ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಪೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಠದ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಮಠದ ಆಡಳಿತಾಧಿಕಾರಿ ಬಸರಾಜನ್ ಅವರ ಮೇಲೂ ಅತ್ಯಾಚಾರ ಯತ್ನ ಆರೋಪ ಹೊರಿಸಲಾಗಿದೆ.
ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ದೂರು ಕೊಡಿಸಿ ಮುರುಘ ಶರಣರ ಮೇಲೆ ಬಸವರಾಜನ್ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ವಾರ್ಡನ್ ನೀಡಿರುವ ದೂರಿನ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ. ತನ್ನನ್ನು ಅತ್ಯಾಚಾರ ಮಾಡಲು ಬಸವರಾಜನ್ ಯತ್ನಿಸಿದ್ದಾರೆಂದು ವಾರ್ಡನ್ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ನನ್ನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ. ಇದನ್ನು ವಿರೋಧಿಸಿದಾಗ ನಾನು ಮಾಜಿ ಶಾಸಕನಾಗಿದ್ದು, ಮಠ ಹಾಗೂ ವಿದ್ಯಾಪೀಠದ ಅಧಿಕಾರಿಯಾಗಿದ್ದೇನೆ. ಸದರಿ ವಿಚಾರವನ್ನು ಯಾರ ಬಳಿಯಾದರೂ ಹೇಳಿದರೆ, ಜೀವ ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ನಮ್ಮ ಭವಿಷ್ಯದ ಹಿತದೃಷ್ಟಿಯಿಂದ ಯಾರ ಬಳಿಯೂ ಹೇಳಿರುವುದಿಲ್ಲ. ಆ ನಂತರದಲ್ಲಿ ಬಸವರಾಜನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ’ ಎಂದು ತಿಳಿಸಿದ್ದಾರೆ.
ವಾರ್ಡನ್ ದೂರಿನಲ್ಲಿ ಏನಿದೆ?
“ಮುರುಘಾ ರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಎಸ್ ಕೆ ಬಸವರಾಜನ್ ಕೆಲಸ ನಿರ್ವಹಿಸುತ್ತಿದ್ದರು. ಸ್ವಾಮೀಜಿ ವಿದೇಶ ಪ್ರವಾಸದಲ್ಲಿರುವಾಗ ಜುಲೈ 24ರಂದು ಇಬ್ಬರು ವಿದ್ಯಾರ್ಥಿಗಳು ವಾರ್ಡನ್ನಿಂದ ಗೇಟ್ ಪಾಸ್ ಪಡೆದು ವಿದ್ಯಾರ್ಥಿ ನಿಲಯದಿಂದ ಹೊರಗೆ ಹೋಗಿದ್ದರು. ಸದರಿ ವಿದ್ಯಾರ್ಥಿಗಳನ್ನು ಬೆಂಗಳೂರಿನ ಕಾಟನ್ ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು 24.07.2022ರ ರಾತ್ರಿ ಸುಮಾರು 12.30 ವೇಳೆಯಲ್ಲಿ ಕರೆ ಮಾಡಿದ್ದರು. ಆಡಳಿತಾಧಿಕಾರಿಯಾದ ಎಸ್.ಕೆ.ಬಸವರಾಜನ್ ಮತ್ತು ಸಹಾಯಕ ವ್ಯವಸ್ಥಾಪಕರಾದ ರವಿ ಅವರಿಗೆ ಫೋನ್ ಮಾಡಲಾಗಿತ್ತು.”
ಇದನ್ನೂ ಓದಿರಿ: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ಸ್ವಾಮೀಜಿಗಳು: ಇಲ್ಲಿದೆ ಪ್ರಮುಖರ ಪಟ್ಟಿ
“ರವಿ ಅವರು ವಿದ್ಯಾರ್ಥಿಗಳನ್ನು ಕರೆತರಲು ನನ್ನೊಂದಿಗೆ 25.07.22ರಲ್ಲಿ ಠಾಣೆಗೆ ಭೇಟಿ ನೀಡಿದಾಗ ಪೊಲೀಸರು, ‘ಮಠದ ಆಡಳಿತಾಧಿಕಾರಿಯಾದ ಎಸ್.ಕೆ. ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರು ಬೆಳಿಗ್ಗೆ 5 ಗಂಟೆ ವೇಳೆಗೆ ವಿದ್ಯಾರ್ಥಿಗಳನ್ನು ಹಾಸ್ಟೆಲ್ಗೆ ಕರೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದರು. ಎಸ್.ಕೆ.ಬಸವರಾಜನ್ ಮತ್ತು ಸೌಭಾಗ್ಯ ಅವರು ಮಠದ ಸಂಬಂಧಪಟ್ಟವರ ಗಮನಕ್ಕೆ ತಾರದೆ ವಿದ್ಯಾರ್ಥಿಗಳನ್ನು ಹಾಸ್ಟೆಲ್ಗೂ ಕರೆತರದೆ, ಅವರ ಪೋಷಕರಿಗೂ ಒಪ್ಪಿಸದೆ 25.07.2022ರ ಬೆಳಿಗ್ಗೆ 5 ಗಂಟೆಯಿಂದ 27.07.2022ರ ಮಧ್ಯಾಹ್ನದವರೆಗೆ ತಮ್ಮ ವಶದಲ್ಲಿಯೇ ಇರಿಸಿಕೊಂಡಿದ್ದರು. ಮಠದ ಘಟನೆಗೆ ಚ್ಯುತಿ ತರಲು ವಿದ್ಯಾರ್ಥಿಗಳನ್ನು ಮತ್ತು ಅವರ ಕುಟುಂಬದವರನ್ನು ಬಳಸಿಕೊಳ್ಳಲಾಗಿದೆ. ಮಠದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಲಾಗಿದೆ. ಎಸ್ ಕೆ ಬಸವರಾಜನ್ ಅವರು ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಪೋಷಕರ ವಿಳಾಸ, ದೂರವಾಣಿ ಸಂಖ್ಯೆ, ಇತ್ಯಾದಿ ವಿವರಗಳನ್ನು ತಂದುಕೊಂಡುವಂತೆ ನನಗೆ ಆಗಾಗ್ಗೆ ಒತ್ತಾಯಿಸುತ್ತಿದ್ದರು. ಇದಕ್ಕೆ ನಿರಾಕರಿಸಿದ್ದಕ್ಕಾಗಿ ಮಠದ ಭಕ್ತಾದಿಗಳು ಮತ್ತು ಸಾರ್ವಜನಿಕರ ಎದುರು ನಿಂದಿಸಿದ್ದರು. ಆ ನಂತರದಲ್ಲಿ ವಿದ್ಯಾರ್ಥಿಗಳನ್ನು ವಿದ್ಯಾರ್ಥಿನಿಲಯಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳು ವಿಫಲವಾದವು.”
“27.07.2022ರಂದು ವಿದ್ಯಾರ್ಥಿಗಳಾರೂ ನಿಲಯದಲ್ಲಿ ಇಲ್ಲದಿರುವ ಸಮಯದಲ್ಲಿ, ಸಂಜೆ ಸುಮಾರು 06 ಗಂಟೆಯಲ್ಲಿ ನನ್ನನ್ನು ವಿದ್ಯಾರ್ಥಿ ನಿಲಯಕ್ಕೆ ಕರೆಯಿಸಿಕೊಂಡು ಬಸವರಾಜನ್ ದೌರ್ಜನ್ಯ ಎಸಗಿದ್ದಾರೆ. ಬಸವರಾಜನ್ ರವರ ದುರ್ನಡತೆ ಹಾಗೂ ಇತರೆ ಕಾರಣಕ್ಕಾಗಿ ಮುರುಘಾ ಶರಣರು ಕ್ರಮ ಜರುಗಿದರು. ಬಸವರಾಜನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು.”
– ಇಷ್ಟು ಮಠದ ವಾರ್ಡನ್ ನೀಡಿರುವ ದೂರಿನ ಸಾರಾಂಶ.
ಮುರುಘಾ ಮಠದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಕೀಲ ವಿಶ್ವನಾಥಯ್ಯ, “ಮಾಧ್ಯಮಗಳಲ್ಲಿ ಬಂದ ಸುದ್ದಿಯಿಂದ ಸ್ವಾಮೀಜಿಯರಿಗೆ ನೋವಾಗಿದೆ. ಮಕ್ಕಳು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ಗೊತ್ತಾಗಿದೆ. ದೂರಿನ ಪೂರ್ಣ ವಿವರ ನಮಗೆ ಗೊತ್ತಿಲ್ಲ” ಎಂದಿದ್ದಾರೆ.
“ಸ್ವಾಮೀಜಿಯವರಿಗೆ ಬಹಳ ನೋವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಯಾವುದೋ ಮಠದ ವಿರೋಧಿ ಶಕ್ತಿ ಅತಿಯಾಸೆಯಿಂದ ಇಂಥ ಕೆಲಸ ಮಾಡಿಬಹುದು. ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ದೂರು ನೀಡಿದ್ದಾರೆ ಎನ್ನಬಹುದು” ಎಂದು ತಿಳಿಸಿದ್ದಾರೆ.
“ಇದರ ಹಿಂದೆ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂದು ತಿಳಿದು ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಹೆಚ್ಚಿನದಾಗಿ ದೂರಿನ ಅಂಶಗಳು ತಿಳಿದ ಬಳಿಕ ಸ್ವಾಮೀಜಿ ಮಾತನಾಡುತ್ತಾರೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ತಪ್ಪು ದೂರು ನೀಡಿದ್ದರೆ ಮುರುಘೇಶ ಅವರಿಗೆ ಬುದ್ದಿ ನೀಡಲಿ. ತಪ್ಪಿನ ಅರಿವಾಗಿ ಅವರು ಕೇಸ್ ವಾಪಸ್ ಪಡೆಯಲಿ. ಎಲ್ಲಾ ಭಕ್ತ ವೃಂದದ ಪರವಾಗಿ ದೇವರಲ್ಲಿ ಪ್ರಾರ್ಥಿಸುವೆ” ಎಂದು ಹೇಳಿದ್ದಾರೆ.
ಚಿತ್ರದುರ್ಗ ವೀರಶೈವ ಮುಖಂಡ ಎಲ್.ಬಿ.ರಾಜಶೇಖರ್ ಪ್ರತಿಕ್ರಿಯಿಸಿ, “ಮಾಧ್ಯಮಗಳಲ್ಲಿ ಬಂದ ವಿಷಯ ಸ್ವಾಮೀಜಿಗಳ ತೇಜೋವಧೆಗೆ ಕಾರಣವಾಗಿದೆ. ಸ್ವಾಮೀಜಿಗಳಿಗೆ ಹಿತಶತ್ರುಗಳಿದ್ದು, ಅವರು ಈ ಕೆಲಸ ಮಾಡುತ್ತಿದ್ದಾರೆ. ಆಡಳಿತಾಧಿಕಾರಿ ಹಾಗೂ ಸ್ವಾಮೀಜಿ ನಡುವೆ ಈ ಮನಸ್ತಾಪ ಉಂಟಾಗಿದೆ. ಆಡಳಿತಾಧಿಕಾರಿಯೇ ಈ ಕೆಲಸ ಮಾಡಿದ್ದಾನೆ” ಎಂದು ದೂರಿದ್ದಾರೆ.
ಇದನ್ನೂ ಓದಿರಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುರುಘಾ ಶರಣರ ವಿರುದ್ಧ ಪೋಕ್ಸೋ ಅಡಿ ಎಫ್ಐಆರ್
“ಮಕ್ಕಳನ್ನು ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುರುಘಾ ಶರಣರು ಸೇರಿ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಇದು ಎರಡು ವರ್ಷದಿಂದ ಷಡ್ಯಂತ್ರ ನಡೆಯುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಏನೇ ಬಂದರು ಎದುರಿಸೋಣ ಎಂದು ಸಲಹಾ ಸಮಿತಿಯಲ್ಲಿ ಹೇಳಿದ್ದಾರೆ. ಆಡಳಿತಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರವಾಗಿ ವೈಮನಸ್ಸು ಆಗಿದೆ” ಎಂದು ಆರೋಪಿಸಿದ್ದಾರೆ.
ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, “ಮುರುಘಾ ಮಠದ ವಿಚಾರ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಮ್ಮ ರಾಜ್ಯಕ್ಕೆ ಪ್ರಸಿದ್ದವಾದ ಮಠವಿದು. ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಶೀಲನೆ ಮಾಡಬೇಕು. ಮಠಕ್ಕೆ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ತನಿಖೆ ನಡೆಸಬೇಕು. ತೇಜೋವಧೆ ಯಾವ ವಿಚಾರಕ್ಕೆ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಪ್ರಕರಣದೊಳಗೆ ಉತ್ತರಾಧಿಕಾರಿಯನ್ನು ಸೇರಿಸುವ ವಿಚಾರ ಏನಿತ್ತು? ಪರಮಶಿವಯ್ಯ ಅವರನ್ನ ಕೇಸ್ನಲ್ಲಿ ಸೇರಿಸುವ ಅಗತ್ಯ ಏನಿತ್ತು? ಮೇಲ್ನೋಟಕ್ಕೆ ಸುಳ್ಳು ಎಂಬುದು ಗೊತ್ತಾಗುತ್ತಿದೆ. ಮಠದ ಮಾನ ಮರ್ಯಾದೆ ಪ್ರಶ್ನೆ ಇದಾಗಿದ್ದು, ಭಕ್ತರ ಮನಸ್ಸಿಗೆ ನೋವಾಗಿದೆ” ಎಂದಿದ್ದಾರೆ.
ಪ್ರಬಾವಿ ಆರೋಪಿಯನ್ನು ರಕ್ಷಿಸಲು ಏನೇನೋ ಸರ್ಕಸ್ ನಡೆಯುತ್ತಿದೆ. ಬಸವಣ್ಣ ಎರಡು ಮದುವೆ ಆಗಿದ್ದರು. ಬಸವಾನುಯಾಯಿಗಳಾದ ಈ ಮಟಾದೀಶರು ಯಾಕೆ ಮದುವೆಯಾಗದೆ, ಬಲವಂತದ ಬ್ರಾಹ್ಮಚರ್ಯ ಆಚರಿಸುತ್ತಾರೆ? ಈ ಮಟಾದಿಪತಿಗಳು ಸಂಸಾರಿಗಳಾಗುವುದು ಒಳ್ಳೆಯದು. ಇವರ ಬಕ್ತರ ಮಾನವಾದರೂ ಉಳಿಯುತ್ತದೆ.