Homeಮುಖಪುಟರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

ರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

- Advertisement -
- Advertisement -

ನಿಮ್ಮ ಫೋನಿನ ಹೃದಯದೊಳಗ ಇರೋ ವಾಟ್ಸಪ್ಪು ಯುನಿವರ್ಸಿಟಿಯೊಳಗ ನಿಮಗೊಂದು ಜೋಕು ಬಂದಿರಲಿಕ್ಕೇ ಬೇಕು. “ಈ ದೇಶದಾಗ ಒಂಬತ್ತು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಅಂತ ಒಂದು ಕಾನೂನು ಇದೆ. ಇಂತಹ ಬ್ರಿಟಿಷರು ಮಾಡಿದ ಕಾನೂನುಗಳನ್ನು ನಮಗೆ ಬೇಡ. ಇಂತಹ ಅನೇಕ ಕಾನೂನುಗಳನ್ನು ತಿದ್ದಲೆಂದೇ ನಾವು ಬಂದಿದ್ದೇವೆ” ಅಂತ.

ಇದನ್ನ ನೋಡಿದಾಗ ನಿಮಗೂ ಅನ್ನಿಸಿರಬಹುದು. ‘ಹೌದಲ್ಲಾ ಅ ಬ್ರಿಟಿಷ್ ನನ ಮಕ್ಕಳು ಏನೇನು ಮಾಡಿ ಹೋಗ್ಯಾರ. ಇದನ್ನೆಲ್ಲಾ ಬದಲಾಯಿಸಬೇಕು. ಅದಕ್ಕೊಬ್ಬ ಸೂಪರ್ ಹೀರೋ ಬೇಕು’ ಅಂತ. ಆದರ ಅದರ ಹಿಂದಿನ ತಥ್ಯವನ್ನು ನೋಡೋಣ.

ಭಾರತದ ಸಂವಿಧಾನದಾಗ 12 ನೇ ಕಲಂ ಅಂತ ಒಂದು ಮೂರು ಸಾಲಿನ ಒಂದು ಪ್ಯಾರಾ ಐತಿ.
ಅದೇನಪಾ ಅಂದರ ರಾಜ್ಯ ಅಂದರ ಏನು ಅನ್ನೋದರ ವ್ಯಾಖ್ಯಾನ.

ಸಂವಿಧಾನದ ಭಾಷಾದಾಗ ರಾಜ್ಯ ಅಂದ್ರ ಕರ್ನಾಟಕ, ತಮಿಳುನಾಡು, ಕಾಶ್ಮೀರ ಅಂತ ಅವ ಅಲ್ಲಾ, ಹಿಂತಾ ರಾಜ್ಯ ಅಲ್ಲ. ಅದರ ಪ್ರಕಾರ ರಾಜ್ಯ ಅಂದ್ರ ಅಕೆಡೆಮಿಕ್ ಭಾಷಾದಾಗ ಪ್ರಭುತ್ವ. ’ಹಂಗಂದರ ಏನು ಮತ್ತ ಎಲ್ಲಿ ಸಿಗತದ’ ಅಂತ ನೀವು ಜವಾರಿ ಭಾಷಾದಾಗ ಕೇಳಿದರ ಅದಕ್ಕ ನಿಮಗ 12ನೇ ಕಲಂ ನೋಡು ಅಂತ ಉತ್ತರ ಸಿಗಬಹುದು.

ಅದರ ಪ್ರಕಾರ ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳು ಪ್ರಭುತ್ವದಾಗ ಬರತಾವ. ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಭುತ್ವದಾಗ ಬರತಾವ. ಈವಲ್ಲದನ, ನಗರ ಸಭೆ, ಪಂಚಾಯಿತಿ ಮುಂತಾದ ಸ್ಥಳೀಯ ಸಂಸ್ಥೆಗಳನ್ನು ಸಹ ಇದರಾಗ ಕೂಡಿಸ್ಯಾರ. ಮಜಾ ಏನಂದರ ಸರಕಾರದ ಸಂಸ್ಥೆಗಳು ಅಥವಾ ಸರಕಾರದಿಂದ ನಿಯಂತ್ರಿತವಾದ ಸಂಸ್ಥೆಗಳು ಇವೆಲ್ಲವೂ ಪ್ರಭುತ್ವ ಎನ್ನಿಸಿಕೊಳ್ಳುತ್ತವೆ ಎನ್ನುವುದು ಇದರ ಸಾರಾಂಶ.

ಈ ಪ್ರಭುತ್ವದ ಮುಖ್ಯ ಕೆಲಸ ಏನಪಾ ಅಂದ್ರ ರಾಷ್ಟ್ರ ರಕ್ಷಣೆ, ಶಾಂತಿ ಕಾಪಾಡುವಿಕೆ, ನ್ಯಾಯ ನಿರ್ಣಯ, ಜನ ಕಲ್ಯಾಣ ಹಾಗೂ ದಿನನಿತ್ಯದ ಆಡಳಿತ. ಬರಬರತಾ ಸರಕಾರಗಳ ಕೆಲಸ ಜಾಸ್ತಿ ಆಗಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವ್ಯಾಪಾರ ವ್ಯವಹಾರ -(ಅದು ಸರಕಾರಿ ಸಂಸ್ಥೆ ಇರಬಹುದು ಅಥವಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆ ಇರಬಹುದು) ದೊಳಗನ ಹೆಚ್ಚಿನ ಟೈಂ ಹೋಗಲಿಕ್ಕೆ ಹತ್ತೇದ. ಈಗಿನ ಕೇಂದ್ರ ಸರಕಾರ ಮಾತ್ರ ತಮ್ಮ ಕೆಲಸ ಬ್ಯಾರೆ ಏನೂ ಅಲ್ಲ, ಬರೇ ರಕ್ಷಣೆ ಒಂದ ಅಂತ ನಮಗ ಹೇಳಲಿಕ್ಕೆ ಹತ್ತೇದ. ಒಬ್ಬ ವಿದ್ಯಾರ್ಥಿ ಪರೀಕ್ಷೆಯೊಳಗ ಹತ್ತರೊಳಗ ಬರೇ ಒಂದ ಪ್ರಶ್ನೆ ಉತ್ತರ ಬರದು ನನಗ ಮೊದಲನೆ ದರ್ಜೆ ಕೊಡರಿ ಅಂತ ಹೇಳಿದಂಗ!. ಇರಲಿ ಅದು ಬೇರೆ.

ಹಿಂದಿನ ಕಾಲದ ಚಕ್ರವರ್ತಿಗಳಿಗೆ ಶಾಸನ ಮಾಡೋದು, ಜಾರಿ ಮಾಡೋದು, ಕಾನೂನು ಪಾಲಿಸದವರಿಗೆ ಶಿಕ್ಷಾ ಕೊಡೋದು ಇವೆಲ್ಲಾ ಅಧಿಕಾರ ಇತ್ತು. ಇತ್ತೋ ಅಥವಾ ಅವರಾಗೇ ತೊಗೊಂಡಿದ್ದರೋ ಅದು ಬ್ಯಾರೆ. ಆದರ ಆಧುನಿಕ ದಿನಮಾನದಾಗ ಇಂತಹ ಪ್ರಭುತ್ವಕ್ಕ ಮೂರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಎಲ್ಲಾ ಶಕ್ತಿ ಕೊಡಬಾರದು ಅಂತ ಒಂದು ಥಿಯರಿ ಅದ. ಅದರ ಪ್ರಕಾರ ನಮ್ಮ ಜನಸತ್ತಾದೊಳಗ ಈ ಮೂರು ಜವಾಬ್ದಾರಿಗಳನ್ನು ಬೇರೆ ಬೇರೆ ಅಂಗಗಳಿಗೆ ಹಂಚ್ಯಾರ.

ಆದರೂ ಸರಕಾರಗಳು ಮೂರೂ ರೀತಿಯ ಅಧಿಕಾರಗಳನ್ನ ಬಳಸತಾವು. ಉದಾಹರಣೆಗೆ ಪೊಲೀಸರನ್ನು ನೇಮಕ ಮಾಡೋದು ಪ್ರಭುತ್ವ, ಅವರಿಗೆ ಕೆಲಸ ಹೇಳೋದು ಸರಕಾರ. ನ್ಯಾಯಾಲಯಗಳನ್ನು ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅವರ ಮುಂದೆ ಕೇಸು ತೊಗೊಂಡು ಹೋಗೋದು ಪ್ರಭುತ್ವ. ಹಿಂಗಿದ್ದಾಗ ನ್ಯಾಯಾಲಯಗಳಲ್ಲಿ ಬರೇ ಸರಕಾರದ ದನಿ ಕೇಳಿ ಗರೀಬ ಆರೋಪಿತರ ದನಿ ಅಡುಗಿಹೋಗಬಾರದು ಅಂತ ಕೆಲವು ನಿಯಮ ಅವ. ಅವಕ್ಕ ಪ್ರಕ್ರಿಯಾ ಕಾನೂನು ಅಂತ ಹೆಸರು. ಉದ್ದೇಶದ ಜೊತೆ ಪ್ರಕ್ರಿಯಾನೂ ಸರಿ ಇರಬೇಕು ಅಂತ ಅದರ ನೇಮ.

ಅವು ಯಾಕ ಬೇಕಂದ್ರ ಸರಕಾರ ಅನ್ನೋದು ಸರ್ವಾಧಿಕಾರ ಆಗಬಾರದು ಅಂತ.

ಅದು ಯಾವಾಗ ಆಗಬಹುದಪಾ ಅನ್ನಲಿಕ್ಕೆ ಕೆಲವು ಉದಾಹರಣೆ ನೋಡೋಮು.

ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ ಚೌಟಾಲಾ ಅವರ ಮೊಮ್ಮಗ ಅಜಯ ಚೌಟಾಲಾ ಅವರಿಗೆ ಎರಡು ವಾರದ ಸಜಾ ಕಾಲದ ರಜೆ ಸಿಕ್ಕದ. ಅದರ ಹಿಂದಿನ ದಿವಸ ಅಜಯ ಅವರ ಮಗ ದುಷ್ಯಂತ ಚೌಟಾಲಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿ ಹಂಗಾಗಿದ್ದ ಹರಿಯಾಣಾ ವಿಧಾನಸಭೆಯನ್ನು ಹಂಗ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇರಬಹುದು ಅನ್ನುಕೊಳ್ಳುವುದು ಅಂದುಕೊಂಡವರ ಚಿತ್ತ. ಸಜಾ ಕಾಲದ ರಜೆ (ಫರಲೋ) ಹಾಗೂ ಸಜಾ ಕಾಲದ ಬಿಡುಗಡೆ ( ಪರೋಲ್) ಗೂ ಫರ್ಕು ಏನಪಾ ಅಂದರ ಫರಲೋ ಅನ್ನುವುದು ಒಬ್ಬ ಕೈದಿಯ ಹಕ್ಕು. ಪರೋಲ್ ಅನ್ನುವುದು ಹಕ್ಕಲ್ಲ. ಅದು ಸರಕಾರದ ಹಾಗೂ ನ್ಯಾಯಾಲಯದ ಚಿತ್ತ. ಜಂಬೂ ದ್ವೀಪದ ಮಹಾನ್ ನಾಯಕ ಸಂಜೂ ಬಾಬಾ ಅವರು ಸುಮಾರು 39 ಸರೆ ಫರಲೋ ಹಾಗೂ ಪರೋಲ್ ಸೌಭಾಗ್ಯ ಪಡೆದಿದ್ದರು. ಅವರು ಪಡೆದು ಬಂದವರು.

ಜನರ ಸಲುವಾಗಿ ಹೋರಾಟ ಮಾಡೋ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಆಗೇದ. ಅವರನ್ನ 25 ವರ್ಷ ಹಳೆಯ ಕೇಸೊಂದರಲ್ಲಿ ಭಾಗಿಯಾಗಿದ್ದ ವಿನೋದ ಎನ್ನುವ ವ್ಯಕ್ತಿಯೆಂದರೆ ಇವನೇ ಅಂತ ಹೇಳಿ ರಾಯಚೂರು ಪೊಲೀಸರು ಹಿಡಕೊಂಡು ಹೋಗ್ಯಾರ. ಹಂಗಂತ ಅವರೇನು ಬೆಂಗಳೂರ ತನಾ ಬಂದು ಅವರನ್ನ ಹಿಡಕೊಂಡು ಹೋಗಿಲ್ಲ. ರಾಯಚೂರು ಕಾರ್ಯಕ್ರಮಕ್ಕ ಹೋದಾಗ ಪೊಲೀಸ್ ಟೇಸನಕ್ಕ ಬರ್ರಿ ಅಂತ ಹೇಳಿ ಕರಿಸಿಕೊಂಡು ಅರೆಸ್ಟು ಮಾಡ್ಯಾರ

ಬೆಂಗಳೂರಾಗ ಎಲ್ಲಾರ ಎದುರಿಗೆ ಖುಲ್ಲಂಖುಲ್ಲಾ ಓಡಾಡಿಕೊಂಡು ಇದ್ದ ಈ ಮನುಷ್ಯ 25 ವರ್ಷ ತಲೆ ಮರೆಸಿಕೊಂಡಿದ್ದ ಅಂತ ಪೊಲೀಸರು ಕತಿ ಹೇಳ್ಯಾರ. ಅದಕ್ಕ ಅವರಿಗೆ ಸರಿಯಾದ ಸಾಕ್ಷಿ ಇಲ್ಲ. ಅವರಿಗೆ ಇರೋ ಸಾಕ್ಷಿ ಅಂದರ ಒಬ್ಬ ಮಾಜಿ ಪೊಲೀಸ್ ಸಿಬ್ಬಂದಿಯ ನೆನಪಿನ ಶಕ್ತಿ. ಇದು ಭಾರತೀಯ ದಂಡಸಂಹಿತೆ ಹಾಗೂ ಸಂವಿಧಾನದ ಪ್ರಕಾರ ಲಾಗೂ ಆಗೋದಿಲ್ಲ. ಆದರೆ ಅದು ನ್ಯಾಯಾಧೀಶರ ಎದುರಿಗೆ ವಾದಕ್ಕ ಬಂದಾಗಿನ ಮಾತು. ಅಲ್ಲಿ ತನಕಾ ಸರಕಾರದ ಮಾತೇ ಸರಿ.

ಗುಜರಾತು ಪೊಲೀಸರು ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರನ್ನು 13 ತಿಂಗಳ ಹಿಂದೆ ಬಂಧಿಸಿದ್ದಾರೆ. ಅವರಿಗೆ ಇನ್ನೂ ಬೇಲು ಸಿಕ್ಕಿಲ್ಲ. ಅವರು 22 ವರ್ಷದ ಹಿಂದ ಪೊಲೀಸ ಅಧೀಕ್ಷಕರಾಗಿದ್ದಾಗ ತಮ್ಮ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಅಧಿಕಾರ ದುರ್ಬಳಕೆ ಪ್ರಸಂಗವೊಂದರಲ್ಲಿ ಅವರನ್ನು ಆರೋಪಿ ಅಂತ ಮಾಡ್ಯಾರ. ಮೂವತ್ತು ವರ್ಷ ಸಂವಿಧಾನ, ನ್ಯಾಯ ಪ್ರಕ್ರಿಯೆ, ಸರಕಾರಿ ಕಾನೂನುಗಳಿಗೆ ತಕ್ಕಂತ ನೌಕರಿ ಮಾಡಿದ ಮನಿಷಾಗ ಕಾನೂನಿನ ಬಗ್ಗೆ ನಂಬಿಕಿ ಇಲ್ಲಾ ಅಂತ ಹೇಳಿ ಸರಕಾರ ಅವರಿಗೆ ಬೇಲು ಕೊಡಿಸಿಲ್ಲ.

ಕಾರ್ಮಿಕ ಮುಖಂಡರಾದ ಸುಧಾ ಭಾರದ್ವಾಜ ಮತ್ತು 10 ಜನ ಜನನಾಯಕರನ್ನು ಒಳಗ ಹಾಕಿ 14 ತಿಂಗಳ ಆತು. ಅದರೊಳಗ ಒಬ್ಬರ ಮನಿಯೊಳಗ ’ವಾರ್ ಆಂಡ್ ಪೀಸ್’ ಅನ್ನೋ ಕಾದಂಬರಿ ಇತ್ತು ಅದು ಅಲ್ಯಾಕ ಇತ್ತು ಅನ್ನೋದು ಭಾರಿ ಸುದ್ದಿ ಆಗಿತ್ತು. ಇದರಾಗೂನು ಅವರ ವಿಚಾರಣೆ ಅನ್ನೋದು ಸುರೂನ ಆಗಿಲ್ಲ. ಅಧಿಕೃತವಾಗಿ ಸರಕಾರದ ತನಿಖೆ ಮುಗದೇ ಇಲ್ಲ.

ಪ್ರಭುತ್ವ ಅನ್ನುವುದು ಸರ್ವಾಧಿಕಾರ ಆಗಬಾರದು. ಯಾಕಂದ್ರ ಭಾರತದೊಳಗ ಆಳುವ ಪಕ್ಷ, ವಿರೋಧ ಪಕ್ಷ ಅಂತ ಯಾವೂ ಇಲ್ಲ. ಇಲ್ಲಿ ಇರೋದು ಇವತ್ತಿನ ಆಳುವ ಪಕ್ಷ, ನಿನ್ನೆಯ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಅಷ್ಟ. ಅವರು ಮಾಡ್ಯಾರ ಅಂತ ಇವರು ತಿನ್ನೋದು ಇವರಿಬ್ಬರೂ ಮಾಡ್ಯಾರ ಅಂತ ಮೂರನೆಯವರು ಮಾಡೋದು ಸರಿ ಅಲ್ಲ. ಇವತ್ತು ಆಳುವವರು ನ್ಯಾಯ ನಿಷ್ಟುರತೆ, ಪಾರದರ್ಶಕ ನೀತಿ ಹಾಗೂ ನಿಷ್ಪಕ್ಷಪಾತ ನಡೆ ಯನ್ನು ಪಾಲಿಸದಿದ್ದರೆ ನಾಳೆ ಬಂದವರೂ ಪಾಲಿಸಲಿಕ್ಕಿಲ್ಲ. ಆವಾಗ ಇವರು ಝಗಳಾ ತಗೀಲಿಕ್ಕೆ ಬರೋದಿಲ್ಲ. ನೀವು ಹಿಂಗ ಮಾಡಿದಿರಿ ಅಂದರ ನೀವು ಮಾಡಿಲ್ಲೇನು ಅಂತ ಅವರು ಅನ್ನಬಹುದು.
ಅದರ ಜನರಿಗೆ ಇವು ಯಾವುವೂ ಬ್ಯಾಡ. ಸಮಾನತೆ ಹಾಗೂ ಶಾಂತಿ ಬೇಕು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...