Homeಮುಖಪುಟರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ ಸೆಲ್ಫಿ ಬೂತ್‌ ನಿರ್ಮಾಣ: ಸಾರ್ವಜನಿಕ ನಿಧಿ ಬಳಕೆ

ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ ಸೆಲ್ಫಿ ಬೂತ್‌ ನಿರ್ಮಾಣ: ಸಾರ್ವಜನಿಕ ನಿಧಿ ಬಳಕೆ

- Advertisement -
- Advertisement -

ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ  3D ಸೆಲ್ಫಿ ಬೂತ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದಕ್ಕೆ 1.62 ಕೋಟಿ ರೂ.ಖರ್ಚು ಆಗಲಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಕೇಂದ್ರ ರೈಲ್ವೆ ಇಲಾಖೆ ಉತ್ತರವನ್ನು ನೀಡಿದ್ದು, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರಕ್ಕೆ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಮೊದಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಪ್ರಧಾನಿ ನರೇಂದ್ರ ಮೋದಿ ಹಿನ್ನೆಲೆಗೆ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ದೇಶಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ವಿವಾದವನ್ನು ಸೃಷ್ಟಿಸಿತ್ತು. ಇದೀಗ ಮೋದಿ ಚಿತ್ರವಿರುವ 3D ಸೆಲ್ಫಿ ಬೂತ್‌ಗಳ ನಿರ್ಮಾಣ ಕಾರ್ಯ ದೇಶದ ಹಲವು ರೈಲ್ವೇ ನಿಲ್ಧಾಣದಲ್ಲಿ ನಡೆಯುತ್ತಿದೆ ಎನ್ನುವುದು ಬಹಿರಂಗವಾಗಿದೆ.

ಮೋದಿ ಅವರ ಚಿತ್ರವಿರುವ ಶಾಶ್ವತ 3D ಸೆಲ್ಫಿ ಬೂತ್‌ಗೆ 6.25 ಲಕ್ಷದವರೆಗೆ ಮತ್ತು ತಾತ್ಕಾಲಿಕ ಸೆಲ್ಫಿ ಬೂತ್‌ಗೆ 1.25 ಲಕ್ಷಗಳವರೆಗೆ ವೆಚ್ಚ ಮಾಡಲಾಗುತ್ತದೆ ಎಂದು ಆರ್‌ಟಿಐ ನೀಡಿರುವ ಮಾಹಿತಿಯು ಬಹಿರಂಗಪಡಿಸಿದೆ.

ನಿವೃತ್ತ ರೈಲ್ವೇ ಅಧಿಕಾರಿ ಅಜಯ್ ಬೋಸ್ ಅವರು ಆರ್‌ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸೆಂಟ್ರಲ್ ರೈಲ್ವೇ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಭಯ್ ಮಿಶ್ರಾ ಅವರು ಪ್ರತಿಕ್ರಿಯಿಸಿದ್ದು, ಮೋದಿ ಅವರ 3ಡಿ ಸೆಲ್ಫಿ ಬೂತ್‌ಗಳನ್ನು ಮುಂಬೈ, ಭೂಸಾವಲ್, ನಾಗಪುರ, ಪುಣೆ ಮತ್ತು ಸೊಲ್ಲಾಪುರಗಳ 50 ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕಲ್ಯಾಣ್, ನಾಗ್ಪುರ ಮತ್ತು ಬೇತುಲ್ ಸೇರಿದಂತೆ 30 ಕೆಟಗರಿ ಎ ಸ್ಟೇಷನ್‌ಗಳಲ್ಲಿ ತಾತ್ಕಾಲಿಕ ಬೂತ್‌ಗಳನ್ನು ಸ್ಥಾಪಿಸಿದರೆ, ಕರ್ಜತ್, ಲಾತೂರ್ ಮತ್ತು ಕೋಪರ್‌ಗಾಂವ್ ಸೇರಿದಂತೆ 20 ನಿಲ್ದಾಣಗಳಲ್ಲಿ ಶಾಶ್ವತ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ.

ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ 3D ಸೆಲ್ಫಿ ಬೂತ್‌ಗಳ ತಾತ್ಕಾಲಿಕ ಸ್ಥಾಪನೆಗೆ 1.25 ಲಕ್ಷ ಮತ್ತು  ಶಾಶ್ವತ ಸ್ಥಾಪನೆಗೆ 6.25 ಲಕ್ಷ ದರಗಳನ್ನು ಅನುಮೋದಿಸಿದೆ ಎಂದು RTI ಮಾಹಿತಿಯು ಹೇಳುತ್ತದೆ.

ಕೇಂದ್ರ ರೈಲ್ವೇಯಲ್ಲಿನ ತಾತ್ಕಾಲಿಕ ಮತ್ತು ಶಾಶ್ವತ ಮೋದಿ ಪೋಟೋ ಇರುವ ಬೂತ್‌ಗಳ ನಿರ್ಮಾಣಕ್ಕೆ ಒಟ್ಟು ವೆಚ್ಚ 1.62 ಕೋಟಿ ಆಗಲಿದೆ. ಇದರಲ್ಲಿ ಶಾಶ್ವತ ಪೋಟೋ ಬೂತ್‌ಗಳಿಗೆ 1.25 ಕೋಟಿ ಮತ್ತು ತಾತ್ಕಾಲಿಕವಾಗಿ ಸ್ಥಾಪಿಸಲು 37.5 ಲಕ್ಷ ರೂ.ಆಗಲಿದೆ ಎಂದು ಆರ್‌ಟಿಐ ಮಾಹಿತಿ ಬಹಿರಂಗಪಡಿಸಿದೆ.

ಈ ಕುರಿತ ಆರ್‌ಟಿಐ ಅರ್ಜಿಗೆ ಉತ್ತರಿಸಿದ ಉತ್ತರ ರೈಲ್ವೇ ಇಲಾಖೆ, ಪ್ರಧಾನಿಯವರ ಸೆಲ್ಫಿ ಫೋಟೋ ಬೂತ್‌ಗಳನ್ನು ರೈಲ್ವೆ ನಿಲ್ದಾಣಗಳಾದ್ಯಂತ 100 ವಿವಿಧ ಪಾಯಿಂಟ್‌ಗಳಲ್ಲಿ ಸ್ಥಾಪಿಸಲಾಗುವುದು. ಕೆಲವು ನಿಲ್ದಾಣಗಳಲ್ಲಿ ಒಂದಕ್ಕಿಂತ ಹೆಚ್ಚು ಬೂತ್‌ಗಳನ್ನು ಸ್ಥಾಪಿಸಲಾಗುವುದು. ಉದಾಹರಣೆಗೆ ಡೆಹ್ರಾಡೂನ್, ಅಂಬಾಲಾ, ನವದೆಹಲಿ, ಅಮೃತಸರ, ಅಯೋಧ್ಯೆ, ಚಂಡೀಗಢಗಳು ಪ್ರತಿ ನಿಲ್ದಾಣದಲ್ಲಿ 3 ಬೂತ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ.

ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಈ ಬಗ್ಗೆ 8 ಏಜೆನ್ಸಿಗಳಿಗೆ ಸಮಾನವಾಗಿ ಗುತ್ತಿಗೆ ಕೆಲಸವನ್ನು ಹಂಚಲಾಗಿದೆ ಎಂದು ಹೇಳಿದರೆ, ಅಧಿಕಾರಿಗಳು ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಏಜೆನ್ಸಿಗಳ ಹೆಸರು ಅಥವಾ ಒಟ್ಟು ವೆಚ್ಚವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ತಿರುಚ್ಚಿರಾಪಳ್ಳಿ ಜಂಕ್ಷನ್, ತಂಜಾವೂರು ಮತ್ತು ವೆಲ್ಲೂರ್ ಕಂಟೋನ್ಮೆಂಟ್ ಸೇರಿ  11 ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿಯವರ 3D ಸೆಲ್ಫಿ ಫೋಟೋ ಬೂತ್‌ಗಳನ್ನು ಸ್ಥಾಪಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ತಿರುಚ್ಚಿರಾಪಳ್ಳಿ ವಿಭಾಗವು RTI ಪ್ರಶ್ನೆಗೆ ಉತ್ತರಿಸಿ ಹೇಳಿದೆ.

ಸೆಲ್ಫಿ ಬೂತ್‌ಗಳ ಸ್ಥಾಪನೆಗೆ ಖರ್ಗೆ ಆಕ್ರೋಶ:

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಸೆಲ್ಫಿ ಬೂತ್‌ಗಳನ್ನು ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಿವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸುವುದು ತೆರಿಗೆದಾರರ ಹಣದ ದುರ್ಬಳಕೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರದ ಸ್ವಯಂ ಗೀಳಿನ ಪ್ರಚಾರಕ್ಕೆ ಯಾವುದೇ ಮಿತಿಯಿಲ್ಲ. ರೈಲ್ವೆ ನಿಲ್ದಾಣಗಳಲ್ಲಿ ಮೋದಿಜಿಯವರ 3D ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವ ಮೂಲಕ ತೆರಿಗೆದಾರರ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಪ್ರಧಾನಿಯವರ ಪ್ರಮುಖ ಕಟೌಟ್‌ಗಳಿರುವ 822 ಸೆಲ್ಫಿ ಪಾಯಿಂಟ್‌ಗಳನ್ನು ಅಳವಡಿಸುವಂತೆ ಸಶಸ್ತ್ರ ಪಡೆಗಳಿಗೆ ಆದೇಶ ನೀಡುವ ಮೂಲಕ ದೇಶದ ವೀರ ಸೈನಿಕರ ರಕ್ತ ಮತ್ತು ತ್ಯಾಗವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ಮೋದಿ ಸರ್ಕಾರವು ರಾಜ್ಯಗಳಿಗೆ ಬರ ಮತ್ತು ಪ್ರವಾಹ ಪರಿಹಾರವನ್ನು ಒದಗಿಸಿಲ್ಲ. ವಿರೋಧ ಪಕ್ಷದ ಆಡಳಿತದ ರಾಜ್ಯಗಳಿಗೆ MGNREGA ಯೋಜನೆಯ ಹಣದ ಪಾವತಿ ಬಾಕಿ ಉಳಿದಿವೆ. ಆದರೆ ಈ ಕೀಳು ಮಟ್ಟದ ಚುನಾವಣಾ ಪ್ರಚಾರಕ್ಕೆ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಪೋಸ್ಟ್‌ನಲ್ಲಿ ಆರ್‌ಟಿಐ ಅಡಿಯಲ್ಲಿ ಪಡೆದ ಉತ್ತರದ ಪ್ರತಿಯನ್ನು ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ ಕೇಂದ್ರ ರೈಲ್ವೆ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸಿರುವ ನಿಲ್ದಾಣಗಳನ್ನು ಪಟ್ಟಿ ಮಾಡಲಾಗಿತ್ತು.

ಇದನ್ನು ಓದಿ: ಮೌಸಾವಿ ಹತ್ಯೆ: ಗಾಝಾದಂತೆ ಸಿರಿಯಾ ಮೇಲೂ ದಾಳಿಗೆ ಇಸ್ರೇಲ್‌ ಸಜ್ಜು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...