ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರ ಟ್ರಸ್ಟ್ ನಡೆಸುತ್ತಿದ್ದ ರಾಮ್ಪುರ ಪಬ್ಲಿಕ್ ಸ್ಕೂಲ್, ಆಝಂ ಖಾನ್ ಕಚೇರಿ ಮತ್ತು ಪಕ್ಷದ ಚಟುವಟಿಕೆಗಳನ್ನು ನಡೆಸುತ್ತಿದ್ದ ಇನ್ನೊಂದು ಕಚೇರಿಯನ್ನು ರಾಜ್ಯ ಸಚಿವ ಸಂಪುಟದ ನಿರ್ಧಾರದಂತೆ ಪ್ರೌಢ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಲಲ್ತಾ ಪ್ರಸಾದ್ ಶಾಕ್ಯಾ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸನ್ಸಾರ್ ಸಿಂಗ್ ನೇತೃತ್ವದ ಭಾರಿ ಪೊಲೀಸ್ ಪಡೆಗಳ ಸಮ್ಮುಖದಲ್ಲಿ ಎರಡು ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಎರಡೂ ಆಸ್ತಿಗಳ ಸ್ವಾಧೀನವನ್ನು ಜಿಲ್ಲಾ ಶಾಲೆಗಳ ಇನ್ಸ್ಪೆಕ್ಟರ್ (ಡಿಐಒಎಸ್) ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನ.2ರಂದು ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರ ಮೌಲಾನಾ ಮುಹಮ್ಮದ್ ಅಲಿ ಜೌಹರ್ ಟ್ರಸ್ಟ್ ರಾಂಪುರದಲ್ಲಿ ಆಕ್ರಮಿಸಿಕೊಂಡಿರುವ ಕಟ್ಟಡವನ್ನು ತೆರವು ಮಾಡುವಂತೆ ಡಿಐಒಎಸ್ ನೋಟಿಸ್ ನೀಡಿತ್ತು. ಆದರೆ ತೆರವು ಮಾಡದ ಕಾರಣ, ನಾವು ಅದನ್ನು ಸೀಲ್ ಮಾಡಿದ್ದೇವೆ ಎಂದು ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಅ.31ರಂದು ಉತ್ತರಪ್ರದೇಶ ಕ್ಯಾಬಿನೆಟ್ ಮುಹಮ್ಮದ್ ಅಲಿ ಜೌಹರ್ ಟ್ರಸ್ಟ್ಗೆ ಲೀಸ್ಗೆ ನೀಡಲಾದ 41,000 ಚದರ ಅಡಿ ಭೂಮಿಯನ್ನು ಹಿಂಪಡೆಯುವ ಪ್ರಸ್ತಾವನೆಯನ್ನು ಅನುಮೋದಿಸಿತ್ತು ಮತ್ತು ಅದನ್ನು ರಾಜ್ಯ ಸರ್ಕಾರದ ಪ್ರೌಢ ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಆದೇಶ ನೀಡಿತ್ತು.
ಗುತ್ತಿಗೆ ಪತ್ರದ ಉಲ್ಲಂಘನೆಯ ಕುರಿತು ಸಮಿತಿಯ ವರದಿಯ ನಂತರ ಭೂಮಿಯ ಮಾಲೀಕತ್ವವನ್ನು ಹಿಂಪಡೆಯಲಾಗಿದೆ ಎನ್ನಲಾಗಿದೆ. ಈ ಹಿಂದೆ ಡಿಐಒಎಸ್ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಂಪುರ ಕೋಟೆಯ ಬಳಿ ಇರುವ ಹಳೆಯ ಮುರ್ತಾಜಾ ಶಾಲೆಯ ಕಟ್ಟಡವನ್ನು ಮಹಮ್ಮದ್ ಅಲಿ ಜೌಹರ್ ಟ್ರಸ್ಟ್ಗೆ ಖಾನ್ ಎಸ್ಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಲೀಸ್ಗೆ ಮಂಜೂರು ಮಾಡಲಾಗಿತ್ತು. ಇಲ್ಲಿ ಶಾಲೆಗಾಗಿ ಎರಡು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ 30 ವರ್ಷಗಳ ಗುತ್ತಿಗೆ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ದಲಿತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಸಬ್ ಇನ್ಸ್ಪೆಕ್ಟರ್ಗೆ ಸ್ಥಳೀಯರಿಂದ ಥಳಿತ