Homeಮುಖಪುಟಮುಂಬೈ: ಕಾನೂನು ಹೋರಾಟದ ಬಳಿಕ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ

ಮುಂಬೈ: ಕಾನೂನು ಹೋರಾಟದ ಬಳಿಕ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ

- Advertisement -
- Advertisement -

ಮುಂಬೈ: ಸುಮಾರು ಎರಡು ತಿಂಗಳ ಕಾಲ ನಡೆದ ಕಾನೂನು ಹೋರಾಟ ಮತ್ತು ಪೊಲೀಸರಿಂದ ಪದೇ ಪದೇ ಅನುಮತಿ ನಿರಾಕರಿಸಿದ ನಂತರ, ಆಗಸ್ಟ್ 20ರಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ “ಫ್ರೀ ಪ್ಯಾಲೆಸ್ತೀನ್” ಮತ್ತು “ನದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಸ್ವತಂತ್ರವಾಗಲಿದೆ” ಎಂಬ ಘೋಷಣೆಗಳನ್ನು ಕೂಗಲಾಯಿತು.

ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಗಳ ಸದಸ್ಯರು ಮತ್ತು ರಾಜಕೀಯ ಮುಖಂಡರು ಈ ಪ್ರತಿಭಟನೆಯಲ್ಲಿ ಒಗ್ಗೂಡಿದರು. ಇದು ಮುಂಬೈನಲ್ಲಿ ಡಿಸೆಂಬರ್ 2023ರ ನಂತರ ನಡೆದ ಮೊದಲ ದೊಡ್ಡ ಪ್ಯಾಲೆಸ್ತೀನ್ ಬೆಂಬಲ ಪ್ರತಿಭಟನೆಯಾಗಿದೆ.

ಈ ಪ್ರತಿಭಟನೆಯನ್ನು ಮೂಲತಃ ಜೂನ್ 18ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದರು. “ಭಾರತದ ವಿದೇಶಾಂಗ ನೀತಿಯೊಂದಿಗೆ ಸಂಘರ್ಷ” ಮತ್ತು “ಕಾನೂನು ಸುವ್ಯವಸ್ಥೆಗೆ ಭಂಗ” ಬರುವ ಸಾಧ್ಯತೆಯಿದೆ ಎಂದು ಕಾರಣ ನೀಡಿದರು. ಅನುಮತಿ ನಿರಾಕರಣೆಯ ಬೆನ್ನಲ್ಲೇ, ಅಧಿಕಾರಿಗಳು ಪ್ರಮುಖ ಮುಖಂಡರನ್ನು ಅವರ ಮನೆ ಮತ್ತು ಕಚೇರಿಗಳಿಂದ ವಶಕ್ಕೆ ಪಡೆದರು.

ಕಾನೂನು ಹೋರಾಟದ ಹಾದಿ

ಜುಲೈ ಮತ್ತು ಆಗಸ್ಟ್‌ನಲ್ಲಿ ಪೊಲೀಸರು ಹಲವು ಬಾರಿ ಅನುಮತಿ ನಿರಾಕರಿಸಿದ ಕಾರಣ, ಆಯೋಜಕರು ಬಾಂಬೆ ಹೈಕೋರ್ಟ್ ಮೊರೆ ಹೋದರು. ನ್ಯಾಯಾಧೀಶರು ಆರಂಭದಲ್ಲಿ ಅರ್ಜಿಯನ್ನು ವಜಾಗೊಳಿಸಿ, ದೇಶೀಯ ಸಮಸ್ಯೆಗಳ ಮೇಲೆ ಗಮನಹರಿಸಲು ಮತ್ತು “ದೇಶಭಕ್ತರಾಗಿರಲು” ಸೂಚಿಸಿದರು. ಆದಾಗ್ಯೂ, ಆಗಸ್ಟ್ 12ರಂದು ಪೊಲೀಸರು ತಮ್ಮ ಆಕ್ಷೇಪಣೆಗಳನ್ನು ಹಿಂಪಡೆದು, ಆಗಸ್ಟ್ 20ರಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಶಾಂತಿಯುತ ಸಭೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿದರು.

ಸಿಪಿಐ(ಎಂ) ಮುಂಬೈ ಪ್ರಧಾನ ಕಾರ್ಯದರ್ಶಿ ಮತ್ತು ಸಂಘಟಕರಲ್ಲೊಬ್ಬರಾದ ಶೈಲೇಂದ್ರ ಕಾಂಬ್ಳೆ ಈ ಬಗ್ಗೆ ಪ್ರತಿಕ್ರಿಯಿಸಿ, “ಇದು ಸರಳವಾದ ಬೆಂಬಲ ಸಭೆ. ಇದಕ್ಕೆ ಇಷ್ಟು ಸುದೀರ್ಘ ಕಾನೂನು ಹೋರಾಟ ಏಕೆ ಬೇಕಾಯಿತು? ಒಂದು ಸಣ್ಣ ಬೆಂಬಲ ಸಮಾವೇಶಕ್ಕೂ ತಿಂಗಳುಗಟ್ಟಲೆ ಕಾನೂನು ಹೋರಾಟ ನಡೆಸಬೇಕಾದರೆ, ಇದು ಸರ್ವಾಧಿಕಾರವಲ್ಲವೇ?” ಎಂದು ಪ್ರಶ್ನಿಸಿದರು.

ಪ್ರತಿಭಟನೆಯ ಧ್ವನಿ

ಈ ಪ್ರತಿಭಟನೆಯು ಸರ್ಕಾರಗಳು ತಮ್ಮ ನಿಲುವುಗಳನ್ನು ಬದಲಾಯಿಸುತ್ತಿದ್ದರೂ, ಜನರು ಪ್ಯಾಲೆಸ್ತೀನ್ ಪರವಾಗಿಯೇ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಿತು. ಕೈಯಲ್ಲಿ ಹಿಡಿದ ಫಲಕಗಳು ಮತ್ತು ಸಾಂಪ್ರದಾಯಿಕ ಪ್ಯಾಲೆಸ್ತೀನ್ ಶಿರೋವಸ್ತ್ರಗಳಾದ ಕೆಫಿಯೆಗಳು ತೀಕ್ಷ್ಣ ಸಂದೇಶಗಳನ್ನು ಸಾರುತ್ತಿದ್ದವು. ಫಲಕಗಳಲ್ಲಿ “ನೀವು ಮುಸ್ಲಿಮರಾಗಿರಬೇಕಿಲ್ಲ, ಪ್ಯಾಲೆಸ್ತೀನ್ ಪರ ನಿಲ್ಲಲು ಮಾನವರಾಗಿದ್ದರೆ ಸಾಕು,” “ಗಾಜಾದಲ್ಲಿ ನರಮೇಧ ನಿಲ್ಲಿಸಿ” ಮತ್ತು “ಮಕ್ಕಳನ್ನು ಕೊಲ್ಲುವುದು ಆತ್ಮರಕ್ಷಣೆ ಅಲ್ಲ” ಎಂಬ ಘೋಷಣೆಗಳು ರಾರಾಜಿಸಿದವು. ಇತರ ಫಲಕಗಳು “ವರ್ಣಭೇದ ನೀತಿಯ ಇಸ್ರೇಲ್ ಅನ್ನು ಬಹಿಷ್ಕರಿಸಿ,” “ಮೌನವೆಂದರೆ ಸಹಭಾಗಿತ್ವ” ಮತ್ತು “ಈಗಲೇ ಆಕ್ರಮಣ ಕೊನೆಗೊಳಿಸಿ” ಎಂದು ಕರೆ ನೀಡಿದವು. ಈ ಸಂದೇಶಗಳು ಪ್ಯಾಲೆಸ್ತೀನ್‌ಗೆ ಬೆಂಬಲವು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ, ಅದು ಮಾನವೀಯತೆ ಮತ್ತು ನ್ಯಾಯಕ್ಕಾಗಿರುವ ಹಂಚಿಕೆಯ ಬೇಡಿಕೆ ಎಂಬುದನ್ನು ಒತ್ತಿಹೇಳಿದವು.

ಪ್ರತಿಭಟನಾಕಾರರ ಆಕ್ರೋಶ ಮತ್ತು ಬೇಡಿಕೆಗಳು

ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವತಿಯೊಬ್ಬರು, “ನಾನು ಇಷ್ಟು ದಿನ ನನ್ನೊಳಗೆ ಇಟ್ಟುಕೊಂಡಿದ್ದ ನೋವನ್ನು ವ್ಯಕ್ತಪಡಿಸಲು ನನಗೆ ಅವಕಾಶ ಬೇಕಿತ್ತು, ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಕನಿಷ್ಠ ಈ ನರಮೇಧವನ್ನು ಖಂಡಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ಯಾಲೆಸ್ತೀನ್ ಮತ್ತು ಭಾರತದ ಧ್ವಜಗಳು ಒಟ್ಟಿಗೆ ಹಾರಿದವು, “ನಿಂದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಸ್ವತಂತ್ರವಾಗಲಿದೆ” ಮತ್ತು “ಸಾಮ್ರಾಜ್ಯಶಾಹಿತ್ವಕ್ಕೆ ಧಿಕ್ಕಾರ”ದಂತಹ ಘೋಷಣೆಗಳು ಪ್ರತಿಧ್ವನಿಸಿದವು. ಕಾರ್ಯಕರ್ತ ನಿಶಾಂತ್ ಬಂಗೇರಾ ಮಾತನಾಡಿ, “ವಿಶ್ವಾದ್ಯಂತ ಜನರು ಪ್ಯಾಲೆಸ್ತೀನ್‌ಗಾಗಿ ದನಿ ಎತ್ತುತ್ತಿದ್ದಾರೆ. ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್ ಪರವಾಗಿದ್ದರೂ, ಸರ್ಕಾರದ ಇಸ್ರೇಲ್ ಜೊತೆಗಿನ ಮೈತ್ರಿಯಿಂದಾಗಿ ಅಧಿಕೃತ ಬೆಂಬಲ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಮುಂಬೈನಂತಹ ನಗರಗಳಲ್ಲಿ ನಾಗರಿಕರು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳು ಮತ್ತು ಧಾರ್ಮಿಕ ಮುಖಂಡರು ಒಗ್ಗೂಡುವುದು ಭರವಸೆ ಮೂಡಿಸುತ್ತದೆ” ಎಂದು ಹೇಳಿದರು.

ಪ್ರತಿಭಟನಾಕಾರರು ಗಾಜಾದಲ್ಲಿ ನಡೆಯುತ್ತಿರುವ ನರಮೇಧವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಐಸಿಸಿ (ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ಹೊರಡಿಸಿರುವ ಬಂಧನ ವಾರೆಂಟ್‌ಗೆ ಅನುಗುಣವಾಗಿ ಕಠಿಣ ಅಂತರರಾಷ್ಟ್ರೀಯ ಹೊಣೆಗಾರಿಕೆಯನ್ನು ಜಾರಿಗೊಳಿಸಲು ಕರೆ ನೀಡಿದರು. ಭಾರತವು ಇಸ್ರೇಲ್‌ನೊಂದಿಗೆ ಎಲ್ಲಾ ರಾಜತಾಂತ್ರಿಕ, ಮಿಲಿಟರಿ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

ಪ್ರಮುಖ ವ್ಯಕ್ತಿಗಳ ಬೆಂಬಲ

ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟ್ವರ್ಧನ್, ನಿರ್ದೇಶಕ ಮತ್ತು ಚಿತ್ರಕಥೆಗಾರ ಸಯೀದ್ ಮಿರ್ಜಾ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್, ಮತ್ತು ನಟಿ ಸ್ವರಾ ಭಾಸ್ಕರ್ ಅವರು ಈ ಪ್ರತಿಭಟನೆಯಲ್ಲಿ ಭಾಷಣಕಾರರಾಗಿ ಭಾಗವಹಿಸಿದರು. ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ನಾಯಕರು ಹಾಗೂ ಸದಸ್ಯರು ಕೂಡ ಉಪಸ್ಥಿತರಿದ್ದರು. ಅವರ ಉಪಸ್ಥಿತಿಯು ಈ ಸಭೆಯು ಕೇವಲ ರಾಜಕೀಯ ಪ್ರದರ್ಶನವಲ್ಲ, ಆದರೆ ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧದ ಒಂದು ಪ್ರಮುಖ ನೈತಿಕ ಹೇಳಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಭಯದ ವಾತಾವರಣದ ವಿರುದ್ಧ ಪ್ರತಿಭಟನೆ

ಈ ರ್ಯಾಲಿ ಭಾರತದಲ್ಲಿ ಪ್ಯಾಲೆಸ್ತೀನ್ ಪರ ಚಳುವಳಿಗಳಿಗೆ ಆವರಿಸಿದ್ದ ಭಯದ ವಾತಾವರಣವನ್ನು ಸವಾಲಿಗೆ ಒಡ್ಡಿತು. ಇತ್ತೀಚಿನ ತಿಂಗಳುಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಕಿರುಕುಳಕ್ಕೊಳಪಡಿಸಿದ್ದರು ಮತ್ತು ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಎತ್ತಿದ್ದಕ್ಕಾಗಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.

ಬಿಡಿಎಸ್ (ಬಹಿಷ್ಕಾರ, ವಿನಿಯೋಗ, ನಿರ್ಬಂಧಗಳು) ಇಂಡಿಯಾದ ಕಾರ್ಯಕರ್ತೆ ಪೂಜಾ, “ಅಲಿಗಢದಲ್ಲಿ ತಲ್ಹಾ ಮನ್ನಾನ್‌ನಂತಹ ವಿದ್ಯಾರ್ಥಿಗಳ ವಿರುದ್ಧ ಪ್ಯಾಲೆಸ್ತೀನ್‌ಗೆ ಬೆಂಬಲ ತೋರಿಸಿದ್ದಕ್ಕಾಗಿ ಸುಮ್ಮನೆ ಪ್ರಕರಣ ದಾಖಲಿಸಲಾಗಿದೆ. ಪುಣೆಯಲ್ಲಿ ಬಿಡಿಎಸ್ ಇಂಡಿಯಾದ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗಸ್ಟ್ 20ರಂದು ಯಾರೂ ಪ್ಯಾಲೆಸ್ತೀನ್ ಬಗ್ಗೆ ಮಾತನಾಡಬಾರದು ಎಂಬ ಭಾವನೆ ಸೃಷ್ಟಿಯಾಗುತ್ತಿತ್ತು. ಆದರೆ, ಈ ಪ್ರತಿಭಟನೆಯು ಆ ಅಡಚಣೆಯನ್ನು ಮುರಿದಿದೆ” ಎಂದು ಹೇಳಿದರು.

ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದರೂ, ಸರ್ಕಾರದ ಇಸ್ರೇಲ್ ಜೊತೆಗಿನ ಸಂಬಂಧಗಳು ಅದರ ಅಧಿಕೃತ ನಿಲುವನ್ನು ಬದಲಿಸಿವೆ. ಆದರೂ, ಆಜಾದ್ ಮೈದಾನದಲ್ಲಿ ನಡೆದ ಈ ಪ್ರತಿಭಟನೆ, ಭಾರತದಾದ್ಯಂತ ನಡೆಯುತ್ತಿರುವ ಇತರ ಪ್ರತಿಭಟನೆಗಳಂತೆ, ಸಾರ್ವಜನಿಕರ ಬೆಂಬಲವು ಪ್ಯಾಲೆಸ್ತೀನ್ ಪರವಾಗಿ ದೃಢವಾಗಿದೆ ಎಂದು ಸೂಚಿಸುತ್ತದೆ.

ಪ್ರತಿಭಟನೆಯ ಅಂತ್ಯದಲ್ಲಿ ಒಬ್ಬರು, “ವಿಶ್ವಾದ್ಯಂತ ಜನರು ಪ್ಯಾಲೆಸ್ತೀನ್‌ಗಾಗಿ ದನಿ ಎತ್ತುತ್ತಿದ್ದಾರೆ. ಸರ್ಕಾರಗಳು ವಿಫಲವಾದಾಗ, ನ್ಯಾಯಕ್ಕಾಗಿ ಆಗ್ರಹವನ್ನು ಸಾಮಾನ್ಯ ನಾಗರಿಕರು ಮುನ್ನಡೆಸುತ್ತಾರೆ” ಎಂದು ಹೇಳಿದರು.

“ಫ್ರೀ ಪ್ಯಾಲೆಸ್ತೀನ್” ಘೋಷಣೆಗಳು ಆಜಾದ್ ಮೈದಾನದಾದ್ಯಂತ ಪ್ರತಿಧ್ವನಿಸಿದಂತೆ, ದಮನ, ಕಣ್ಗಾವಲು ಮತ್ತು ಬೆದರಿಕೆಯ ಹೊರತಾಗಿಯೂ, ಭಾರತದಲ್ಲಿ ಪ್ಯಾಲೆಸ್ತೀನ್ ಪರ ದನಿಗಳನ್ನು ಅಡಗಿಸಲು ಸಾಧ್ಯವಿಲ್ಲ ಎಂಬುದನ್ನು ಈ ಸಮಾವೇಶ ಸ್ಪಷ್ಟಪಡಿಸಿತು. ಕಾರ್ಯಕರ್ತ ಕಾಶಿಫ್ ಹೇಳಿದಂತೆ, ಈ ಸಂಘಟನೆಗಳು “ವಾತಾವರಣವನ್ನು ಬದಲಾಯಿಸಲು” ಮತ್ತು ಸಾರ್ವಜನಿಕ ಚರ್ಚೆಯನ್ನು ಮಾರ್ಪಡಿಸಲು ಸಾಧ್ಯವಾಗಿವೆ.

59 ಅಲೆಮಾರಿ ಸಮುದಾಯಗಳಿಂದ ಶೇ. 1ರ ಪ್ರತ್ಯೇಕ ಮೀಸಲಾತಿಗೆ ಆಗ್ರಹ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...