Homeಕಥೆಕಠೋಪನಿಷತ್ತು - ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

ಕಠೋಪನಿಷತ್ತು – ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

- Advertisement -
- Advertisement -

ಆಚರಣೆಯು ಅನುಷ್ಠಾನದಿಂದ ಹೊರತಾಗಿರುವುದರ ವಿರುದ್ಧವಾಗಿ ಬಂಡಾಯವೇಳುವ ನಚಿಕೇತನೆಂಬ ಹುಡುಗನ ಕತೆ ಈ ಕಠೋಪನಿಷತ್ತು.

ಉದ್ದಾಲಕ ನಚಿಕೇತನ ತಂದೆ. ಅವನು ಸರ್ವವೇದಸ್ ಎಂಬ ಯಜ್ಞವನ್ನು ಮಾಡಿದ. ಅದರ ಪ್ರಕಾರ ತನ್ನಲ್ಲಿರುವ ಎಲ್ಲವನ್ನೂ ಕೂಡಾ ಯಜ್ಞಕರ್ತೃವು ಕೊಡಬೇಕು. ಹಸುಗಳೇ ಅವರ ಸಂಪತ್ತು. ಉದ್ದಾಲಕನು ತನ್ನಲ್ಲಿರುವ ಎಲ್ಲಾ ಹಸುಗಳನ್ನು ದಾನ ಮಾಡುವ ಬದಲು ಉತ್ತಮವಾದ ಹಸುಗಳನ್ನು ಇಟ್ಟುಕೊಂಡು ಗೊಡ್ಡು ಹಸುಗಳನ್ನು ಬಂದವರಿಗೆ ದಾನವಾಗಿ ನೀಡುತ್ತಿದ್ದ.

ಇದನ್ನು ನಚಿಕೇತ ಗಮನಿಸಿದ. ತನ್ನಲ್ಲಿರುವ ಸರ್ವಸ್ವವನ್ನೂ ಕೊಟ್ಟು ಲೌಕಿಕ ಭಾರದಿಂದ ಮುಕ್ತನಾಗಬೇಕಿದ್ದ ತಂದೆ ಆಚರಣೆಯಲ್ಲಿ ಹಾಗೆ ತೋರುತ್ತಿದ್ದಾನೆ ಆದರೆ ವಾಸ್ತವದಲ್ಲಿ ಲೋಭಿಯೇ ಆಗಿದ್ದಾನೆ. ನಡೆನುಡಿ ಹೊಂದದ, ಆಚರಣೆ ಅನುಷ್ಠಾನಗಳಿಗೆ ತಾಳೆಯಾಗದ ಈ ಯಜ್ಞವನ್ನು ಅವನು ಪ್ರತಿಭಟಿಸುವ ರೀತಿ ವಿಶಿಷ್ಟವಾಗಿದೆ.

ನಚಿಕೇತ ಅವರ ಮನೆಯಲ್ಲಿ ಜಾಣನಾಗಿ ಗುರುತಿಸಿಕೊಂಡಿರುವವನಲ್ಲ. ಒಂದು ರೀತಿಯಲ್ಲಿ ಕೆಲಸಕ್ಕೆ ಬಾರದವನು. ಏನೂ ಕೆಲಸಕ್ಕೆ ಬಾರದ ಹಸುಗಳನ್ನು ದಕ್ಷಿಣೆಯಾಗಿ ಕೊಡುತ್ತಿದ್ದ ತಂದೆಯ ಗಮನ ಸೆಳೆದು ಇದೇ ಕೆಲಸಕ್ಕೆ ಬಾರದ ಮಗ ಕೇಳಿದ “ನನ್ನನ್ನು ಯಾರಿಗೆ ಕೊಡುತ್ತೀರಿ?” ಎಂದು.

ಈ ಪ್ರಶ್ನೆಯೇ ಅವನ ಪ್ರತಿಭಟನೆ. ಈ ಪ್ರಶ್ನೆಯಲ್ಲಿ ತಂದೆಯ ಡಾಂಭಿಕತನವನ್ನು ಪ್ರಶ್ನಿಸುತ್ತಾನೆ. ಶುಷ್ಕ ಆಚರಣೆಗಳನ್ನು, ಆಧ್ಯಾತ್ಮ ಮೌಲ್ಯಗಳನ್ನು ಗ್ರಹಿಸದ ವಿಧಿಗಳನ್ನು, ತನ್ನ ಸಂಪತ್ತನ್ನು ದಾನ ತೆಗೆದುಕೊಳ್ಳಿ ಎಂದು ಪೊಳ್ಳನ್ನು ಕೊಡುವ ಮೋಸವನ್ನು ಪ್ರಶ್ನಿಸುತ್ತಾನೆ. ಕೆಲಸಕ್ಕೆ ಬಾರದ ಮಗನನ್ನು ಏನು ಮಾಡುತ್ತೀಯಾ ಎಂದು ಕೆಲಸಕ್ಕೆ ಬಾರದವೆಂದು ಹಸುಗಳನ್ನು ದಾನದ ಹೆಸರಲ್ಲಿ ಕೈ ತೊಳೆದುಕೊಳ್ಳುವ ಮನುಷ್ಯನ ವ್ಯಾಮೋಹವನ್ನು ಪ್ರಶ್ನಿಸುತ್ತಾನೆ.

ನಚಿಕೇತ ಎಲ್ಲೋ ಮೂಲೆಯಲ್ಲಿ ಕೇಳಲಿಲ್ಲ. ಯಜ್ಞ ನಡೆಯುವಲ್ಲಿ ಎಲ್ಲರ ಮುಂದೆ ಕೇಳಿದ. ಮುಜುಗರಗೊಂಡ ತಂದೆ ಉತ್ತರಿಸದೇ ತಪ್ಪಿಸಿಕೊಳ್ಳುತ್ತಾನೆ. ಆದರೆ ಇವನು ಬಿಡದೇ ಮೂರು ಬಾರಿ ಕೇಳುತ್ತಾನೆ. ಕೆರಳಿದ ತಂದೆ ನಿನ್ನ ಸಾವಿಗೆ ಕೊಡುತ್ತೇನೆ ಎನ್ನುತ್ತಾನೆ.

ಮಾತು ಮತ್ತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿಯುವ ನಚಿಕೇತನ ಪ್ರತಿಭಟನೆ ಮುಂದುವರಿಯುತ್ತದೆ. ನಾನು ಸಾವಿಗೆ ಹೋಗುತ್ತೇನೆ ಎಂದು ಹೋಗುತ್ತಾನೆ ನಚಿಕೇತ.
ಮುಂದಿನ ಭಾಗ ರೂಪಕ. ಏಕೆಂದರೆ ಮೃತ್ಯುವಿನ ದೇವತೆಯಾದ ಯಮನಿಗಾಗಿ ಮೂರು ದಿನಗಳ ಕಾಲ ಕಾದು ನಂತರ ಅವನನ್ನು ಸಂಧಿಸಿ ಮರಣದಾಚೆಯ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತಾನೆ.

ವೈದಿಕರ ಯಾವ ಯಜ್ಞವನ್ನು ವಿರೋಧಿಸಿ ಮಾತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದನೋ ಆ ನಚಿಕೇತನೇ ಮುಂದೆ ಯಮನಿಂದ ಯಜ್ಞ ಮಾಡುವುದನ್ನು ಕಲಿತುಕೊಳ್ಳುವುದನ್ನು ಸೂಚಿಸುತ್ತದೆ. ಆದರೆ ಅದು ಸಮಿತ್ತುಗಳನ್ನಿಟ್ಟು ಅಗ್ನಿಕಾರ್ಯದಿಂದ ಮಾಡುವ ಯಜ್ಞವಾಗಿರದೇ ಆಂತರಿಕ ಯಜ್ಞವಾಗಿ ಅನಾವರಣಗೊಳ್ಳುತ್ತದೆ.

ಅದೇನೇ ಇರಲಿ, ಒಬ್ಬ ಪ್ರತಿಭಟನಾಕಾರನಿಗೆ ಇರಬೇಕಾದ ಆತ್ಮವಿಶ್ವಾಸವನ್ನು ನಚಿಕೇತ ಅಲ್ಲಿ ತೋರುತ್ತಾನೆ. “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ತಂದೆ ಹೇಳಿದಾಗ, “ಬಹುಜನರಲ್ಲಿ ಪ್ರಥಮನಾಗಿ, ಬಹುಜನರಲ್ಲಿ ಮಧ್ಯಮನಾಗಿರುವ ನನ್ನಿಂದ ಯಾವ ಕೆಲಸ ಮೃತ್ಯುವಿಗೆ ಆಗುತ್ತದೆ?” ಎಂದು ಯೋಚಿಸುತ್ತಾನೆ. ತಾನು ಅಧಮನಲ್ಲ ಎಂಬ ಆತ್ಮವಿಶ್ವಾಸವಿದೆ ಅವನಲ್ಲಿ. ಅಷ್ಟೇಅಲ್ಲದೇ ತಾನು ಪ್ರತಿಭಟಿಸಿದ ತಂದೆಗೆ ನಿದ್ರೆಗಳಿಂದ ಕೂಡಿರುವ ರಾತ್ರಿಯಿರಲಿ ಎಂದು ಒತ್ತಡರಹಿತವಾದ ಮನಸ್ಥಿತಿ ಬಯಸುತ್ತಾನೆ. ಪ್ರತಿಭಟನೆ ಮತ್ತು ಪ್ರೀತಿ ತೋರುವ ಆತ್ಮೀಯ ಭಾವ ನಚಿಕೇತದಲ್ಲಿ.

ಕಠೋಪನಿಷತ್ತಿನಲ್ಲಿ ಮೂಲಕತೆಯೊಂದಿಗೆ ನುಸುಳುವಿಕೆಗಳಿವೆ ಎಂದು ತೋರುತ್ತದೆ. ಆದರೆ, ನಚಿಕೇತನೆಂಬ ಸಾತ್ವಿಕ ಬಂಡಾಯಗಾರನ ಪ್ರತಿಮೆ ಮಾತ್ರ ಅತ್ಯಂತ ಆಪ್ತ. ಇದನ್ನೇ ಆಧರಿಸಿ ತ ರಾ ಸು “ಬೆಳಕು ತಂದ ಬಾಲಕ” ಎಂಬ ಕಾದಂಬರಿ ರಚಿಸಿದ್ದಾರೆ. ಇದೂ ಕೂಡಾ ನಚಿಕೇತನ ವ್ಯಕ್ತಿತ್ವದ ದರ್ಶನ ಮಾಡಿಸುವಂತದ್ದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...