ಕಳೆದ ಶನಿವಾರದಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗಿರುವ ಸಚಿನ್ ಪೈಲಟ್ರನ್ನು ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಸಚಿನ್ ಪೈಲಟ್ರೊಂದಿಗೆ ಆತನ ಜೊತೆಗೆ ದೆಹಲಿಗೆ ತೆರಳಿರುವ ಇಬ್ಬರ ಸಚಿವರ ಸ್ಥಾನಗಳನ್ನು ಸಹ ವಜಾಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಕರೆದಿದ್ದ ಸಭೆಗೆ ಸಚಿನ್ ಪೈಲಟ್ ತಂಡ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಇಂದು ರಾಜ್ಯಭವನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲ ಕಾಲ್ರಾಜ್ ಮಿಶ್ರಾರವರನ್ನು ಭೇಟಿಯಾಗಿ ಅಧಿಕೃತವಾಗಿ ಸಚಿನ್ ಪೈಲಟ್ ಮತ್ತು ಇಬ್ಬರು ಸಚಿವರರನ್ನು ಸಂಪುಟದಿಂದ ಕೈಬಿಡುವಂತೆ ಮನವಿ ಮಾಡಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿಗಳ ಮನವಿಯನ್ನು ಅಂಗೀಕರಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುಜೇವಾಲ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿಯೂ ಸಚಿನ್ ಪೈಲಟ್ರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ಪೈಲಟ್ “ಸತ್ಯವನ್ನು ತೊಂದರೆಗೊಳಿಸಬಹುದು, ಸೋಲಿಸಲಾಗುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 30 ಶಾಸಕರ ಬೆಂಬಲವಿದೆ; ವಿಡಿಯೋ ಬಿಡುಗಡೆ ಮಾಡಿದ ಸಚಿನ್ ಪೈಲಟ್ ತಂಡ