಿಗಳಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದಾರೆ. ಅವು ಯಾವುವು ಎಂಬುದನ್ನು ಒಂದೊಂದಾಗಿ ನೋಡೋಣ.
1. ಬಾಲಾಕೋಟ್ ದಾಳಿಯ ಸಾಕ್ಷಿ ಕೇಳುವವರದು ಭಾರತೀಯ ರಕ್ತವಲ್ಲ: 
ಫೆಬ್ರವರಿ 14ರ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 28ರಂದು ಪಾಕ್‍ನ ಬಾಲಾಕೋಟ್‍ನ ಮೇಲೆ ವಾಯುದಾಳಿ ಮಾಡಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆಂದು ಮೋದಿ ಹೇಳಿದರು. ಇದನ್ನು ಎಲ್ಲರೂ ಕೊಂಡಾಡಿದರೂ ಸಹ ಇದರ ಕುರಿತು ಕೆಲವು ಸಂಶಯಗಳನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ಬಾಲಕೋಟ್‍ನಲ್ಲಿ ಅಂತ ದಾಳಿ ನಡೆದೇ ಇಲ್ಲ ಬೇಕಾದರೆ ಬನ್ನಿ ತೋರಿಸುತ್ತೇವೆ ಎಂದು ಪಾಕ್ ಪ್ರಧಾನಿ ಹೇಳಿದ್ದರು. ಹಾಗಾದರೆ ನಿಜವಾಗಿಯೂ ನಡೆದಿರುವುದೇನು ಎಂಬುದರ ಕುರಿತು ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು. ಇದಕ್ಕೆ ಮೋದಿ ಏನು ಮಾಡಬೇಕು? ಬಾಲಾಕೋಟ್ ದಾಳಿಯ ಸಾಕ್ಷಿ ಕೇಳುವವರದು ಭಾರತೀಯ ರಕ್ತವಲ್ಲ ಎಂದು ಸಾರಿಬಿಟ್ಟರು. ಆಮೂಲಕ ವಿರೋಧಿಗಳ ಬಾಯಿ ಮುಚ್ಚಲು ಪ್ರಯತ್ನಿಸಿದರೆ ವಿನಾಃ ಪಾರದರ್ಶಕತೆ ಮೆರೆಯಲಿಲ್ಲ.
2. ಮಾರ್ಚ್ 27ರಂದು ಮೋದಿಯವರು 10.45ಕ್ಕೆ ದೇಶವನ್ನುದ್ದೇಶಿ ಮಾತನಾಡುತ್ತೇನೆ ಎಲ್ಲರೂ ನೋಡಿ ಎಂದು ಅನೌನ್ಸ್ ಮಾಡಿದರು. ಎಲ್ಲರಲ್ಲೂ ಭಯ, ಕಾತರ, ಕುತೂಹಲ ಮೂಡಿದ್ದವು. ಕೊನೆಗೂ 11.40 ವೇಳೆಗೆ ಮಾತಾಡಿದ ಅವರು ಮಿಷನ್ ಶಕ್ತಿ ಎಸ್ಯಾಟ್ ಉಪಗ್ರಹ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಇದನ್ನು ಹೇಳಬೇಕಿರುವುದು ವಿಜ್ಞಾನಿಗಳಲ್ಲವೇ? ಇದು 2012ರ ಯುಪಿಎ ಕಾಲದಲ್ಲೇ ಆರಂಭವಾಗಿತ್ತಲ್ಲವೇ ಎಂಬ ಪ್ರಶ್ನೆಗಳು ಮೂಡಿದವು. 
3. ನಿಮ್ಮ ಮೊದಲ ಮತವನ್ನು ಪುಲ್ವಾಮದಲ್ಲಿ ಹತರಾದ ಸೈನಿಕರಿಗೆ ಅರ್ಪಿಸಿ: ಮಹಾರಾಷ್ಟ್ರದ ಲಾತೂರ್‍ನಲ್ಲಿ ಚುನಾವಣಾ ಭಾಷಣದಲ್ಲಿ ಮೋದಿ ಉಲ್ಲೇಖಿಸಿದ ಮಾತಿದು. ಇದರಿಂದ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಮೋದಿ ಪರವಿರುವ ಚುನಾವಣಾ ಆಯೋಗವೇ ಸಾರಿ ಹೇಳಬೇಕಾಯಿತು. ಈ ಮಾತು ಆಡಬಾರದೆಂದು ಮೋದಿಗೆ ಗೊತ್ತಿಲ್ಲವೇ? 
4. ನಮೋ ಟಿವಿ, ಪಿಎಂ ನರೇಂದ್ರಮೋದಿ ಬಯೋಪಿಕ್: ತನ್ನ ಇಮೇಜ್ ಅನ್ನು ಹೆಚ್ಚಿಸಿಕೊಳ್ಳಲು ಸಿನಿಮಾ ಒಂದನ್ನು ಮಾಡಿಸುವ ಮಟ್ಟಕ್ಕೆ ಯಾವ ಪ್ರಧಾನಿಯೂ ಹೋಗಿರಲಿಲ್ಲ. ಅದನ್ನು ಚುನಾವಣೆ ನಡೆಯುತ್ತಿರುವಾಗಲೇ ಬಿಡುಗಡೆ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದು ಸಹ ಮೋದಿ ಬೆಂಬಲಿಗರಲ್ಲೇ ಗೊಂದಲ ಉಂಟುಮಾಡಿತು. ಆ ಸಿನೆಮಾವನ್ನು ಏಪ್ರಿಲ್ 5ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದರು. ನಂತರ 12ಕ್ಕೆ ಮುಂದೂಡಿದರು. ಪ್ರಕರಣ ಸುಪ್ರಿಂ ಕೋರ್ಟ್ ಮೆಟ್ಟಿಲೇರಿ ಹಗ್ಗಜಗ್ಗಾಟ ನಡೆದು ಬಿಡುಗಡೆ ಭಾಗ್ಯ ಲಭಿಸಲೇ ಇಲ್ಲ, ಮಾತ್ರವಲ್ಲ ಮೋದಿ ಮಾನವು ಕಳೆದುಹೋಯಿತು. ಇನ್ನು ದಿನದ 24 ತಾಸು ಮೋದಿ ಏನು ಮಾಡುತ್ತಾರೆ ಎಂಬುದನ್ನೇ ತೋರಿಸಲು ಚುನಾವಣಾ ಸಂದರ್ಭದಲ್ಲಿ ಹುಟ್ಟಿಕೊಂಡ ನಮೋ ಟಿ.ವಿ ಕೂಡ ಬ್ಯಾನ್ ಆಯಿತು. ಮೋದಿಯ ಮತ್ತೊಂದು ಆಸೆ ಕಮರಿತು. ಈ ಸರ್ಕಾರ ಉರಿ ಸರ್ಜಿಕಲ್ ದಾಳಿ ಕುರಿತು ಸಿನೆಮಾ ಮಾಡಿ ಬಿಡುಗಡೆ ಮಾಡಿ ಲಾಭ ಪಡೆದುಕೊಂಡಿದ್ದರ ಜೊತೆಗೆ ಆಕ್ಸಿಡೆಂಡಲ್ ಪ್ರೈಮ್ ಮಿನಿಸ್ಟರ್ ಎಂದು ವಿರೋಧ ಪಕ್ಷದ ಮುಖಂಡ ಮನಮೋಹನ್‍ಸಿಂಗ್ ಕುರಿತು ಅವಹೇಳನ ಸಿನೆಮಾ ಸಹ ತಯಾರಿಸಿ ಬಿಡುಗಡೆ ಮಾಡುವ ಮಟ್ಟಕ್ಕೆ ಇಳಿದಿತ್ತು.
5. ನಿಮ್ಮ 40 ಶಾಸಕರು ನನ್ನೊಡನೆ ಸಂಪರ್ಕದಲ್ಲಿದ್ದಾರೆ.: ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಉದ್ದೇಶಿಸಿ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದ ಮೋದಿಯವರು ಆಡಿದ ಅಣಿಮುತ್ತು. ಅಂದರೆ ಪ್ರಧಾನಿ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ಜನಾದೇಶ ಪಡೆದ ಸ್ಥಿರ ಸರ್ಕಾರವನ್ನು ಉರುಳಿಸಲು ಬಹಿರಂಗವಾಗಿ ಕುದುರೆ ವ್ಯಾಪಾರಕ್ಕಿಳಿದ ಪರಿ. ಅಂದರೆ ಮೋದಿಯವರಿಗೆ ಮಾತನಾಡುವ ಆವೇಗದಲ್ಲಿ ಎಲ್ಲವನ್ನು ಹೇಳಿಬಿಡುತ್ತಾರೆ ಎಂಬುದು ತಿಳಿದುಹೋಯಿತು.
6. ಮೋದಿ ವಿರುದ್ಧ ಸ್ಪರ್ಧಿಸಿದ್ದ 71 ಜನರ ನಾಮಪತ್ರ ತಿರಸ್ಕೃತ: ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲು ರೈತರು, ಮಾಜಿ ಯೋಧ, ಕನ್ನಡಿಗ ಸೇರಿದಂತೆ 102 ಜನ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಬರೋಬ್ಬರಿ 71 ಜನರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಇದರಲ್ಲಿ ದಕ್ಷಿಣ ಕನ್ನಡದ ಪತ್ರಕರ್ತ ಯು.ಪಿ ಶಿವಾನಂದ್‍ರವರ ನಾಮಪತ್ರ ವಾರಣಾಸಿಯಲ್ಲಿ ತಿರಸ್ಕøತಗೊಂಡರೆ ಅವರು ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಸಲ್ಲಿಸಿದ್ದ ನಾಮಪತ್ರ ಪುರಸ್ಕøತಗೊಂಡಿದೆ! ಇದರಿಂದ ಚುನಾವಣಾ ಆಯೋಗದ ಮೇಲೆ ದೊಡ್ಡ ಮಟ್ಟದ ಅಸಮಾಧಾನ ಮೂಡಿತ್ತಲ್ಲದೇ ಅದು ಮೋದಿ ಪಕ್ಷಪಾತಿ ಎಂಬ ಟೀಕೆಗೂ ಒಳಗಾಯಿತು. 
7. “ನಿಮ್ಮ ತಂದೆ ನಂಬರ್ ವನ್ ಭ್ರಷ್ಟ ಎನಿಸಿಕೊಂಡೇ ಕೊನೆಯುಸಿರೆಳೆದರು”. ಇದು ರಾಹುಲ್ ಗಾಂಧಿಯನ್ನುದ್ದೇಶಿಸಿ ಮೋದಿ ಹೇಳಿದ ಮಾತುಗಳು. ಇಷ್ಟು ದಿನ ನನಗೆ ಕೆಲಸ ಮಾಡಲಿಕ್ಕೆ ನೆಹರು ಬಿಡುತ್ತಿಲ್ಲ ಎಂದು ಟ್ರೋಲ್‍ಗೆ ಒಳಗಾಗಿದ್ದ ಮೋದಿ ದಿವಂಗತರಾಗಿರುವ ರಾಜೀವ್ ಗಾಂಧಿಯವರನ್ನು ಅಖಾಡಕ್ಕೆ ಎಳೆತಂದಿದ್ದಾರೆ. ರಫೇಲ್ ಮೇಲಿನ ಭ್ರಷ್ಟಾಚಾರದ ಆರೋಪ ಮೋದಿ ಮೇಲಿರುವುದರಿಂದ ಅದನ್ನು ತಪ್ಪಿಸಿಕೊಳ್ಳಲು ಇಷ್ಟೊಂದು ಕೆಳಮಟ್ಟದ ಹೇಳಿಕೆ ನೀಡುವ ಮಟ್ಟಕ್ಕೆ ಇಳಿದಿದೆ ಮೋದಿ ಮನಸ್ಥಿತಿ. 
8. ಕಾಂಗ್ರೆಸ್‍ನವರು ವಿಡಿಯೋ ಗೇಮ್ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಅಷ್ಟೇ: ಪದೇ ಪದೇ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದನ್ನು ಮೋದಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನಮಗೆ ಗೊತ್ತು. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಪಕ್ಷವೂ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಡೆಸಿದ ಸರ್ಜಿಕಲ್ ಸ್ಟ್ರೈಕ್‍ನ ವಿವರ ಮತ್ತು ದಿನಾಂಕವನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಮೋದಿ ಕೊಟ್ಟ ಪ್ರತಿಕ್ರಿಯೆ ಬಾಲಿಶವಾಗಿತ್ತು. ಕಾಂಗ್ರೆಸ್‍ನವರು ವಿಡಿಯೋ ಗೇಮ್ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಅಷ್ಟೇ ಎಂದು ಗೇಲಿ ಮಾಡಿದರು. ಇದು ಸೈನಿಕರಿಗೆ ಮೋದಿ ಮಾಡುವ ಅವಮಾನ ಎಂದು ಕಾಂಗ್ರೆಸ್ ಬಗೆಯಿತು. ಮೋದಿಗೆ ಯಾರಾದರೂ ಸಾಕ್ಷಿ ಕೇಳಿದರೆ ಅವರು ದೇಶದ್ರೋಹಿಗಳು. ಅದೇ ಕಾಂಗ್ರೆಸ್ ಮಾಡಿದ ಸಾಧನೆಗಳ ಬಗ್ಗೆ ಮೋದಿ ಸಾಕ್ಷಿ ಕೇಳಿದರೆ ಏನದು? ಇದು ಯಾವ ಸೀಮೆಯ ನ್ಯಾಯ?
9. ಕಾಂಗ್ರೆಸ್ ನನ್ನನ್ನು ಕೊಲ್ಲಲು ಬಯಸಿದೆ:
ಒಂದು ಕಡೆ ವಿತ್ತಸಚಿವ ಅರುಣ್ ಜೈಟ್ಲಿ ಭಾರತವು ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿದೆ ಎಂಬ ಹೇಳಿಕೆ ನೀಡುತ್ತಾರೆ. ಆದರೆ ಮೋದಿ ಮಾತ್ರ ಕಾಂಗ್ರೆಸ್ ನನ್ನನ್ನು ಕೊಲ್ಲಲು ಬಯಸಿದೆ, ನನ್ನ ಜೀವ ಅಪಾಯದಲ್ಲಿದೆ ಎಂದು ಅವಲತ್ತುಕೊಳ್ಳುತ್ತಾರೆ. ಇದು ಏನನ್ನು ಸೂಚಿಸುತ್ತದೆ? ಮೋದಿಗೆ ಸೋಲಿನ ಭಯ ಆವರಿಸಿದೆ ಎಂಬುದರ ಸ್ಪಷ್ಟ ಸಂದೇಶವಿದು. 2017ರ ಡಿಸೆಂಬರ್‍ನಲ್ಲಿ ನಡೆದ ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೂ ಸಹ ಮೋದಿ ಇದೇ ಪಟಾಕಿ ಹಾರಿಸಿದ್ದರು. ಮೋದಿ ಅಲೆ ಇಲ್ಲದೇ ಬಿಜೆಪಿ ಸೋಲಿನ ಸುಳಿಗೆ ಸಿಲುಕಿರುವುದನ್ನು ಮೋದಿ ಗಮನಿಸಿದ್ದರು. ಮೋದಿ ರ್ಯಾಲಿಗಳಿಗೆ ಜನವೇ ಬರುತ್ತಿರಲಿಲ್ಲ. ಜಿಗ್ನೇಶ್, ಅಲ್ಪೇಶ್ ಮತ್ತು ಹಾರ್ದಿಕ್ ಪಟೇಲ್ ಎಂಬ ಮೂವರು ಮೋದಿಗೆ ಸೆಡ್ಡು ಹೊಡೆಸಿದ್ದರು. ಆಗ ಮೋದಿ ಬಿಟ್ಟ ಬಾಣ ವರ್ಕ್‍ಔಟ್ ಆಯಿತು. ಅದೇನೆಂದರೆ ನನ್ನನ್ನು ಕೊಲ್ಲಿಸಲು ಕಾಂಗ್ರೆಸ್ ಪಾಕಿಸ್ತಾನಕ್ಕೆ ಸುಪಾರಿ ಕೊಟ್ಟಿದೆ ಎಂದಿದ್ದರು. ಈ ಹೇಳಿಕೆಯಿಂದ ಸ್ವಲ್ಪ ಉಸಿರು ಪಡೆದ ಬಿಜೆಪಿ ಕೂದಲೆಳೆ ಅಂತರದಿಂದ ಗೆದ್ದು ಸರಳ ಬಹುಮತ ಪಡೆದಿತ್ತು. ಈಗಲೂ ಅದೇ ಕಾರ್ಡ್ ಪ್ಲೆ ಮಾಡಲು ಮೋದಿ ಮುಂದಾಗಿದ್ದಾರೆ.
ಇನ್ನು ಹತ್ತಾರು ಹೇಳಿಕೆಗಳು ಇದೇ ದಾಟಿಯಲ್ಲಿವೆ. ಒಟ್ಟಿನಲ್ಲಿ ಈ ಚುನಾವಣೆ ಗೆಲ್ಲಲು ಮೋದಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ದರಾಗಿದ್ದಾರೆ. ಏಕೆಂದರೆ ಅವರು ದಿನೇ ದಿನೇ ಕುಸಿಯುತ್ತಿರುವುದು ಅವರಿಗೆ ತಿಳಿದಿದೆ. ಸತತ ಜಯದ ಅಲೆಯಲ್ಲಿದ್ದಾಗ ಕರ್ನಾಟಕ ಮತ್ತು ಪಂಜಾಬ್‍ನಲ್ಲಿ ಸರ್ಕಾರ ರಚಿಸಲು ಆಗದಿದ್ದುದು ಅವರ ಮೊದಲ ಸೋಲು. ನಂತರ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿನ ಅವರ ಹೀನಾಯ ಸೋಲು ಮತ್ತು ಕಾಂಗ್ರೆಸ್‍ನ ಗೆಲುವು ಅವರ ನಿದ್ದೆಗೆಡಿಸಿದೆ. ಇದರಿಂದ ಮೋದಿ ಮತ್ತು ಬಿಜೆಪಿ 200 ದಾಟುವುದಿಲ್ಲ ಅಂತ ಬಿಜೆಪಿಯೊಳಗಿನವರೇ ಹೇಳುತ್ತಿದ್ದಾರೆ. ಇದು ಮೋದಿಯ ಸರ್ವಾಧಿಕಾರಿ ಮನಸ್ಸಿಗೆ ಪ್ರತಿ ಕ್ಷಣ ಚುಚ್ಚುತ್ತಿದೆ. ಹಾಗಾಗಿ ಅವರು ಇಂಥಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಅವರು ಅವನತಿಯತ್ತಲೇ ಸಾಗುತ್ತಿದ್ದಾರೆ..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...