ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಾಥ ಪರಂಪರೆಗೆ ಸೇರಿದವರೆಂದು ಅವರನ್ನು ತೋರಿಸಿ ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಕರ್ನಾಟಕದ ನಾಥ ಪರಂಪರೆಗೂ, ಉತ್ತರಪ್ರದೇಶದ ನಾಥ ಪರಂಪರೆಗೂ ವ್ಯತ್ಯಾಸವಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ”ನಮ್ಮ ನಾಥ ಪರಂಪರೆ ಬುಲ್ಡೋಜರ್ (ನಾಶ) ಮಾಡುವಂಥದ್ದಲ್ಲ, ನಕಲಿ ಎನ್ಕೌಂಟರ್ ಮಾಡುವಂಥದ್ದಲ್ಲ” ಎಂದು ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ಹೇಳಿದರು.
”ಕರ್ನಾಟಕದಲ್ಲಿ ನಾಥ ಪರಂಪರೆಯ ರಾಜಕೀಯ ಆದಿಚುಂಚನಗಿರಿ ಮಠಕ್ಕೆ ಮಾತ್ರ ಸೀಮಿತವಾದುದು. ಜನರು ಉತ್ತರ ಪ್ರದೇಶದ ನಾಥ ಪರಂಪರೆ ನೋಡಿಕೊಂಡು ಮತ ಹಾಕುವುದಿಲ್ಲ. ಇಲ್ಲಿ ನಮ್ಮ ಸ್ವಾಮೀಜಿಗಳು ನಾಥಪರಂಪರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಉತ್ತರಪ್ರದೇಶದ ನಾಥ ಪರಂಪರೆ ನಮಗೆ ಬೇಕಾಗಿಲ್ಲ” ಎಂದರು.
”ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ರಾಜ್ಯದಲ್ಲಿ ಠಿಕಾಣಿ ಹೂಡಿದ್ದಾರೆ. ಆರೋಪ–ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಯಾರೂ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಕನ್ನಡ ಭಾಷೆ, ಬೆಳಗಾವಿ ಗಡಿ ಸಮಸ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ” ಎಂದು ಕಿಡಿಕಾರಿದರು.
”ಚುನಾವಣೆ ವೇಳೆ ಇ.ಡಿ, ಐ.ಟಿಯನ್ನು ಜಾಗೃತಗೊಳಿಸಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿರುವುದು ನಿಜ. ಬಿಜೆಪಿಯಲ್ಲಿ ಇ.ಡಿ ಮೋರ್ಚಾ, ಐ.ಟಿ ಮೋರ್ಚಾ ಎಂಬ ವಿಭಾಗಗಳಿವೆ. ಈ ಮೋರ್ಚಾಗಳನ್ನು ಚುನಾವಣೆ ಸಂದರ್ಭದಲ್ಲಿ ಹೊರಗೆ ಬಿಡುತ್ತಿದ್ದಾರೆ” ಎಂದು ದೂರಿದರು.
”ಈ ಹಿಂದಿನ ಅವಧಿಯಲ್ಲಿ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆವು, ಮುಖ್ಯಮಂತ್ರಿ ಮಾಡಿದ್ದೆವು ಎಂದೆಲ್ಲಾ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಹಾಗಾದರೆ 17 ಶಾಸಕರು ಹೊರಗೆ ಹೋಗಿದ್ದು ಏಕೆ? ಎಂದು ತಾವು ಉತ್ತರ ನೀಡಬೇಕು. ರೈತರ ಸಾಲ ಮನ್ನಾ ಮಾಡಿದ್ದೇ ತಪ್ಪಾ? ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಕಾಂಗ್ರೆಸ್ನ ಎಲ್ಲಾ ಕಾರ್ಯಕ್ರಮಗಳನ್ನೂ ಮುಂದುವರಿಸಿದ್ದೆ. ಸಿದ್ದರಾಮಯ್ಯ ಕೊಟ್ಟ ಭಾಗ್ಯಗಳಿಂದ ಜನರು ಸಂಪತ್ಭರಿತರಾಗಿದ್ದಾರಾ?” ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
Kumaraswamy you should be that Yogiji belongs to your Nath Panth.