ಆರ್ಯ ಸಮಾಜದ ನಾಯಕ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್(80) ಇಂದು ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಬಿಲಿಯರಿ ಸೈನ್ಸಸ್ ಆಸ್ಪತ್ರೆ (ILBS)ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಅಗ್ನಿವೇಶ್ ಪಿತ್ತಜನಕಾಂಗದ ಸಿರೋಸಿಸ್ಗೆ ಚಿಕಿತ್ಸೆ ಪಡೆಯುತ್ತಿದ್ದರು.
“ಶುಕ್ರವಾರ ಅವರ ಸ್ಥಿತಿ ಹದಗೆಟ್ಟಿದ್ದು, ಸಂಜೆ 6:00 ಗಂಟೆಗೆ ಹೃದಯ ಸ್ತಂಭನವಾಯಿತು ಮತ್ತು ಸಂಜೆ 6:30 ಕ್ಕೆ ನಿಧನರಾದರು. ನಾವು ಎಷ್ಟೇ ಪ್ರಯತ್ನಿಸಿದ್ದರು ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಪ್ರೀತಿಯ ನಾಯಕನ ನಷ್ಟಕ್ಕೆ ದೇಶದ ಜನರ ಶೋಕದಲ್ಲಿ ಆಸ್ಪತ್ರೆಯೂ ಸೇರುತ್ತದೆ” ಎಂದು ಆಸ್ಪತ್ರೆ ತಿಳಿಸಿದೆ.
1977 ರಲ್ಲಿ ಅಗ್ನಿವೇಶ್ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು 1979 ರಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1981 ರಲ್ಲಿ, ಮಂತ್ರಿಯಾಗಿದ್ದಾಗ ’ಬಾಂಡೆಡ್ ಲೇಬರ್ ಲಿಬರೇಷನ್ ಫ್ರಂಟ್’ ಎನ್ನುವ ಎನ್ಗಿಒ ಅನ್ನು ಸ್ಥಾಪಿಸಿದ್ದರು.
ಸಾಮಾಜಿಕ ಕಾರ್ಯಕರ್ತ, ಧಾರ್ಮಿಕ ಮುಖಂಡ ಮತ್ತು ಹರಿಯಾಣ ಮಾಜಿ ಶಾಸಕ ಸ್ವಾಮಿ ಅಗ್ನಿವೇಶ್ ಸಾವಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕಂಗನಾ v/s ಶಿವಸೇನೆ: ಸೋನಿಯಾ ಗಾಂಧಿ ಹೆಸರನ್ನೇಕೆ ಎಳೆದು ತರಲಾಯಿತು?
ಸಂಸದ ಶಶಿ ತರೂರ್ ಟ್ವೀಟ್ ಮಾಡಿ, “ಸ್ವಾಮಿ ಅಗ್ನಿವೇಶ್ ನಿಧನದಿಂದ ನಾನು ಆಘಾತ ಮತ್ತು ದುಃಖಿತನಾಗಿದ್ದೇನೆ. ಅವರು ಹುರುಪಿನ ಮತ್ತು ದೃಢ ನಿಶ್ಚಯದ ವ್ಯಕ್ತಿಯಾಗಿದ್ದರು. ಶೋಷಿತರ ಪರ ಧ್ವನಿಯೆತ್ತಲು ಅವರೆಂದೂ ತಮ್ಮ ವಯಸ್ಸನ್ನು ಲೆಕ್ಕಿಸಲಿಲ್ಲ. ಲಕ್ಷಾಂತರ ಜನರ ಹಕ್ಕುಗಳನ್ನು ಎತ್ತಿಹಿಡಿಯಲು ಹೋರಾಡಿದ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ” ಎಂದಿದ್ದಾರೆ.
I am shocked and saddened by his passing. A man of vigour and conviction, he never looked, sounded or behaved his age! The country is diminished by his passing & I mourn with the millions whose rights he fought to uphold. Om Shanti. https://t.co/Kzmwotn1Sb
— Shashi Tharoor (@ShashiTharoor) September 11, 2020
ಮಾನವೀಯತೆ ಮತ್ತು ಸಹಿಷ್ಣುತೆಗಾಗಿ ದಿಟ್ಟ ಹೋರಾಟ ನಡೆಸಿದ ಸ್ವಾಮಿ ಅಗ್ನಿವೇಶ್ ಅವರ ನಿಧನವು ಒಂದು ದೊಡ್ಡ ದುರಂತ. ಸಾರ್ವಜನಿಕ ಹಿತಕ್ಕಾಗಿ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದ ಅವರು ನನಗೆ ತಿಳಿದ ಧೈರ್ಯಶಾಲಿಗಳ ಪೈಕಿ ನಿಜವಾದ ಯೋಧ. 2 ವರ್ಷ ಹಿಂದೆ ಜಾರ್ಖಂಡ್ನಲ್ಲಿ ಬಿಜೆಪಿ / ಆರ್ಎಸ್ಎಸ್ ಗುಂಪಿನ ಕ್ರೂರ ದಾಳಿಯಿಂದ ಅವರ ಯಕೃತ್ತು ಹಾನಿಗೊಳಗಾಯಿತು. ಅವರಿಗೆ ಸಂತಾಪಗಳು” ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
The demise of Swami Agnivesh is a huge tragedy. A true warrior for humanity&tolerance. Among the bravest that I knew,willing to take huge risks for public good.Was brutalised in Jharkhand by a BJP/RSS lynch mob 2 yrs ago. Liver got damaged. RIP Agnivesh jihttps://t.co/SapzPnRznC
— Prashant Bhushan (@pbhushan1) September 11, 2020
ಜುಲೈ 2018 ರಲ್ಲಿ ಸ್ವಾಮಿ ಅಗ್ನಿವೇಶ್ ಮೇಲೆ ಜಾರ್ಜಂಡ್ನ ಪಕೂರ್ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ಮಾಡಿದ್ದರು. ಅಂದು ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ತಾನು ತಂಗಿದ್ದ ಹೋಟೆಲ್ನಿಂದ ಹೊರಬರುವಾಗ, “ಜೈ ಶ್ರೀ ರಾಮ್” ಬೊಬ್ಬೆ ಹೊಡೆಯುತ್ತಾ ಬಂದ ಜನಸಮೂಹವೊಂದು ಅವರ ಮೇಲೆ ಹಲ್ಲೆ ನಡೆಸಿತ್ತು.
ದಾಳಿಯ ನಂತರ ನಾನು ಯಾವುದೇ ರೀತಿಯ ಹಿಂಸಾಚಾರಕ್ಕೆ ವಿರೋಧಿಯಾಗಿದ್ದೇನೆ, ನನ್ನನ್ನು ಶಾಂತಿ ಪ್ರಿಯ ವ್ಯಕ್ತಿ ಎಂದು ಕರೆಯಲಾಗುತ್ತದೆ. ನನ್ನ ಮೇಲೆ ಏಕೆ ಹಲ್ಲೆ ನಡೆಸಲಾಗಿದೆ ಎಂದು ನನಗೆ ತಿಳಿದಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಎನ್ಡಿಟಿವಿಗೆ ತಿಳಿಸಿದ್ದರು.
ಮೊದಲ ದಾಳಿಯ ಸಮಯದಲ್ಲಿ ಜಾರ್ಖಂಡ್ನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಇದನ್ನು ಖಂಡಿಸಿ, ದಾಳಿಕೋರರು ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿಸಿತ್ತು.
ಹಲ್ಲೆ ನಡೆದು ತಿಂಗಳ ನಂತರ ಅವರ ಮೇಲೆ ಮತ್ತೆ ದೆಹಲಿಯಲ್ಲಿ ಹಲ್ಲೆ ನಡೆಸಲಾಯಿತು. ಈ ಬಾರಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ತೆರಳುತ್ತಿದ್ದರು.
ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ “ಸ್ವತಂತ್ರ ತನಿಖೆ” ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದ 270 ಪ್ರಖ್ಯಾತ ವ್ಯಕ್ತಿಗಳ ಪೈಕಿ ಸ್ವಾಮಿ ಅಗ್ನಿವೇಶ್ ಕೂಡ ಒಬ್ಬರು.