Homeಮುಖಪುಟಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

- Advertisement -
- Advertisement -

ಒಲ್ಲದ ಮನಸ್ಸಿನಿಂದಲೇ ಸ್ಪೀಕರಿಕೆ “ದಂಡ” ದೀಕ್ಷೆ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಕತ್ತಲಲ್ಲಿ ಕೋಲು ಕಳಕೊಂಡ ಅರೆ ಕುರುಡನಂತೆ ಕಂಗಾಲು ಬಿದ್ದಿದ್ದಾರೆ. ಸತತ ಆರು ಬಾರಿ ಮತೋನ್ಮತ್ತ ಮಸಲತ್ತಿನ ಬಲದಿಂದ ಶಾಸಕಾಗಿರುವ ಈ ಎಬಿವಿಪಿ ಕೇಡರಿನ “ಹಿರಿಯ” ಸಂಘಿ ಸರದಾರ, ಸದನದಲ್ಲಿ ಸಂಸದೀಯ ಜಾಣ್ಮೆ ಪ್ರದರ್ಶಿಸಿದ ಕುರುಹುಗಳೇನೂ ಕಾಣಿಸುತ್ತಿಲ್ಲ. ಕಾಗೇರಿ ಅಂಥ ಜನತಾಂತ್ರಿಕ, ಜನಪದ ಕುಶಾಗ್ರಮತಿ ರಾಜಕಾರಣಿಯೇನಲ್ಲ ಎಂಬುದು ಆತನ ಕಾಲು ಶತಮಾನದ ಗ್ರಾಫು-ಟ್ಯ್ರಾಕು ನೋಡಿದರೆ ಎಂಥವರಿಗೆ ಪಕ್ಕಾ ಆಗುತ್ತದೆ. ಆತನ ಸ್ವಪಕ್ಷದ ಆಜನ್ಮ ಶತ್ರುವೂ, ಬೆಂಕಿ ಬಡಾಯಿ ಸಂಸದನೂ ಆದ ಅನಂತ್ಮಾಣಿ ಆಗಾಗ ಕಾಗೇರಿಗೆ “ಸಂಭಾವಿತ ಹೇಡಿ” ಎಂದು ಪರೋಕ್ಷವಾಗಿ ತಿವಿಯುತ್ತಲೇ ಇರುತ್ತಾನೆ.

ನಿಧಾನಗತಿಯ ಕಾಗೇರಿಯಲ್ಲಿ ಸದನ ನಿಭಾಯಿಸುವ ಪ್ರಜಾತಾಂತ್ರಿಕ ಕೌಶಲ್ಯವಾಗಲೀ, ಹಾರಾಡುವ ಶಾಸಕರನ್ನು ನಿಯಮ ನೀತಿಗಳ ಅಂಕುಶದಿಂದ ನಿಯಂತ್ರಿಸುವ ಜ್ಞಾನವಾಗಲೀ ಇಲ್ಲವೆಂದು ಕೇಶವಕೃಪದಲ್ಲಿ ಒಂದು ಸುತ್ತಿನ ಚರ್ಚೆಯೂ ಆಗಿದೆಯಂತೆ. ಆತ ಅಧಿವೇಶನ ನಡೆಯುವ ಹೊತ್ತಲ್ಲಿ ವಿಧಾನಸಭಾ ಅಧ್ಯಕ್ಷತೆ ಕುರ್ಚಿಯಲ್ಲಿ ಒಂಥರಾ ಕಕ್ಕಾಬಿಕ್ಕಿ ಆಗಿರುವುದಂತೂ ಹೌದು. ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

ಯಡ್ಡಿ ಸರ್ಕಾರದ ಕಡೆಯಲ್ಲಿ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಒಬ್ಬರು ಬಿಟ್ಟರೆ ಸಂಸಧೀಯ ಪರಿಭಾಷೆಯಲ್ಲಿ ಮಾತಾಡುವ ತಂತ್ರಗಾರರು ಇಲ್ಲ. ಸಿ.ಟಿ.ರವಿಯಂಥ ದೇಶ “ಕುಟ್ಟುವ” ಹಿಂದೂತ್ವದ ಹಿರೇಮಣಿಗಳು ಬಿಜೆಪಿ ಬದಿಯಲ್ಲಿದ್ದಾರೆಯೇ ಹೊರತು ಕಾಂಗ್ರೆಸ್‍ನ ಸಿದ್ದು, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ….. ಮುಂತಾದ ನುರಿತ ಸಂಸದೀಯ ಪಟುಗಳಿಗೆ ತಿರುಗೇಟು ಕೊಡುವ ಚತುರರಿಲ್ಲ!

ಇದು ಪೆದ್ದು ಸ್ಪೀಕರ್ ಪೀಕಲಾಟವನ್ನು ಮತ್ತಷ್ಟು ಜಾಸ್ತಿಮಾಡಿದೆ! ಆತ ಯಡ್ಡಿಯ ಅಕ್ರಮ ಸರ್ಕಾರಕ್ಕೆ ಸಂದಿಗ್ಧ ಎದುರಾದಾಗೆಲ್ಲಾ ತಿಣುಕಾಡುವಂತಾಗಿದೆ ಪಾಪ!!. ಕಾಗೇರಿಯ ಇನ್ನೊಂದು ದೊಡ್ಡ ಕಷ್ಣವೆಂದರೆ ಅನರ್ಹ ಶಾಸಕರ ಗಲೀಜು ಪ್ರಕರಣ. ಈ ಕೇಸು ಸುಪ್ರೀಂ ಕೋರ್ಟಿನಲ್ಲಿದೆಯಾದರೂ ವಿಧಾನಸಭಾಧ್ಯಕ್ಷ ಕಾಗೇರಿಯನ್ನೂ ಇದು ಕಂಡೂಕಾಣದಂತೆ ಬಾದಿಸುತ್ತಿದೆ. ಮಾಧ್ಯಮದವರನ್ನು ಅಧಿವೇಶನಕ್ಕೆ ಬರದಂತೆ ನಿರ್ಬಂಧಿಸಿರುವ ಕಾಗೇರಿ ವಿವಾದಕ್ಕೆ ಸಿಲುಕಿದ್ದಾರೆ. ಇಂಥ ಹಲವು “ಧರ್ಮಸೂಕ್ಷ್ಮ”ಕ್ಕೆ ಬಿದ್ದಿರುವ ಕಾಗೇರಿಗೆ ಸ್ಪೀಕರಿಕೆ ಹೊಣೆಗಾರಿಕೆ ಸುಸ್ತು ಹೊಡೆಸುತ್ತಿದೆ.

ಅಧಿಕಾರ ವಹಿಸಿಕೊಂಡ ಮರುಕ್ಷಣದಿಂದಲೇ ಕಾಗೇರಿ ಆಸರೆಗಾಗಿ ತಡಕಾಡುತ್ತಲೇ ಇದ್ದರು. ಸದನ ಮತ್ತು ಕಲಾಪದ ತಂತ್ರಜ್ಞಾನದ ಆಳ-ಅಗಲ ಬಲ್ಲವನೊಬ್ಬನ ಸಹಾಯಕನಾಗಿ ನೇಮಿಸಿಕೊಳ್ಳುವ ಅರ್ಜಂಟಿಗೆ ಬಿದ್ದಿದ್ದರು. ಕಾಗೇರಿಯ ದೌರ್ಬಲ್ಯ ಗೊತ್ತಾಗಿದ್ದೇ ತಡ, ವಿಧಾನ ಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್ ಚುರುಕಾದರು. ಬಿಜೆಪಿ ವಲಯದಲ್ಲಿ ಪ್ರಭಾವಿ ಸಂಪರ್ಕಗಳನ್ನು ಹೊಂದಿರುವ ಓಂ ಪ್ರಕಾಶ್ ಹತ್ತಿರದ ಸಂಬಂಧಿಯೊಬ್ಬರು ಬಿಜೆಪಿಯ ಆಯಕಟ್ಟಿನ ಜಾಗದಲ್ಲೂ ಇದ್ದಾರೆ. ಈತ ಕಾಗೇರಿಗೂ ಪರಮಾಪ್ತ. ಹಿಂದೆ ಇಂಥದೇ ಆಟ ಆಡಿ ವಿಧಾನಸಭೆ-ವಿಧಾನ ಪರಿಷತ್ ಎರಡಕ್ಕೂ ಸೇರಿದ ಮಹಾಪ್ರಧಾನ ಕಾರ್ಯದರ್ಶಿ ಆಗಲು ಓಂ ಪ್ರಕಾಶ್ ಹವಣಿಸಿದ್ದರು. ಆಗ ಯಡ್ಡಿ ಸಿಎಂ ಆಗಿದ್ದರೆ, ಒಂ ಪ್ರಕಾಶ್ ವಿಧಾನಸಭೆಯ ಕಾರ್ಯದರ್ಶಿಯಾಗಿದ್ದರು. ಆದರೆ ಆಗ ಅದು ವಿಫಲವಾಗಿತ್ತು.

ಇದೇ ಓಂ ಪ್ರಕಾಶ್‍ರನ್ನು ಕಾಗೇರಿ ಈಗ ತನ್ನ “ಸಲಹೆಗಾರ”ನಾಗಿ ನೇಮಿಸಿಕೊಂಡಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲೇ ಯಾವ ಸ್ಪೀಕರೂ ಇಂಥ ದೈನೇಸಿ ಸ್ಥಿತಿಗೆ ಬಿದ್ದಿರಲಿಲ್ಲ. ಸ್ಪೀಕರ್ ವಿಶೇಷ ಕರ್ತವ್ಯಾಧಿಕಾರಿ ನೇಮಿಸಿ ಕೊಳ್ಳಬಹುದೇ ಹೊರತು “ಸಲಹೆಗಾರ” ಹುದ್ದೆ ಸೃಷ್ಟಿಗೆ ವಿಧಾನಸಭೆಯ ಸಿ ಆ್ಯಂಡ್ ಆರ್ ನಿಯಮದಂತೆ ಅವಕಾಶವೇ ಇಲ್ಲ! ನಡುಪಕ್ಷೀಯವಾಗಿ ಓಂ ಪ್ರಕಾಶ್‍ರನ್ನು ಸಲಹೆಗಾರನೆಂದು ನೇಮಿಸಿಕೊಂಡಿರುವ ಕಾಗೇರಿ ಸಂಪ್ರದಾಯ, ನೀತಿಯನ್ನೆಲ್ಲಿ ಬುದ್ದಿ ಪೂರ್ವಕವಾಗೇ ದಿಕ್ಕರಿಸಿದ್ದಾರೆ. ಇಂಥ ನೇಮಕಾತಿ ಹೊತ್ತಲ್ಲಿ ವಿಧಾನಸಭೆ ಸಮಿತಿ ಸಭೆ ಕರೆಯುವುದು ಪದ್ಧತಿ. ವಾಡಿಕೆಯನ್ನೆಲ್ಲ ಕಡೆಗಣಿಸಿ ಸಲಹೆಗಾರನ ನೇಮಿಸಿಕೊಂಡಿರುವ ಕಾಗೇರಿ ನಡೆಯಿಂದ ವಿಧಾನಸಭೆ ಸಿಬ್ಬಂದಿ ಬೆಚ್ಚಿಬಿದ್ದಿದೆ. ಇದ್ಯಾವುದಕ್ಕೂ ಕೇರ್ ಮಾಡದ ಕಾಗೇರಿ ತನ್ನ ನಿಲುವು ಅಚಲ ಎಂದು ಸಿಬ್ಬಂದಿಗೆ ರೋಪು ಹಾಕಿದ್ದಾರಂತೆ.

ವಿಧಾನಸಭೆಯ ಕಾರ್ಯದರ್ಶಿಗೆ ತತ್ಸಮಾನವಾದ ಹುದ್ದೆ ಸಲಹೆಗಾರ ಸಾಹೇಬರಿಗೆ ದಯಪಾಲಿಸಲಾಗಿದೆ. ಇದರಿಂದ ಎರಡು ಅಧಿಕಾರ ಕೇಂದ್ರ ಸೃಷ್ಟಿಯಾಗಿ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಅನಾಹುತ ಎದುರಾಗಲಿದೆ. ದೈನಂದಿನ ಕಾರ್ಯನಿರ್ವಹಣೆಯಲ್ಲಿ ಎಡವಟ್ಟಾಗಲಿದೆ. ಅನಗತ್ಯ ದುಂದು ವೆಚ್ಚವಾಗಲಿದೆ. ಅಷ್ಟಕ್ಕೂ ಇಂಥದೊಂದು ಸಲಹೆಗಾರನ ಅಗತ್ಯವಾದರೂ ಇತ್ತೇ ಎಂದರೆ, ಊಹುಂ ಅದೂ ಇಲ್ಲ! ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಿಗೆ ಸದನದ ಕಲಾಪದ ನಿಯಮಾವಳಿ, ಇನ್ನಿತರ ಕಾನೂನು, ಶಾಸಕರ ಹಕ್ಕು ಬಾಧ್ಯತೆಗಳ ತಿಳುವಳಿಕೆ ಇದ್ದೇ ಇರುತ್ತದೆ. ಇವರೆಲ್ಲ ಸ್ಪೀಕರ್ ಎಂಥ ಮೊದ್ಮಣಿಯಾದರೂ ಗೈಡ್ ಮಾಡಿ ಹಳಿಗೆ ತರುವ ಜಾಣರಿರುತ್ತಾರೆ.

ಆದರೆ ಗೊಂದಲಕ್ಕೆ ಬಿದ್ದಿರುವ ಕಾಗೇರಿಗೆ ಸಿಬ್ಬಂದಿ, ಕಾರ್ಯದರ್ಶಿಗಳಿಗಿಂತ ಖಾಸಗಿ ಸಲಹೆಗಾರನ ಮೇಲೆಯೇ ನಂಬಿಕೆ ಹೆಚ್ಚು! ಸಾಮಾನ್ಯವಾಗಿ ಇಂಥ ಅಯೋಗ್ಯ ನೇಮಕಾತಿಗೆ ಹಣಕಾಸು ಇಲಾಖೆ ಆಕ್ಷೇಪವೆತ್ತಿ ಕಡತ ತಿರಸ್ಕಾರಿಸುತ್ತಾರೆ. ಆದರೆ ವಿಚಿತ್ರವೆಂದರೆ ಕಾಗೇರಿಯ ಈ ಕರಾಮತ್ತನ್ನು ಈವರೆಗೆ ಹಣಕಾಸು ಇಲಾಖೆ ಪ್ರಶ್ನಿಸದೇ ನಿಗೂಢ ಮೌನದಲ್ಲಿದೆ.

ಇದು ಸಂಘದೊಳಗಿನ ಸರ್ಕಸ್ ಮತ್ತು ಕಾಗೇರಿಯ ಪೊಕ್ಕುತನದ ಮಹಿಮೆ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...