ಶಿವಮೊಗ್ಗದಲ್ಲಿ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿಯ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಮತ್ತೊಂದು ಅಹಿತಕರ ಘಟನೆಗೆ ಶಿವಮೊಗ್ಗ ಸಾಕ್ಷಿಯಾಗಿದೆ.
ಸೋಮವಾರ ರಾತ್ರಿ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಿಂದುತ್ವ ಕಾರ್ಯಕರ್ತನ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
25 ವರ್ಷದ ಪ್ರಕಾಶ್ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಆರೋಪಿಗಳು ಆತನನ್ನು ತಡೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. “ಆರೋಪಿಗಳು ಹಿಂದೂ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಕಲ್ಲು ತೂರಿದ್ದಾರೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅವರಿಗೆ ತಲೆಗೆ ಗಾಯವಾಗಿದೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು” ಎಂದು ಮಿಥುನ್ ತಿಳಿಸಿದ್ದಾರೆ. ಪ್ರಕಾಶ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, “ಅವರು ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ” ಎಂದು ತಿಳಿಸಿದ್ದಾರೆ. ಆರೋಪಿಗಳನ್ನು ಹಿಡಿಯಲು ಮೂರು ತಂಡಗಳನ್ನು ಪೊಲೀಸರು ರಚಿಸಿದ್ದಾರೆ.
ಹಿಂದುತ್ವ ಕಾರ್ಯಕರ್ತನಿಗೆ ಶಿವಮೊಗ್ಗ ನಗರದ ಮೆಕ್ಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯ ಕೆಲವು ನಿಮಿಷಗಳ ಮೊದಲು, ಮೂರು ಬೈಕ್ಗಳಲ್ಲಿ ಬಂದ ಒಂಬತ್ತು ಮಂದಿ ಹಿಂದೂ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕಾಶ್ ಮೇಲಿನ ಹಲ್ಲೆಗೂ ಫೆಬ್ರವರಿಯಲ್ಲಿ ನಡೆದ ಹಿಂದುತ್ವವಾದಿ ಬಜರಂಗದಳದ ಸದಸ್ಯನ ಹತ್ಯೆಗೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 20ರಂದು ಶಿವಮೊಗ್ಗದ ಭಾರತಿ ಕಾಲೋನಿಯಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಹರ್ಷನ ಅಕ್ಕನ ಮೇಲೆ ಎಫ್ಐಆರ್
ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸೇರಿದ ವಾಹನವನ್ನು ಜಖಂ ಮಾಡಿದ ಆರೋಪದ ಮೇಲೆ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಿಸಲಾಗಿದೆ.
ಮನೆ ಎದುರು ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ ಪ್ರಕರಣ ಸಂಬಂಧ ಅಶ್ವಿನಿ ಸೇರಿದಂತೆ 15 ಮಂದಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.
ಇದನ್ನೂ ಓದಿರಿ: ಮೈಸೂರು: ಒಮ್ಮೆಲೇ ಐದು ಪಟ್ಟು ಹೆಚ್ಚಾದ ಸರ್ಕಾರಿ ಕಾಲೇಜು ಶುಲ್ಕ; ವ್ಯಾಸಂಗ ತೊರೆಯುವ ನಿರ್ಧಾರದಲ್ಲಿ ಬಡ, ದಲಿತ ವಿದ್ಯಾರ್ಥಿಗಳು!
ಆಝಾದ್ ನಗರದ ನಿವಾಸಿ ಸೈಯದ್ ಪರ್ವೀಜ್ ಎಂಬುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, “ಹರ್ಷನ ಸಹೋದರಿ ಅಶ್ವಿನಿ ಮತ್ತು ಅವರ ತಂಡ ನನ್ನ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದೆ” ಎಂದು ಆರೋಪಿಸಿದ್ದಾರೆ.
“ತಮ್ಮ ಇನ್ನೋವಾ ಕಾರಿನ ಮೇಲೆ ಸೀಗೆಹಟ್ಟಿ ನಿವಾಸಿ ಅಶ್ವಿನಿ ಮತ್ತು ಅವರ ತಂಡ ದಾಳಿ ನಡೆಸಿದೆ. ಕಲ್ಲಪ್ಪನ ಕೇರಿಯಿಂದ ಕೇಸರಿ ಬಾವುಟ ಕೈಯ್ಯಲ್ಲಿಡಿದು ಜೈ ಶ್ರೀರಾಮ್ ಎಂದು ಕೂಗುತ್ತಾ ಬೈಕ್ನಲ್ಲಿ ಬಂದ ಮಂದಿ, ಕಾರಿನ ಎಡಭಾಗದ ಹೆಡ್ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಒಡೆದು ಹಾಕಿದ್ದಾರೆ” ಎಂದು ಪರ್ವೀಜ್ ದೂರಿದ್ದಾರೆ.