ಜನರು ಯಾವ ರೀತಿಯ ಉಡುಗೆ ತೊಡುತ್ತಾರೆ ಎಂಬುದರ ಬಗ್ಗೆ ರಾಜಕಾರಣಿಗಳು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಉತ್ತರಾಖಂಡದ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರ ವಿವಾದಾತ್ಮಕ “ಹರಿದ ಜೀನ್ಸ್” ಹೇಳಿಕೆಯ ಹಿನ್ನೆಲೆಯಲ್ಲಿ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳೆ ತನ್ನ ಜೀವನ ನಡೆಸಲು ಮತ್ತು ಅವಳಿಗೆ ಸರಿಹೊಂದುವಂತೆ ಸಮಾಜದೊಂದಿಗೆ ತೊಡಗಿಸಿಕೊಳ್ಳಲು ಆಕೆ ಬಯಸುವ ಮಾರ್ಗವನ್ನು ಆರಿಸಿಕೊಳ್ಳುವ ಹಕ್ಕು ಮಹಿಳೆಗಿದೆ ಎಂದು ಟೈಮ್ಸ್ ನೆಟ್ವರ್ಕ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಹೇಳಿದ್ದಾರೆ.
“ಪುರುಷರು, ಮಹಿಳೆಯರು, ತೃತೀಯಲಿಂಗಿಗಳು ಯಾರೇ ಆಗಲಿ ಏನು ಧರಿಸುವರು, ಏನು ತಿನ್ನುತ್ತಾರೆ, ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ರಾಜಕಾರಣಿಗಳು ಮೂಗು ತೂರಿಸುವ ಅಗತ್ಯವಿಲ್ಲ. ಏಕೆಂದರೆ, ನಮ್ಮ ಕೆಲಸ ಜನಸೇವೆ ಮತ್ತು ಕಾನೂನಿನ ನಿಯಮವನ್ನು ಪಾಲನೆ ಮಾಡುವುದು ಅಷ್ಟೇ. ಕೆಲವು ಪುರುಷ ಮತ್ತು ಮಹಿಳಾ ರಾಜಕಾರಣಿಗಳು ನಿಯಮ ಮೀರಿ ಮಾತನಾಡಿದ್ದಾರೆ. ಪ್ರಬುದ್ಧವಾಗಿ ಯೋಚಿಸುವವರು ಯಾರೂ ಆ ಹೇಳಿಕೆಯನ್ನು ನೀಡುವುದಿಲ್ಲ” ಎಂದು ಪರೋಕ್ಷವಾಗಿ ಉತ್ತರಾಖಂಡ ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ವಿವಾದ: ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಉತ್ತರಾಖಂಡ್ ಸಿಎಂ
ಹರಿದ, ಟೋನ್ಡ್ ಜೀನ್ಸ್ ಧರಿಸಿದ ಮಹಿಳೆಯರು ಮಕ್ಕಳಿಗೆ ಯಾವ ಮೌಲ್ಯಗಳನ್ನು ನೀಡುತ್ತಾರೆ..? ಇವರು ಸಮಾಜವನ್ನು ಕೆಳಮಟ್ಟಕ್ಕಿಳಿಸುತ್ತಿದ್ದಾರೆ ಎಂದು ಉತ್ತರಾಖಂಡದ ನೂತನ ಸಿಎಂ ತಿರತ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಟೀಕೆಗೆ ಒಳಗಾಗಿದ್ದರು. ಅವರ ಪತ್ನಿ ಕೂಡ ಅವರನ್ನು ಸಮರ್ಥಿಸಿಕೊಂಡಿದ್ದರು. ನಂತರ ಮುಖ್ಯಮಂತ್ರಿ ಕ್ಷಮಾಪಣೆ ಕೇಳಿದ್ದರು.
“ಕೆಲವು ನಿರ್ದಿಷ್ಟ ಸ್ಥಾನಗಳನ್ನು ಕೇವಲ ಪುರುಷರು ಮಾತ್ರ ತೆಗೆದುಕೊಳ್ಳುತ್ತಾರೆ ಎಂಬುದಿಲ್ಲ. ಮಹಿಳೆಗೆ ಕೂಡ ಆಕೆ ಬಯಸಿದಂತೆ, ಆಕೆ ಆಯ್ಕೆ ಮಾಡಿಕೊಂಡಂತೆ ಬದುಕುವ ಹಕ್ಕು ಇದೆ. ಸಮಾಜದೊಂದಿಗೆ ಹೇಗೆ ತೊಡಗಿಸಿಕೊಳ್ಳಲು ಬಯಸುತ್ತಾಳೆ ಎಂಬುದನ್ನು ಆಕೆ ನಿರ್ಧರಿಸುತ್ತಾಳೆ. ಆಕೆ ಏನು ಮಾಡಬೇಕೆಂದು ಹೇಳುವ, ಆಕೆಯ ವಿಚಾರದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ” ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಇದೇ ವೇಳೆ ಮಹಿಳಾ ಮೀಸಲಾತಿ ಕುರಿತು ಮಾತನಾಡಿರುವ ಅವರು, “ಬಿಜೆಪಿ ತನ್ನೊಳಗೆ ಶೇಕಡಾ 33 ರಷ್ಟು ಮೀಸಲಾತಿ ನೀಡಿದ ಮೊದಲ ಪಕ್ಷ. ಹಾಗಾಗಿ ನಿರ್ಮಲಾ ಸೀತಾರಾಮನ್ ಮತ್ತು ನನ್ನಂತಹ ಮಹಿಳೆಯರು ನಮ್ಮ ಮೊದಲ ಸಾಂಸ್ಥಿಕ ಸ್ಥಾನಗಳನ್ನು ಪಕ್ಷದಲ್ಲಿ ಪಡೆದಿದ್ದೇವೆ. ಉನ್ನತ ಕಚೇರಿಗಳಲ್ಲಿ ಸೇವೆ ಸಲ್ಲಿಸಲು ಎಂದಿಗೂ ಅವಕಾಶವಿಲ್ಲದ ಅನೇಕ ಮಹಿಳೆಯರು ಇದ್ದಾರೆ. ಇಂದು ನೀವು ಮಹಿಳೆಯರ ರಾಜಕೀಯ ಸಬಲೀಕರಣದ ಬಗ್ಗೆ ಮಾತನಾಡುವ ಜಾಗತಿಕ ಸೂಚ್ಯಂಕಗಳನ್ನು ನೋಡಿದರೆ, ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ವಿವಾದ: ಸಾಂಸ್ಕೃತಿಕ ಪರಂಪರೆ ಉಳಿಸುವುದು ಮಹಿಳೆಯರ ಜವಾಬ್ದಾರಿ ಎಂದ ಉತ್ತರಾಖಂಡ ಸಿಎಂ ಪತ್ನಿ