ಮಹಾರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಕಚ್ಚಾಟ ತಾರಕಕ್ಕೇರಿದೆ. ಈ ಮಧ್ಯೆ ಶಿವಸೇನೆ ಸಿಎಂ ಹುದ್ದೆ ಪಡೆದೇ ತೀರುವ ಸಾಹಸದಲ್ಲಿದ್ದು, 170 ಶಾಸಕರನ್ನು ಭೇಟಿಯಾಗುವುದಾಗಿ ಹೇಳಿದೆ. ಈಗಾಗಲೇ ಬಿಜೆಪಿ ಮತ್ತು ಶಿವಸೇನೆ ನಡುವೆ ಅಧಿಕಾರಕ್ಕಾಗಿ ಪೈಪೋಟಿ ಮತ್ತು ಪ್ರತಿಷ್ಠೆ ತಾರಕಕ್ಕೇರಿದೆ.
ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಅಧಿಕಾರ ರಚನೆಗೆ ಅವಕಾಶ ನೀಡುತ್ತೇವೆ. ಒಂದು ವೇಳೆ ಸರ್ಕಾರ ರಚಿಸುವಲ್ಲಿ ಬಿಜೆಪಿ ವಿಫಲವಾದರೆ, ಶಿವಸೇನೆ ಸರ್ಕಾರ ರಚಿಸುವುದಾಗಿ ಹೇಳಿದೆ. ಇಂದು ಸಾಯಂಕಾಲ 170 ಶಾಸಕರನ್ನು ಭೇಟಿಯಾಗಿ, ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು. ನಂತರ ಗವರ್ನರ್ ಬಳಿ ಅಧಿಕಾರ ರಚಿಸಲು ಮನವಿ ಮಾಡುವುದಾಗಿ ಶಿವಸೇನೆ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಇನ್ನು ಸರ್ಕಸ್ನಲ್ಲಿ: BJP V/s ಶಿವಸೇನೆ, NCP ಮತ್ತು ಕಾಂಗ್ರೆಸ್?
ಅಕ್ಟೋಬರ್ 24 ರಂದು ಪ್ರಕಟವಾದ ಚುನಾವಣಾ ಫಲಿತಾಂಶದ ನಂತರ ಸತತ ಮೂರನೇ ಬಾರಿಗೆ ಶಿವಸೇನೆ ಪ್ರಮುಖರು, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಶಿವಸೇನೆಯ ಮುಖ್ಯವಾಣಿ ಸಾಮ್ನಾದಲ್ಲಿ, 170 ಎಂಎಲ್ಎಗಳ ಭೇಟಿ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೇ ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಶಾಸಕರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಮೈತ್ರಿ ಬಗ್ಗೆ ಸಂಜೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದೆ. ಇತ್ತ ಶರದ್ ಪವಾರ್ ಅವರಿಗೆ ಕರೆ ಮಾಡಿ ಮೈತ್ರಿಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಹ್ವಾನ ನೀಡಿದ್ದಾರೆ. ಆದರೆ ಸಂಜೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಶರದ್ ಪವಾರ್ ಭೇಟಿಯಾಗಲಿದ್ದಾರೆ ಆನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
ಎನ್.ಸಿ.ಪಿ ನಾಯಕ ಅಜಿತ್ ಪವಾರ್ ಮಾತನಾಡಿ, ಶಿವಸೇನೆಯ ಸಂಜಯ್ ರಾವತ್ ಅವರು ಸಂದೇಶ ಕಳುಹಿಸಿದ್ದಾರೆ. ಯಾಕೆ ಎಂದು ಗೊತ್ತಿಲ್ಲ. ಇದೇ ಮೊದಲ ಬಾರಿಗೆ ರಾವತ್ ಸಂಪರ್ಕಿಸಿದ್ದಾರೆ. ರಾವತ್ ಹೇಗೆ ಮತ್ತು ಯಾಕೆ 170 ಶಾಸಕರನ್ನು ಭೇಟಿಯಾಗುತ್ತಿದ್ದಾರೆ ಎಂದು ತಿಳಿದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಎನ್.ಸಿ.ಪಿ 110 ಸ್ಥಾನಗಳನ್ನು ಗೆದ್ದಿವೆ. ಶಿವಸೇನೆ 56 ಸ್ಥಾನ ಗೆದ್ದಿದ್ದು, ಅಧಿಕಾರಕ್ಕೇರಲು ಮೈತ್ರಿ ಮಾಡಿಕೊಳ್ಳುವ ತಂತ್ರವಿದೆ. ಬಿಜೆಪಿ ಮತ್ತು ಶಿವಸೇನೆಗೆ ಇನ್ನೂ ಕಾಲಾವಕಾಶವಿದ್ದು, ಆಲೋಚಿಸಿ ಬಿಜೆಪಿ ನಿರ್ಧರಿಸಬೇಕು ಎಂದು ಸಾಮ್ನಾದಲ್ಲಿ ಶಿವಸೇನೆ ಹೇಳಿದೆ.