ದಕ್ಷಿಣ ಆಫ್ರಿಕಾದಲ್ಲಿ ಕಳೆದ ವಾರ ಹಿಂಸಾಚಾರ ಭುಗಿಲೆದ್ದಿದ್ದು, ಇದೀಗ ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಹಿಂಸೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮರುಕಳಿಸಿದೆಯಾರೂ, ಹಿಂಸಾಚಾರದಿಂದಾಗಿ ದೇಶಕ್ಕೆ ಶತಕೋಟಿ ರಾಂಡ್ (ಆಫ್ರಿಕಾ ಕರೆನ್ಸಿ) ನಷ್ಟವಾಗಿದೆ ಎಂದು ಅಧ್ಯಕ್ಷ ಸಿರಿಲ್ ರಾಮಾಫೋಸಾ ಶುಕ್ರವಾರ ಹೇಳಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಬಂಧಿಸಲಾಗಿತ್ತು. ಅವರ ಬಂಧನದ ನಂತರ ಕಳೆದ ವಾರ ದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ಹಲವಾರು ವಾಣಿಜ್ಯ ಮಳಿಗೆಗಳನ್ನು ಸುಟ್ಟು ಹಾಕಲಾಗಿದ್ದು, ಹಲವೆಡೆ ಭಾರೀ ಲೂಟಿ ನಡೆದಿದೆ. 220ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇದರಲ್ಲಿ 70ಕ್ಕೂ ಹೆಚ್ಚು ಭಾರತೀಯರೂ ಸೇರಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಶಂಕಿಸಲಾಗಿರುವ 2,500 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ರಮಾಫೋಸಾ ಹೇಳಿದ್ದಾರೆ.
ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು
ಈ ಕೃತ್ಯದ ಹಿಂದಿರುವವರು ದಂಗೆಯನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಭದ್ರತಾ ಪಡೆ ಮತ್ತು ದೇಶದ ಜನರ ಸಹಕಾರದಿಂದ ಹಿಂಸಾಚಾರದ ಬೆಂಕಿಯನ್ನು ನಂದಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
“ಹಾನಿಗೊಳಗಾದ ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ವರ್ಷಗಳೇ ತೆಗೆದುಕೊಳ್ಳಬಹುದು. ಸಣ್ಣ ಉದ್ಯಮಗಳು ಚೇತರಿಸಿಕೊಂಡು ಮೇಲೆಳಲು ಕಷ್ಟವಾಗುತ್ತದೆ” ಎಂದು ದಕ್ಷಿಣ ಆಫ್ರಿಕಾದ ಅಂಕಿಅಂಶಗಳ ಮುಖ್ಯಸ್ಥ ರಿಸೆಂಗಾ ಮಾಲುಲೆಕೆ ಹೇಳಿದ್ದಾರೆ.
ಹಿಂಸಾಚಾರವು ಇನ್ನಷ್ಟು ನಿರುದ್ಯೋಗಕ್ಕೆ ಕಾರಣವಾಗಲಿದೆ. ಈಗಾಗಲೇ ಹೆಚ್ಚಿನ ಜನರು ಕಡಿಮೆ ಉದ್ಯೋಗಾವಕಾಶ ಮತ್ತು ಸೀಮಿತ ಶಿಕ್ಷಣದ ಅವಕಾಶಗಳನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕನ್ನರಲ್ಲಿ ಅರ್ಧದಷ್ಟು ಜನರು ಅಧಿಕೃತ ಬಡತನ ರೇಖೆಗಿಂತ ಕೆಳಗಿದ್ದಾರೆ. 2021 ರ ಮೊದಲ ಮೂರು ತಿಂಗಳಲ್ಲಿ ನಿರುದ್ಯೋಗವು 32% ರಷ್ಟಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಜ್ರದ ಹುಡುಕಾಟಕ್ಕೆ ನೆರೆದ ಸಾವಿರಾರು ಜನರು: ದಕ್ಷಿಣ ಆಫ್ರಿಕಾದ ಹಳ್ಳಿಯಲ್ಲಿ ಜನಸಾಗರ
ಆಸ್ತಿ ನಾಶ ಮತ್ತು ಸರಕುಗಳ ಕಳ್ಳತನದಿಂದಾಗಿ ವ್ಯವಹಾರಗಳು ಕುಸಿದಿವೆ. ದೇಶದಲ್ಲಿ ಒಟ್ಟಾರೆಯಾಗಿ ಶತಕೋಟಿ ರಾಂಡ್ಗಳಷ್ಟು ನಷ್ಟವಾಗಿದೆ. ಇದರ ಪರಿಣಾಮಗಳು ಮುಂದಿನ ತಿಂಗಳಲ್ಲಿ ಎದುರಾಗಲಿದೆ ಎಂದು ಹೇಳಲಾಗಿದೆ.
ನಾಗರಿಕ ಅಶಾಂತಿಯಿಂದಾದ ಹಾನಿ ಮತ್ತು ಕಳ್ಳತನದಿಂದ 10 ಬಿಲಿಯನ್ ರಾಂಡ್ (3,693.77 ಮಿಲಿಯನ್) ನಷ್ಟವಾಗಿರುವ ಸಾಧ್ಯತೆಯಿದೆ ಎಂದು ಸರ್ಕಾರಿ ಸ್ವಾಮ್ಯದ ವಿಮೆದಾರರಾದ ಸಾಸ್ರಿಯಾ ವ್ಯವಸ್ಥಾಪಕ ನಿರ್ದೇಶಕ ಸೆಡ್ರಿಕ್ ಮಸೊಂಡೊ ಬುಧವಾರ ರಾಯಿಟರ್ಸ್ಗೆ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ 2009 ರಿಂದ 2018 ರವರೆಗೆ ಅಧಿಕಾರದಲ್ಲಿದ್ದರು. ಈ ವೇಳೆ ಅವರು ಭ್ರಷ್ಟಾಚಾರ, ವಂಚನೆ, ದರೋಡೆ ಮತ್ತು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಹಲವು ಗುಮಾನಿಗಳಿಗೆ ಕಾರಣವಾದ ಸಹಕಾರ ಮಂತ್ರಾಲಯ: ಎ ನಾರಾಯಣ