Homeಮುಖಪುಟಮುಂಬೈ: ಕಾನೂನು ಹೋರಾಟದ ಬಳಿಕ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ

ಮುಂಬೈ: ಕಾನೂನು ಹೋರಾಟದ ಬಳಿಕ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ

- Advertisement -
- Advertisement -

ಮುಂಬೈ: ಸುಮಾರು ಎರಡು ತಿಂಗಳ ಕಾಲ ನಡೆದ ಕಾನೂನು ಹೋರಾಟ ಮತ್ತು ಪೊಲೀಸರಿಂದ ಪದೇ ಪದೇ ಅನುಮತಿ ನಿರಾಕರಿಸಿದ ನಂತರ, ಆಗಸ್ಟ್ 20ರಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ “ಫ್ರೀ ಪ್ಯಾಲೆಸ್ತೀನ್” ಮತ್ತು “ನದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಸ್ವತಂತ್ರವಾಗಲಿದೆ” ಎಂಬ ಘೋಷಣೆಗಳನ್ನು ಕೂಗಲಾಯಿತು.

ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಗಳ ಸದಸ್ಯರು ಮತ್ತು ರಾಜಕೀಯ ಮುಖಂಡರು ಈ ಪ್ರತಿಭಟನೆಯಲ್ಲಿ ಒಗ್ಗೂಡಿದರು. ಇದು ಮುಂಬೈನಲ್ಲಿ ಡಿಸೆಂಬರ್ 2023ರ ನಂತರ ನಡೆದ ಮೊದಲ ದೊಡ್ಡ ಪ್ಯಾಲೆಸ್ತೀನ್ ಬೆಂಬಲ ಪ್ರತಿಭಟನೆಯಾಗಿದೆ.

ಈ ಪ್ರತಿಭಟನೆಯನ್ನು ಮೂಲತಃ ಜೂನ್ 18ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದರು. “ಭಾರತದ ವಿದೇಶಾಂಗ ನೀತಿಯೊಂದಿಗೆ ಸಂಘರ್ಷ” ಮತ್ತು “ಕಾನೂನು ಸುವ್ಯವಸ್ಥೆಗೆ ಭಂಗ” ಬರುವ ಸಾಧ್ಯತೆಯಿದೆ ಎಂದು ಕಾರಣ ನೀಡಿದರು. ಅನುಮತಿ ನಿರಾಕರಣೆಯ ಬೆನ್ನಲ್ಲೇ, ಅಧಿಕಾರಿಗಳು ಪ್ರಮುಖ ಮುಖಂಡರನ್ನು ಅವರ ಮನೆ ಮತ್ತು ಕಚೇರಿಗಳಿಂದ ವಶಕ್ಕೆ ಪಡೆದರು.

ಕಾನೂನು ಹೋರಾಟದ ಹಾದಿ

ಜುಲೈ ಮತ್ತು ಆಗಸ್ಟ್‌ನಲ್ಲಿ ಪೊಲೀಸರು ಹಲವು ಬಾರಿ ಅನುಮತಿ ನಿರಾಕರಿಸಿದ ಕಾರಣ, ಆಯೋಜಕರು ಬಾಂಬೆ ಹೈಕೋರ್ಟ್ ಮೊರೆ ಹೋದರು. ನ್ಯಾಯಾಧೀಶರು ಆರಂಭದಲ್ಲಿ ಅರ್ಜಿಯನ್ನು ವಜಾಗೊಳಿಸಿ, ದೇಶೀಯ ಸಮಸ್ಯೆಗಳ ಮೇಲೆ ಗಮನಹರಿಸಲು ಮತ್ತು “ದೇಶಭಕ್ತರಾಗಿರಲು” ಸೂಚಿಸಿದರು. ಆದಾಗ್ಯೂ, ಆಗಸ್ಟ್ 12ರಂದು ಪೊಲೀಸರು ತಮ್ಮ ಆಕ್ಷೇಪಣೆಗಳನ್ನು ಹಿಂಪಡೆದು, ಆಗಸ್ಟ್ 20ರಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಶಾಂತಿಯುತ ಸಭೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿದರು.

ಸಿಪಿಐ(ಎಂ) ಮುಂಬೈ ಪ್ರಧಾನ ಕಾರ್ಯದರ್ಶಿ ಮತ್ತು ಸಂಘಟಕರಲ್ಲೊಬ್ಬರಾದ ಶೈಲೇಂದ್ರ ಕಾಂಬ್ಳೆ ಈ ಬಗ್ಗೆ ಪ್ರತಿಕ್ರಿಯಿಸಿ, “ಇದು ಸರಳವಾದ ಬೆಂಬಲ ಸಭೆ. ಇದಕ್ಕೆ ಇಷ್ಟು ಸುದೀರ್ಘ ಕಾನೂನು ಹೋರಾಟ ಏಕೆ ಬೇಕಾಯಿತು? ಒಂದು ಸಣ್ಣ ಬೆಂಬಲ ಸಮಾವೇಶಕ್ಕೂ ತಿಂಗಳುಗಟ್ಟಲೆ ಕಾನೂನು ಹೋರಾಟ ನಡೆಸಬೇಕಾದರೆ, ಇದು ಸರ್ವಾಧಿಕಾರವಲ್ಲವೇ?” ಎಂದು ಪ್ರಶ್ನಿಸಿದರು.

ಪ್ರತಿಭಟನೆಯ ಧ್ವನಿ

ಈ ಪ್ರತಿಭಟನೆಯು ಸರ್ಕಾರಗಳು ತಮ್ಮ ನಿಲುವುಗಳನ್ನು ಬದಲಾಯಿಸುತ್ತಿದ್ದರೂ, ಜನರು ಪ್ಯಾಲೆಸ್ತೀನ್ ಪರವಾಗಿಯೇ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಿತು. ಕೈಯಲ್ಲಿ ಹಿಡಿದ ಫಲಕಗಳು ಮತ್ತು ಸಾಂಪ್ರದಾಯಿಕ ಪ್ಯಾಲೆಸ್ತೀನ್ ಶಿರೋವಸ್ತ್ರಗಳಾದ ಕೆಫಿಯೆಗಳು ತೀಕ್ಷ್ಣ ಸಂದೇಶಗಳನ್ನು ಸಾರುತ್ತಿದ್ದವು. ಫಲಕಗಳಲ್ಲಿ “ನೀವು ಮುಸ್ಲಿಮರಾಗಿರಬೇಕಿಲ್ಲ, ಪ್ಯಾಲೆಸ್ತೀನ್ ಪರ ನಿಲ್ಲಲು ಮಾನವರಾಗಿದ್ದರೆ ಸಾಕು,” “ಗಾಜಾದಲ್ಲಿ ನರಮೇಧ ನಿಲ್ಲಿಸಿ” ಮತ್ತು “ಮಕ್ಕಳನ್ನು ಕೊಲ್ಲುವುದು ಆತ್ಮರಕ್ಷಣೆ ಅಲ್ಲ” ಎಂಬ ಘೋಷಣೆಗಳು ರಾರಾಜಿಸಿದವು. ಇತರ ಫಲಕಗಳು “ವರ್ಣಭೇದ ನೀತಿಯ ಇಸ್ರೇಲ್ ಅನ್ನು ಬಹಿಷ್ಕರಿಸಿ,” “ಮೌನವೆಂದರೆ ಸಹಭಾಗಿತ್ವ” ಮತ್ತು “ಈಗಲೇ ಆಕ್ರಮಣ ಕೊನೆಗೊಳಿಸಿ” ಎಂದು ಕರೆ ನೀಡಿದವು. ಈ ಸಂದೇಶಗಳು ಪ್ಯಾಲೆಸ್ತೀನ್‌ಗೆ ಬೆಂಬಲವು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ, ಅದು ಮಾನವೀಯತೆ ಮತ್ತು ನ್ಯಾಯಕ್ಕಾಗಿರುವ ಹಂಚಿಕೆಯ ಬೇಡಿಕೆ ಎಂಬುದನ್ನು ಒತ್ತಿಹೇಳಿದವು.

ಪ್ರತಿಭಟನಾಕಾರರ ಆಕ್ರೋಶ ಮತ್ತು ಬೇಡಿಕೆಗಳು

ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವತಿಯೊಬ್ಬರು, “ನಾನು ಇಷ್ಟು ದಿನ ನನ್ನೊಳಗೆ ಇಟ್ಟುಕೊಂಡಿದ್ದ ನೋವನ್ನು ವ್ಯಕ್ತಪಡಿಸಲು ನನಗೆ ಅವಕಾಶ ಬೇಕಿತ್ತು, ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಕನಿಷ್ಠ ಈ ನರಮೇಧವನ್ನು ಖಂಡಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ಯಾಲೆಸ್ತೀನ್ ಮತ್ತು ಭಾರತದ ಧ್ವಜಗಳು ಒಟ್ಟಿಗೆ ಹಾರಿದವು, “ನಿಂದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಸ್ವತಂತ್ರವಾಗಲಿದೆ” ಮತ್ತು “ಸಾಮ್ರಾಜ್ಯಶಾಹಿತ್ವಕ್ಕೆ ಧಿಕ್ಕಾರ”ದಂತಹ ಘೋಷಣೆಗಳು ಪ್ರತಿಧ್ವನಿಸಿದವು. ಕಾರ್ಯಕರ್ತ ನಿಶಾಂತ್ ಬಂಗೇರಾ ಮಾತನಾಡಿ, “ವಿಶ್ವಾದ್ಯಂತ ಜನರು ಪ್ಯಾಲೆಸ್ತೀನ್‌ಗಾಗಿ ದನಿ ಎತ್ತುತ್ತಿದ್ದಾರೆ. ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್ ಪರವಾಗಿದ್ದರೂ, ಸರ್ಕಾರದ ಇಸ್ರೇಲ್ ಜೊತೆಗಿನ ಮೈತ್ರಿಯಿಂದಾಗಿ ಅಧಿಕೃತ ಬೆಂಬಲ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಮುಂಬೈನಂತಹ ನಗರಗಳಲ್ಲಿ ನಾಗರಿಕರು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳು ಮತ್ತು ಧಾರ್ಮಿಕ ಮುಖಂಡರು ಒಗ್ಗೂಡುವುದು ಭರವಸೆ ಮೂಡಿಸುತ್ತದೆ” ಎಂದು ಹೇಳಿದರು.

ಪ್ರತಿಭಟನಾಕಾರರು ಗಾಜಾದಲ್ಲಿ ನಡೆಯುತ್ತಿರುವ ನರಮೇಧವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಐಸಿಸಿ (ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ಹೊರಡಿಸಿರುವ ಬಂಧನ ವಾರೆಂಟ್‌ಗೆ ಅನುಗುಣವಾಗಿ ಕಠಿಣ ಅಂತರರಾಷ್ಟ್ರೀಯ ಹೊಣೆಗಾರಿಕೆಯನ್ನು ಜಾರಿಗೊಳಿಸಲು ಕರೆ ನೀಡಿದರು. ಭಾರತವು ಇಸ್ರೇಲ್‌ನೊಂದಿಗೆ ಎಲ್ಲಾ ರಾಜತಾಂತ್ರಿಕ, ಮಿಲಿಟರಿ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

ಪ್ರಮುಖ ವ್ಯಕ್ತಿಗಳ ಬೆಂಬಲ

ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟ್ವರ್ಧನ್, ನಿರ್ದೇಶಕ ಮತ್ತು ಚಿತ್ರಕಥೆಗಾರ ಸಯೀದ್ ಮಿರ್ಜಾ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್, ಮತ್ತು ನಟಿ ಸ್ವರಾ ಭಾಸ್ಕರ್ ಅವರು ಈ ಪ್ರತಿಭಟನೆಯಲ್ಲಿ ಭಾಷಣಕಾರರಾಗಿ ಭಾಗವಹಿಸಿದರು. ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ನಾಯಕರು ಹಾಗೂ ಸದಸ್ಯರು ಕೂಡ ಉಪಸ್ಥಿತರಿದ್ದರು. ಅವರ ಉಪಸ್ಥಿತಿಯು ಈ ಸಭೆಯು ಕೇವಲ ರಾಜಕೀಯ ಪ್ರದರ್ಶನವಲ್ಲ, ಆದರೆ ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧದ ಒಂದು ಪ್ರಮುಖ ನೈತಿಕ ಹೇಳಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಭಯದ ವಾತಾವರಣದ ವಿರುದ್ಧ ಪ್ರತಿಭಟನೆ

ಈ ರ್ಯಾಲಿ ಭಾರತದಲ್ಲಿ ಪ್ಯಾಲೆಸ್ತೀನ್ ಪರ ಚಳುವಳಿಗಳಿಗೆ ಆವರಿಸಿದ್ದ ಭಯದ ವಾತಾವರಣವನ್ನು ಸವಾಲಿಗೆ ಒಡ್ಡಿತು. ಇತ್ತೀಚಿನ ತಿಂಗಳುಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಕಿರುಕುಳಕ್ಕೊಳಪಡಿಸಿದ್ದರು ಮತ್ತು ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಎತ್ತಿದ್ದಕ್ಕಾಗಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.

ಬಿಡಿಎಸ್ (ಬಹಿಷ್ಕಾರ, ವಿನಿಯೋಗ, ನಿರ್ಬಂಧಗಳು) ಇಂಡಿಯಾದ ಕಾರ್ಯಕರ್ತೆ ಪೂಜಾ, “ಅಲಿಗಢದಲ್ಲಿ ತಲ್ಹಾ ಮನ್ನಾನ್‌ನಂತಹ ವಿದ್ಯಾರ್ಥಿಗಳ ವಿರುದ್ಧ ಪ್ಯಾಲೆಸ್ತೀನ್‌ಗೆ ಬೆಂಬಲ ತೋರಿಸಿದ್ದಕ್ಕಾಗಿ ಸುಮ್ಮನೆ ಪ್ರಕರಣ ದಾಖಲಿಸಲಾಗಿದೆ. ಪುಣೆಯಲ್ಲಿ ಬಿಡಿಎಸ್ ಇಂಡಿಯಾದ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗಸ್ಟ್ 20ರಂದು ಯಾರೂ ಪ್ಯಾಲೆಸ್ತೀನ್ ಬಗ್ಗೆ ಮಾತನಾಡಬಾರದು ಎಂಬ ಭಾವನೆ ಸೃಷ್ಟಿಯಾಗುತ್ತಿತ್ತು. ಆದರೆ, ಈ ಪ್ರತಿಭಟನೆಯು ಆ ಅಡಚಣೆಯನ್ನು ಮುರಿದಿದೆ” ಎಂದು ಹೇಳಿದರು.

ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದರೂ, ಸರ್ಕಾರದ ಇಸ್ರೇಲ್ ಜೊತೆಗಿನ ಸಂಬಂಧಗಳು ಅದರ ಅಧಿಕೃತ ನಿಲುವನ್ನು ಬದಲಿಸಿವೆ. ಆದರೂ, ಆಜಾದ್ ಮೈದಾನದಲ್ಲಿ ನಡೆದ ಈ ಪ್ರತಿಭಟನೆ, ಭಾರತದಾದ್ಯಂತ ನಡೆಯುತ್ತಿರುವ ಇತರ ಪ್ರತಿಭಟನೆಗಳಂತೆ, ಸಾರ್ವಜನಿಕರ ಬೆಂಬಲವು ಪ್ಯಾಲೆಸ್ತೀನ್ ಪರವಾಗಿ ದೃಢವಾಗಿದೆ ಎಂದು ಸೂಚಿಸುತ್ತದೆ.

ಪ್ರತಿಭಟನೆಯ ಅಂತ್ಯದಲ್ಲಿ ಒಬ್ಬರು, “ವಿಶ್ವಾದ್ಯಂತ ಜನರು ಪ್ಯಾಲೆಸ್ತೀನ್‌ಗಾಗಿ ದನಿ ಎತ್ತುತ್ತಿದ್ದಾರೆ. ಸರ್ಕಾರಗಳು ವಿಫಲವಾದಾಗ, ನ್ಯಾಯಕ್ಕಾಗಿ ಆಗ್ರಹವನ್ನು ಸಾಮಾನ್ಯ ನಾಗರಿಕರು ಮುನ್ನಡೆಸುತ್ತಾರೆ” ಎಂದು ಹೇಳಿದರು.

“ಫ್ರೀ ಪ್ಯಾಲೆಸ್ತೀನ್” ಘೋಷಣೆಗಳು ಆಜಾದ್ ಮೈದಾನದಾದ್ಯಂತ ಪ್ರತಿಧ್ವನಿಸಿದಂತೆ, ದಮನ, ಕಣ್ಗಾವಲು ಮತ್ತು ಬೆದರಿಕೆಯ ಹೊರತಾಗಿಯೂ, ಭಾರತದಲ್ಲಿ ಪ್ಯಾಲೆಸ್ತೀನ್ ಪರ ದನಿಗಳನ್ನು ಅಡಗಿಸಲು ಸಾಧ್ಯವಿಲ್ಲ ಎಂಬುದನ್ನು ಈ ಸಮಾವೇಶ ಸ್ಪಷ್ಟಪಡಿಸಿತು. ಕಾರ್ಯಕರ್ತ ಕಾಶಿಫ್ ಹೇಳಿದಂತೆ, ಈ ಸಂಘಟನೆಗಳು “ವಾತಾವರಣವನ್ನು ಬದಲಾಯಿಸಲು” ಮತ್ತು ಸಾರ್ವಜನಿಕ ಚರ್ಚೆಯನ್ನು ಮಾರ್ಪಡಿಸಲು ಸಾಧ್ಯವಾಗಿವೆ.

59 ಅಲೆಮಾರಿ ಸಮುದಾಯಗಳಿಂದ ಶೇ. 1ರ ಪ್ರತ್ಯೇಕ ಮೀಸಲಾತಿಗೆ ಆಗ್ರಹ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...