ಬಿಜೆಪಿ ನಾಯಕಿ ಪಂಕಜ ಮುಂಡೆ ಪಕ್ಷವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಫೇಸ್ಬುಕ್ ನಲ್ಲಿದ್ದ ಬಿಜೆಪಿ ಟ್ಯಾಗ್ ಅನ್ನು ಅವರು ತೆಗೆದುಹಾಕಿರುವುದರಿಂದ ಅವರ ಮುಂದಿನ ರಾಜಕೀಯ ನಡೆ ಕುರಿತು ಊಹಾಪೋಹಗಳು ಎದ್ದಿವೆ. ಪಂಕಜ ಮುಂಡೆಯ ಮುಂದಿನ ತೀರ್ಮಾನಗಳು ಡಿಸೆಂಬರ್ 12 ರಂದು ಹೊರಬೀಳಲಿವೆ ಎಂದು ಪಿಟಿಐ ವರದಿ ಮಾಡಿದೆ.
ಹೌದು ಪಂಕಜ ಮುಂಡೆ ತನ್ನ ಫೇಸ್ಬುಕ್ ಖಾತೆಯಲ್ಲಿ ಉಲ್ಲೇಖಿಸಿದ್ದ ಬಿಜೆಪಿ ಎಂಬದನ್ನು ತೆಗೆದುಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಂಕಜ ಮುಂಡೆ ಪಕ್ಷ ತೊರೆಯಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಚಿಕ್ಕಪ್ಪ ಮತ್ತು ಎನ್.ಸಿ.ಪಿ. ನಾಯಕ ಧನಂಜಯ ಮುಂಡೆ ಮತ್ತು ಪಂಕಜ ಮುಂಡೆ ವಿಧಾನಸಭಾ ಚುನಾವಣೆಯಲ್ಲಿ ಎದುರು-ಬದರು ಸ್ಪರ್ಧಿಸಿದ್ದರು. ಅಲ್ಲಿ ಸುಮಾರು 30 ಸಾವಿರ ಮತಗಳ ಅಂತರದಿಂದ ಪಂಕಜ ಮುಂಡೆ ಸೋತಿದ್ದರು. ಈಗ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಾದ್ಯವಾಗಿಲ್ಲ. ಇದರಿಂದ ಬೇಸತ್ತಿರುವ ಪಂಕಜ ಮುಂಡೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಬೆಂಬಲಿಗರೊಂದಿಗೆ ಮಾತುಕತೆ ನಡೆಸಲು ಡಿಸೆಂಬರ್ 12ರಂದು ಸಭೆ ಕರೆದಿದ್ದಾರೆ.
ಪಂಕಜ ಅವರ ತಂದೆ ಗೋಪಿನಾಥ್ ಮುಂಡೆ 2014ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದರು. ಈಗ ಮತ್ತೆ ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆಯಾಗಿದೆ. ಅನಿವಾರ್ಯ ಕಾರಣಗಳಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಈ ತೀರ್ಮಾನ ಕೈಗೊಳ್ಳಲು ನನಗೆ 8-10 ದಿನ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿಯೇ ಡಿಸೆಂಬರ್ 12ರಂದು ಅವರ ಬೆಂಬಲಿಗರಿಗೆ ಸಭೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಹಾಗಾಗಿ ಅವರ ಮುಂದಿನ ತೀರ್ಮಾನಗಳು ಒಂದು ವಾರದಲ್ಲಿ ಹೊರಬೀಳಲಿವೆ. ಮುಂದಿನ ತೀರ್ಮಾನಗಳು ಏನಿರಬೇಕು, ಯಾವ ಮಾರ್ಗ ಅನುಸರಿಸಬೇಕು, ನಮ್ಮ ರಾಜಕೀಯ ಬಲವೇನು? ಜನರಿಗೆ ಏನು ಕೊಡಬೇಕು/ ಜನರ ನಿರೀಕ್ಷೆಗಳೇನು ಈ ಎಲ್ಲಾ ಕೋನಗಳಿಂದಲೂ ಯೋಚಿಸಿ 12ರಂದು ನಿಮ್ಮ ಮುಂದೆ ಬರುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ
ಕಳೆದ ಬಿಜೆಪಿ ಸರ್ಕಾರದ ಫಡ್ನಾವೀಸ್ ಸಂಪುಟದಲ್ಲಿ ಪಂಕಜ ಮುಮಡೆ ಗ್ರಾಮೀಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 2014ರಲ್ಲಿ ತಂದೆ ಗೋಪಿನಾಥ್ ಮುಂಡೆ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಅಲೆಯ ಮೇಲೆ ಪಂಕಜ ಮುಂಡೆ ಗೆದ್ದು ಬಂದಿದ್ದರು.
ಈ ಕುರಿತು ಪ್ರತಿಕ್ರಿಯ ನೀಡಿರುವ ಮಹಾರಾಷ್ಟ್ರ ಬಿಜೆಪಿ ವಕ್ತಾರ ಶಿರಿಶ್ ಬೋರ್ಕರ್, ಪಂಕಜ ಮುಂಡೆ ಬಿಜೆಪಿಯಲ್ಲೇ ಮುಂದುವರಿಯುತ್ತಾರೆ. ಪಕ್ಷವನ್ನು ಬಲಪಡಿಸಲು ಕೆಲಸ ಮಾಡುತ್ತಾರೆ. ಅವರ ಫೇಸ್ಬುಕ್ ಹೇಳಿಕೆಯನ್ನು ಓದಿದ್ದೇನೆ. ಅವರಿಗೆ ಬಿಜೆಪಿ ಬಗ್ಗೆ ಸಿಟ್ಟಿಲ್ಲ. ಅವರು ಕೋರ್ ಕಮಿಟಿ ಸಭೆಗೆ ಬರುತ್ತಾರೆ. ಅವರ ತಂದೆ ಬಿಜೆಪಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಪಂಕಜ್ ಮುಂಡೆ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.