Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

ಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

- Advertisement -
- Advertisement -

ಉಮರನ ಕವನಗಳೆಂದರವು ಇಹದ ಅಮಲು, ಪರದ ಅನುಭಾವ, ಪ್ರೀತಿಯ ಗಮಲು, ಕಾವ್ಯದ ಹುಚ್ಚು; ಪರ್ಶಿಯಾ ಭಾಷೆಯಲ್ಲಿನ ಈ ನಾಲ್ಕು ಸಾಲಿನ ಕವನಗಳನ್ನು ಎಡ್ವರ್ಡ್ ತಮ್ಮದಾಗಿಸಿಕೊಂಡು ಮಾಡಿರುವ ಅನುವಾದಗಳಲ್ಲೆಲ್ಲೂ ಪರಕೀಯತೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ಆದರೆ ಪರ್ಶಿಯಾ ಭಾಷೆ ಗೊತ್ತಿದ್ದವರು ಅದನ್ನು ಹೇಳಬೇಕು. ಅಮಲು, ಗಮಲು ಮತ್ತು ಹುಚ್ಚಿನಲ್ಲಿರುವ ಯಾವನೊಬ್ಬ ತನ್ನೆದೆಯ ಗೂಡಿನಲ್ಲಿ ಬೆಚ್ಚಗಿರುವ ತಲೆಯನ್ನು ಕಳೆದುಕೊಂಡಿರುತ್ತಾನೋ, ಅವನಿಗೆ ಎಡ್ವರ್ಡ್‌ನ ಅನುವಾದವೋ, ಉಮರನ ಮೂಲವೋ ಎಂಬುದು ವಿಷಯವಲ್ಲ. ಆ ಹೊತ್ತಿನ ಅವನೆದೆಯ ಸೊತ್ತಾಗುತ್ತದೆ ಅಷ್ಟೇ.

ಮೌನವೇ ಸೊಲ್ಲಾಗಿರುವಂಗೆ ದಾರಿಯಿಲ್ಲದ ಬಯಲು, ಎಲ್ಲೆಯಿಲ್ಲದ ಮುಗಿಲು ಕಣ್ಣಿಗಾಗಲಿ, ಕಾಲಿಗಾಗಲಿ ತೊಡರದು. ನಾನೂ ಇಲ್ಲ, ನೀನೂ ಇಲ್ಲ. ಅದೂ ಇಲ್ಲ, ಇದೂ ಇಲ್ಲ. ಎಲ್ಲವೂ ಇದೆ, ಯಾವುದೂ ಇಲ್ಲ.

ಕೀಲಿಯಿಲ್ಲದ ಕದವನು ಕಂಡೆ
ಕಾಣಲಾರದಂತಹ ಪರದೆಯಿದೆ
ನಮ್ಮ ನಡುವೆ ಸಣ್ಣ ಮಾತು ಅಲ್ಪ ಕಾಲದೆ
ಇಲ್ಲವಾಯ್ತಾಗ ನಾನು ನೀನೆಂಬುದೆ

ಕುಡಿತವೆಂಬುದು ಇಹವ ಮರೆಯುವ ಒಂದು ನೆಪ. ಲೌಕಿಕದ ಲೆಕ್ಕ್ಕಾಚಾರಗಳೆಲ್ಲಾ ಭ್ರಷ್ಟವಾಗಿರುವವು ಅಲೌಕಿಕ ಮುಕ್ತ ಬಯಲಿನಲ್ಲಿ. ಕಾಲವೇ ಜೀವನ. ಜೀವನವೇ ಕಾಲ. ಏಕೆಂದರೆ ಅರಿವಿಲ್ಲದಂತೆ ಆಯ್ತೆಮ್ಮ ಜನನ, ಅರಿತಿಲ್ಲ ನಾವು ಎಂದು ಬರುವುದೋ ಮರಣ. ಅವಧಿ ಎಂಬುವುದುಂಟು ಹುಟ್ಟುಸಾವಿನ ನಡುವೆ. ಆ ಕಾಲವಲ್ಲವೇ ನಮ್ಮೆಲ್ಲಾ ಜೀವನ? ಕಾಲ ಮತ್ತು ಜೀವನ ಸಮಾನಾರ್ಥಕ ಪದಗಳು. ಒಂದಕ್ಕೆ, ಒಬ್ಬರಿಗೆ ಸಮಯವನ್ನು ಕೊಡುತ್ತೇವೆಂದರೆ ಜೀವನವನ್ನೇ ಕೊಡುತ್ತೇವೆಂದು ಅರ್ಥ. ಆ ಜೀವನವನ್ನು ಲೌಕಿಕವು ಬಂಧಿಸದಿರಲು ಇಹವನ್ನು ಮರೆಯುವ ಅಮಲು ಬೇಕು.

ಕೋಳಿ ಕೂಗುತ್ತಿದ್ದಂತೆ ಮದಿರಾಲಯದ ಮುಂದೆ
ನಿಂತಾತ ಕೂಗಿದ – ಕೂಡಲೆ ಬಾಗಿಲನು ತೆರೆ
ನಾವೆಷ್ಟು ಅಲ್ಪ ಕಾಲ ಇರುವುದೆಂದು ನಿನಗೆ ಗೊತ್ತಿಲ್ಲ
ಒಮ್ಮೆ ಇಲ್ಲಿಂದ ಹೊರಟರೆ ಬರದಿರಬಹುದು ಹಿಂದೆ.

ಆ ಸಿದ್ಧಾಂತ, ಈ ಸಾಧನೆ, ಅದೆಂತದ್ದೋ ಘನತೆ, ಇಂತಹದ್ದೊಂದು ಅಧಿಕಾರ; ಎಂದೆಲ್ಲಾ ಪರಿಪಾಟಲು ಪಡುವಾಗ ಉಮರ ಮೆಲ್ಲನೆ ಕಿವಿಯಲ್ಲಿ ಉಲಿಯುವನು.

ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?
ನಾವೂ ಕೂಡಾ ಮಣ್ಣಿಗಿಳಿದು ಬಿಡುವ ಮುನ್ನವೇ.
ಮಣ್ಣು ಮಣ್ಣಾಗುವಾಗ, ಮಣ್ಣ ಕೆಳಗುರುಳಿರುವಾಗ,
ಮದ್ಯವಿಲ್ಲ, ಹಾಡಿಲ್ಲ, ಹಾಡುವನಿಲ್ಲ, ಕೊನೆಯೂ ಇಲ್ಲ.

ಬದುಕೆಂಬುದೇ ಮಧುಪಾತ್ರೆ. ಅದನ್ನು ಸಿಹಿ ಎನ್ನುವುದೇ, ಕಹಿ ಎನ್ನುವುದೇ? ಅದು ರುಚಿಗಳನ್ನು ಮೀರಿರುವುದು. ಆದರೆ ಅರುಚಿಯ ರೋಗವಲ್ಲವದು. ಅಭಿರುಚಿಯ ರಸಿಕತೆಯದು.

ನೈಶಾಪುರದಲ್ಲಾಗಲಿ, ಬ್ಯಾಬಿಲೋನಲ್ಲಾಗಲಿ
ಬಟ್ಟಲೊಸರುತ್ತಿರುವುದು ಸಿಹಿಯಿಂದಾಗಲಿ, ಕಹಿಯಿಂದಾಗಲಿ
ಬದುಕ ಮಧುಪಾತ್ರೆ ಸೋರುತ್ತಿರುವುದು ಹನಿಹನಿಯಾಗಿ
ಬಾಳ ಬಿಟ್ಟು ಹನಿಯುತ್ತಲಿರುವುದು ಒಂದೊಂದಾಗಿ.

ಉಮರ ಇಸ್ಲಾಮಿನ ಕರ್ಮಠರಿಗೆ ತನ್ನ ಅನೇಕ ಕವನಗಳಲ್ಲಿ ಸೃಷ್ಟಿಯ ಸೌಂದರ್ಯದ ಪಾಠವನ್ನು ಮಾಡುವನು. ಸಂಪ್ರದಾಯ ಮತ್ತು ಆಚರಣೆಗಳಿಂದಾಗಿ ತಮ್ಮ ಬದುಕಿನ ಆದ್ರತೆಯನ್ನು ಬರಡಾಗಿಸಿಕೊಳ್ಳದಿರುವಂತೆ ಪ್ರೇರೇಪಿಸಲು ಯತ್ನಿಸುತ್ತಾನೆ. ಅದಾದರೂ ತನ್ನ ಕಡೆಯಿಂದ ಅವರಿಗಾಗಿ ಮಾಡುವಂತ ಪ್ರಯತ್ನವೇನಲ್ಲ. ಆದರೂ ಅವು ಸಾಂಪ್ರದಾಯಿಕ ವಿಚಾರಗಳ ಮತ್ತು ಸೂಫಿ ಸಿದ್ಧಾಂತಗಳ ನಡುವೆ ಚರ್ಚೆಯನ್ನು ತಂದಿಡುತ್ತವೆ.

ಒಟ್ಟಿನಲ್ಲಿ ಎಡ್ವರ್ಡ್ ತಮ್ಮ ಒಲವಿನಂತೆ ಲೌಕಿಕತೆಯಲ್ಲಿ ಅಲೌಕಿಕತೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಅಮಲಿನ ಪದ್ಯಗಳನ್ನು ಆಯ್ದುಕೊಂಡಿದ್ದಾರೆ. ಮುಕ್ತವಾಗಿ ಭಾವಾನುವಾದ ಮಾಡುವಂತೆ ಮಾಡದೇ ಪರ್ಶಿಯಾ ಮೂಲದ ಕೃತಿಯ ಲಯವನ್ನು ಇಂಗ್ಲಿಷಿನಲ್ಲಿ ಕಾಯ್ದಿಟ್ಟುಕೊಳ್ಳಲು ಯತ್ನಿಸಿದ್ದಾರೆ. ಸಾಮಾನ್ಯವಾಗಿ ಇದು ಕಷ್ಟದ ಕೆಲಸವೇ. ಆದರೆ ಮಾಡಿರುವ ಉತ್ತಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದಾಗಿ ಉಮರ ಗಮಲನ್ನು ಕೆಡಿಸದಿರಲು ಸಾಧ್ಯವಾಗಿದೆ ಎನಿಸುತ್ತದೆ. ಕನ್ನಡದಲ್ಲಿ ಡಿ ವಿ ಗುಂಡಪ್ಪನವರು ಉಮರನ ಒಸಗೆ ಎಂದು ಅನುವಾದಿಸಿರುವುದೂ ಕೂಡಾ ಇದೇ ಎಡ್ವರ್ಡ್ ಫಿಟ್ಜ್ ಜೆರಾಲ್ಡನ ಅನುವಾದವನ್ನೇ.

ಆಡುವವನೆಸೆವಂತೆ ಬೀಳ್ವ ಚೆಂದಿಗದೇಕೆ
ಎಡಬಲಗಳೆಣಿಕೆ, ಸೋಲ್ ಗೆಲವುಗಳ ಗೋಜು
ನಿನ್ನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು – ಬಲ್ಲನೆಲ್ಲವನು.

ಆತ್ಮ ಮತ್ತು ಪರಮಾತ್ಮನು ಒಂದಾಗುವಂತಹ ಅದ್ವೈತ ಸಿದ್ಧಾಂತ ಇಸ್ಲಾಮಿನ ಸಾಂಪ್ರದಾಯಿಕ ನಂಬುಗೆಯಲ್ಲಿ ಇಲ್ಲ. ಆದರೆ, ಸೂಫಿ ಪರಂಪರೆಯಲ್ಲಿ ಇಂತಹ ಅನುಭಾವಗಳಿಗೆ ಕೊರತೆ ಇಲ್ಲ. ಉಪನಿಷತ್ತಿನ, ಬೌದ್ಧ ಮತ್ತು ಕ್ರೈಸ್ತಧರ್ಮಗಳ ಪ್ರಭಾವಗಳನ್ನೆಲ್ಲಾ ತನ್ನದಾಗಿಸಿಕೊಂಡು ಇಸ್ಲಾಮಿನ ತಾತ್ವಿಕ ವಿಚಾರಗಳನ್ನು ಮಥಿಸಿ ನವನೀತವನ್ನು ತೆಗೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಉಮರನೂ ಅದನ್ನು ಮಾಡಿದ್ದಾನೆ.

ಉಮರನು ತಾನೇ ತನ್ನ ಚರಮ ಗೀತೆಯನ್ನು ಬರೆದುಕೊಂಡು ಇಹವನ್ನು ತ್ಯಜಿಸಿದನೆಂದು ಹೇಳುತ್ತಾರೆ.

ಓ ದೇವ ನೀನರಿವೆ ನಿನ್ನನಾರಸುತ್ತೆ
ಪಟ್ಟೆಲ್ಲ ಪಾಡುಗಳನಾದನಿತು ಪಟ್ಟೆನ್
ಎನಗೆ ಬಂದರಿವಿನಾ ಕೊರೆಯ ನೀಂ ಮರೆತುಬಿಡು
ನಾನರಸಿದವನೆಂದು ಕನಿಕರಿಸಿ ನೋಡು

ಈ ಸಾಲುಗಳು ಗುಂಡಪ್ಪರವರ ಅನುವಾದ. ಈ ಮೊದಲು ಮೇಲೆ ಮಾಡಿರುವವು ನನ್ನವು.

ಒಟ್ಟಿನಲ್ಲಿ ಜೀವನದ ರಹಸ್ಯ, ದರ್ಶನ, ಅನುಭವ, ರುಚಿಯ ಆಸ್ವಾದನೆಗಳ ಉಮನ ಒಸಗೆಯಲ್ಲಿ ದಕ್ಕುವುದು.
ಹೆಂಡದ ಅಂಗಡಿ ಎಂದರೆ ಜಿಜ್ಞಾಸುಗಳ ಗೋಷ್ಠಿ. ಬಟ್ಟಲೆಂದರೆ ಹೃದಯವೆಂದೂ, ಮದ್ಯವನ್ನು ಬಟ್ಟಲಿಗೆ ಹುಯ್ಯುವ ಸಾಕಿಯೆಂದರೆ ತತ್ವಾಭ್ಯಾಸಿ ಎಂದೂ, ಮದ್ಯವೆಂದರೆ ದೈವಿಕ ಆನಂದವೆಂದೂ ಉಮರನ ಚೌಪದಿಗಳಲ್ಲಿ ಸಂಕೇತಿಸುವರು. ಅವನ ಚೌಪದಿಗಳನ್ನು ವಿವರಿಸಲು ಹೋದರೆ ವಾಚ್ಯವಾಗುವುದು. ಸೂಚಿತ ಸಂಕೇತಗಳನ್ನು ತಾನೇ ಬಿಡಿಸಿಕೊಳ್ಳುತ್ತಾ ತಾನೇ ಸವಿಯುತ್ತಿದ್ದರೆ ಆನಂದದ ರಸವೊಸರುವುದು. ಇಷ್ಟು ಹೇಳಿದ್ದೂ ಅತಿಯೇ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...