ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಕ್ಕೆ ಚುನಾವಣಾ ಆಯೋಗ ಹೊಸ ಹೆಸರು ನೀಡಿದೆ.
ಶರದ್ ಪವಾರ್ ನೇತೃತ್ವದ ಪಕ್ಷದ ಹೆಸರು ಈ ಹಿಂದೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಎಂದು ಇತ್ತು. ಅದು ಈಗ ಅಜಿತ್ ಪವಾರ್ ಬಣದ ಪಾಲಾಗಿದೆ. ಹಾಗಾಗಿ ಶರದ್ ಪವಾರ್ ಬಣಕ್ಕೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ಚಂದ್ರ ಪವಾರ್’ (ಎನ್ಸಿಪಿ-ಎಸ್ಪಿ) ಎಂದು ಚುನಾವಣಾ ಆಯೋಗ ಹೊಸ ಹೆಸರು ಕೊಟ್ಟಿದೆ.
Sharad Pawar gets a new name for his faction: "Nationalist Congress Party – Sharadchandra Pawar"
Yesterday, Election Commission granted Ajit Pawar the NCP name and symbol. pic.twitter.com/i2zRxkyhyz
— ANI (@ANI) February 7, 2024
ವರದಿಗಳ ಪ್ರಕಾರ, ಚುನಾವಣಾ ಆಯೋಗ ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನೀಡಿದೆ. ಆದರೆ, ಪಕ್ಷದ ಚಿಹ್ನೆಯ ಕುರಿತು ಇನ್ನೂ ಮಾಹಿತಿ ದೊರೆತಿಲ್ಲ. ಎನ್ಸಿಪಿ ಪಕ್ಷದ ಚಿಹ್ನೆಯಾಗಿದ್ದ ‘ಗಡಿಯಾರ’ ಅಜಿತ್ ಪವಾರ್ ಬಣದ ಪಾಲಾಗಿದೆ.
ಶರದ್ ಪವಾರ್ ಅವರು 1999ರಲ್ಲಿ ಎನ್ಸಿಪಿ ಪಕ್ಷವನ್ನು ಸ್ಥಾಪಿಸಿದ್ದರು. ನಿನ್ನೆ(ಫೆ.6, 2024) ಅವರು ತಮ್ಮ ಪಕ್ಷದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಎನ್ಸಿಪಿ ಪಕ್ಷವನ್ನು ವಿಭಜಿಸಿದ ಬಂಡಾಯದ ನೇತೃತ್ವ ವಹಿಸಿದ್ದ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ನೇತೃತ್ವದ ಬಣವು ‘ನಿಜವಾದ’ ಎನ್ಸಿಪಿ ಎಂದು ಚುನಾವಣಾ ಆಯೋಗ ತಿಳಿಸಿದೆ.
ದೇಶದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದ್ದ ಎನ್ಸಿಪಿ ಅದರ ನಾಯಕ ಅಜಿತ್ ಪವಾರ್ ಮತ್ತು ಕೆಲ ಶಾಸಕರ ಬಂಡಾಯದಿಂದ ಈಗ ಎರಡು ವಿಭಾಗವಾಗಿದೆ. ಮೂಲ ಎನ್ಸಿಪಿ ಬಂಡಾಯ ನಾಯಕ ಅಜಿತ್ ಪವಾರ್ ಬಣದ ಪಾಲಾಗಿದೆ.
ಜುಲೈ 2023ರಲ್ಲಿ ಎನ್ಸಿಪಿ ನಾಯಕರಾಗಿದ್ದ ಅಜಿತ್ ಪವಾರ್ ಮತ್ತು ಕೆಲ ಶಾಸಕರು ಪಕ್ಷದ ಉನ್ನತ ನಾಯಕ ಶರದ್ ಪವಾರ್ ವಿರುದ್ದ ಬಂಡೆದ್ದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಬಣಕ್ಕೆ ಬೆಂಬಲ ಸೂಚಿಸಿದ್ದರು. ಈ ಮೂಲಕ ಅವರಿಗೆ ಶಿಂದೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಕೆಲ ಶಾಸಕರಿಗೆ ಸಚಿವ ಸ್ಥಾನ ದೊರೆತಿತ್ತು.
ಶಿವಸೇನೆಯಲ್ಲೂ ಎರಡು ವಿಭಾಗ :
ಮಹಾರಾಷ್ಟ್ರದ ಹಿಂದುತ್ವ ನಾಯಕ ಬಾಳಠಾಕ್ರೆ ಕಟ್ಟಿ ಬೆಳೆಸಿದ ದೇಶದ ಮತ್ತೊಂದು ಪ್ರಮುಖ ಪಕ್ಷ ಶಿವಸೇನೆ ಕೂಡ ಈಗ ಎರಡು ವಿಭಾಗಗಳಾಗಿವೆ. ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಕೂಟದ ‘ಮಹಾ ಅಘಾಡಿ’ ಸರ್ಕಾರದ ವಿರುದ್ದ ಬಂಡಾಯವೆದ್ದ ಮಹಾರಾಷ್ಟ್ರದ ಈಗಿನ ಸಿಎಂ ಏಕನಾಥ್ ಶಿಂದೆ ಮತ್ತು ಕೆಲ ಶಾಸಕರು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದರು.
ಆ ಬಳಿಕ ಶಿವಸೇನೆ ಪಕ್ಷದ ನಾಯಕತ್ವಕ್ಕಾಗಿ ಸಿಎಂ ಶಿಂದೆ ಮತ್ತು ಮಾಜಿ ಸಿಎಂ ಉದ್ದವ್ ಠಾಕ್ರೆ ನಡುವೆ ನಡೆದ ಕಾನೂನು ಸಮರದಲ್ಲಿ ಶಿಂದೆ ಬಣಕ್ಕೆ ಜಯವಾಗಿತ್ತು. ಶಿಂದೆ ಬಣವೇ ನಿಜವಾದ ಶಿವಸೇನೆ ಎಂದು ಚುನಾವಣಾ ಆಯೋಗ ಹೇಳಿತ್ತು. ಹಾಗಾಗಿ, ಉದ್ದವ್ ಠಾಕ್ರೆ ಬಣದ ಪಕ್ಷದ ಹೆಸರು ಶಿವಸೇನೆ ಉದ್ದವ್ ಬಾಳಠಾಕ್ರೆ (ಶಿವಸೇನೆ-ಯುಬಿಟಿ) ಎಂದು ಬದಲಾಗಿದೆ.
ಎರಡು ಭಾಗಗಳಾಗಿರುವ ಶಿವಸೇನೆ ಮತ್ತು ಎನ್ಸಿಪಿ ಪಕ್ಷಗಳು ಎರಡೂ ಕೂಡ ಮಹಾರಾಷ್ಟ್ರದ್ದೇ ಎಂಬುವುದು ಇಲ್ಲಿ ಗಮನಾರ್ಹ ಸಂಗತಿ. ಈ ಮೂಲಕ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಶಿವಸೇನೆ-ಯುಬಿಟಿ, ಎನ್ಸಿಪಿ, ಎನ್ಸಿಪಿ-ಎಸ್ಪಿ ಪ್ರಮುಖ ರಾಜಕೀಯ ಪಕ್ಷಗಳಾಗಿ ಹೊರ ಹೊಮ್ಮಿದೆ.
ಇದನ್ನೂ ಓದಿ : ಕೇಂದ್ರದ ವಿರುದ್ಧ ಕೇರಳ ಸರ್ಕಾರದಿಂದ ನಾಳೆ ದೆಹಲಿಯಲ್ಲಿ ಪ್ರತಿಭಟನೆ: ತಮಿಳುನಾಡಿನಿಂದ ಬೆಂಬಲ