- Advertisement -
- Advertisement -
ರಕ್ಷಾ ಬಂಧನ
ಸೀರೆಯಂಚಲಿ ಬಿಗಿದ ಬಂಧ
ನಿನ್ನ ಕೈಯ ಗಾಯ ಒಣಗಿಸಿತು
ದ್ರೌಪದಿಯ ಮಾನ ಪೊರೆಯಿತು
ಮುಕುಂದಾ.. ನೀ
ಕೊಟ್ಟ ಮಾತು ಉಳಿಸಿದೆ ಬಿಡು
ವಸ್ತ್ರಾಪಹರಣದ ವೇಳೆ
ಮೌನವಾಗುವ ದುರ್ಯೋಧನ
ಈಗ ಮೌನ ಮುರಿದಿದ್ದಾನೆ
ರಾಖಿ ಕಟ್ಟಬೇಕಂತೆ!!
ಹಸಿ ಗಾಯವೊಂದು ಕಣ್ಣ ಮುಂದಿರುವಾಗ
ಹುಸಿ ಪ್ರೀತಿಗೆ ಓಗೊಟ್ಟು
ಹೇಗೆ ಕೈಯ ಮುಂದೊಡ್ಡಲಿ?
ದುಶ್ಯಾಸನರ ಹೇಗೆ ನಂಬಲಿ?
ಸತ್ತು ಬದುಕಿದ, ಬದುಕಿ ಸಾಯುತ್ತಲೇ ಇರುವ
ಅವಳೆದುರು ನಿನ್ನದು
ಗಾಯವೇ ಅಲ್ಲ ಬಿಡು
ಹೂ ಹಾರದ ಸ್ವಾಗತ ದುಶ್ಯಾಸನರಿಗೆ ದಕ್ಕುವಾಗ
ಗಾಯ ಒಣಗುವುದಾದರೂ ಹೇಗೆ ಹೇಳು?
ದುತ್ತನೆ ಉಕ್ಕಿ ಹರಿವ ಪ್ರೀತಿ
ರಕ್ಷಣೆಯ ನೆವನ
ಕಪಟವಲ್ಲವೇ ಶ್ಯಾಮ?
ಬಿಲ್ಕೀಸ್ ಇನ್ನೂ ಬದುಕಿದ್ದಾಳೆ ಕೃಷ್ಣಾ
————————–
(ಇತ್ತೀಚೆಗೆ ಪ್ರಧಾನಿ ಮೋದಿ ಮುಸ್ಲಿಂ ಮಹಿಳೆಯರಿಗೆ ರಾಖಿ ಕಟ್ಟಲು ಸೂಚಿಸಿದಾಗ ಹೊಳೆದ ಸಾಲುಗಳು)