ಪತ್ರಕರ್ತ ಶಶಿಕಾಂತ್ ವಾರಿಷೆ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಹೇಳಿದ್ದಾರೆ.
ರತ್ನಗಿರಿ ಜಿಲ್ಲೆಯ ಕೊಡವಲಿ ಗ್ರಾಮದಲ್ಲಿ ಪಂಢರಿನಾಥ್ ಅಂಬೇರ್ಕರ್ ಎಂಬ ಭೂ ಡೀಲರ್ ತನ್ನ ಎಸ್ಯುವಿಯನ್ನು ವಾರಿಷೆಯವರ ಮೇಲೆ ಹತ್ತಿಸಿ ಕೊಲೆ ಮಾಡಿದ್ದನು
ಹಲವಾರು ಮಾಧ್ಯಮ ಸಂಸ್ಥೆಗಳು ವಾರಿಷೆ ಅವರ ಸಾವಿನ ತನಿಖೆಗೆ ಒತ್ತಾಯಿಸಿದ್ದವು. ಹತ್ಯೆಯಾಗಿರುವ ವಾರಿಷೆಯವರು ಇತ್ತೀಚೆಗೆ ಅಂಬರ್ಕರ್ ವಿರುದ್ಧ ಲೇಖನ ಬರೆದಿದ್ದರು.
ಶನಿವಾರ ಫಡ್ನವೀಸ್ ಅವರ ಕಚೇರಿಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ, “ವಿಶೇಷ ತನಿಖಾ ತಂಡವನ್ನು ರಚಿಸುವಂತೆ ರಾಜ್ಯದ ಪೊಲೀಸ್ ಆಡಳಿತಕ್ಕೆ ಸೂಚಿಸಲಾಗಿದೆ” ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ವಿಶೇಷ ತನಿಖಾ ತಂಡವು ಉನ್ನತ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತದೆ ಎಂದು ಅದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಗೃಹ ಇಲಾಖೆಯ ಖಾತೆಯನ್ನು ಹೊಂದಿರುವ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದ ಶಿವಸೇನಾ ಸಂಸದ ಸಂಜಯ್ ರಾವತ್, ತನಿಖೆಗೆ ಒತ್ತಾಯಿಸಿದ್ದರು.
“ತೈಲ ಸಂಸ್ಕರಣಾಗಾರದ ಹೆಸರಿನಲ್ಲಿ ನಾನಾರ್ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಸ್ವಾಧೀನಪಡಿಸಿಕೊಂಡಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಭೂ ವಹಿವಾಟುಗಳನ್ನು ಶಶಿಕಾಂತ್ ವಾರಿಷೆ ಬಹಿರಂಗಪಡಿಸಿದ್ದರು. ಇದರಿಂದಾಗಿ ಭೂ ವ್ಯವಹಾರದಲ್ಲಿ ತೊಡಗಿರುವವರು ಅಸಮಾಧಾನಗೊಂಡಿದ್ದರು” ಎಂದು ರಾವತ್ ಆರೋಪಿಸಿದ್ದರು.
ಮೂಲತಃ ರತ್ನಗಿರಿಯ ನಾನಾರ್ ಗ್ರಾಮದಲ್ಲಿ ಯೋಜಿಸಲಾಗಿದ್ದ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಯೋಜನೆಯನ್ನು ಶಿವಸೇನೆ ವಿರೋಧಿಸಿತ್ತು. “ಈ ಯೋಜನೆಯು ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ; ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ 17 ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ” ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದರು.
ಅಪರಾಧ ಹಿನ್ನೆಲೆಯುಳ್ಳ ಲ್ಯಾಂಡ್ ಏಜೆಂಟ್ ಕುರಿತು ಫೆಬ್ರವರಿ 6ರಂದು ಮಹಾರಾಷ್ಟ್ರ ರತ್ನಗಿರಿ ಮೂಲದ ಸ್ಥಳೀಯ ದೈನಿಕವು ಮೊದಲ ಪುಟದ ವರದಿಯನ್ನು ಪ್ರಕಟಿಸಿದ ಕೆಲವೇ ಗಂಟೆಗಳ ಬಳಿಕ, ವರದಿ ಬರೆದ ಪತ್ರಕರ್ತರಾದ ವಾರಿಷೆಯವರನ್ನು ಕೊಲ್ಲಲಾಯಿತು. ಕಾರನ್ನು ಅವರ ಮೇಲೆ ಹತ್ತಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
‘ಮಹಾನಗರಿ ಟೈಮ್ಸ್’ ಪತ್ರಿಕೆಯ ಪ್ರಾದೇಶಿಕ ಮುಖ್ಯಸ್ಥ 48 ವರ್ಷದ ಶಶಿಕಾಂತ್ ವಾರಿಷೆ ಅವರು ಸ್ಥಳೀಯ ಪ್ರಭಾವಿ ವ್ಯಕ್ತಿಯಾದ ಪಂಢರಿನಾಥ್ ಅಂಬರ್ಕರ್ ಅವರ ಬಗ್ಗೆ ವರದಿಯನ್ನು ಬರೆದಿದ್ದರು.
“ರಿಫೈನರಿ ಪರ ಏಜೆಂಟ್ ಆಗಿರುವ ವ್ಯಕ್ತಿಯು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆಯಲ್ಲಿ ತನ್ನ ಫೋಟೋಗಳನ್ನು ಏಕೆ ಹಂಚಿಕೊಳ್ಳುತ್ತಿದ್ದಾನೆ?” ಎಂದು ವರದಿಯಲ್ಲಿ ಗಮನ ಸೆಳೆಯಲಾಗಿತ್ತು.
ಕೊಂಕಣಕ್ಕೆ ಸಂಸ್ಕರಣಾಗಾರ ಯೋಜನೆಯನ್ನು ತಂದಿದ್ದಕ್ಕಾಗಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿ ಲ್ಯಾಂಡ್ ಏಜೆಂಟ್ ತನ್ನ ಫೋಟೋಗಳೊಂದಿಗೆ ಪೋಸ್ಟರ್ಗಳನ್ನು ಹಾಕಿದ್ದನು.
ಸುದ್ದಿಯು ವಾರಿಷೆ ಅವರ ಬೈಲೈನ್ ಹೊಂದಿರಲಿಲ್ಲ. ಆದರೆ ಇದನ್ನು ಬರೆದವರು ಯಾರೆಂಬುದು ಅಂಬರ್ಕರ್ಗೆ ಚೆನ್ನಾಗಿ ಗೊತ್ತಿತ್ತು ಎಂದು ವಾರಿಷೆ ಸಹೋದ್ಯೋಗಿಗಳು ಹೇಳಿದ್ದರು.
ವರದಿ ಪ್ರಕಟವಾದ ದಿನ ಅಂದು ಮಧ್ಯಾಹ್ನ 1.30ರ ಸುಮಾರಿಗೆ ವಾರಿಷೆಯವರ ಮೇಲೆ ದಾಳಿ ಮಾಡಲಾಯಿತು. ರತ್ನಗಿರಿಯ ಮುನ್ಸಿಪಲ್ ಕೌನ್ಸಿಲ್ ರಾಜಾಪುರದ ಪೆಟ್ರೋಲ್ ಪಂಪ್ನ ಹೊರಗೆ ಈ ಘಟನೆ ನಡೆಯಿತು. ವಾರಿಷೆ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೊಲ್ ಹಾಕಿಸಲು ನಿಂತಿದ್ದಾಗ ಅಂಬರ್ಕರ್ ತನ್ನ ಮಹೀಂದ್ರ ಥಾರ್ ಎಸ್ಯುವಿಯನ್ನು ವಾರಿಷೆ ಮೇಲೆ ಹತ್ತಿಸಿ ಸುಮಾರು 100 ಮೀಟರ್ ಎಳೆದೊಯ್ದಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ವಾರಿಷೆಯವರನ್ನು, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಗೊಂಡು ಒಂದು ದಿನದ ನಂತರ ಫೆಬ್ರವರಿ 7 ರಂದು ಅವರು ನಿಧನರಾದರು.
ಸ್ಥಳದಿಂದ ಪರಾರಿಯಾಗಿದ್ದ ಅಂಬರ್ಕರ್ನನ್ನು ಫೆ.7ರ ಸಂಜೆ ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
“ನಾವು ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಆದರೆ ವಾರಿಷೆಯವರನ್ನು ಕೊಲ್ಲುವ ಉದ್ದೇಶವಿದ್ದದ್ದು ಸಾಕ್ಷ್ಯಗಳಿಂದ ಕಂಡುಬಂದ ಬಳಿಕ ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲೂ ಆರೋಪ ಹೊರಿಸಲಾಗಿದೆ. ಅಂಬರ್ಕರ್ ಕೊಲ್ಲುವ ಉದ್ದೇಶದಿಂದಲೇ ಬಂದಿದ್ದನು ಎಂದು ಪ್ರಾಥಮಿಕ ಸಾಕ್ಷ್ಯಗಳು ತಿಳಿಸುತ್ತಿವೆ. ಅಂಬರ್ಕರ್ನನ್ನು ಫೆಬ್ರವರಿ 14ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ” ಎಂದು ರತ್ನಗಿರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ಮಾಹಿತಿ ನೀಡಿದ್ದರು.