ಕರ್ನಾಟಕ ಜನಶಕ್ತಿ ಸಂಘಟನೆಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಐತಿಹಾಸಿಕ ರೈತಾಂದೋಲನ ಕಲಿಸುವ ಪಾಠ- ತೋರುವ ಹಾದಿ: ಮಂಥನ ಸಮಾವೇಶದಲ್ಲಿ ಬಿಕೆಯು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ಪಂಜಾಬ್ನ ಹರ್ನೇಕ್ ಸಿಂಗ್ ರವರು ಮಾಡಿದ ಭಾಷಣದ ಯಥಾವತ್ ರೂಪ ಇಲ್ಲಿದೆ.
ದೆಹಲಿಯಿಂದ ಪದೇ ಪದೇ ಕರ್ನಾಟಕಕ್ಕೆ ಬರುತ್ತಿದ್ದೇನೆ. ಕರ್ನಾಟಕಕ್ಕೆ ಮೂರನೇ ಬಾರಿ ಬಂದಿದ್ದೇನೆ. ಅದಕ್ಕೆ ವಿಶೇಷ ಕಾರಣವಿದೆ. ಅದೆಂದರೆ ದಕ್ಷಿಣ ಭಾರತದ ರೈತರ ಒಗ್ಗೂಡುವಿಕೆ ಕರ್ನಾಟಕದಿಂದಲೇ ಸಾಧ್ಯ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಅರಿತಿದೆ.
ಪಂಜಾಬಿಯಲ್ಲಿ ಒಂದು ಮಾತಿದೆ. ಇವತ್ತಿನ ಸಮಯದಲ್ಲಿ ಮೂರ್ಖರು ಮಾತ್ರ ನೆಮ್ಮದಿಯಾಗಿ ಮಲಗಲು ಸಾಧ್ಯ. ಬುದ್ಧಿ ಬಂದ ಮೇಲೆ ನಾವು ನಿಶ್ಚಿತರಾಗಿ ಇರಲು ಸಾಧ್ಯವಿಲ್ಲ. ನೆಮ್ಮದಿಯಲ್ಲಿ ಮಲಗಿದವರು ಮೂರ್ಖರ ಪಟ್ಟಿಯಲ್ಲಿ ಬರುತ್ತಾರೆ.
ಎಲ್ಲರ ಮನಸ್ಸಿನಲ್ಲಿ ರೈತರ ಚಳವಳಿ ಇಷ್ಟು ದೀರ್ಘವಾಗಿ ನಡೆದದ್ದು ಹೇಗೆ ಎಂಬ ಪ್ರಶ್ನೆ ಇದೆ. ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ಪಂಜಾಬ್, ಹರಿಯಾಣದ ರೈತರನ್ನು ಇಷ್ಟು ದೀರ್ಘವಾಗಿ ಹೇಗೆ ಹೋರಾಟ ಹೂಡಿದರು? ಇದು ಒಂದು ವರ್ಷದ ಕೆಲಸವಲ್ಲ. 28 ವರ್ಷಗಳ ಹೋರಾಟದ ಫಲವಿದು. ನಮ್ಮ ಹಿರಿಯರು ಮುಂದಿನ ದಿನಗಳ ಅಪಾಯಗಳನ್ನು ತಿಳಿಸಿ ಹೇಳುತ್ತಿದ್ದರು. 28 ವರ್ಷಗಳ ಸಿದ್ಧತೆಯ ಫಲವಾಗಿ ಈ ಹೋರಾಟ ನಿರಂತರವಾಗಿ ನಡೆಯುತ್ತಿದೆ.
ಇದನ್ನೂ ಓದಿರಿ: ರೈತರನ್ನು ಕಾರ್ಪೊರೇಟ್ ಕಾಲಡಿಗೆ ದೂಕುತ್ತಿರುವ ಕೇಂದ್ರ ಸರ್ಕಾರ: ಬಿ.ಸಿ ಬಸವರಾಜ್
ಒಂದು ಸಮಯ ಪಂಜಾಬ್ನಲ್ಲಿ ಒಂದೇ ವಿಷಯದ ಕುರಿತು ಬೇರೆ ಜಾಗದಲ್ಲಿ, ವಿಭಿನ್ನ ವಿಚಾರಧಾರೆಯ ಜನರು ಹೋರಾಟ ನಡೆಸುತ್ತಿದ್ದರು. ಹೀಗಿರುವ ಒಂದು ಆರಂಭ ಮಾಡಿದೆವು. ಸಾಮಾನ್ಯ ಹಕ್ಕೊತ್ತಾಯಕ್ಕಾಗಿ, ಬೇರೆ ಬೇರೆ ಧಾರೆಗಳು ಒಗ್ಗೂಡಿ ಕೆಲಸ ಮಾಡುವ ಪ್ರಯತ್ನ ಮಾಡಿದೆವು. ಒಟ್ಟಿಗೆ ಸೇರಿ ಹೋರಾಟ ಮಾಡೋಣ. ಆಮೇಲೆ ನಮ್ಮ ನಮ್ಮ ಜಾಗಗಳಿಗೆ ಹೋಗೋಣ ಎಂದು ನಿರ್ಧರಿಸಿದೆವು.
1997ನೇ ಇಸವಿಯಲ್ಲಿ ಪಂಜಾಬ್ನ ಬರ್ನಾಲದಲ್ಲಿ ಒಂದು ಘಟನೆ ನಡೆಯಿತು. ದಲಿತ ವ್ಯಕ್ತಿಯೊಬ್ಬನಿಗೆ ಪೊಲೀಸ್ ಹೊಡೆದು ಸಾಯಿಸಿದ. ಈ ಘಟನೆ ಯಾರಿಗೆ ತಪ್ಪು ಅನಿಸುತ್ತದೆಯೋ ಅವರೆಲ್ಲ ಒಂದು ವೇದಿಕೆ ಬನ್ನಿ ಹೋರಾಡೋಣ ಎಂದು ಕರೆ ಕೊಟ್ಟೆವು. ಅತ್ಯಾಚಾರ ಪ್ರಕರಣವೊಂದು ಘಟಿಸಿತು. ನ್ಯಾಯದ ಪರ ಇರುವವರು ಒಂದು ಕಡೆ ಬರಬೇಕು. ಇಲ್ಲ ಎನ್ನುವವರು ಹೊರಗಿರಿ ಎಂದು ಕರೆ ನೀಡಿದೆವು. ಎಲ್ಲರೂ ಒಂದು ವೇದಿಕೆಗೆ ಬರುವ ಪ್ರಯೋಗವಾಯಿತು. ಪೊಲೀಸ್ ಮತ್ತು ಅತ್ಯಾಚಾರಿಗೆ ಶಿಕ್ಷೆಯಾಯಿತು. ಆ ಮೂಲಕ ಒಂದು ಕಡೆ ಸೇರಿದರೆ ಗೆಲುವು ಪಡೆಯಬಹುದು ಎಂದು ತೋರಿಸಿಕೊಟ್ಟೆವು.
ಪಂಜಾಬ್ನಲ್ಲಿ ಒಮ್ಮೆ ವಿದ್ಯುತ್ ಸಮಸ್ಯೆ ಕುರಿತು ಪ್ರತಿಭಟನೆ ನಡೆಯಿತು. ರೈತರು ಟ್ರಾಕ್ಟರ್ ಮೂಲಕ ಬಂದು ಪಟಿಯಾಲದಲ್ಲಿ ಹೋರಾಟ ಮುಂದುವರಿಸಿದರು. ಮನೆಮಠ ಕಟ್ಟಿಕೊಂಡು ಅಲ್ಲಿಗೆ ರೈತರು ಬಂದಿದ್ದರು. ವಾಪಸ್ ಹೋಗುತ್ತಾರೆ ಎಂದು ಭಾವಿಸಿದ್ದವರಿಗೆ ಭ್ರಮನಿರಸನವಾಯಿತು. ಸರ್ಕಾರಕ್ಕೆ ತಲೆನೋವು ಉಂಟಾಗಿತ್ತು. ಈ ಪ್ರಯೋಗ ಫಸಲು ನಾಶ, ಸಾಲದ ಸಮಸ್ಯೆಯಲ್ಲೂ ಪ್ರಯೋಗವಾಯಿತು. ಒಮ್ಮೆ ಹೋರಾಟ ನಡೆಯುತ್ತಿದ್ದಾಗ ಚಂಡಿಘಡ ಗುರುದ್ವಾರದಲ್ಲಿ ಊಟ ಸಿಕ್ಕರೂ ಅಲ್ಲಿ ಪಡೆಯಬೇಡಿ ಎಂದು ರೈತರಿಗೆ ಹೇಳಿದೆವು. ಮನೆಯಿಂದ ಊಟ ಕಟ್ಟಿಕೊಂಡು ಬಂದರು. ಸೈನಿಕರು ಊಟ ಇಲ್ಲದೆ, ಸ್ನಾನ ಇಲ್ಲದೆ ಇರುತ್ತಾರೆ. ಅವರಂತೆ ನಾವು ಹೋರಾಟ ಮಾಡಬೇಕು ಎಂದು ತಿಳಿಸಿದೆವವು. ಅದರ ಫಲವನ್ನು ಇಂದು ದೆಹಲಿಯಲ್ಲಿ ಹೋರಾಟದಲ್ಲಿ ಕಾಣುತ್ತಿದ್ದೇವೆ.
ಜಂಟಿ ವಿಚಾರಧಾರೆಯುಳ್ಳವರು ಒಂದು ವೇದಿಕೆಗೆ ಬರಬೇಕೆಂಬ ಪ್ರಯೋಗವನ್ನು ಬೇರೆ ವಿಚಾರಗಳಿಗೆ ನಾವು ಪ್ರಯೋಗಿಸಲು ಮುಂದಾದೆವು. ಅದು ಈಗ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರೂಪದಲ್ಲಿ ಬಂದಿದೆ. ಎಸ್ಕೆಎಂ ಹೋರಾಟ ಬಿಜೆಪಿಯ ಕಪಾಳಕ್ಕೆ ಭಾರಿಸಿದೆ. “ರೈತ ಆಂದೋಲನದಲ್ಲಿ ವಿರುದ್ಧ ಚಿಂತನೆಯವರು ಇದ್ದಾರೆ, ಅವರೆಲ್ಲ ಒಂದು ಕಡೆ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ, ಎಸ್ಕೆಎಂ ಮುರಿದಾಗ ಹೊರಟು ಹೋಗುತ್ತಾರೆ ಎಂದು ಭಾವಿಸಿದ್ದೆವು” ಎಂದು ನಮ್ಮನ್ನು ಭೇಟಿಯಾಗಲು ಬರುವ ಬಿಜೆಪಿಯ ಮಾಜಿ ನಾಯಕರು ಹೇಳುತ್ತಾರೆ.
ಜನರು ಹತ್ತು ಅಥವಾ ಇಪ್ಪತ್ತು ದಿನಗಳಲ್ಲಿ ವಾಪಸ್ ಹೋಗುತ್ತಾರೆ ಎಂದು ಬಿಜೆಪಿಯವರು ಭಾವಿಸಿದ್ದರು. ಅದರೆ ಅದಕ್ಕೆ ವಿರುದ್ಧವಾಗಿ ಒಂದೇ ಒಂದು ದಿನ ಊರಿಗೆ ಹೋಗದವರೂ ಇದ್ದಾರೆ. ಬಂಧುಗಳ ಸಾವು, ಮದುವೆಗಳಿಗೆ ಹೋಗದವರು ಇದ್ದಾರೆ.
ಇದನ್ನೂ ಓದಿರಿ: ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್ಕೆಎಂ
ದೆಹಲಿಗೆ ಹೊರಡುವ ಮುಂಚೆ ರೈಲು ತಡೆ ಆರಂಭಿಸಿದೆವು. ಎರಡು ತಿಂಗಳ ನಂತರ ದೆಹಲಿಗೆ ಹೊರಟೆವು. ಕಿಂಟ್ವಾಲ್ಗಟ್ಟಲೆ ತೂಕದ ಬಂಡೆಗಳನ್ನು ಕ್ರೇನ್ಗಳಲ್ಲಿ ತಂದು ಹರಿಯಾಣ ಸರ್ಕಾರ ರಸ್ತೆಯಲ್ಲಿ ಇರಿಸಿತು. ಆ ಬಂಡೆ ಕಲ್ಲುಗಳನ್ನು ರೈತರು ತಮ್ಮ ತೋಳ್ಬಲದಲ್ಲೇ ಬದಿಗೆ ಸರಿಸಿ ಮುನ್ನೆದರು. ಇದು ಉತ್ಪ್ರೆಕ್ಷೆಯ ಮಾತಲ್ಲ.
ಕೊರೊನಾ ದೆಹಲಿಯಲ್ಲಿ ಎದುರಾಯಿತು. ಕೊರೊನಾ ಬಂದರೆ ಸಾಯುವುದಿಲ್ಲ ಎಂಬುದನ್ನು ರೈತರಿಗೆ ಮನವರಿಕೆ ಮಾಡಿದೆವು. ಸುಮಾರು 25 ಸಾವಿರ ಜನರ ಸಮಾವೇಶ ನಡೆಸಿ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲರ ಆರೋಗ್ಯದ ಮೇಲೆ ಗಮನ ನಿಗಾವಹಿಸಿದೆವು. 25 ಸಾವಿರ ಜನರಲ್ಲಿ ಯಾರೂ ಸಾಯಲಿಲ್ಲ. ಕೋವಿಡ್ನಿಂದ ಮಾರಾಣಾಂತಿರಕ ತೊಂದರೆಯಾಗಲಿಲ್ಲ. ದೆಹಲಿಯಲ್ಲಿ ಹೋರಾಟಗಾರರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗಲಿಲ್ಲ. ತಪ್ಪು ಮಾಡಿದವರು ಮಾತ್ರ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುತ್ತಾರೆ. ನಾವು ಮಾಸ್ಕ್ ಹಾಕಿಕೊಂಡು ಹೋರಾಟ ಮಾಡಲಿಲ್ಲ.
ನಾವು ಒಂದು ವರ್ಷದಿಂದ ದೆಹಲಿಯಲ್ಲಿ ಕೂತಿದ್ದೇವೆ. ಒಂದು ವಿಚಾರ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ಹಕ್ಕೊತ್ತಾಯ ತಿಳಿಸಿದ್ದೇವೆ. ನಾವು ಯಾರ ಬಳಿಯು ಬೇಡಿಕೊಳ್ಳಬೇಕಾಗಿಲ್ಲ. ಅದು ನಮ್ಮ ಹಕ್ಕು. ಹೋರಾಟ ಮಾಡಿ ಅದನ್ನು ಪಡೆದುಕೊಳ್ಳುವುದನ್ನು ರೈತರಿಗೆ ತಿಳಿಸಿಕೊಟ್ಟಿದ್ದೇವೆ.
ನಮ್ಮ ಹಕ್ಕೊತ್ತಾಯ ಏನೆಂದರೆ ಎಂಎಸ್ಪಿ- ಕನಿಷ್ಠ ಬೆಂಬಲ ಬೆಲೆ. ಅದಾನಿಯ ಒಂದು ದಿನದ ಆದಾಯ 900 ಕೋಟಿ. ಅದು ಯಾರ ಆದಾಯ? ಅದು ನಮ್ಮ ಪಾಲಿನ ಆದಾಯ. ಸರ್ಕಾರ ಸರಿ ಇಲ್ಲದ ಕಾರಣ ನಮ್ಮ ಹಣ ಅದಾನಿ ಅಕೌಂಟ್ಗೆ ಹೋಗಿದೆ. ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಡಬೇಕಾಗಿದೆ. ನಮ್ಮ ಹಿರಿಯ ನಾಯಕರೊಬ್ಬರು ದೀಪಾವಳಿಯ ಮುಂಚೆ ಊರಿಗೆ ಹೋದರು. ಆದರೆ ಅವರು ಮಾರನೇ ದಿನವೇ ವಾಪಸ್ ಬಂದರು. ಇಷ್ಟು ದಿನ ಹೋರಾಟ ಮಾಡುತ್ತಿರುವಾಗ ಹಬ್ಬ ಬೇಡ ಎಂದು ಅವರು ಯೋಚಿಸಿ ಹೋರಾಟದ ನೆಲಕ್ಕೆ ವಾಪಸ್ ಬಂದರು.
ಪಂಜಾಬ್ನಲ್ಲಿ ಎಲ್ಲ ಹಬ್ಬಗಳು ಒಂದಲ್ಲ ಒಂದು ಫಲಸಿನ ಜೊತೆ ಬರುತ್ತವೆ. ಫಸಲು ಬಂದಾಗ ಹಬ್ಬದ ಸಂತೋಷ ಇರುತ್ತಿತ್ತು. ಬದಲಾದ ಸಂದರ್ಭದಲ್ಲಿ ಫಸಲು ಬಂದಾಗ ಕಷ್ಟ ಕಾಲ ಬಂದ ಅನುಭವವಾಗಿದೆ. ಫಸಲು ಬಂದಿದೆ ಎಂದರೆ ಸಾಲಗಾರರು ಬಂದಿದ್ದಾರೆ ಎನಿಸುತ್ತಿದೆ. ಈಗ ಫಸಲು ಬಂದಿದೆ ಎಂದರೆ ಕಷ್ಟಕಾಲ ಬಂದಿದೆ ಎನಿಸುತ್ತಿದೆ. ನಾವು ಖರೀದಿಸುವಾಗಲೂ, ನಮ್ಮ ಉತ್ಪನ್ನವನ್ನು ಮಾರುವಾಗಲೂ ಬೇರೆಯವರಿಂದ ಬೆಲೆ ಕೇಳುವಂತಾಗಿದೆ. ನಮ್ಮ ಬೆಳೆಗೆ ನಾವೇ ಬೆಲೆ ನಿಗದಿ ಮಾಡುವ ಕಾಲ ಬರಬೇಕು.
ನೀವು ಎಚ್ಚೆತ್ತವರಾಗಿದ್ದೀರಿ. ಮೂರ್ಖರು ಮಲಗಿದ್ದಾರೆ. ನಿರಂತರವಾದ ಹೋರಾಟದಿಂದ ಯೋಗಿ ಆದಿತ್ಯನಾಥ, ನರೇಂದ್ರಮೋದಿಯಂತಹ ಜನರನ್ನು ತೊಲಗಿಸಬೇಕು. ರೈತರು ಬದುಕುತ್ತಿಲ್ಲ, ದಿನದೂಡುತ್ತಿದ್ದಾರೆ. ಬಾಳ್ವೆ ಮಾಡುತ್ತಿಲ್ಲ. ಹುಟ್ಟಿದ್ದೇನೆ, ಸಾಯಬಾರದು ಎಂದು ಭಾವಿಸಿ ದಿನದೂಡುತ್ತಿದ್ದಾರೆ ಹೊರತು ಬಾಳ್ವೆ ಮಾಡುತ್ತಿಲ್ಲ.
ಈ ಆಂದೋದನದಿಂದಾಗಿ ಬದಲಾವಣೆಗಳಾಗಿವೆ. ಉಪಮುಖ್ಯಮಂತ್ರಿಯನ್ನು ತೋಳು ಹಿಡಿದು ತಡೆದು ನಿಲ್ಲಿಸಿ ರೈತರು ಪ್ರಶ್ನೆ ಮಾಡಿದ್ದಾರೆ. ಆತ ಉತ್ತರ ಕೊಡದೆ ಹೋಗಲು ಸಾಧ್ಯವಿಲ್ಲ. ಶಾಸಕರು ಯಾವುದಾದರೂ ಗ್ರಾಮಕ್ಕೆ ಬರಬೇಕೆಂದರೆ ರೈತ ನಾಯಕರ ಅನುಮತಿ ಪಡೆಯಬೇಕಾಗಿದೆ. ಅದು ಈ ಆಂದೋದನದಿಂದ ಸಾಧ್ಯವಾಗಿದೆ. ಎಂಎಸ್ಪಿ, ಸಾಲಮನ್ನಾಕ್ಕೆ ಹೋರಾಟ ನಿಲ್ಲುವುದಿಲ್ಲ. ಇಡೀ ದೇಶ ಹೇಗೆ ಮುನ್ನಡೆಯಬೇಕು ಎಂದು ತೋರಿಸಿಕೊಡುತ್ತಿದೆ.
ಸಿಂಘು ಗಡಿ ಘಟನೆಗೆ ಸಿಖ್ ಧರ್ಮದಲ್ಲಿ ಅವಕಾಶವಿಲ್ಲ. ಘಟನೆಯನ್ನು ಖಂಡಿಸುತ್ತೇವೆ. ಸಿಖ್ ಧರ್ಮ ಕರುಣೆ ಮತ್ತು ದಯೆಯ ಮೇಲೆ ನಿಂತಿದೆ. ಬಿಜೆಪಿಯ ಫ್ಯಾಸಿಸ್ಟ್ ಧೋರಣೆಯಿಂದ ಈ ಘಟನೆಗಳು ನಡೆಯುತ್ತಿವೆ. ಪ್ರತಿನಿತ್ಯವು ಇಂತಹ ಘಟನೆಗಳು ನಡೆದಿವೆ. ಅವುಗಳನ್ನು ದಾಟಿ ನಾವು ನಡೆದಿದ್ದೇವೆ.
ಕೊಲೆಯಾದ ವ್ಯಕ್ತಿ ಹೋರಾಟದಲ್ಲಿ ಇರಲಿಲ್ಲ. ಹಳ್ಳಿಯಿಂದ ಕರೆದುಕೊಂಡು ಬಂದು ಕೊಲೆ ಮಾಡಲಾಯಿತು. ಘಟನೆಯನ್ನು ರೈತರ ಮೇಲೆ ಹೊರಿಸಲಾಯಿತು. ಇದು ಹಿಂದೂ ಫ್ಯಾಸಿಸಂ ಅಡಿಯಲ್ಲಿ ನಡೆಯುತ್ತಿರುವ ಸಿಖ್ ಫ್ಯಾಸಿಸಂನ ರೂಪ. ನಾವು ಎಲ್ಲ ಧರ್ಮದ ಫ್ಯಾಸಿಸಂನ ವಿರುದ್ಧ ಇದ್ದೇವೆ. ಈ ಘಟನೆಯನ್ನು ನಾವು ವಿರೋಧಿಸುತ್ತೇವೆ. ಈ ಘಟನೆಯಿಂದ ನಾವು ಹತಾಶರಾಗಬೇಕಿಲ್ಲ. ಈ ಇವುಗಳನ್ನು ದಾಟಿ ಬಂದಿದ್ದೇವೆ.
ನೀವು ವಾಪಸ್ ಹಳ್ಳಿಗಳಿಗೆ ಹೋಗಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಮಾಹಿತಿ ಕೊಡಿ. ಇದು ಸುವರ್ಣಾವಕಾಶ. ಆದರೆ ಕೊನೆಯ ಅವಕಾಶ ಎನ್ನುವುದಿಲ್ಲ. ಈ ಹೋರಾಟದ ಕುರಿತು ತಿಳಿಸಿಕೊಡಿ. ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡಿ.
ಇದನ್ನೂ ಓದಿ: ಬಿಜೆಪಿ ನಾಯಕರಿಗೆ ರೈತರಿಂದ ಘೇರಾವ್; ಕೈಮುಗಿದು ಕ್ಷಮೆಯಾಚಿಸಿದ ಮಾಜಿ ಸಚಿವ