“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಕರಾಳತೆ ಹೆಚ್ಚಿನ ರೈತರಿಗೆ ಅರ್ಥವಾದರೆ ದೇಶದಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತದೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಕೃಷಿ ಕಾಯ್ದೆಗಳ ಬಗೆಗಿನ ವಿವರಗಳು ಹೆಚ್ಚಿನ ರೈತರಿಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ಅವರಿಗೆ ಅರ್ಥವಾದರೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಆರಂಭಗೊಳ್ಳುತ್ತವೆ. ದೇಶದಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತದೆ” ಎಂದು ಹೇಳಿದರು.
“ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿಯುತ್ತಿದೆ. ಏನು ನಡೆಯುತ್ತಿದೆ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ಗಮನಿಸುತ್ತಿದ್ದಾರೆ. ಕೇವಲ ಇಬ್ಬರಿಂದ ಮೂವರು ಉದ್ಯಮಿಗಳ ಹಿತ ಕಾಪಾಡುವುದಕ್ಕೋಸ್ಕರ ಪ್ರಧಾನಿ ಮೋದಿ ದೇಶವನ್ನು ನಡೆಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ ಎಂಬುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಯೋಗೇಂದ್ರ ಯಾದವ್ ಸೇರಿ 20 ರೈತ ಮುಖಂಡರಿಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್
ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಬುಧವಾರ, ಪ್ರಧಾನಿ ಮೋದಿಯ ಮೇಲೆ ನೇರ ವಾಗ್ದಾಳಿ ನಡೆಸಿದರು. “ಚೀನಾ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದ್ದರೂ ಸಹ 56 ಇಂಚಿನ ಎದೆಗೆ ಏನಾಗಿದೆ. ಯಾಕೆ ಯಾವುದೇ ನಿರ್ದಾಕ್ಷೀಣ್ಯ ಕ್ರಮಗಳನ್ನು ಕೈಗೊಂಡಿಲ್ಲ” ಎಂದು ಪ್ರಶ್ನಿಸಿದರು.
“ಪ್ರಧಾನಿ ಅಸಮರ್ಥರಾಗಿದ್ದಾರೆ. ಅವರ ವೈಫಲ್ಯಕ್ಕೆ ಆರ್ಎಸ್ಎಸ್ನಿಂದ ದೇಶದಲ್ಲಿ ಹರಡುತ್ತಿರುವ ದ್ವೇಷವೇ ಕಾರಣ. ಪ್ರಧಾನಿ ದೇಶವನ್ನು ಒಡೆದಿದ್ದಾರೆ ಮತ್ತು ದ್ವೇಷವನ್ನು ಹರಡುತ್ತಿರುವುದರಿಂದಲೇ ಚೀನಿಯರು ದೇಶದೊಳಗೆ ನುಸುಳಲು ತೀರ್ಮಾನಿಸಿದ್ದಾರೆ. ಪ್ರಧಾನಿ ಈ ದೇಶವನ್ನು ದುರ್ಬಲಗೊಳಿಸಿದ್ದಾರೆ ಮತ್ತು ಅವರು ನಮ್ಮ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಎಂಬುದು ತಿಳಿಸಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಜಾರಿ ಮೂಲಕ ಪ್ರಧಾನಿ ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ನ 153 ಪ್ರಕರಣ ದಾಖಲು: ಕೇಂದ್ರ ಆರೋಗ್ಯ ಸಚಿವ