Homeಮುಖಪುಟಮೊರ್ಬಿ ಸೇತುವೆ ತಂತಿಗಳು ತುಕ್ಕು ಹಿಡಿದಿದ್ದವು; ಎಸ್‌ಐಟಿ ವರದಿ ಹೇಳಿದ್ದೇನು?

ಮೊರ್ಬಿ ಸೇತುವೆ ತಂತಿಗಳು ತುಕ್ಕು ಹಿಡಿದಿದ್ದವು; ಎಸ್‌ಐಟಿ ವರದಿ ಹೇಳಿದ್ದೇನು?

- Advertisement -
- Advertisement -

ಗುಜರಾತ್‌ನ ಮೊರ್ಬಿ ಸೇತುವೆಯ ಅರ್ಧದಷ್ಟು ತಂತಿಗಳು ತುಕ್ಕು ಹಿಡಿದಿದ್ದವು. ಹಳೆಯ ಸಸ್ಪೆಂಡರ್‌ಗಳನ್ನು ದುರಸ್ತಿ ವೇಳೆ ಹೊಸದರೊಂದಿಗೆ ಬೆಸುಗೆ ಹಾಕಲಾಗಿತ್ತು ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ತಿಳಿಸಿದೆ.

ಮೊರ್ಬಿ ಸೇತುವೆ ದುರಂತದ ಕುರಿತು ತನಿಖೆ ನಡೆಸಲು ಗುಜರಾತ್‌ ಸರ್ಕಾರ ನೇಮಿಸಿದ್ದ ಎಸ್‌ಐಟಿ, “ದುರಸ್ತಿಯಲ್ಲಿ ಆಗಿರುವ ಲೋಪದೋಷ”ಗಳನ್ನು ಪಟ್ಟಿ ಮಾಡಿದೆ.

ಮಚ್ಚು ನದಿಯ ಮೇಲಿನ ತೂಗು ಸೇತುವೆಯನ್ನು ಕಳೆದ ಅಕ್ಟೋಬರ್‌ನಲ್ಲಿ ದುರಸ್ತಿ ಮಾಡಲಾಗಿತ್ತು. ಆ ನಂತರ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಳ್ಳಲಾಗಿತ್ತು. ಸೇತುವೆಯನ್ನು ತೆರೆದ ನಾಲ್ಕು ದಿನಗಳ ನಂತರ ದುರಂತ ಘಟಿಸಿ, 141 ಜನರು ಸಾವನ್ನಪ್ಪಿಸಿದ್ದರು.

“ಮೊರ್ಬಿ ಸೇತುವೆ ಘಟನೆಯ ಪ್ರಾಥಮಿಕ ವರದಿ”ಯನ್ನು ಡಿಸೆಂಬರ್ 2022ರಲ್ಲಿ ಎಸ್‌ಐಟಿ ಸಲ್ಲಿಸಿದೆ. ಈ ವರದಿಯನ್ನು ಇತ್ತೀಚೆಗೆ ರಾಜ್ಯದ ನಗರಾಭಿವೃದ್ಧಿ ಇಲಾಖೆಯು ಮೊರ್ಬಿ ಪುರಸಭೆಯೊಂದಿಗೆ ಹಂಚಿಕೊಂಡಿದೆ.

ಐಎಎಸ್ ಅಧಿಕಾರಿ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್, ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು ಈ ಎಸ್‌ಐಟಿಯ ಸದಸ್ಯರಾಗಿದ್ದಾರೆ.

ಒರೆವಾ ಗ್ರೂಪ್ ನಡೆಸಿದ ದುರಸ್ತಿ ಕಾರ್ಯದಲ್ಲಿ ಗಂಭೀರ ಲೋಪಗಳಾಗಿರುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಅಕ್ಟೋಬರ್ 30ರ ಸಂಜೆ ಕೇಬಲ್ ಕಟ್‌ ಆಗುವ ಮೊದಲೇ ಒಂದು ಕೇಬಲ್‌ ತುಕ್ಕು ಹಿಡಿದಿತ್ತು. ಅದರ ಅರ್ಧದಷ್ಟು ತಂತಿಗಳು ಈಗಾಗಲೇ ಮುರಿದಿದ್ದವು ಎಂದಿದೆ ವರದಿ.

ಪ್ರತಿಯೊಂದು ಕೇಬಲ್ ಅನ್ನು ಏಳು ಎಳೆಗಳಿಂದ ರಚಿಸಲಾಗಿದೆ, ಪ್ರತಿಯೊಂದೂ ಏಳು ಉಕ್ಕಿನ ತಂತಿಗಳನ್ನು ಒಳಗೊಂಡಿದೆ. ಈ ಕೇಬಲ್ ಅನ್ನು ರೂಪಿಸಲು ನಲವತ್ತೊಂಬತ್ತು ತಂತಿಗಳನ್ನು ಏಳು ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ ಎಂದು ಎಸ್‌ಐಟಿ ವರದಿ ತಿಳಿಸಿದೆ.

“49 ತಂತಿಗಳಲ್ಲಿ (ಆ ಕೇಬಲ್‌ನ) 22 ತಂತಿಗಳು ತುಕ್ಕು ಹಿಡಿದಿರುವುದನ್ನು ಗಮನಿಸಲಾಗಿದೆ. ಘಟನೆಯ ಮೊದಲೇ ಆ ತಂತಿಗಳು ಈಗಾಗಲೇ ಮುರಿದುಹೋಗಿರಬಹುದು. ಉಳಿದ 27 ತಂತಿಗಳು ಇತ್ತೀಚೆಗೆ ಮುರಿದು ಬಿದ್ದಿವೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನವೀಕರಣ ಕಾರ್ಯದ ಸಮಯದಲ್ಲಿ, “ಹಳೆಯ ಸಸ್ಪೆಂಡರ್‌ಗಳನ್ನು (ಜನರು ನಡೆದಾಡುವ ಹಾಸಿಗೂ ಮೇಲಿನ ಕೇಬಲ್‌ಗೂ ಸಂಪರ್ಕ ಕಲ್ಪಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ” ಎಂದು ವರದಿ ಹೇಳಿದೆ. ಹಾಗಾಗಿ ಸಸ್ಪೆಂಡರ್‌ಗಳು ಬೇರೆಯ ರೀತಿಯಲ್ಲಿ ವರ್ತಿಸಲಾರಂಭಿಸಿವೆ. ಈ ರೀತಿಯ ಸೇತುವೆಗಳಲ್ಲಿ ಭಾರವನ್ನು ತಡೆಯಬೇಕಾದರೆ ಸಿಂಗಲ್ ರಾಡ್ ಸಸ್ಪೆಂಡರ್‌ಗಳನ್ನು ಬಳಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಮೊರ್ಬಿ ಸ್ಥಳೀಯ ಸಂಸ್ಥೆಯು, ಒರೆವಾ ಗ್ರೂಪ್‌ಗೆ ನೀಡಲಾದ ಒಪ್ಪಂದದ ಕುರಿತು ಎರಡು ಪ್ರತ್ಯೇಕ ನಿರ್ಣಯಗಳನ್ನು ಈ ತಿಂಗಳ ಆರಂಭದಲ್ಲಿ ಅಂಗೀಕರಿಸಿತು. ಒಂದು ನಿರ್ಣಯವನ್ನು ಪೌರಕಾರ್ಮಿಕರ ಪದಾಧಿಕಾರಿಗಳು ಮಂಡಿಸಿದರೆ, ಮತ್ತೊಂದನ್ನು ಕೌನ್ಸಿಲರ್‌ಗಳು ಮಂಡಿಸಿದರು. ಒರೆವಾ ಗ್ರೂಪ್‌ಗೆ ನವೀಕರಣ ಗುತ್ತಿಗೆಯನ್ನು ನೀಡಿರುವ ಒಪ್ಪಂದದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಎರಡೂ ಗುಂಪುಗಳು ಹೇಳಿಕೊಂಡಿವೆ.

ಮೊರ್ಬಿ ಸೇತುವೆಯನ್ನು ದುರಸ್ತಿ ಮಾಡುವ ಗುತ್ತಿಗೆಯನ್ನು ಒರೆವಾ ಗ್ರೂಪ್‌ಗೆ ಸ್ಥಳೀಯ ಪುರಸಭೆಯಿಂದ ಮಾರ್ಚ್ 2022 ರಲ್ಲಿ ನೀಡಲಾಗಿತ್ತು. ಒರೆವಾ ಸಂಸ್ಥೆಯೊಂದಿಗೆ ಎಂಒಯುಗೆ ಸಹಿ ಹಾಕಿದ ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್‌ಸಿನ್ಹ್ ಜಲಾ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ಒರೆವಾ ಗ್ರೂಪ್ ತನ್ನ ಅನುಮತಿಯಿಲ್ಲದೆ ಸೇತುವೆಯನ್ನು ಮತ್ತೆ ತೆರೆದಿದೆ ಎಂದು ನಾಗರಿಕ ಸಂಸ್ಥೆ ಈಗ ಹೇಳಿಕೊಂಡಿದೆ.

ಇದನ್ನೂ ಓದಿರಿ: ಮೊರ್ಬಿಗೆ ಭೇಟಿಗೆ 30 ಕೋಟಿ ರೂ ಖರ್ಚು ಟ್ವೀಟ್: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ

‌ಇದರ ನಡುವೆ ಸೇತುವೆ ಕುಸಿತ ಮತ್ತು ಅದರಿಂದ ಉಂಟಾದ ಅಪಾರ ಸಾವು ನೋವಿನ ಕುರಿತಾದ ಸ್ವಯಂ ಮೋಟೋ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಗುಜರಾತ್ ಹೈಕೋರ್ಟ್, “ಮೊದಲು ಟೆಂಡರ್ ಕರೆಯದೆ ಒರೆವಾ ಗುಂಪಿಗೆ ಹೇಗೆ ಗುತ್ತಿಗೆ ನೀಡಲಾಯಿತು?” ಎಂದು ಮೊರ್ಬಿ ಪುರಸಭೆಗೆ ಪ್ರಶ್ನಿಸಿದೆ.

ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನ್ನ ಆರೋಪಪಟ್ಟಿಯನ್ನು ಜನವರಿ ಕೊನೆಯಲ್ಲಿ ಸಲ್ಲಿಸಿದರು. ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಮತ್ತು ಇತರ ಒಂಬತ್ತು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ದುರಸ್ತಿ ಕಾರ್ಯದಲ್ಲಿ ಆಗಿರುವ ಹಲವಾರು ಸಮಸ್ಯೆಗಳನ್ನು ಎಸ್‌ಐಟಿ ಕಂಡುಹಿಡಿದಿತ್ತು. ಸೇತುವೆಯ ಮೇಲಿನ ಚಲನವಲನವನ್ನು ನಿಯಂತ್ರಿಸದ ಕಾರಣ ಮತ್ತು ಸೇತುವೆಯ ನವೀಕರಣದಲ್ಲಿ ಹಲವಾರು ವಿನ್ಯಾಸ ದೋಷಗಳು ಕಂಡುಬಂದಿರುವುದರಿಂದ ಪುರಸಭೆಯನ್ನೂ ಎಸ್‌ಐಟಿ ಪ್ರಶ್ನಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...