ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಅವಧೂತ ಶ್ರೀ ಶುಕಮುನಿ ದೇವರ ಹಬ್ಬದ ಪ್ರಯುಕ್ತ ಅಡ್ಡಪಲ್ಲಕ್ಕಿ ಉತ್ಸವವನ್ನು ಕೊರೊನಾ ನಿರ್ಬಂಧದ ನಡುವೆ ನಡೆಸಿದ್ದರಿಂದ ಗಲಭೆಯುಂಟಾಗಿ, ಸುಮಾರು 50 ಜನ ಗ್ರಾಮಸ್ಥರನ್ನು ಬಂಧಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವು ಉತ್ಸವ ನಡೆಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಕೊರೊನಾ ನಿರ್ಬಂಧ ಇರುವುದರಿಂದ, ಸರಳವಾಗಿ ಮತ್ತು ನಿಯಮಿತ ಜನರು ಸೇರಿ ಹಬ್ಬ ಮಾಡಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು.
ಅಡ್ಡಪಲ್ಲಕ್ಕಿ ಉತ್ಸವಕ್ಕೆ ತಹಶೀಲ್ದಾರ್ ತಡೆ ಹೇರಿದ್ದರು ಸಹ, ಏಕಾಏಕಿ ಗ್ರಾಮಸ್ಥರು ಸಾವಿರಾರು ಜನ ಸೇರಿ ಗುಡಿಯೊಳಗಿದ್ದ ಅಡ್ಡಪಲ್ಲಕ್ಕಿಯನ್ನು ಹೊರಗೆ ತಂದು ಮೆರವಣಿಗೆ ಮಾಡಿದ್ದಾರೆ. ಇದನ್ನು ತಡೆದದ್ದಕ್ಕೆ ಪೋಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಗಲಭೆಯಲ್ಲಿ ಪೋಲೀಸರ ವಾಹನದ ಗಾಜು ಪುಡಿಯಾಗಿದೆ. ಗುಂಪನ್ನು ನಿಯಂತ್ರಿಸಲು ಪೋಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ನಂತರ ಗ್ರಾಮಸ್ಥರು ಪಲ್ಲಕ್ಕಿಯನ್ನು ಗ್ರಾಮದ ನಡುವೆಯೇ ಬಿಟ್ಟು ಹೊರಟುಹೋಗಿದ್ದಾರೆ. ಅದನ್ನು ಪೋಲೀಸರು ಹೊತ್ತು ತಂದು ದೇವಸ್ಥಾನಕ್ಕೆ ತಲುಪಿಸಿದ್ದಾರೆ.
ಈ ಸಂಬಂಧ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಸುಮಾರು 50 ಜನ ಗ್ರಾಮಸ್ಥರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ