ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿಯವರು ಫೆಬ್ರವರಿ 20 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇಂದು ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಭದೌರ್ ನಲ್ಲಿ ಸಿಎಂ ಚರಣ್ ಜಿತ್ ಚನ್ನಿಯವರಿಗೆ ಟಿಕೆಟ್ ಘೋಷಿಸಿದೆ. ಈ ಮೊದಲು ಅವರಿಗೆ ಚಮ್ಕೌರ್ ಸಾಹಿಬ್ ಸ್ಥಾನದಿಂದ ಟಿಕೆಟ್ ನೀಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡರಾದ ಅರವಿಂದ್ ಕೇಜ್ರಿವಾಲ್ “ಚಮ್ಕೌರ್ ಸಾಹಿಬ್ ಕ್ಷೇತ್ರದಲ್ಲಿ ಚರಣ್ ಜಿತ್ ಚನ್ನ ಸೋಲನ್ನು ಅನುಭವಿಸುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ಸಮೀಕ್ಷೆ ಘೋಷಿಸಿತ್ತು. ಹಾಗಾಗಿ ಸೋಲಿನ ಭಯದಲ್ಲಿ ಕಾಂಗ್ರೆಸ್ ಚನ್ನಿಯವರನ್ನು ಎರಡು ಕ್ಷೇತ್ರದಿಂದ ಕಣಕ್ಕಿಳಿಸುತ್ತಿದೆ. ಹಾಗಾಗಿ ಅದು ಆಪ್ ಸರ್ವೆಯನ್ನು ಒಪ್ಪಿಕೊಂಡಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಈ ಬಾರಿ ಪಂಜಾಬ್ನಲ್ಲಿ ಆಪ್ ಜಯಗಳಿಸಲಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ 34 ಎಸ್ಸಿ ಮೀಸಲು ಕ್ಷೇತ್ರಗಳಿವೆ. ಶೇ.32ರಷ್ಟು ಸಂಖ್ಯೆಯ ದಲಿತ ಸಮುದಾಯವಿದೆ. ಅವರಲ್ಲಿ ಹೆಚ್ಚಿನವರು 2017ರಲ್ಲಿ ಆಪ್ ಪಕ್ಷಕ್ಕೆ ಮತ ಚಲಾಯಿಸಿದ್ದರು ಎಂಬ ವರದಿಯಿದೆ. ಆಪ್ ಚಿಹ್ನೆ ಪೊರಕೆಯಾಗಿದ್ದ ಕಾರಣಕ್ಕೂ ಬಹಳಷ್ಟು ದಲಿತರು ಅದು ನಮ್ಮದು ಎಂದುಕೊಂಡು ಬೆಂಬಲಿಸಿದ್ದರು. ಈ ಬೆಂಬಲ ಈಗಲೂ ಉಳಿದಿದೆ ಎನ್ನಲಾಗುತ್ತಿದ್ದರೂ, ಚನ್ನಿಯವರು ಸಹ ದಲಿತರಾದ್ದರಿಂದ ಕಾಂಗ್ರೆಸ್ಗೆ ಒಂದಷ್ಟು ದಲಿತ ಸಮುದಾಯದ ಮತಗಳು ಬರುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಫೆಬ್ರವರಿ 20 ರಂದು ರಾಜ್ಯದ 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಉಳಿದ ನಾಲ್ಕು ರಾಜ್ಯಗಳೊಂದಿಗೆ ಪಂಜಾಬ್ನ ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ: ರೈತ ಚಳವಳಿಯ ಕಣ ಪಂಜಾಬ್ನಲ್ಲಿ ಚುನಾವಣೆ: ಯಾರಿಗೆ ಲಾಭ?