ಸಂದೇಶಖಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದವರನ್ನು ಬಂಧಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಭತವಸೆ ನೀಡಿದ್ದಾರೆ. ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಸಂದೇಶಖಾಲಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.
ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡ ಬ್ಯಾನರ್ಜಿ, ‘ಯಾರು ಬೇಕಾದರೂ ಸಂದೇಶಖಾಲಿಗೆ ಹೋಗಬಹುದು. ಅದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ನಾವು ಈಗಾಗಲೇ ರಾಜ್ಯ ಮಹಿಳಾ ಆಯೋಗದ ತಂಡವನ್ನು ಸಂದೇಶಖಾಲಿಗೆ ಕಳುಹಿಸಿದ್ದೇವೆ ಮತ್ತು ಹಲವು ಆರೋಪಿಗಳನ್ನು ಬಂಧಿಸಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ; ಈ ಹಿಂಸಾಚಾರದಲ್ಲಿ ಭಾಗಿಯಾದವರೆಲ್ಲರನ್ನೂ ಬಂಧಿಸಲಾಗುವುದು’ ಎಂದರು.
ಹೌರಾ ಜಿಲ್ಲೆಯ ದುಮುರ್ಜಾಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ‘ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಉತ್ತಮ್ ಸರ್ದಾರ್, ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರ ಆಪ್ತ ಸಹಾಯಕರನ್ನು, ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ತೊಂದರೆ ಸೃಷ್ಟಿಸಿದ್ದಾರೆ ಎಂಬ ದೂರಿನ ಮೇರೆಗೆ ಭಾನುವಾರ ಸಂದೇಶಖಾಲಿಯಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿರುವ ಅವರ ಮನೆ ಮೇಲೆ ದಾಳಿ ಮಾಡಲು ಬಂದಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ಮಾಡಿದ ನಂತರ ಶೇಖ್ ತಲೆಮರೆಸಿಕೊಂಡಿದ್ದಾನೆ’ ಎಂದರು.
ಸಂದೇಶಖಾಲಿಯಲ್ಲಿ ಜನರಿಗೆ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸಿದ ಆರೋಪದ ಮೇಲೆ ಬಸಿರ್ಹತ್ ಲೋಕಸಭಾ ಕ್ಷೇತ್ರದ ಬಿಜೆಪಿ ವೀಕ್ಷಕ ವಿಕಾಸ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸಂದೇಶಖಾಲಿ ಸಿಪಿಎಂನ ಮಾಜಿ ಶಾಸಕ ನಿರಪಾದ ಸರ್ದಾರ್ ಅವರನ್ನು ಬಂಧಿಸಲಾಗಿದೆ.
ಇದೇ ವೇಳೆ ರಾಜ್ಯಪಾಲ ಬೋಸ್ ಸಂದೇಶಖಾಲಿಯಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸಂದೇಶಖಾಲಿಯಲ್ಲಿನ ಪರಿಸ್ಥಿತಿಯ ಕುರಿತು ರಾಜ್ಯ ಸರ್ಕಾರದಿಂದ ಸಮಗ್ರ ವರದಿಯನ್ನು ಅವರು ಈಗಾಗಲೇ ಕೇಳಿದ್ದಾರೆ.
‘ಸಂದೇಶಖಾಲಿಯ ಘಟನೆಗಳ ಆಘಾತಕಾರಿ ಮತ್ತು ಛಿದ್ರಗೊಳಿಸುವ ಕಥೆಗಳನ್ನು ನಾನು ಕೇಳಿದಾಗ, ನಾನು ನನ್ನ ಕೇರಳ ಭೇಟಿಯನ್ನು ಮೊಟಕುಗೊಳಿಸಿದೆ. ನಾನು ಸಂದೇಸ್ಖಾಲಿಗೆ ಹೋಗುತ್ತಿದ್ದೇನೆ ಮತ್ತು ಸಂದೇಶ್ಖಾಲಿಯ ಗಲ್ಲಿಗಳಿಂದ ನಿಜವಾದ ಸಂದೇಶ ಏನೆಂಬುದನ್ನು ನಾನೇ ನೋಡಲು ಬಯಸುತ್ತೇನೆ’ ಎಂದು ಕಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಬಂದ ನಂತರ ಬೋಸ್ ಹೇಳಿದರು.
ಸಂದೇಶಖಾಲಿಯ ತೊಂದರೆಗೀಡಾದ ಬೀದಿಗಳಿಗೆ ಭೇಟಿ ನೀಡಿ, ತಲೆಮರೆಸಿಕೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಚರರಿಂದ ಲೈಂಗಿಕ ಕಿರುಕುಳ ಮತ್ತು ಚಿತ್ರಹಿಂಸೆ ಅನುಭವಿಸಿದ್ದಾರೆ ಎನ್ನಲಾದ ಮಹಿಳೆಯರೊಂದಿಗೆ ಮಾತನಾಡಿದರು. ‘ನನ್ನ ಕೈಗಳ ಮೇಲೆ ರಾಖಿಗಳನ್ನು ಕಟ್ಟಿದ, ಹಿಂಸೆಗೊಳಗಾದ ಮಹಿಳೆಯರಿಗೆ ನ್ಯಾಯ ಪಡೆಯಲು ಎಲ್ಲ ಸಹಾಯ ನೀಡುವುದಾಗಿ’ ರಾಜ್ಯಪಾಲರು ಭರವಸೆ ನೀಡಿದರು.
‘ನಾನು ಕಂಡದ್ದು ಘೋರ, ಆಘಾತಕಾರಿ, ನನ್ನ ಇಂದ್ರಿಯಗಳನ್ನು ಛಿದ್ರಗೊಳಿಸಿತು. ನಾನು ಎಂದಿಗೂ ನೋಡಬಾರದಂತಹದನ್ನು ನೋಡಿದೆ. ನಾನು ಎಂದಿಗೂ ಕೇಳಬಾರದಂತಹ ಅನೇಕ ವಿಷಯಗಳನ್ನು ನಾನು ಕೇಳಿದ್ದೇನೆ. ಕವಿಗುರು ರವೀಂದ್ರನಾಥ ಟ್ಯಾಗೋರ್ ಅವರ ಭೂಮಿಯಲ್ಲಿ ಇದು ಸಂಭವಿಸಬಹುದೆಂದು ನಾನು ನಂಬಲು ಸಾಧ್ಯವಿಲ್ಲ’ ಎಂದು ಬೋಸ್ ಸುದ್ದಿಗಾರರಿಗೆ ತಿಳಿಸಿದರು.
‘ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ, ದೇಶದ ಕಾನೂನುಗಳ ಪ್ರಕಾರ ಮತ್ತು ಅವರ ಅಧಿಕಾರದೊಳಗೆ ಏನಿದೆಯೋ ಆ ಪ್ರಕಾರವಾಗಿ ಹೋರಾಟ ಮಾಡಲಾಗುವುದು. ಚಿಂತಿಸಬೇಡಿ.. ನಿಮಗೆ ಖಂಡಿತ ನ್ಯಾಯ ಸಿಗುತ್ತದೆ. ಎಂದು ಬೋಸ್ ಸ್ಥಳೀಯ ಮಹಿಳೆಯರಿಗೆ ಹೇಳಿದ್ದಾರೆ.
ಇದನ್ನೂ ಓದಿ; ಪ.ಬಂಗಾಳ: ಸದನದಲ್ಲಿ ಹೈಡ್ರಾಮ ಮಾಡಿದ 6 ಮಂದಿ ಬಿಜೆಪಿ ಶಾಸಕರು ಅಮಾನತು