ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ ಮತ್ತು ಸಂವಿಧಾನವೂ ಇದನ್ನು ಅನುಮತಿಸುವುದಿಲ್ಲ ಎಂದು ಪುರಿಯ ಶಂಕರಾಚಾರ್ಯ ಮಠದ ನಿಶ್ಚಲಾನಂದ ಸರಸ್ವತಿ ಅವರು ಹೇಳಿದ್ದಾರೆ. ಈ ಹಿಂದೆ ರಾಮಮಂದಿರ ನಿರ್ಮಾಣ ಪೂರ್ಣವಾಗದೆ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರಗಳಿಗೆ ವಿರುದ್ಧ ಎಂದು ಶಂಕರಾಚಾರ್ಯ ಮಠದ ನಾಲ್ವರು ಮಠಾಧೀಶರು ವಿರೋಧವನ್ನು ವ್ಯಕ್ತಪಡಿಸಿದ್ದರು.
ಪಶ್ಚಿಮ ಬಂಗಾಳದ ಗಂಗಾ ಸಾಗರ ಮೇಳದಲ್ಲಿ ಮಾತನಾಡಿದ ಶಂಕರಾಚಾರ್ಯರು, ರಾಜಕಾರಣಿಗಳಿಗೆ ಅವರ ಮಿತಿಗಳಿವೆ ಮತ್ತು ಅವರಿಗೆ ಸಂವಿಧಾನದ ಅಡಿಯಲ್ಲಿ ಜವಾಬ್ದಾರಿ ಇದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿಯಮಗಳು ಮತ್ತು ನಿರ್ಬಂಧಗಳಿವೆ ಮತ್ತು ಈ ನಿಯಮಗಳನ್ನು ಅನುಸರಿಸಬೇಕು. ಪ್ರತಿಯೊಂದು ಕ್ಷೇತ್ರಕ್ಕೂ ರಾಜಕಾರಣಿಗಳು ಹಸ್ತಕ್ಷೇಪ ಮಾಡುವುದು ಹುಚ್ಚುತನ. ಇದು ಸಂವಿಧಾನದ ಪ್ರಕಾರ ಘೋರ ಅಪರಾಧವೂ ಹೌದು ಎಂದು ಸರಸ್ವತಿ ಹೇಳಿದರು.
ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಾಲ್ಕು ಪೀಠಗಳ ಶಂಕರಾಚಾರ್ಯರು ಈ ಮೊದಲು ಘೋಷಿಸಿದ್ದರು. ಉತ್ತರಾಖಂಡದ ಜೋಶಿಮಠ, ಗುಜರಾತ್ನ ದ್ವಾರಕಾ, ಒಡಿಶಾದ ಪುರಿ ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಈ ಮಠಗಳಿವೆ.
ಸಮಾರಂಭದಲ್ಲಿ ಶಾಸ್ತ್ರಗಳನ್ನು ಪಾಲಿಸದ ಕಾರಣ ಉದ್ಘಾಟನೆಗೆ ಬರುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ ಪ್ರಾಣ ಪ್ರತಿಷ್ಟಾಪನೆಗೆ ನಿಯಮಗಳಿವೆ ಮತ್ತು ಪ್ರಧಾನ ಮಂತ್ರಿ ಅವುಗಳನ್ನು ಅನುಸರಿಸಬೇಕು. ಒಬ್ಬರ ಹೆಸರನ್ನು ಪ್ರಚಾರ ಮಾಡಲು ಈ ನಿಯಮಗಳನ್ನು ಮೀರುವುದು ವಿನಾಶದ ಹಾದಿಯಲ್ಲಿ ಹೋಗುವುದಾಗಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.
ತಾನು ಅಯೋಧ್ಯೆಗೆ ಹೋಗುತ್ತೇನೆ ಆದರೆ ರಾಮ ಮಂದಿರದ ಪ್ರಾಣ ಪ್ರತಿಷ್ಟಾಪನೆಯಲ್ಲಿ ಭಾಗವಹಿಸುವುದಿಲ್ಲ. ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ಯಾರನ್ನೂ ತಡೆಯುವುದಿಲ್ಲ ಮತ್ತು ಕೇಂದ್ರ ಸರ್ಕಾರದ ಮೇಲೆ ಕೋಪವಿಲ್ಲ. ಓರ್ವ ಸಹಾಯಕನೊಂದಿಗೆ ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಆಹ್ವಾನ ಪತ್ರದಲ್ಲಿ ತಿಳಿಸಿರುವುದಕ್ಕಾಗಿ ವಿಷಾದವಿದೆ. ಶಂಕರಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯ ಹೊರತಾಗಿಯೂ ಅವರಿಗೆ ರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾನವನ್ನು ಕಲ್ಪಿಸಲಾಗಿಲ್ಲ ಮತ್ತು ಹೊರಗಡೆಯೇ ಇರುವಂತೆ ಸೂಚಿಸಲಾಗಿದೆ. ಇದು ಸ್ವೀಕಾರಾರ್ಹವಲ್ಲ. ಕಾರ್ಯಕ್ರಮದಲ್ಲಿ ಕುಳಿತುಕೊಂಡು ರಾಮ ಮಂದಿರ ಉದ್ಘಾಟನೆಯನ್ನು ನೋಡುವುದು ಮತ್ತು ಚಪ್ಪಾಳೆ ತಟ್ಟುವುದು ನನಗೆ ಇಷ್ಟವಿಲ್ಲ ಎಂದು ಪುರಿ ಶಂಕರಾಚಾರ್ಯರು ಹೇಳಿದ್ದಾರೆ.
ಜ.4ರಂದು ಸುದ್ದಿಗಾರರ ಜೊತೆ ಮಾತನಾಡಿದ್ದ ಪುರಿ ಶಂಕರಾಚಾರ್ಯರು, ನನಗೆ ನನ್ನ ಸ್ಥಾನದ ಘನತೆಯ ಅರಿವಿದೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರದಲ್ಲಿ ಭಾಗವಹಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರವನ್ನು ಉದ್ಘಾಟಿಸುತ್ತಾರೆ. ಅವರು ವಿಗ್ರಹವನ್ನು ಸ್ಪರ್ಶಿಸುತ್ತಾರೆ. ಆಗ ನಾನು ಏನು ಮಾಡಬೇಕು? ನಿಂತುಕೊಂಡು ಚಪ್ಪಾಳೆ ಹೊಡೆಯಬೇಕೇ ಎಂದು ಪ್ರಶ್ನಿಸಿದ್ದರು.
ಇದನ್ನು ಓದಿ: ಪ್ರಚೋದನಾಕಾರಿ ಹೇಳಿಕೆ: ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು