Homeಮುಖಪುಟಆರೋಪಿ ಬ್ರಿಜ್‌ಭೂಷಣ್‌ಗೆ ಮಾಧ್ಯಮಗಳು ಸಹಕರಿಸುತ್ತಿವೆ: ಪ್ರತಿಭಟನಾನಿರತ ಕುಸ್ತಿಪಟುಗಳ ಆರೋಪ

ಆರೋಪಿ ಬ್ರಿಜ್‌ಭೂಷಣ್‌ಗೆ ಮಾಧ್ಯಮಗಳು ಸಹಕರಿಸುತ್ತಿವೆ: ಪ್ರತಿಭಟನಾನಿರತ ಕುಸ್ತಿಪಟುಗಳ ಆರೋಪ

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ಮಾಧ್ಯಮಗಳು ಸಹಾಯ ಮಾಡುತ್ತಿವೆ; ನಮಗಿಂತ ಹೆಚ್ಚಾಗಿ ಆತನಿಗೆ ಸಹಕರಿಸುತ್ತಿವೆ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಭಾನುವಾರ ಆರೋಪಿಸಿದ್ದಾರೆ. “ಆರೋಪಿ ಬ್ರಿಜ್‌ ಭೂಷಣ್‌ ಮಾತನಾಡಲು ವೇದಿಕೆ ಕಲ್ಪಿಸಬಾರದು” ಎಂದು ಅವರು ಮನವಿ ಮಾಡಿದ್ದಾರೆ.

ಲೈಂಗಿಕ ಕಿರುಕುಳದ ಆರೋಪವನ್ನು ಬ್ರಿಜ್ ಭೂಷಣ್ ಮೇಲೆ ಮಹಿಳಾ ಕುಸ್ತಿಪಟುಗಳು ಮಾಡಿದ್ದಾರೆ. “ಈ ಆರೋಪಗಳ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿದ್ದೇನೆ, ಕ್ರೀಡಾಪಟುಗಳ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ” ಎಂದು ಬ್ರಿಜ್ ಭೂಷಣ್‌ ಹೇಳಿಕೆ ನೀಡಿದ್ದಾರೆ.

ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ 12 ವರ್ಷ ಪೂರೈಸಿರುವ, ಮತ್ತೆ ಪದಾಧಿಕಾರಿಯಾಗಲು ಅನರ್ಹರಾಗಿರುವ ಬಿಜೆಪಿ ಸಂಸದನ ವಿರುದ್ಧ ದೆಹಲಿ ಪೊಲೀಸರು ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಪ್ರಕರಣ ದಾಖಲಿಸಿದ್ದಾರೆ.

“ಮಾಧ್ಯಮವು ಆಟಗಾರರಿಗಿಂತ ಹೆಚ್ಚಾಗಿ ಬ್ರಿಜ್ ಭೂಷಣ್ ಅವರನ್ನು ಬೆಂಬಲಿಸುತ್ತಿದೆ. ನೀವು ಅವರ ಕ್ರಿಮಿನಲ್ ದಾಖಲೆಗಳನ್ನು ನೋಡುತ್ತೀರಿ. ಇಲ್ಲಿ ಕುಳಿತಿರುವ ಯಾವುದೇ ಆಟಗಾರ ಅಥವಾ ಇತರ ಕ್ರೀಡೆಗಳ ಆಟಗಾರರು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾರೆಯೇ?” ಎಂದು ಮಾಧ್ಯಮ ಸಂವಾದದ ವೇಳೆ ಕುಸ್ತಿಪಟು ಬಜರಂಗ್ ಪುನಿಯಾ ಪ್ರಶ್ನಿಸಿದ್ದಾರೆ.

ಟೋಕಿಯೊ ಕ್ರೀಡಾಕೂಟದ ಕಂಚಿನ ಪದಕ ವಿಜೇತರಾದ ಅವರು, “ಈ ದೇಶದಲ್ಲಿ ಸಂಸದರಾಗುವುದಕ್ಕಿಂತ ಒಲಿಂಪಿಕ್ ಪದಕವನ್ನು ಗೆಲ್ಲುವುದು ಹೆಚ್ಚು ಕಷ್ಟ” ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದ್ದಾರೆ.

“ಆಟಗಾರರು ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಾರೆ, ಆದರೆ ಇವರು (ಬ್ರಿಜ್ ಭೂಷಣ್) ಪದಕ ವಿಜೇತರನ್ನು ಪ್ರಶ್ನಿಸುತ್ತಿದ್ದಾರೆ. ಈ ದೇಶದಲ್ಲಿ ಎಷ್ಟು ಜನರು ಸಂಸದರಾಗುತ್ತಾರೆ ಮತ್ತು ಎಷ್ಟು ಜನರು ಒಲಿಂಪಿಕ್ ಪದಕಗಳನ್ನು ಗೆದ್ದಿದ್ದಾರೆ? ಇಲ್ಲಿಯವರೆಗೆ, ಒಲಿಂಪಿಕ್ ಪದಕ ವಿಜೇತರು ಅಷ್ಟೇನೂ ಇಲ್ಲ, ಆದರೆ ಸಾವಿರಾರು ಜನರು ಸಂಸದರಾಗಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

ಕುಸ್ತಿಪಟುಗಳು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬ್ರಿಜ್ ಭೂಷಣ್ ಆರೋಪ ನಿರಾಧಾರ ಎಂದು ಡಬಲ್ ವರ್ಲ್ಡ್ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ತಿಳಿಸಿದ್ದಾರೆ.

“ನಾವು ಯಾವುದೇ ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲ, ನಾವು ಹೃದಯದಿಂದ ನೇರವಾಗಿ ಮಾತನಾಡುತ್ತೇವೆ ಮತ್ತು ಅದು ಬೆಸೆಯುತ್ತಿದೆ, ಅದಕ್ಕಾಗಿಯೇ ಇಲ್ಲಿ ಅನೇಕ ಜನರು ನಮ್ಮ ಬೆಂಬಲಕ್ಕೆ ಕುಳಿತಿದ್ದಾರೆ. ಬ್ರಿಜ್ ಭೂಷಣ್ ಮಾತನಾಡಲು ವೇದಿಕೆಯನ್ನು ನೀಡಬೇಡಿ” ಎಂದು ಅವರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

“ಅಂತಹ ಕ್ರಿಮಿನಲ್‌ಗೆ ನೀವು ವೇದಿಕೆಯನ್ನು ಹೇಗೆ ನೀಡುತ್ತೀರಿ ಎಂದು ನಾನು ಪ್ರಶ್ನಿಸುತ್ತೇನೆ. ನೀವೇ ಕೇಳಿಕೊಳ್ಳಿ. ನೀವು ಅದನ್ನು ಮಾಡದಿದ್ದರೆ ಅರ್ಧದಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಆ ವ್ಯಕ್ತಿ ಇನ್ನೂ ನಗು ಮುಖದಿಂದ ಹೇಳುತ್ತಿದ್ದಾನೆ. ಅವನ ಅಹಂಕಾರವು ದೊಡ್ಡದಾಗಿದೆ. ರಾವಣನಿಗಿಂತ ಬ್ರಿಜ್‌ ಭೂಷಣ್ ಅಹಂಕಾರ ದೊಡ್ಡದಾಗಿದೆ” ಎಂದು ಟೀಕಿಸಿದ್ದಾರೆ.

“ಸುಪ್ರೀಂ ಕೋರ್ಟ್ ಆದೇಶದ ಮೂಲಕ ಅವರು ಕಳಂಕ ರಹಿತರಾಗಿ ಹೊರಬಂದರೆ, ನೀವು ಅವರಿಗೆ ಹಾರ ಹಾಕಬಹುದು. ಆದರೆ ಈಗಲೂ ಹಾರ ಹಾಕುತ್ತಿದ್ದಾರೆ, ಅವರು ಏನು ಮಾಡಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

“ನಾವು ಪದಕಗಳನ್ನು ಗೆದ್ದಾಗ, ನಮಗೆ ಹಾರ ಹಾಕಲಾಗುತ್ತದೆ. ಅವರು ಮಹಿಳಾ ಕ್ರೀಡಾಪಟುಗಳನ್ನು ಶೋಷಿಸಿದ್ದಾರೆ, ಆದರೆ ಅವರನ್ನು ಸನ್ಮಾನಿಸಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಪ್ರತಿಭಟನೆ ಪರ ನಿಲ್ಲದಿದ್ದರೂ ಪರವಾಗಿಲ್ಲ ದುರ್ಬಲಗೊಳಿಸದಿರು: ಬಬಿತಾ ಫೋಗಟ್‌ಗೆ ವಿನೇಶ್ ಫೋಗಟ್ ತಾಕೀತು

“ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಅನ್ನು ವಶಪಡಿಸಿಕೊಳ್ಳಲು ಬಯಸುತ್ತಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ಹಿಂದೆ ಒಂದೇ ಕುಟುಂಬ (ಫೋಗಟ್ಸ್) ಇದೆ” ಎಂದು ಬ್ರಿಜ್ ಭೂಷಣ್ ದೂರಿದ್ದಾರೆ.

ಒಲಂಪಿಕ್‌ ಪದಕ ವಿಜೇತ ಕುಸ್ತಿಪಟು ಭಜರಂಗ್ ಪೂನಿಯಾ ಇದಕ್ಕೆ ಪ್ರತಿಕ್ರಿಯಿಸಿ, “ನೀವು ಡಬ್ಲ್ಯುಎಫ್‌ಐನಲ್ಲಿ ಇರಬೇಕಾದರೆ, ನೀವು ರಾಜ್ಯ ಅಸೋಸಿಯೇಷನ್‌ನ ಸದಸ್ಯರಾಗಿರಬೇಕು. ನಮಗೆ ಡಬ್ಲ್ಯುಎಫ್‌ಐ ನಿಯಂತ್ರಣ ಬೇಡ. ಅವರ ಮಗ ಯುಪಿ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ. ಅವರ ಅಳಿಯ ಕೂಡ ರಾಜ್ಯ ಸಂಘದ ಸದಸ್ಯರಾಗಿದ್ದಾರೆ. ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಕುಸ್ತಿಪಟುಗಳು ದೂರಿದ್ದು, ರಾತ್ರಿ ವೇಳೆ ವಿದ್ಯುತ್, ನೀರು ಪೂರೈಕೆ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...