Homeಮುಖಪುಟ‘ಕಿವಿಗೆ ತೂತಿಲ್ಲ, ಸೊಂಟಕ ಉಡದಾರವಿಲ್ಲ’: ‘ಸಾಬಿ-ಲಿಂಗಾಯತ’ನೊಬ್ಬನ ಸ್ವಗತ!?

‘ಕಿವಿಗೆ ತೂತಿಲ್ಲ, ಸೊಂಟಕ ಉಡದಾರವಿಲ್ಲ’: ‘ಸಾಬಿ-ಲಿಂಗಾಯತ’ನೊಬ್ಬನ ಸ್ವಗತ!?

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿನ ಮುಸ್ಲಿಮರು ಮತ್ತು ಹಿಂದೂಗಳು ಅನೋನ್ಯತೆ ಮತ್ತು ಪ್ರಸ್ತುತದ ಬಿಕ್ಕಟ್ಟುಗಳ ಕುರಿತು...

- Advertisement -
- Advertisement -

‘ಅಲ್ಲ ಮಾರಾಯ, ನಿನ್ ಸೊಂಟಕ ಉಡದಾರವಿಲ್ಲ, ಕಿವಿಗೆ ತೂತಿಲ್ಲ. ಜಾಸ್ತಿ ಹೊರಗ ಓಡಾಡಬೇಡಲೇಪ…’ ಹುಬ್ಬಳ್ಳಿ-ಧಾರವಾಡದಲ್ಲಿ ಆಗಾಗ ನಡೆಯುತ್ತಿದ್ದ ಕೋಮು ಗಲಭೆ ಅಥವಾ ಮಾತಿನ ತಿಕ್ಕಾಟಗಳ ಹಿನ್ನೆಲೆಯಲ್ಲಿ ಹಿರಿಯ ಮಿತ್ರ ಫಕ್ರುದ್ದೀನ್ 90ರ ದಶಕದ ಆರಂಭದಲ್ಲಿ ಹೇಳಿದ್ದ ಮಾತಿದು.

2002ರಲ್ಲಿ ಗುಜರಾತಿನ ಹತ್ಯಾಕಾಂಡ ನಡೆದಾಗ ಮತ್ತೆ ಫಕ್ರುದ್ದೀನ್ ಹೇಳಿದ್ದು ನೆನಪಾಗಿತು.
2014ರ ನಂತರ ಹೆಚ್ಚಿದ ಧ್ರುವೀಕರಣ ನೋಡಿದಾಗಲೂ ಫಕ್ರುದ್ದೀನ್ ನೆನಪಾದ.
ಮೊನ್ನೆ ಈದ್ ಮತ್ತು ಬಸವ ಜಯಂತಿ ಒಟ್ಟಾಗಿ ಬಂದಾಗ ಮತ್ತೆ ಗಜೇಂದ್ರಗಡದ ಫಕ್ರುದ್ದೀನ್ ನೆನಪಾದ.
****

ಆತ ಹೇಳಿದ್ದು ನನಗೆ ಹಲವು ಸಲ ಅನುಭವಕ್ಕೆ ಬಂದಿದೆ. 2018ರ ಸುಮಾರಿಗೆ ಹುಬ್ಬಳ್ಳಿಯಿಂದ ಬೆಂಗಳೂರು ಪ್ಯಾಸೆಂಜರ್ ರೈಲನ್ನು ನಾನು ಮತ್ತು ಮಿತ್ರ ಹತ್ತಿದ್ದೆವು. ಎದುರಿನ ಸೀಟಿನಲ್ಲಿ ಐವರು ಯುವಕರು. ನಾನು ಮತ್ತು ನನ್ನ ಮಿತ್ರನ ಸಂಭಾಷಣೆಯ ಮಧ್ಯೆ ಪ್ರವೇಶಿಸಿದ ಆ ಯುವಕರು, ಮೋದಿಯವರನ್ನು ಟೀಕಿಸೋದು ತಪ್ಪು ಎಂದರು. ಅನ್ನಭಾಗ್ಯ ವೇಸ್ಟ್ ಎಂದರು. ಇಂಜಿನಿಯರಿಂಗ್ ಓದುತ್ತಿದ್ದ ಅವರು, ಬೆಂಗಳೂರಿನ ಅಷ್ಟೇನೂ ಹೆಸರಿಲ್ಲದ ಕನ್ಸಲ್ಟೆನ್ಸಿ ಕಂಪನಿಯೊಂದರಿಂದ ಪ್ರಾಜೆಕ್ಟ್ ‘ಪಡೆಯಲು’ (ಈಗಾಗಲೇ ಹಿಂದಿನ ವಿದ್ಯಾರ್ಥಿಗಳ್ಯಾರೋ ಮಾಡಿದ ಪ್ರಾಜೆಕ್ಟ್ ಥೀಮ್ ಅನ್ನು ಮಾರುವುದೂ ಒಂದು ದಂಧೆ!) ಹೊರಟಿದ್ದಾಗಿ ಗೊತ್ತಾಗಿತು. ಆಗಲೇ ಅವರದು ಆತ್ಮನಿರ್ಭರ! ರಾಜಕೀಯ ವಿಷಯವಾಗಿ ಮಾತು ಬಂದಾಗ ಅವರು ನಮ್ಮ ಬಗ್ಗೆ ಕೊಂಚ ಸಿಟ್ಟಾದರು.

ರೈಲು ಹಾಗೇ ಸಾಗುತ್ತಲಿತ್ತು. ಮಿತ್ರ ಮನೆಯಿಂದ ತಂದಿದ್ದ ಚಿಕನ್ ಮಸಾಲಾ, ರೊಟ್ಟಿಗಳಿದ್ದ ಬಾಕ್ಸ್ ತೆಗೆದ. ನಾವು ಊಟ ಮಾಡಲು ಆರಂಭಿಸಿದಾಗ, ಎದುರಿಗಿದ್ದ ಆ ಹುಡುಗರ ಪೈಕಿ ಒಬ್ಬ, ಇಲ್ಲೆಲ್ಲ ನಾನ್‌ವೆಜ್ ತರ‍್ತೀರಲ್ರೀ ಎಂದು ಜೋರಾಗಿ ಕೇಳಿದ. ‘ನಮ್ಮ ಊಟ ನಮ್ಮದು, ಇದು ಚಿಕನ್ ಅಥವಾ ಬೀಫ್ ಇದ್ದರೂ ಅದನ್ನು ಇಲ್ಲೇ ತಿನ್ನುತ್ತೇವೆ’ ಎಂದೆ.

‘ಮಲ್ಲಿಯಣ್ಣ, ಹೋಗಲಿ ಬಿಡು’ ಎಂದು ಮಿತ್ರ ಹೇಳಿದಾಗ, ಅವರಿಗೆ ಮಲೀಕ್ ಅಣ್ಣ ಎಂದು ಅನಿಸಿತೇನೋ? ಅದರಲ್ಲಿ ಒಬ್ಬ ‘ಕಿವಿಗೇ ತೂತೇ ಇಲ್ಲ ನೋಡಪ್ಪಾ. ರೈಲಿಗೂ ಬೀಫ್ ತಂದರು’ ಎಂದು ತಮ್ಮಲ್ಲೇ ಹೇಳಿಕೊಂಡ.

ಅರೆ ಇವನಾ, ನನ್ನ ಕಿವಿಗೆ ತೂತಿಲ್ಲ ಎಂಬುದನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾನಲ್ಲ ಎಂದುಕೊಂಡು, ಆ ಯುವಕನಿಗೆ ನೀವು ತುಂಬ ಸೂಕ್ಷ್ಮವಾಗಿ ಗಮನಿಸುತ್ತೀರಿ. ಫೈನಲ್ ಸೆಮಿಸ್ಟರ್‌ಗಾಗಿ ಪ್ರಾಜೆಕ್ಟ್ ‘ತರಲು’ ಬೆಂಗಳೂರಿಗೂ ಹೋಗುವ ಅಗತ್ಯ ಇರಲಿಲ್ಲ’ ಎಂದ ಕೂಡಲೇ ಗಲಾಟೆ ಶುರು ಮಾಡಿದರು.

‘ದೇಶದ್ರೋಹಿಗಳು’ ಅಂತೆಲ್ಲ ಬಾಯಿ ಮಾಡಿ, ನೆರೆದ ಪ್ಯಾಸೆಂಜರ್‌ಗಳ ಮುಂದೆ, ‘ದನದ ಮಾಂಸ ತಿಂತಾರೆ. ಮೋದಿಯವರನ್ನು ಬೈತಾರೆ’ ಎಂದು ಅರೆಬರೆ ಸತ್ಯ ಹೇಳಿದರು. ನಮ್ಮ ಪಕ್ಕದಲ್ಲೇ ಕುಳಿತ ಹಿರಿಯ ರೈತರೊಬ್ಬರು ಆ ಯುವಕರಿಗೆ ದಬಾಯಿಸುತ್ತ, ‘ಅವರೇನು ತಿಂತಾ ಇದ್ದಾರೋ ಅದೆಲ್ಲ ನಿಮಗೇಕೆ? ಅವರು ಮೋದಿ ಟೀಕಿಸಿದರೆ ನಿಮಗೇನು?’ ಎಂದ ನಂತರ ಇತರ ಪ್ಯಾಸೆಂಜರ್ ಕೆಲವರು ನಮ್ಮ ಪರ ನಿಂತರು. ದಾವಣಗೆರೆಯಲ್ಲಿ ಈ ಹುಡುಗರು ಇಳಿದು ಬೇರೆ ಡಬ್ಬಿ (ಬೋಗಿ) ಹತ್ತಿದರು.

ಫಕ್ರುದೀನ್ ಹೇಳಿದ್ದು ಮತ್ತೆ ನೆನಪಾಗಿತು.

ಉತ್ತರಪ್ರದೇಶದ ರೈಲಿನಲ್ಲಿ ಬೀಫ್ ಒಯ್ಯುತ್ತಿದ್ದಾರೆ ಎಂದು ಒಬ್ಬ ಮುಸ್ಲಿಂ ಬಾಲಕನನ್ನು ಕೊಂದರಲ್ಲವೇ? ಮನೆಯ ಫ್ರೀಜ್‌ನಲ್ಲಿ ಬೀಫ್ ಇದೆ ಎಂದು ವೃದ್ಧ ಮುಸ್ಲಿಮ ಒಬ್ಬರನ್ನು ಕೊಂದರಲ್ಲವೇ? ಪಟ್ಟಿ ಮಾಡುತ್ತ ಹೋದರೆ… ಈಗ ನೋಡಿ, ಕೋವಿಡ್ ಶವಗಳ ಅಂತ್ಯಸಂಸ್ಕಾರಕ್ಕೆ ಹೆಗಲು ಕೊಡುತ್ತಿರುವವರು ಅದೇ ಮುಸ್ಲಿಮರು ಅಥವಾ ಸಾಬಿಗಳು!
***

ನಾಸ್ತಿಕನಾಗಿದ್ದ ನಮ್ಮಪ್ಪ ಮೂವರು ಗಂಡು ಮಕ್ಕಳ ಕಿವಿಗಳಿಗೆ ತೂತು (ಹೋಲ್ಸ್) ಹಾಕಿಸಲಿಲ್ಲ. ಹೆಣ್ಣುಮಕ್ಕಳಿಗೆ ಹಾಕುವುದನ್ನು ತಡೆಯಲಾಗಲಿಲ್ಲ. ನಮ್ಮ ಅಕ್ಕಂದಿರ ಮದುವೆ ಸಂದರ್ಭದಲ್ಲಿ ಅಪ್ಪ ಟ್ರಂಕ್‌ನಲ್ಲಿ ಇಟ್ಟ ಗುಂಡಗಡಿಗೆಯನ್ನು (ಇಷ್ಟಲಿಂಗ) ಹೊರ ತೆಗೆದು ಒಂದೆರಡು ದಿನ ಧರಿಸುತ್ತಿದ್ದ.

ದಿನವೂ ಲಿಂಗಪೂಜೆ ಮಾಡುತ್ತಿದ್ದ ನಮ್ಮವ್ವ, ಎರಡು ದಿನಕ್ಕೆ ಇದೆಲ್ಲ ಬೇಕಾ ಎಂಬಂತೆ ಅಪ್ಪನನ್ನು ಕಾಡಿಸುತ್ತಿದ್ದಳು. ಇಲ್ಲಿವರೆಗೂ ಶಿವದಾರವನ್ನೇ ಹಾಕದ ನಾನು ನಾಲ್ಕನೇ ಕ್ಲಾಸಿಗೆ ಉಡದಾರ ಕಿತ್ತು ಹಾಕಿದ್ದೆ. ಅದೇನೋ, ವಿಭೂತಿ ಟೀಚರ್ ಬೋಧನೆಯ ಪ್ರಭಾವವೋ?
ರೈಲಿನಲ್ಲಿ ಆದಂತೆ ಹಲವು ಸಲ ನನ್ನನ್ನು ಮುಸ್ಲಿಂ ಎಂದು ಭಾವಿಸಿ ಜಗಳಕ್ಕೆ ಬಿದ್ದ ಹಲವು ಪ್ರಸಂಗಗಳಿವೆ. ಸಮಸ್ಯೆ ಅದಲ್ಲ, ನಿಜವಾಗಿಯೂ ಮುಸ್ಲಿಂ ಆಗಿದ್ದು, ಅವರ ವಾದಗಳಿಗೆ ಅಡ್ಡ ಮಾಡದಿದ್ದರೆ ಸಮಸ್ಯೆ ಇಲ್ಲ. ಆದರೆ, ಮುಸ್ಲಿಮ ಎಂದು ನಮ್ಮನ್ನು ಭಾವಿಸಿದಾಗ, ಅವರ ವಿರುದ್ಧವಾಗಿ ವಾದ ಮಂಡಿಸಿದರೆ, ನಂತರದಲ್ಲಿ ಮುಸ್ಲಿಂ ಅಲ್ಲ ಅಂತ ಗೊತ್ತಾದಾಗಲೂ, ಅವರ ಕೋಪ ಕಡಿಮೆ ಆಗುವುದಿಲ್ಲ! ಇದರರ್ಥ ಅಲ್ಪಸಂಖ್ಯಾತರಷ್ಟೇ ಅಲ್ಲ, ಸೆಕ್ಯುಲರ್‌ಗಳೂ ಸಾಮಾನ್ಯ ಬಿಜೆಪಿ ಬೆಂಬಲಿಗರ ಲಿಸ್ಟಿಗೆ ಸೇರಿಸಲ್ಪಟ್ಟಿದ್ದಾರೆ! ಪನ್ಸಾರೆ, ದಾಬೋಲ್ಕರ್, ಸೆಕ್ಯುಲರ್ ಲಿಂಗಾಯತರೇ ಆದ ಕಲಬುರ್ಗಿ ಸರ್, ಗೌರಿ ಮೇಡಂ ಅವರ ಹತ್ಯೆಗಳ ಹಿಂದೆ ಇಂತಹ ಮನಸ್ಥಿತಿ ಕೆಲಸ ಮಾಡುತ್ತಿದೆ.

ಧಾರವಾಡದಲ್ಲಿ ಓದುವಾಗ ಲಂಕೇಶ್ ಪತ್ರಿಕೆ ಕಣ್ಣಾಮುಚ್ಚಾಲೆ ಪ್ರಶ್ನೆಗೆ ಬಹುಮಾನ ಬಂದಿದ್ದನ್ನು ಮನೆಯಲ್ಲಿ ಹೇಳುವಾಗ, ಅಪ್ಪ ಖುಷಿಪಡುತ್ತಲೇ, ಹಾಗೆಲ್ಲ ನೀನು ಮಾಡಿದರೆ ನಿನಗೆ ಅಲ್ಲಿ ಕೆಲವರು ತೊಂದರೆ ಕೊಡಬಹುದು ಎಂದಿದ್ದ. ಫಕ್ರುದ್ದೀನ್ ಕೂಡ ಅದೇ ರೀತಿಯಲ್ಲಿ ಹೇಳಿದ್ದನಲ್ಲವೇ? ಅಪ್ಪ, ಫಕ್ರುದ್ದೀನ್ ಅಂದಾಜು ಮಾಡಿದ್ದು ಈಗ ನಮ್ಮ ನಡುವೆ ಸಂಭವಿಸುತ್ತಿದೆ.

ಉತ್ತರ ಕರ್ನಾಟಕದ ಸೌಹಾರ್ದತೆ…

ನಾನು ಹತ್ತನೇ ತರಗತಿವರೆಗೆ ಓದಿದ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಆಗ ಅಲೈ ಹಬ್ಬ ಎಲ್ಲರ ಹಬ್ಬವಾಗಿತ್ತು. ಈಗಲೂ ಕೂಡ ಹಾಗೆಯೇ ಇದೆ ಆದರೂ, ಒಂದಿಷ್ಟು ಹಿನ್ನಡೆಯಾಗಿದೆ. ಆದರೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಅನೋನ್ಯವಾಗಿದ್ದಾರೆ.

‘ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮುಸ್ಲಿಮರು ಮತ್ತು ಲಿಂಗಾಯತರ ಕೇರಿಗಳು ಅಥವಾ ಓಣಿಗಳು ಹತ್ತಿಕೊಂಡೇ ಇವೆ. ಅಲ್ಲಿನ ಮುಸ್ಲಿಮರು ಕೂಡ ಕೃಷಿಕರೇ ಆಗಿರುವ ಕಾರಣ ಅಲ್ಲಿ ಲಿಂಗಾಯತರು ಮತ್ತು ಮುಸ್ಲಿಮರ ನಡುವೆ ಕೊಡಕೊಳ್ಳುವ ಸನ್ನಿವೇಶವಿದೆ. ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಹಬ್ಬಗಳನ್ನು ಲಿಂಗಾಯತರೇ ಮುಂದೆ ನಿಂತು ಮಾಡುತ್ತಾರೆ. ಆದರೆ, ದಲಿತರ ಕೇರಿಗಳು ಮಾತ್ರ ಊರ ಹೊರಗಿರುವ ಅಸಮಾನತೆ ಇನ್ನೂ ಮುಂದುವರೆದಿದೆ’ ಎಂದು ಸಂಸ್ಕೃತಿ ಚಿಂತಕ ರಹಮತ್ ತರಿಕೆರೆ ಒಮ್ಮೆ ಹೇಳಿದ್ದರು.

ಅಲೈ ದೇವರ ಕುರಿತೇ ನಾಟಕ ಬರೆದ ಮಿತ್ರ ಹನುಮಂತ ಹಾಲಿಗೇರಿ, ‘ನಮ್ಮ ತುಳಸಿಗೆರೆ (ಬಾಗಲಕೋಟೆ ತಾಲೂಕು) ಗ್ರಾಮವೇನೂ ಅಲ್ಲ. ಅಲ್ಲಿ ಈಗಲೂ ಭೂಮಾಲೀಕ ಲಿಂಗಾಯತ ರೆಡ್ಡಿಗಳು ಅಲೈ ಹಬ್ಬದ ನೇತೃತ್ವ ವಹಿಸುತ್ತಾರೆ. ಊರಿಗೆಲ್ಲ ಪ್ರಸಾದ ಹಂಚುತ್ತಾರೆ. ಬೇರೆ ವಿಷಯಗಳಲ್ಲಿ ಈ ಭೂಮಾಲೀಕರು ತಮ್ಮ ಹಳೆಯ ‘ಶ್ರೇಷ್ಠತೆ’ಯ ಗುಂಗಿನಲ್ಲಿ ಇದ್ದರೂ ಕೂಡ ಅವರು ಮುಸ್ಲಿಮರ ಹಬ್ಬಗಳನ್ನು ತಮ್ಮ ಹಬ್ಬಗಳಂತೆ ಆಚರಿಸುತ್ತಾರೆ’ ಎಂದು ಹೇಳುತ್ತಾರೆ.

‘ದಲಿತರು ಮಾಂಸಾಹಾರಿಗಳು, ಮುಸ್ಲಿಮರೂ ಮಾಂಸಾಹಾರಿಗಳು. ಆದರೆ ಸಸ್ಯಾಹಾರಿಗಳಾದ ಗ್ರಾಮೀಣ ಲಿಂಗಾಯತರು ದಲಿತರ ಜೊತೆ ಅಷ್ಟಾಗಿ ಸಮಾನತೆಯ ನಡವಳಿಕೆ ತೋರುತ್ತಿಲ್ಲ. ಈ ಸಂರಚನೆಯೇ (ಸ್ಟ್ರಕ್ಚರ್) ನನ್ನಲ್ಲಿ ಆಶ್ಚರ್ಯ ಮೂಡಿಸುತ್ತಿದೆ’ ಎನ್ನುವ ರಹಮತ್ ಸರ್, ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚಿರುವ ಗ್ರಾಮೀಣ ಭಾಗಗಳಲ್ಲಿ ಹಲವಾರು ಮುಸ್ಲಿಮರು ಮಾಂಸಾಹಾರವನ್ನು ತ್ಯಜಿಸಿದ್ದಾರೆ ಅಥವಾ ಅದನ್ನು ಕದ್ದುಮುಚ್ಚಿ ತಿನ್ನುತ್ತಾರೆ, ಬಹಿರಂಗ ಮಾಡುವುದಿಲ್ಲ. ಕೆಲವು ಮುಸ್ಲಿಮರು ಲಿಂಗಾಯತಿಕರಣಗೊಂಡಿದ್ದಾರೆ. ಹೀಗಾಗಿ ಇಲ್ಲಿ ಮಠಗಳು ಮತ್ತು ದರ್ಗಾಗಳಲ್ಲಿ ಇಬ್ಬರನ್ನೂ ಕಾಣಬಹುದು’ ಎನ್ನುತ್ತಾರೆ.

‘ಗುರು ಖಾದ್ರಿ ಪೀರ ಎನ್ನುವ ಸಂತರೊಬ್ಬರು, ಬಸವಣ್ಣನನ್ನು ಹೊಗಳಿ ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವರು ಶಂಕರಾಚರ್ಯರನ್ನೋ ಅಥವಾ ಇನ್ನಾರನ್ನೋ ಕುರಿತು ಬರೆಯಲಿಲ್ಲ. ಅನೇಕ ಮುಸ್ಲಿಂ ಗುರುಗಳು, ಸೂಫಿಗಳು ಲಿಂಗಾಯತ ಧರ್ಮದೊಂದಿಗೆ ಆಧ್ಯಾತ್ಮಿಕ ನೆಲೆಯಲ್ಲಿ ಸಂವಾದ ಮಾಡಿದ್ದಾರೆ. ಎರಡರಲ್ಲೂ ಕೊಡುಕೊಳ್ಳುವಿಕೆ ಇದೆ. ಸಾವಳಗಿಯ ಶಿವಲಿಂಗ ಮತ್ತು ಕಲಬುರ್ಗಿಯ ಬಂದೇನವಾಜ್ ಇವರ ತತ್ವಗಳ ಅಂತಿಮ ಸಂದೇಶ ಮಾನವತೆಯೇ ಆಗಿದೆ’ ಎನ್ನುತ್ತಾರೆ.

ನಮ್ಮೂರಲ್ಲಿ (ಗದಗ ಜಿಲ್ಲೆ ತೋಟಗಂಟಿ) ಇರುವುದು ನಾಲ್ಕೇ ಮುಸ್ಲಿಂ ಕುಟುಂಬಗಳು. ಮುಸ್ಲಿಮರ ಹಬ್ಬದಲ್ಲಿ ಇಲ್ಲಿರುವ ಪುಟ್ಟ ಮಸೀದಿ ಎದುರು ಕುಣಿ (ಗುಂಡಿ) ತೆಗೆಯುವುದು ನಾವೇ. ಅಲ್ಲಿ ನಮ್ಮ ಮಕ್ಕಳೆಲ್ಲ ತಮಗೆ ತೋಚಿದಂತೆ, ‘ಅಲೈ ಭಲೇ’ ಎಂದು ಆ ಕುಣಿಯ ಸುತ್ತು ಕುಣಿಯುತ್ತವೆ. ನಮ್ಮ ಮನೆಗೆ ದಿನವೂ ಹಾಲು ಕೊಡುವ ಜಂತೆವ್ವ ನಮ್ಮ ಮನೆಯ ಸದಸ್ಯರಂತೆಯೇ ಭಾಸವಾಗುತ್ತಾರೆ. ನಮ್ಮ ಹೊಲದ ಪಕ್ಕದಲ್ಲೇ ಹೊಲ ಹೊಂದಿರುವ ರಫೀಕ್ ನನ್ನ ಜೊತೆಗೆ ಮಾತನಾಡುತ್ತ, ನಗರಗಳಲ್ಲಿ ಹರಡುತ್ತಿರುವ ಧ್ರುವೀಕರಣದ ಬಗ್ಗೆ ಕಳವಳಗೊಳ್ಳುತ್ತಾನೆ. ಬಿರಿಬಿರಿ ಬಿಸಲಿನಲ್ಲಿ ನಾವು ಕೆರೆ ದಿಬ್ಬದ ಮೇಲೆ ಇಂತಹ ಚರ್ಚೆ ಮಾಡುತ್ತೇವೆ. ಇಬ್ಬರ ಕಿವಿಗಳಿಗೂ ತೂತಿಲ್ಲ, ಸೊಂಟಕೆ ಉಡದಾರವಿಲ್ಲ. ರಫೀಕ್‌ನದೂ ಸುಂತಿಯೇ ಆಗಿಲ್ಲ, ನನ್ನಂತೆ!

ನಮ್ಮ ರೋಣ ತಾಲೂಕಿನ ಬಸವ ಪರಂಪರೆ ಮಠವೊಂದಕ್ಕೆ ಕಳೆದ ವರ್ಷ ಮುಸ್ಲಿಮರೊಬ್ಬರನ್ನು ಮಠಾಧೀಶರನ್ನಾಗಿ ನೇಮಿಸಲಾಗಿತು. ಕಲಬುರ್ಗಿಯ ಜೇವರ್ಗಿಯಲ್ಲೂ ಲಿಂಗಾಯತ ಮಠವೊಂದಕ್ಕೆ ಮುಸ್ಲಿಂರೊಬ್ಬರನ್ನು ನೇಮಿಸಲಾಗಿದೆ.
ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ, ಹೈದರಾಬಾದ್ ಕರ್ನಾಟಕದಲ್ಲಿ ಈಗಲೂ ಲಿಂಗಾಯತರು ಮತ್ತು ಮುಸ್ಲಿಮರ ನಡುವಿನ ಅನೋನ್ಯತೆ ಹಾಗೇ ಇದೆ.

ಏಕ ದೇವೋಪಾಸನೆ ಎಂಬ ಸಾಮ್ಯತೆ

ನೈಜ ಇಸ್ಲಾಂ ಮತ್ತು ನೈಜ ಲಿಂಗಾಯತದಲ್ಲಿ (ಬಸವಣ್ಣ ಸ್ಥಾಪಿಸಿದ್ದು) ಎರಡರಲ್ಲು ಏಕ ದೇವೋಪಾಸನೆ ಇದೆ. ಇಲ್ಲಿ ದೇವರು ನಿರಾಕಾರ’ ಎಂದು ರಹಮತ್ ತರಿಕೆರೆ ಗುರುತಿಸುತ್ತಾರೆ.
ಗದಗಿನ ಮುಸ್ಲಿಂ ಪತ್ರಕರ್ತರೊಬ್ಬರು, ‘ನಾವು ಪ್ರಾರ್ಥನೆ ಮಾಡಾದು, ನೀವ್ ಪೂಜೆ ಮಾಡಾದು ಎಲ್ಲ ಒಂದೇರಿ. ನಿರಾಕಾರ ದೇವರು. ಅಂತಿಮದಲ್ಲಿ ಇಬ್ಬರೂ ಹೂಳುತ್ತೇವೆ. ಲಿಂಗಾಯತರು ಮತ್ತು ಮುಸ್ಲಿಮರು ಅಂತಿಮ ಸಂಸ್ಕಾರ ಗೌರವಪೂರ್ವಕವಾಗಿ ಇರಬೇಕು ಎಂದು ಬಯಸುತ್ತಾರೆ’ ಎಂದು ಹೇಳಿದರು.

ತೋಂಟದಾರ್ಯರ ಸೇವೆ ಅನುಪಮ

‘ಆಧ್ಯಾತ್ಮಿಕ ಕಾರಣಕ್ಕೆ, ಕೃಷಿ ಕೊಡಕೊಳ್ಳುವಿಕೆ ಕಾರಣಕ್ಕೆ, ಗುರು-ಶಿಷ್ಯ ಪರಂಪರೆ ಕಾರಣಕ್ಕೆ ಅನೋನ್ಯರಾಗಿದ್ದ ಉತ್ತರ ಕರ್ನಾಟಕದ ಲಿಂಗಾಯತರು ಮತ್ತು ಮುಸ್ಲಿಮರಲ್ಲಿ ಒಂದು ಸಣ್ಣ ಬಿರುಕು ಉಂಟಾಗುವಂತೆ ಮಾಡಿದ್ದು, ಕೆಲವು ಲಿಂಗಾಯತ ರಾಜಕಾರಣಿಗಳು ತಮ್ಮ ಲಿಂಗಾಯತದ ಮೂಲ ಆಶಯವನ್ನೇ ವಿನಾಶ ಮಾಡುವ ಪಕ್ಷದ ಹಿಂದೆ ಬಿದ್ದಿದ್ದು… ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿ, ಇಳಕಲ್ಲಿನ ಮಹಾಂತ ಸ್ವಾಮಿಗಳು ಈ ಬಿರುಕನ್ನು ಸರಿದೂಗಿಸಲು ದಿಟ್ಟ ನಿಲುವುಗಳ ಮೂಲಕ ಕೆಲಸ ಮಾಡಿದರು. ಈಗ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಅವರು ಕೂಡ ಈ ಕೆಲಸ ಮಾಡುತ್ತಿದ್ದಾರೆ.
ಪ್ರೊ. ರಹಮತ್ ತರಿಕೆರೆ

‘ನಮ್ಮ ಪರಂಪರೆಯಲ್ಲೇ ಸೂಫಿ ಮತ್ತು ಲಿಂಗ ಪರಂಪರೆ ಒಂದಕ್ಕೊಂದು ಪೂರಕವಾಗಿಯೇ ಜನಹಿತ, ಸಮಾನತೆ ಸಾರಿವೆ. 90ರ ದಶಕದ ನಂತರ ಪಟ್ಟಣಗಳ ‘ಎಲೈಟ್’ ಲಿಂಗಾಯತರು ಕೋಮುವಾದಿ ಪಕ್ಷದ ಆರಾಧಕರಾದ ನಂತರ ಒಂದಿಷ್ಟು ಬಿರುಕನ್ನು ಸೃಷ್ಟಿಸುವ ಕೆಲಸ ನಡೆದಿದೆ’ ಎಂದು ಬರಹಗಾರ ಪೀರ್‌ಬಾಷಾ ಹೇಳುತ್ತಾರೆ.

ಉಗ್ರ ರಾಷ್ಟ್ರವಾದದ ಹೆಸರಲ್ಲಿ 90ರ ದಶಕದಲ್ಲಿ ದಾಳಿಯಿಟ್ಟ ರಾಜಕೀಯ ಇಲ್ಲಿ ಸಣ್ಣಗೆ ಧರ್ಮಗಳ ನಡುವೆ ಗೋಡೆಗಳನ್ನು ಕಟ್ಟಲು ನೋಡುತ್ತಿದೆ.
ಸದ್ಯಕ್ಕೆ ಕೊರೊನಾ ವೈರಸ್ ಇವರ ಸೊಕ್ಕನ್ನು ಮುರಿಯುತ್ತಿದೆಯೇ?
‘ಕಿವಿಗೆ ತೂತಿಲ್ಲ, ಸೊಂಟಕೆ ಉಡದಾರವಿಲ್ಲ. ನಾನು ಮನುಷ್ಯನಷ್ಟೇ’ ಎಂದು ಹೇಳಬೇಕಾದ ಸಂದರ್ಭವಿದು. ಅನಿಕೇತನರಾಗೋಣ…..

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಪ್ರತ್ಯೇಕ ಅಸ್ತಿತ್ವ ಬಯಸುವ ‘ಆದಿ ಧರ್ಮ’: ಡಾ. ಎ ಎಸ್ ಪ್ರಭಾಕರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಸರ್ ಇವತ್ತಿಗೂ ಹೈದರಬಾದ ಕರ್ನಾಕದಲ್ಲಿ ಈ ಸಾಮರಸ್ಯ ಇದೆ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...