ಯೋಗೋದ್ಯಮಿ ಬಾಬಾ ರಾಮ್ದೇವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಈ ಬಾರಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಬಗ್ಗೆ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ.
ರಾಜಸ್ಥಾನದ ಬಾರ್ಮರ್ನಲ್ಲಿ ನಡೆದ ಸಭೆಯೊಂದರಲ್ಲಿ ರಾಮ್ದೇವ್ ಅವರು ಮಾತನಾಡುತ್ತಾ, “ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಮತಾಂತರದ ಗೀಳನ್ನು ಹೊಂದಿವೆ” ಎಂದು ಹೇಳಿದ್ದಾರೆ.
ಫೆಬ್ರವರಿ 2ರಂದು ಬಾರ್ಮರ್ನಲ್ಲಿ ನಡೆದ ಹಿಂದೂ ಮುಖಂಡರ ಸಭೆಯಲ್ಲಿ ರಾಮ್ದೇವ್ ಪಾಲ್ಗೊಂಡಿದ್ದರು. “ಹಿಂದೂ ಹುಡುಗಿಯರನ್ನು ಅಪಹರಿಸುತ್ತಾರೆ, ಭಯೋತ್ಪಾದನೆ ಮಾಡುತ್ತಾರೆ. ಈ ಎಲ್ಲಾ ಪಾಪಗಳನ್ನು ನಮಾಜ್ ತೊಳೆಯುತ್ತದೆ ಎಂದು ಮುಸ್ಲಿಮರು ನಂಬುತ್ತಾರೆ” ಎಂದು ಅವರು ಹೇಳಿಕೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ರಾಮದೇವ್, “ನಿಮ್ಮ ಧರ್ಮ ಏನು ಹೇಳುತ್ತದೆ ಎಂದು ಮುಸ್ಲಿಂನನ್ನು ಕೇಳಿ- ಐದು ಬಾರಿ ನಮಾಜ್ ಓದಿ ನಂತರ ಮನಸ್ಸಿಗೆ ಬಂದದ್ದನ್ನು ಮಾಡಿ- ಎನ್ನುತ್ತಾರೆ. ನೀವು ಹಿಂದೂ ಹುಡುಗಿಯರನ್ನು ಅಪಹರಿಸುತ್ತೀರಾ, ನಿಮಗೆ ಅನಿಸಿದ ಪಾಪವನ್ನು ಮಾಡಿರಿ. ಇಸ್ಲಾಮಿನ ಅರ್ಥ ಕೇವಲ ನಮಾಜ್ ಎಂದು ಅವರು ಭಾವಿಸುತ್ತಾರೆ” ಎಂದು ತಿಳಿಸಿದ್ದಾರೆ.
Location: Barmer, Rajasthan
Yoga Guru Baba Ramdev delivers hateful speech targeting Muslims and Christians. pic.twitter.com/s4tFXseGZ9
— HindutvaWatch (@HindutvaWatchIn) February 3, 2023
ಮುಂದುವರಿದು, “ನಮ್ಮ ಮುಸ್ಲಿಂ ಸಹೋದರರು ಬಹಳಷ್ಟು ಪಾಪಗಳನ್ನು ಮಾಡುತ್ತಾರೆ, ಆದರೆ ಅವರು ಖಂಡಿತವಾಗಿಯೂ ಪ್ರಾರ್ಥನೆ ಮಾಡುತ್ತಾರೆಂಬುದನ್ನು ನೋಡಿದ್ದೇನೆ. ಏಕೆಂದರೆ ಅವರಿಗೆ ಕಲಿಸಿರುವುದು ಅದನ್ನೇ, ಕೇವಲ ಪ್ರಾರ್ಥನೆ ಮಾಡಿ ಎಂಬುದಾಗಿದೆ. ಅವರು ಭಯೋತ್ಪಾದಕರಾಗುತ್ತಾರೆ, ಹೆಚ್ಚಿನವರು ಅಪರಾಧಿಗಳಾಗುತ್ತಾರೆ” ಎಂದು ಆರೋಪಿಸಿದ್ದಾರೆ.
“ಇದನ್ನು ಇಸ್ಲಾಂ ಅಥವಾ ಕುರಾನ್ ಬೋಧಿಸುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ ಹೀಗೆಯೇ ಅನುಸರಿಸಲಾಗುತ್ತಿದೆ” ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡುತ್ತಾ, “ಕ್ರಿಶ್ಚಿಯಾನಿಟಿ ಏನು ಹೇಳುತ್ತದೆ? ಚರ್ಚ್ಗೆ ಹೋಗಿ, ಮೇಣದಬತ್ತಿಯನ್ನು ಬೆಳಗಿಸಿ, ತದನಂತರ ಕರ್ತನಾದ ಯೇಸುವಿನ ಮುಂದೆ ನಿಂತುಕೊಳ್ಳಿ. ನಿಮ್ಮ ಎಲ್ಲಾ ಪಾಪಗಳು ತೊಳೆಯಲ್ಪಡುತ್ತವೆ. ಕ್ರಿಶ್ಚಿಯನ್ನರು ತಮ್ಮ ಎದೆಯ ಮೇಲೆ ಶಿಲುಬೆಯನ್ನು ಧರಿಸುತ್ತಾರೆ ಮತ್ತು ಧರ್ಮವನ್ನು ಪ್ರಚಾರ ಮಾಡುತ್ತಾರೆ” ಎಂದು ಆರೋಪಿಸಿದ್ದಾರೆ.
“ನಾನು ಯಾರನ್ನೂ ಟೀಕಿಸುವುದಿಲ್ಲ. ಈ ಜನರು ಕೇವಲ ಗೀಳನ್ನು ಹೊಂದಿದ್ದಾರೆ. ಕೆಲವರು ಇಡೀ ಜಗತ್ತನ್ನು ಇಸ್ಲಾಂ ಆಗಿ ಪರಿವರ್ತಿಸಿ ಎಂದು ಹೇಳುತ್ತಾರೆ, ಇನ್ನು ಕೆಲವರು ಇಡೀ ಪ್ರಪಂಚವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಬೇಕು ಎಂದು ಹೇಳುತ್ತಾರೆ. ಆದರೆ ಮತಾಂತರದ ಮೂಲಕ ನೀವು ಏನು ಮಾಡುತ್ತೀರಿ ಎಂದರೆ, ಯಾವುದೇ ಅಜೆಂಡಾ ಇರುವುದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದೂ ಧರ್ಮಕ್ಕೆ ಹೋಲಿಸುತ್ತಾ, ಎರಡು ಧರ್ಮಗಳನ್ನು (ಇಸ್ಲಾಂ, ಕ್ರಿಶ್ಚಿಯನ್) ಅವಹೇಳನ ಮಾಡಿರುವ ಅವರು, “ಅಹಿಂಸೆ ಮತ್ತು ಪ್ರಾಮಾಣಿಕತೆಯನ್ನು ಕಲಿಸುತ್ತದೆ” ಎಂದು ಹಿಂದೂ ಧರ್ಮವನ್ನು ಹೊಗಳಿದ್ದಾರೆ. ವಿಪರ್ಯಾಸವೆಂದರೆ, ಕೇವಲ ಒಂದು ವಾರದ ಹಿಂದೆ, ಮುಂಬೈನಲ್ಲಿ ಮತ್ತೊಬ್ಬ ಹಿಂದುತ್ವ ಮುಖಂಡ ಮಾತನಾಡುತ್ತಾ, “ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳಬೇಕು, ಮುಸ್ಲಿಮರಿಗೆ ಪಾಠ ಕಲಿಸಬೇಕು” ಎಂದು ಪ್ರಚೋದಿಸಿದ್ದರು.
ರಾಜಸ್ಥಾನ ಪೊಲೀಸರು ರಾಮದೇವ್ ಹೇಳಿಕೆಗಳ ಬಗ್ಗೆ ಸ್ವಯಂಪ್ರೇರಿತ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳಾಗಿವೆ.
ರಾಮದೇವ್ ಹೇಳಿಕೆಯನ್ನು ಟೀಕಿಸಿರುವ ಎನ್ಜಿಒ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್, “ಈ ಭಾಷಣದ ಮೂಲಕ ರಾಮ್ದೇವ್ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಿಂದೂ ಧರ್ಮವನ್ನು ಎಲ್ಲಕ್ಕಿಂತ ಉತ್ತಮ ಧರ್ಮವೆಂದು ಬಿಂಬಿಸುವ ಸಲುವಾಗಿ, ರಾಮ್ದೇವ್ ಪೂರ್ವಾಗ್ರಹ ಪೀಡಿತರಾಗಿದ್ದಾರೆ” ಎಂದಿದೆ.
ರಾಮದೇವ್ ಸಮಸ್ಯಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್ನಲ್ಲಿ, ಈ ಯೋಗೋದ್ಯಮಿಯು ಮಹಿಳೆಯರ ಸೀರೆಯ ಬಗ್ಗೆ ಮಾತನಾಡುತ್ತಾ, “ಏನನ್ನೂ ಧರಿಸದಿದ್ದರೂ ಮಹಿಳೆಯರು ಚೆನ್ನಾಗಿ ಕಾಣುತ್ತಾರೆ” ಎಂದಿದ್ದರು. ಈ ಹೇಳಿಕೆಯ ಬಳಿಕ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ (ಎಂಎಸ್ಸಿಡಬ್ಲ್ಯು) ಅವರಿಗೆ ನೋಟಿಸ್ ಜಾರಿ ಮಾಡಿತ್ತು. ನಂತರ ಅವರು ಕ್ಷಮೆಯಾಚಿಸಿದ್ದರು.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಆ ಕಾರ್ಯಕ್ರಮದಲ್ಲಿ ಹಾಜರಿದ್ದರು.