Homeಮುಖಪುಟತಮಾಷೆಗಾಗಿ ಕೆರೆಗೆ ಕಲ್ಲೆಸೆದ ವ್ಯಕ್ತಿ: ತುಂಬಿದ ಕೆರೆ ಖಾಲಿ ಮಾಡಿ ಪರಿತಪಿಸುತ್ತಿರುವ ಜನ!

ತಮಾಷೆಗಾಗಿ ಕೆರೆಗೆ ಕಲ್ಲೆಸೆದ ವ್ಯಕ್ತಿ: ತುಂಬಿದ ಕೆರೆ ಖಾಲಿ ಮಾಡಿ ಪರಿತಪಿಸುತ್ತಿರುವ ಜನ!

- Advertisement -
- Advertisement -

ರಾಯಚೂರು ಜಿಲ್ಲೆಗೆ ಇತ್ತೀಚೆಗೆ ನೀರಾವರಿ ವ್ಯವಸ್ಥೆ ಆಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೂ ಕುಡಿಯವ ನೀರಿಗೆ ತಾಪತ್ರಯ ಇದ್ದುದ್ದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತುಸು ಹೆಚ್ಚೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾಲೆಗೆ ನೀರುಬಿಡಿ, ಕೆರೆ ಕಟ್ಟೆಗಳನ್ನು ತುಂಬಿಸಿ ಎಂಬ ಪ್ರತಿಭಟನೆ ಮನವಿಗಳಿಗೇನು ಕಮ್ಮಿ ಇಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ತುಂಬಿದ ಕುಡಿಯುವ ನೀರಿನ ಕೆರೆಯೊಂದನ್ನು ಖಾಲಿ ಮಾಡಿಸಿ ಪರಿತಪಿಸುವಂತಹ ವಿಲಕ್ಷಣ ಘಟನೆಯೊಂದಕ್ಕೆ ಜಿಲ್ಲೆಯ ಶಾಖಾಪುರ ಗ್ರಾಮ ಸಾಕ್ಷಿಯಾಗಿದೆ.

ನಡೆದುದ್ದೇನು?

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಅತ್ತನೂರು, ಶಾಖಾಪುರ ಮತ್ತು ಗಣದಿನ್ನಿ ಒಂದಕ್ಕೊಂದು ಅಂಟಿಕೊಂಡಿರುವ ಗ್ರಾಮಗಳು. ಈ ಮೂರು ಗ್ರಾಮಗಳಿಗೆ ಸೇರಿ ಅತ್ತನೂರು ಕೆರೆ ಮತ್ತು ಶಾಖಾಪುರ ಕೆರೆಯೇ ಕುಡಿಯುವ ನೀರು ಒದಗಿಸುತ್ತದೆ. ಇಂತಹ ಸಂದರ್ಭದಲ್ಲಿ ಅತ್ತನೂರು ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವ ಮಹಮ್ಮದ್‌ ಎಂಬುವವರು ಶಾಖಾಪುರ ಕೆರೆಯಲ್ಲಿ ನೀರು ಕುಡಿದ ನಂತರ ತಮಾಷೆಗಾಗಿ ಕಲ್ಲೊಂದನ್ನು ಎಸೆದು ಅಲ್ಲಿಂದ ಹೊರಟಿದ್ದಾರೆ.

ಇದನ್ನು ಗಮನಿಸಿದ ಕೆಲ ಗ್ರಾಮಸ್ಥರು ಆತ ನೀರಿಗೆ ವಿಷದ ಕಲ್ಲು ಎಸೆದಿದ್ದಾನೆ, ಆ ನೀರು ಕುಡಿಯಬೇಡಿ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರಿಂದ ಒಬ್ಬರಿಗೆ ಈ ವಿಷಯ ಹರಡಿ ಗ್ರಾಮದಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿದೆ. ಕಲ್ಲು ಎಸೆದ ಘಟನೆ ಕುಡಿಯುವ ನೀರಿಗೆ ವಿಷ ಬೆರೆಸಿದ್ದಾರೆ ಎಂಬಲ್ಲಿಗೆ ಹೋಗಿ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಕೊನೆಗೆ ಗ್ರಾಮಸ್ಥರೆಲ್ಲರೂ ಸೇರಿ ಇಡೀ ಕೆರೆ ನೀರನ್ನು ಖಾಲಿ ಮಾಡುವ ನಿರ್ಧಾರಕ್ಕೆ ಬಂದಿದ್ದೆ ತಡ ಮೋಟರ್‌ ತರಿಸಿ ನೀರು ಖಾಲಿ ಮಾಡಿಸುತ್ತಿದ್ದಾರೆ.

ನೀರು ಖಾಲಿ ಮಾಡುತ್ತಿರುವುದು

ನೀರು ತುಂಬಿಸಲು ಹೋರಾಟ ಮಾಡಿದ್ದರು!

ಆಶ್ಚರ್‍ಯ ಎಂದರೆ ಶಾಖಾಪುರ ಕೆರೆಗೆ ಕುಡಿಯುವ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಇದೇ ಗ್ರಾಮಸ್ಥರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಹಿಂದೆ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು “ಕುಡಿಯುವ ನೀರು ಕಲುಷಿತಗೊಂಡು ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದರು. ಹಾಗಾಗಿ ಕೆರೆಗೆ ಶುದ್ದನೀರು ತುಂಬಿಸಬೇಕು, ಇಲ್ಲ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆನಂತರ ಪ್ರತಿ ವರ್ಷ ನೀರು ತುಂಬಿಸಲಾಗುತ್ತಿದೆ. ಅಂತೆಯೇ ಈ ವರ್ಷವೂ ಸಹ ತಿಂಗಳ ಹಿಂದೆಯಷ್ಟೇ ತುಂಗಭದ್ರಾ ಎಡದಂಡೆ ನಾಲೆಯಿಂದ ನೀರು ತುಂಬಿಸಲಾಗಿತ್ತು.

 ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

ಈಗ ಕೆರೆಗೆ ಕಲ್ಲೆಸೆದ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದ ನಂತರ ಪೊಲೀಸರು ಗ್ರಾಮಸ್ಥರು ಮತ್ತು ಕಲ್ಲು ಎಸೆದ ಮಹಮ್ಮದ್‌ ಎಂಬುವವರನ್ನು ಕರೆಸಿ ಸಭೆ ನಡೆಸಿದ್ದಾರೆ. ಆಗ ಮಹಮ್ಮದ್‌ ನಾನು ತಮಾಷೆಗಾಗಿ ಕಲ್ಲು ಎಸೆದಿದ್ದೇನೆಯೇ ಹೊರತು ಮತ್ತೇನಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದ್ದಾನೆ. ಗ್ರಾಮಸ್ಥರು ಅದೇ ಕೆರೆಯ ನೀರನ್ನು ತಂದು ಕುಡಿ ಎಂದಾಗ ಆತ ನೀರು ಕುಡಿದು, ಅದೇ ನೀರಿನಲ್ಲಿ ಸ್ನಾನ ಮಾಡಿ ತಾನು ವಿಷ ಬೆರೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಕೊನೆಗೆ ಪೊಲೀಸರು ಅವನು ಎಸೆದಿರುವುದು ಕೇವಲ ಕಲ್ಲು ಮಾತ್ರ, ವಿಷ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟರೂ ಸಹ ಅದನ್ನು ನಂಬಲು ಗ್ರಾಮಸ್ಥರು ಸಿದ್ಧರಿಲ್ಲ.

ಮತ್ತೆ ನೀರು ಕುಡಿಯುತ್ತಿರುವ ಮಹಮ್ಮದ್

ಅನುಮಾನಕ್ಕೆ ಕಾರಣಗಳು

ಕೇವಲ ಕಲ್ಲು ಎಸೆದುದ್ದಕ್ಕೆ ಜನ ಇಷ್ಟೊಂದು ಅನುಮಾನಪಡಲು ಕೊರೊನಾ ಸೋಂಕು ಸಹ ಒಂದು ಕಾರಣವಾಗಿದೆ. ಮಾಧ್ಯಮಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಟಿವಿ ಚಾನೆಲ್‌ಗಳು ಪ್ರತಿದಿನ, ಪ್ರತಿಕ್ಷಣ ಕೊರೊನಾ ಕುರಿತು ಭೀತಿ ಸೃಷ್ಟಿಸುತ್ತಿವೆ. ಇದರ ಪರಿಣಾಮವಾಗಿ ಶಾಖಾಪುರದ ಜನರೂ ಸಹ ಆತಂಕಗೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕಲ್ಲು ಎಸೆದ ವ್ಯಕ್ತಿ ಮುಸ್ಲಿಂ ಆಗಿದ್ದುದು ಮತ್ತಷ್ಟು ಅನುಮಾನಿಸಲು ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಕೆರೆಯ ನೀರು ಕಲುಷಿತಗೊಳ್ಳುತ್ತಿದ್ದು, ಕುಡಿಯಲು ಅಷ್ಟು ಯೋಗ್ಯವಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅದಕ್ಕಾಗಿಯೇ ಕೆರೆ ಪಕ್ಕದಲ್ಲಿ ನೀರು ಶುದ್ದೀಕರಣ ಯಂತ್ರ ಸಹ ಅಳವಡಿಸಲಾಗಿದೆ. ಜೊತೆಗೆ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತನೂರು ಮತ್ತು ಶಾಖಾಪುರ ಜನರ ನಡುವೆ ಸಣ್ಣ ಜಗಳವಾಗಿತ್ತು. ಅದೇ ಕಾರಣಕ್ಕೇನಾದರೂ ಅತ್ತನೂರಿನ ವ್ಯಕ್ತಿ ವಿಷ ಬೆರೆಸಿರಬಹುದು ಎಂದು ಶಾಖಾಪುರದ ಜನ ಅನುಮಾನಿಸಿದ್ದಾರೆ.

ಮತ್ತೆ ನೀರಿಗಾಗಿ ಪರದಾಟ

ಅನುಮಾನದ ಉಮೇದಿನಲ್ಲಿ ಕೆರೆಯ ನೀರನ್ನು ಖಾಲಿ ಮಾಡಿಸುತ್ತಿರುವ ಜನ ಈಗ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. 450 ಮನೆಗಳಿದ್ದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಶಾಖಾಪುರಕ್ಕೆ ಕುಡಿಯುವ ನೀರಿಗಾಗಿ ಇದ್ದಿದ್ದು ಇದೊಂದೆ ನೀರಿನಮೂಲವಾಗಿತ್ತು. ಈಗ ಅಲ್ಲಿ ನೀರನ್ನು ಕುಡಿಯಲು ಆಗದೇ, ಬೇರೆ ನೀರು ಸಿಗದೇ ಗ್ರಾಮಪಂಚಾಯ್ತಿಯಿಂದ ಬೇಗ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ನೀರು ಖಾಲಿ ಮಾಡುತ್ತಿರುವುದು

ಈ ಕುರಿತು ನಾನುಗೌರಿ.ಕಾಂ ವತಿಯಿಂದ ಈ ಗ್ರಾಮಗಳ ಒಡನಾಡವಿರುವ ಮಾರಪ್ಪ ಹರವಿರವರನ್ನು ಮಾತನಾಡಿಸಿತು. ಅವರು “ಕಳೆದ ತಿಂಗಳು ನಡೆದಿದ್ದ ಸಣ್ಣ ಜಗಳ, ಕೊರೊನಾ ಭೀತಿ ಮತ್ತು ಮುಸ್ಲಿಂ ಎಂಬ ಭಯಕ್ಕೆ ಶಾಖಾನೂರಿನ ಜನ ಅನುಮಾನಗೊಂಡು ಕೆರೆ ನೀರು ಖಾಲಿ ಮಾಡಿಸಿ ಈಗ ಪಶ್ಚಾತಾಪ ಪಡುತ್ತಿದ್ದಾರೆ. ಜನಗಳಲ್ಲಿ ಜಾಗೃತಿ ಇಲ್ಲದಿರುವುದೇ ಈ ಘಟನೆ ನಡೆಯಲು ಕಾರಣವಾಗಿದೆ. ಈಗ ನೀರು ಖಾಲಿಮಾಡಿಕೊಂಡು ಕೆಲವರು ನಾವು ದುಡುಕಬಾರದಿತ್ತು ಎಂದು ಅಭಿಪ್ರಾಯಪಟ್ಟರೆ ಇನ್ನು ಕೆಲವರು ನಾವು ಮಾಡಿದ್ದೆ ಸರಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಘಟನೆಗೆ ನಾವು ಯಾರನ್ನು ದೂರುವುದು? ಮಾಧ್ಯಮಗಳನ್ನೋ ಅಥವಾ ಜನರ ಅಜ್ಞಾನವನ್ನೋ? ಒಟ್ಟಿನಲ್ಲಿ ಅನುಮಾನ ಮತ್ತು ದುಡುಕುತನ ದೊಡ್ಡ ಸಮಸ್ಯೆಗೆ ದಾರಿಮಾಡಿಕೊಡುತ್ತದೆ ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ.


ಇದನ್ನೂ ಓದಿ: ಹೆಬ್ಬಾವಿಗೆ ಬಡಿದು ಜಿಂಕೆ ಉಳಿಸಿದ ಘಟನೆಯ ಸುತ್ತ; ನೀತಿಶಾಸ್ತ್ರ ಮತ್ತು ಪ್ರಕೃತಿ ನಿಯಮಗಳು ಒಂದಕ್ಕೊಂದು ಪೂರಕವೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...