ರಾಕೇಶ್ ಟಿಕಾಯತ್ ಕರೆಗೆ ಸ್ಪಂಧಿಸಿ ಹರಿಯಾಣದ ಹಳ್ಳಿ ಹಳ್ಳಿಯಲ್ಲೂ ಮಹಾಪಂಚಾಯತ್ ನಡೆಯುತ್ತಿದೆ. ಪ್ರತಿ ಮಹಾಪಂಚಾಯತ್ನಲ್ಲೂ ಕಣ್ಣಿಗೆಟುಕುವಷ್ಟೂ ಜನಸಾಗರ ಕಾಣುತ್ತಿದೆ ಎಂದು ಗೌರಿ ಮೀಡಿಯಾ ತಂಡ ಗ್ರೌಂಡ್ ರಿಪೋರ್ಟ್ ನೀಡಿದೆ.
ರೈತ ಹೋರಾಟವನ್ನು ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹರಿಯಾಣದ ಜಿಂದ್ ಜಿಲ್ಲೆಯ ಖಡ್ಖಡ್ ಹಳ್ಳಿಯಲ್ಲಿ ಸುಮಾರು 20,000ಕ್ಕೂ ಹೆಚ್ಚು ಜನರು ಸೇರಿದ್ದು, ಈಗಾಗಲೆ ರಾಕೇಶ್ ಟಿಕಾಯತ್ ಮಹಾಪಂಚಾಯತ್ನಲ್ಲಿ ಭಾಗಿಯಾಗಿದ್ದಾರೆ. ಖಂಡೇಲಾ ಹಳ್ಳಿಯಲ್ಲಿ ಸುಮಾರು 40,000 ಕ್ಕೂ ಹೆಚ್ಚು ಜನ ಸೇರಿದ್ದಾರೆ ಎಂದು ನಮ್ಮ ತಂಡದ ಕಾವ್ಯ ಸಮತಳ ಮಾಹಿತಿ ನೀಡಿದರು.
ಈ ಕುರಿತ ಫೋಟೋ ವೀಡಿಯೋಗಳನ್ನು ಕಳುಹಿಸಲು ಇಂಟರ್ನೆಟ್ ಸೌಲಭ್ಯವಿಲ್ಲ ಎಂದು ನಮ್ಮ ತಂಡ ವರದಿ ಮಾಡಿದೆ. ಸರ್ಕಾರ ನೀರನ್ನೇ ಕೊಡುತ್ತಿಲ್ಲ, ಇನ್ನು ಇಂಟರ್ನೆಟ್ ಕೊಡುತ್ತದೆಯೇ?
“ಕರ್ನಾಟಕದ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿಯವರೂ ಕೂಡ ಈ ಮಹಾಪಂಚಾಯತ್ನಲ್ಲಿ ಭಾಗವಹಿಸಿದ್ದಾರೆ. ಒಂದು ದೊಡ್ಡ ಮೈದಾನದಲ್ಲಿ ಜನ ಸೇರಿದ್ದು, ಅಲ್ಲಿ ನಿಲ್ಲಲೂ ಸ್ಥಳವಿಲ್ಲದೇ ರಸ್ತೆಯಲ್ಲಿರುವ ಜನರ ಸಂಖ್ಯೆಯೇ ಸುಮಾರು 10,000ಕ್ಕೂ ಹೆಚ್ಚಿದೆ. ಒಂದು ದಿನಕ್ಕೆ ಇಂತಹ 3-4 ಪಂಚಾಯತ್ಗಳು ನಡೆಯುತ್ತಿದ್ದು, ಇದರ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇದೆ. ಜೊತೆಗೆ ಹರಿಯಾಣ-ದೆಹಲಿ ಹೆದ್ದಾರಿಯಲ್ಲಿ ಪ್ರತಿ 100 ಮೀಟರ್ಗೂ ಜನರು ಟೆಂಟ್ ಹಾಕಿಕೊಂಡು ಕುಳಿತಿದ್ದಾರೆ. ದೆಹಲಿಗೆ ತೆರಳುವವರಿಗೆ ಟೀ-ಕಾಫಿ-ಊಟ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರ ನೀಡುತ್ತಿರುವ ಕಿರುಕುಳ ನಿಲ್ಲಿಸುವವರೆಗೆ ಯಾವುದೇ ಮಾತುಕತೆಯಿಲ್ಲ: ರೈತ ಒಕ್ಕೂಟ
ರೈತ ಹೋರಾಟವನ್ನು ಬೆಂಬಲಿಸಿ ಇದುವರೆಗೂ ಬಾಗ್ಪಥ್, ಮಥುರಾ, ಮುಜಪ್ಪರ್ ನಗರ, ರಾಜಸ್ಥಾನ್ ಸೇರಿದಂತೆ ಹಲವು ಕಡೆ ಮಹಾಪಂಚಾಯತ್ಗಳು ನಡೆದಿವೆ. ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶದಾದ್ಯಂತ ಇಂತಹ ಪಂಚಾಯತ್ಗಳನ್ನು ಸಂಘಟಿಸಲಾಗುವುದು ಎಂದು ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
ಸರ್ಕಾರವು ರೈತರೊಂದಿಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದೆಯಾದರೂ ಎಲ್ಲವೂ ವಿಫಲಗೊಂಡಿದೆ. ಇದೀಗ ರೈತರು ಶನಿವಾರದಂದು ದೇಶಾದ್ಯಂತ ‘ಸಂಚಾರ ಸ್ಥಗಿತ ಚಳವಳಿ’ (ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ತಡೆ) ನಡೆಸುವಂತೆ ಕರೆ ನೀಡಿದ್ದಾರೆ.
ನಮ್ಮ ಮಕ್ಕಳು ದೇಶದ ಗಡಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ನಾವು ರೈತರು; ರೈತ ವಿರೋಧಿ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಹೋರಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ರದ್ದು ಮಾಡಲೇಬೇಕು. ಆವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ – ಜಿಂದ್ ಜಿಲ್ಲೆಯ ಮಹಾಪಂಚಾಯತ್ನ ಪ್ರಧಾನ್
‘ಸಂಚಾರ ಸ್ಥಗಿತ ಚಳವಳಿ’ ಫೆಬ್ರವರಿ 6ರ ಶನಿವಾರ ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಅಂದರೆ ಒಟ್ಟು ಮೂರು ಗಂಟೆಗಳ ಕಾಲ ನಡೆಯಲಿದ್ದು, ಶಾಂತಿಯುವ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ರೈತರ ಮೇಲೆ FIR: ಕಾನೂನು ನೆರವಿಗೆ 70 ವಕೀಲರನ್ನು ನೇಮಿಸಿ ಪಂಜಾಬ್ ಸಿಎಂ…
100ಕ್ಕೂ ಹೆಚ್ಚು ರೈತರು ಕಾಣೆಯಾಗಿರುವುದು, ರೈತರು ಮತ್ತು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು, ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್ನೆಟ್ ಸ್ಥಗಿತ, ಹೋರಾಟಗಾರರಿಗೆ ಕಿರುಕುಳ, ಪ್ರತಿಭಟನಾ ಸ್ಥಳಗಳ ವಿದ್ಯುತ್ ಮತ್ತು ನೀರು ಸರಬರಾಜನ್ನು ನಿಲ್ಲಿಸಿರುವುದನ್ನು ವಿರೋಧಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಲು ರೈತರು ಈ ‘ಸಂಚಾರ ಸ್ಥಗಿತ ಚಳವಳಿ’ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ರೈತರನ್ನು ಬೆದರಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳ ಹೊರತಾಗಿಯು ರೈತರು ಹೋರಾಟದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ರೈತ ಮುಖಂಡ ರಾಕೇಶ್ ಟಿಕಾಯತ್, “ಕೇಂದ್ರ ಸರ್ಕಾರಕ್ಕೆ ನಾವು ಅಕ್ಟೋಬರ್ವರೆಗೆ ಸಮಯ ನೀಡಿದ್ದು, ನಮ್ಮ ಮಾತನ್ನು ಆಲಿಸದಿದ್ದರೆ ದೇಶವ್ಯಾಪಿ 40 ಲಕ್ಷ ಟ್ರಾಕ್ಟರ್ಗಳ ರ್ಯಾಲಿ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಜನವರಿ 26 ರ ಗಣರಾಜ್ಯೋತ್ಸವಂದು ರೈತರು ನಡೆಸಿದ ಟ್ರಾಕ್ಟರ್ ಪರೇಡ್ ನಂತರ ರೈತ ಹೋರಾಟದ ಸ್ಥಳಗಳಲ್ಲಿ ಅಹಿತಕರ ಘಟನೆ ನಡೆದಿತ್ತು. ಹಲವಾರು ಫ್ಯಾಕ್ಟ್ಚೆಕ್ ವೆಬ್ಸೈಟ್ಗಳು ಇದನ್ನು ಬಿಜೆಪಿಯೆ ಮಾಡಿಸಿದೆ ಎಂದು ವರದಿ ಮಾಡಿದೆ. ಅದಾಗಿಯು, ಕೇಂದ್ರ ಸರ್ಕಾರ ದೆಹಲಿಯ ಹೋರಾಟದ ಸ್ಥಳಗಳಲ್ಲಿ ಇಂಟರ್ನೆಟ್ ಸೇವೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿತ್ತು. ಇದು ಜಗತ್ತಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಹರಿಯಾಣದ ಈ ಹಳ್ಳಿಯಲ್ಲಿ ನಿತ್ಯವೂ ರೈತ ಹೋರಾಟ: ಹೊರರಾಜ್ಯಗಳಿಂದಲೂ ಬರುವ ಪ್ರತಿಭಟನಾಕಾರರು